#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Roopa Gururaj Column: ಕೈಲಾಗದ ಮಕ್ಕಳ ಮೇಲೆ ತಂದೆ-ತಾಯಿಗೆ ಪ್ರೀತಿ ಹೆಚ್ಚು

ಒಮ್ಮೆ ದೇವಲೋಕದಲ್ಲಿ ಕಾಮಧೇನು ಅಳು ತ್ತಿದ್ದಳು. ಅಲ್ಲಿಗೆ ಬಂದ ಇಂದ್ರದೇವ ಯಾಕೆ ಅಳುತ್ತಾ ಇರುವೆ? ನಮ್ಮಿಂದ ಏನಾದರೂ ತಪ್ಪಾಯ್ತೇ ಅಥವಾ ಯಾರಾದರೂ ನಿನ್ನ ಮನಸ್ಸಿಗೆ ನೋವಾಗುವಂತೆ ಮಾತನಾಡಿದರಾ? ಕಾಮ ಧೇನು ಇಂದ್ರ ನಿಗೆ ಅಲ್ಲಿನೋಡು ಎಂದು ಭೂಮಿ ಕಡೆ ತೋರಿಸಿದಳು, ಇಂದ್ರನು ನೋಡಿದ

ಕೈಲಾಗದ ಮಕ್ಕಳ ಮೇಲೆ ತಂದೆ-ತಾಯಿಗೆ ಪ್ರೀತಿ ಹೆಚ್ಚು

ಒಂದೊಳ್ಳೆ ಮಾತು

ಒಮ್ಮೆ ಧೃತರಾಷ್ಟ್ರನ ಹತ್ತಿರ ವೇದವ್ಯಾಸರು ಬಂದು, ‘ನೋಡು ಧೃತರಾಷ್ಟ್ರ, ನಿನ್ನ ಮಕ್ಕಳಾದ ದುರ್ಯೋಧನ, ದುಶ್ಯಾಸನ ಹಾಗೂ ನಿನ್ನ ಭಾವಮೈದುನ ಶಕುನಿ, ಇವರು ಪಾಂಡು ಮಕ್ಕಳಿಗೆ ತುಂಬಾ ತೊಂದರೆ ಕೊಡುತ್ತಿದ್ದಾರೆ. ನೀನು ಅವರಿಗೆ ಸ್ವಲ್ಪ ಬುದ್ಧಿ ಹೇಳಬಾರದೇ?’ ಎಂದು ಕೇಳಿ‌ ದರು. ಇದರಿಂದ ಧೃತರಾಷ್ಟ್ರನಿಗೆ ಬೇಸರವಾಯಿತು. ‘ನೀವು ಯಾವಾಗಲೂ ನನ್ನ ಮಕ್ಕಳಿಗೇ ಬುದ್ಧಿ ಹೇಳುವಂತೆ ಹೇಳುತ್ತೀರಿ. ನೀವು ಪಾಂಡು ಮಕ್ಕಳ ಮೇಲೆ ಹೆಚ್ಚು ವಾತ್ಸಲ್ಯ ಪ್ರೀತಿ ತೋರಿಸುತ್ತೀರಿ. ಯಾಕೆ ನನ್ನ ಮಕ್ಕಳು ನಿಮಗೆ ಮೊಮ್ಮಕ್ಕಳಲ್ಲವೇ? ಪಾಂಡು ಮಕ್ಕಳು ಮಾತ್ರ ಮೊಮ್ಮಕ್ಕಳಾ?’ ಎಂದು ಸಿಟ್ಟಿನಲ್ಲೇ ಹೇಳಿದ.

ಇದನ್ನು ಕೇಳಿದ ವ್ಯಾಸರು ಒಂದು ಕಥೆ ಹೇಳುತ್ತಾರೆ. ಒಮ್ಮೆ ದೇವಲೋಕದಲ್ಲಿ ಕಾಮಧೇನು ಅಳು ತ್ತಿದ್ದಳು. ಅಲ್ಲಿಗೆ ಬಂದ ಇಂದ್ರದೇವ ಯಾಕೆ ಅಳುತ್ತಾ ಇರುವೆ? ನಮ್ಮಿಂದ ಏನಾದರೂ ತಪ್ಪಾಯ್ತೇ ಅಥವಾ ಯಾರಾದರೂ ನಿನ್ನ ಮನಸ್ಸಿಗೆ ನೋವಾಗುವಂತೆ ಮಾತನಾಡಿದರಾ? ಕಾಮ ಧೇನು ಇಂದ್ರ ನಿಗೆ ಅಲ್ಲಿನೋಡು ಎಂದು ಭೂಮಿ ಕಡೆ ತೋರಿಸಿದಳು, ಇಂದ್ರನು ನೋಡಿದ.

