ಚಿಕ್ಕಬಳ್ಳಾಪುರ: ಹಾಲಿನ ಬೆಲೆ ಹೆಚ್ಚಿಸಿ, ಪ್ರೋತ್ಸಾಹಧನವನ್ನು ಕೂಡಲೇ ಬಿಡುಗಡೆಗೊಳಿಸು ವುದೇ ಸೇರಿ ಇನ್ನಿತರೆ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ರೈತ ಸಂಘದಿಂದ ಬೆಂಗಳೂರಿನ ಕೆಎಂಎಫ್ ಎದುರು ಫೆ.10ರಿಂದ ಅನಿರ್ದಿಷ್ಟಾವಧಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಎನ್.ಗೋಪಾಲ್ ತಿಳಿಸಿದರು. ನಗರದ ವಾಪಸಂದ್ರ ದಲ್ಲಿರುವ ಸಂಘದ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಪ್ರಸ್ತುತದ ದಿನಗಳಲ್ಲಿ ೧ಲೀ. ನೀರಿನ ಬಾಟಲನ್ನು ೨೦ ರೂಗಳಿಗೆ ಮಾರಾಟ ಮಾಡಲಾಗುತ್ತಿದೆ. ಆದರೆ ರೈತರು ಕಷ್ಟಪಟ್ಟು ಉತ್ಪಾದಿಸುವ ಹಾಲಿಗೆ ೩೧ ರೂ. ನಿಗಧಿಪಡಿಸಿರುವುದು ಅವೈಜ್ಞಾನಿಕವಾಗಿದೆ.
ಇದನ್ನೂ ಓದಿ: Chikkaballapur News: ಚಿಂತಾಮಣಿಯ ಅತಿಥಿ ಉಪನ್ಯಾಸಕ ಎಂ.ನರಸಿಂಹಪ್ಪ ಸಾವು: ಜಿಲ್ಲಾ ಸಂಘ ತೀವ್ರ ಸಂತಾಪ
ಇತ್ತೀಚಿಗೆ 33 ರೂಗಳಿದ್ದ ೧ಲೀ. ಹಾಲಿನ ಧರವನ್ನು ರಾಜ್ಯ ಸರ್ಕಾರ 2 ರೂ.ಗಳನ್ನು ಕಡಿತಗೊಳಿಸಿ, ಗ್ರಾಹಕರಿಗೆ ೩ ರೂ.ಗಳನ್ನು ಹೆಚ್ಚಿಸಿದೆ. ಪಶು ಆಹಾರದ ಬೆಲೆಗಳನ್ನೂ ಹೆಚ್ಚಿಸಿ ರೈತರನ್ನು ಹೈನು ಗಾರಿಕೆಯಿಂದ ಒಕ್ಕಲೆಬ್ಬಿಸುವ ಕಾರ್ಯವನ್ನು ಮಾಡುತ್ತಿದೆ ಎಂದು ಆರೋಪಿಸಿದರು.
ರಾಜ್ಯದಲ್ಲಿರುವ ೧೬ ಹಾಲು ಒಕ್ಕೂಟಗಳಲ್ಲಿ ೧೫ ಸಾವಿರ ಡೇರಿಗಳು ಕಾರ್ಯನಿರ್ವಸುತ್ತಿದ್ದು, ನಿತ್ಯ ೮೦ ಲಕ್ಷ ಲೀ. ಹಾಲು ಉತ್ಪಾದನೆ ಆಗುತ್ತಿದೆ. ಬರೊಬ್ಬರಿ ೨೫ ಲಕ್ಷ ಕುಟುಂಬ ಹೈನುಗಾರಿಕೆಯನ್ನು ನೆಚ್ಚಿಕೊಂಡು ಜೀವನ ನಡೆಸುತ್ತಿವೆ. ಪ್ರಸ್ತುತದ ಬೆಲೆ ಏರಿಕೆಯಿಂದಾಗಿ ೧ಲೀ. ಹಾಲು ಉತ್ಪಾದಿಸಲು ಕನಿಷ್ಟ ೬೦ರೂ ವೆಚ್ಚವಾಗುತ್ತಿದೆ. ಇದರ ಜೊತೆಗೆ ರೋಗಗಳಿಂದ ರಾಸುಗಳನ್ನು ಉಳಿಸಿಕೊಳ್ಳು ವುದು ಸವಾಲಿನ ಕೆಲಸವಾಗಿದೆ. ಇಂತಹ ಸ್ಥಿತಿಯಲ್ಲಿಯೂ ಸರ್ಕಾರ ಅವೈಜ್ಞಾನಿಕವಾಗಿ ೩೧ರೂ. ಗಳನ್ನು ನಿಗಧಿಪಡಿಸಿರುವುದರಿಂದ ರೈತರು ಹೈನುಗಾರಿಕೆಯಿಂದ ವಿಮುಖರಾಗುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.