ಇದನ್ನೂ ಓದಿ: Roopa Gururaj Column: ಕೃಷ್ಣ ಸೇವಿಸಿದ ಕಡಲೆಕಾಯಿಯ ಲೆಕ್ಕ

ಅದೊಂದು ಹಳ್ಳಿ, ಅಲ್ಲಿ ಸ್ವಲ್ಪ ಗದ್ದೆ ಇತ್ತು, ಅದು ಬಡ ರೈತನ ಗದ್ದೆಯಾಗಿತ್ತು. ರೈತನು ಅವನ ಹತ್ತಿರವಿದ್ದ ಎರಡು ಎತ್ತುಗಳನ್ನು ನೊಗಕ್ಕೆ ಕಟ್ಟಿ ಗದ್ದೆಯಲ್ಲಿ ಕೆಲಸ ಮಾಡಿಸುತ್ತಿದ್ದ. ಅವು ಮುಂದೆ ಹೋಗದಿದ್ದರೆ ಬಾರುಕೋಲಿನಿಂದ ಅವುಗಳಿಗೆ ಹೊಡೆಯುತ್ತಿದ್ದ. ಆ ಎತ್ತುಗಳು ಸರಿಯಾಗಿ ಹೊಟ್ಟೆಗೆ ಇಲ್ಲದೆ, ಚರ್ಮ ಮೂಳೆ ಮಾತ್ರ ಕಾಣುತ್ತಿತ್ತು.

ಅವುಗಳಿಗೆ ನೊಗ ಎಳೆಯಲು ಆಗದೆ ಕಣ್ಣೀರು ಸುರಿಯುತ್ತಿತ್ತು. ಎತ್ತುಗಳನ್ನು ತೋರಿಸಿದ ಕಾಮ ಧೇನು, ‘ದೇವರಾಜ ನನ್ನ ಮಕ್ಕಳು ಹೇಗೆ ಅಳುತ್ತಿವೆ ಅವುಗಳ ಕಷ್ಟ ನನ್ನಿಂದ ನೋಡ ಲಾಗುತ್ತಿಲ್ಲ ಏನಾದರೂ ಮಾಡಿ ಅವುಗಳ ಕಷ್ಟವನ್ನು ಪರಿಹರಿಸು’ ಎಂದು ಕೇಳಿಕೊಂಡಿತು.

ಅದಕ್ಕೆ ಇಂದ್ರನು, ‘ಏನಮ್ಮ ಕಾಮಧೇನು, ನಿನಗೆ ಇವೇ ಎರಡು ಮಕ್ಕಳಾ? ಎತ್ತು, ಹಸುಗಳು ಸೇರಿ ಕೋಟಿ ಕೋಟಿ ಮಕ್ಕಳಿದ್ದಾರೆ. ಅವುಗಳನ್ನೆಲ್ಲಾ ಬಿಟ್ಟು ಈ ಎರಡು ಮಕ್ಕಳ ಮೇಲೆ ಮಾತ್ರ ಅಷ್ಟೊಂ ದು ಪ್ರೀತಿ ಯಾಕೆ?’ ಎಂದು ಕೇಳಿದ. ಆಗ ಕಾಮಧೇನು ಹೇಳಿದಳು. ಅವುಗಳೆಲ್ಲ ಸುಖವಾಗಿ ಇವೆ. ಕಲ್ಲಿನಂತೆ ಗಟ್ಟಿಯಾಗಿರುವ ಭೂಮಿಯನ್ನು ನೇಗಿಲಿನಿಂದ ಎಳೆಯಲು ಹೊಟ್ಟೆಗೂ ಹಾಕದೆ ನಿತ್ರಾಣವಾಗಿರುವ ಈ ಎರಡು ಮಕ್ಕಳಿಂದ ಮಾತ್ರ ಆ ರೈತ ಕೆಲಸ ಮಾಡಿಸುತ್ತಾನೆ, ಕೆಲಸ ಮಾಡಲು ಆಗದೆ ರೈತನ ಕೈಯಲ್ಲಿ ಹೊಡೆಸಿಕೊಳ್ಳುತ್ತಾ ನಿತ್ಯವೂ ಕಣ್ಣೀರು ಹಾಕುತ್ತವೆ.

ಇದನ್ನು ನನ್ನಿಂದ ನೋಡಲಾಗುವುದಿಲ್ಲ ಹಾಗಾಗಿ ಹೇಳಿದೆ ಎಂದಿತು. ಕನಿಕರಗೊಂಡ ಇಂದ್ರನು ಕಾಮಧೇನು ನಿನ್ನ ಮಕ್ಕಳ ಮೇಲಿರುವ ಪ್ರೀತಿ ನನಗೆ ಅರ್ಥವಾಯಿತು ಎನ್ನುತ್ತಾ, ಬಡ ರೈತನ ಗದ್ದೆ ಸೇರಿದಂತೆ ಸುತ್ತಮುತ್ತ ಮಳೆ ಸುರಿಸಿದನು. ಇದರಿಂದ ಭೂಮಿಯೆಲ್ಲಾ ಒದ್ದೆಯಾಗಿ ಮಣ್ಣು ಮೃದುವಾಯಿತು. ಎತ್ತುಗಳು ಸರಾಗವಾಗಿ ನೇಗಿಲನ್ನು ಎಳೆದವು. ಇದು ಕಾಮಧೇನುವಿಗಿರುವ ಪುತ್ರ ವಾತ್ಸಲ್ಯ ಎಂದು ಕತೆ ಹೇಳಿ ಮುಗಿಸಿದರು ವ್ಯಾಸರು.

ನಂತರ ‘ನೋಡು ದೃತರಾಷ್ಟ್ರ ನೀನು ಪಾಂಡು ಮತ್ತು ನಿಮ್ಮಿಬ್ಬರ ಮಕ್ಕಳ ಮೇಲೂ ನನಗೆ ಸಮಾನ ವಾದ ಪ್ರೀತಿ ಇದೆ. ಆದರೆ ಯಾವ ಮಕ್ಕಳು ಹೆಚ್ಚು ಕಷ್ಟಪಡುತ್ತಿರುತ್ತಾರೋ, ಅವರ ಬಗ್ಗೆ ಹೆತ್ತ ತಂದೆ ತಾಯಿಗೆ ಕನಿಕರ , ಪ್ರೀತಿ ಜಾಸ್ತಿ, ಅದು ಸಹಜವೂ ಕೂಡ. ಆದುದರಿಂದ ನಿನ್ನ ಮಕ್ಕಳು ಪಾಂಡು ಮಕ್ಕಳಿಗೆ ತೊಂದರೆ ಕೊಡದಂತೆ ತಿದ್ದಿ ಬುದ್ಧಿ ಹೇಳು. ತಂದೆ ಇಲ್ಲದ ಅವರನ್ನು ನಿನ್ನ ಮಕ್ಕ ಳಂತೆಯೇ ಪಾಲಿಸಬೇಕು, ಒಂದು ಕಣ್ಣಿಗೆ ಸುಣ್ಣ ಇನ್ನೊಂದು ಕಣ್ಣಿಗೆ ಬೆಣ್ಣೆ ಎಂದು ತಾರತಮ್ಯ ತೋರಬೇಡ ಭಗವಂತ ಮೆಚ್ಚುವುದಿಲ್ಲ ಎಂದು ಬುದ್ಧಿವಾದ ಹೇಳಿದರು.

ಮನೆಯಲ್ಲೂ ತಂದೆ ತಾಯಿಗಳಿಗೆ ಸಹಜವಾಗಿ ದುರ್ಬಲ ಮಕ್ಕಳ ಬಗ್ಗೆ ಪ್ರೀತಿ ಹೆಚ್ಚು. ಅದನ್ನು ಅರ್ಥ ಮಾಡಿಕೊಳ್ಳುವ ಮನಸ್ಸು ಮಕ್ಕಳಿಗಿರಬೇಕಷ್ಟೇ.