ಈ ನಿಟ್ಟಿನಲ್ಲಿ ರೈತರು ಸರಬರಾಜು ಮಾಡುವ ಲೀ. ಹಾಲಿಗೆ ಕನಿಷ್ಟ ೫೦ ರೂ ನಿಗಧಿಪಡಿಸುವುದು, ಪಶುಆಹಾರ ಬೆಲೆ ಕಡಿಮೆಗೊಳಿಸಿ ಹೆಚ್ಚಿನ ಪ್ರೋತ್ಸಾಹ ನೀಡುವುದು, ಸ್ಥಳೀಯವಾಗಿ ಹಾಲು ಮಾರಾಟವನ್ನು ನಿಗದಿಪಡಿಸಿ ವಿಧಿಸಿರುವ ಆದೇಶ ರದ್ದುಪಡಿಸುವುದು, ಪ್ರೋತ್ಸಾಹ ಧನವನ್ನು ೫ ರೂಗಳಿಂದ ೧೦ ರೂಗಳಿಗೆ ಹೆಚ್ಚಿಸುವುದು, ಒಕ್ಕೂಟ-ಡೇರಿ ನೇಮಕಾತಿಯಲ್ಲಿ ಸ್ಥಳೀಯ ಹಾಲು ಉತ್ಪಾದಕ ಮಕ್ಕಳಿಗೆ ಆದ್ಯತೆ ನೀಡುವುದು, ಬಾಕಿಯಿರುವ ೬೨೦ ಕೋಟಿ ರೂಗಳ ಪ್ರೋತ್ಸಾಹಧನ ಕೂಡಲೇ ಬಿಡುಗಡೆಗೊಳಿಸುವುದು ಸೇರಿ ಇನ್ನಿತರೆ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತಿದೆ ಎಂದರು.
ಪ್ರತಿಭಟನೆಯಲ್ಲಿ ಜಿಲ್ಲೆಯಿಂದ ೨ ಸಾವಿರಕ್ಕೂ ಹೆಚ್ಚಿನ ರೈತರು ಭಾಗಿಯಾಗಲಿದ್ದು, ಸರ್ಕಾರವು ತಮ್ಮ ಬೇಡಿಕೆಗಳನ್ನು ಈಡೇರಿಸುವವರೆಗೆ ಅನಿರ್ಧಿಷ್ಟಾವಧಿ ಪ್ರತಿಭಟನೆ ನಡೆಯಲಿದೆ. ರಾಜ್ಯ ಸರ್ಕಾರವು ಹಾಲು ಉತ್ಪಾದಕರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸದೇ ನಿರ್ಲಕ್ಷಿಸಿದಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಬುದ್ದಿ ಕಲಿಸಿದಂತೆ ಮುಂಬರುವ ತಾ.ಪಂ, ಜಿ.ಪಂ ಚುನಾವಣೆಯಲ್ಲಿ ಕಾಂಗ್ರೆಸ್ ಸರ್ಕಾರಕ್ಕೂ ತಕ್ಕಶಾಸ್ತಿ ಮಾಡಲಾಗುವುದು ಎಂದು ಎಚ್ಚರಿಸಿದರು.
ಸಂಘದ ತಾಲೂಕು ಅಧ್ಯಕ್ಷ ಮರಳುಕುಂಟೆ ರಾಮಾಂಜಿನಪ್ಪ, ಗೊಂದಹಳ್ಳಿ ವೆಂಕಟೇಶಪ್ಪ, ಕುಪ್ಪ ಹಳ್ಳಿ ಶ್ರೀನಿವಾಸ್, ತಾಂಡ್ರಮರದಹಳ್ಳಿ ಮಹೇಶ್, ಜಾತವಾರ ಜೆ.ಎನ್.ಮುನಿರಾಜು, ಕೊಳವನಹಳ್ಳಿ ಕೆ.ಆರ್.ಅಶ್ವತ್ಥಪ್ಪ, ಜಾತವಾರ ಹೊಸಹಳ್ಳಿ ಜೆ.ವಿ.ನಾಗರಾಜ್ ಇದ್ದರು.