ಮುಂಬಯಿ: 12 ವರ್ಷಗಳ ಬಳಿಕ ಚಾಂಪಿಯನ್ಸ್ ಟ್ರೋಫಿ ಗೆದ್ದ ಟೀಮ್ ಇಂಡಿಯಾಕ್ಕೆ ಐಒಸಿ ಸದಸ್ಯೆ, ರಿಲಯನ್ಸ್ ಫೌಂಡೇಷನ್ ಅಧ್ಯಕ್ಷೆ ನೀತಾ ಅಂಬಾನಿ ಅಭಿನಂದನೆ ಸಲ್ಲಿದ್ದಾರೆ. ಜತೆಗೆ ತಂಡ ಸಾಧನೆಯನ್ನು ಕೊಂಡಾಡಿದ್ದು, ಈ ಗೆಲುವು ಹೆಮ್ಮೆಯ ಮತ್ತು ಐತಿಹಾಸಿಕ ಕ್ಷಣ ಎಂದಿದ್ದಾರೆ. ಭಾನುವಾರ ನಡೆದಿದ್ದ ಫೈನಲ್ ಪಂದ್ಯದಲ್ಲಿ ಭಾರತ ತಂಡ ನ್ಯೂಜಿಲ್ಯಾಂಡ್ ವಿರುದ್ಧ ನಾಲ್ಕು ವಿಕೆಟ್ ಅಂತರದ ಗೆಲುವು ಸಾಧಿಸಿ ಮೂರನೇ ಬಾರಿಗೆ ಚಾಂಪಿಯನ್ಸ್ ಟ್ರೋಫಿ ಗೆದ್ದ ಸಾಧನೆ ಮಾಡಿತ್ತು.
ಟೀಮ್ ಇಂಡಿಯಾದ ಗೆಲುವಿಗೆ ಮೆಚ್ಚುಗೆ ವ್ಯಕ್ತಪಡಿಸಿದ ನೀತಾ ಅಂಬಾನಿ,'ಭಾರತಕ್ಕೆ ಎಂತಹ ಹೆಮ್ಮೆಯ ಮತ್ತು ಐತಿಹಾಸಿಕ ಕ್ಷಣ! ಐಸಿಸಿ ಚಾಂಪಿಯನ್ಸ್ ಟ್ರೋಫಿಯನ್ನು ಮೂರನೇ ಬಾರಿಗೆ ಎತ್ತಿ ಹಿಡಿದು, ದೇಶವನ್ನು ಮತ್ತೊಮ್ಮೆ ವಿಶ್ವ ವೇದಿಕೆಯಲ್ಲಿ ಗುರುತಿಸುವಂತೆ ಮಾಡಿದ ನಮ್ಮ ಟೀಮ್ ಇಂಡಿಯಾದ ಆಟಗಾರರಿಗೆ ಹೃತ್ಪೂರ್ವಕ ಅಭಿನಂದನೆಗಳು. ಈ ಗೆಲುವು ಶತಕೋಟಿ ಭಾರತೀಯರ ಕನಸು ನನಸಾಗಿಸಿದೆ. ರಾಷ್ಟ್ರಕ್ಕೆ ಹೆಮ್ಮೆ ಎನಿಸಿದೆ. ಜೈ ಹಿಂದ್!" ಎಂದು ಅಭಿನಂದನೆ ಸಲ್ಲಿಸಿದ್ದಾರೆ.
ಭಾನುವಾರ ನಡೆದಿದ್ದ ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ನ್ಯೂಜಿಲೆಂಡ್, ಡೆರಿಲ್ ಮಿಚೆಲ್ (63 ರನ್, 101 ಎಸೆತ, 3 ಬೌಂಡರಿ) ಹಾಗೂ ಮಿಚೆಲ್ ಬ್ರೇಸ್ವೆಲ್ (53* ರನ್, 40 ಎಸೆತ, 3 ಬೌಂಡರಿ, 2 ಸಿಕ್ಸರ್) ಅರ್ಧಶತಕಗಳ ನೆರವಿನಿಂದ ನಿಗದಿತ 50 ಓವರ್ಗಳಲ್ಲಿ 7 ವಿಕೆಟ್ಗೆ 251 ರನ್ಗಳ ಮೊತ್ತ ಕಲೆಹಾಕಿತು. ಗುರಿ ಬೆನ್ನಟ್ಟಿದ ಭಾರತ ರೋಹಿತ್ ಶರ್ಮ(76) ಅವರ ಅರ್ಧಶತಕ ಮತ್ತು ಕೊನೆಯಲ್ಲಿ ಕನ್ನಡಿಗ ಕೆ.ಎಲ್ ರಾಹುಲ್ (34* ರನ್, 33 ಎಸೆತ, 1 ಬೌಂಡರಿ, 1 ಸಿಕ್ಸರ್) ಉಪಯುಕ್ತ ಆಟದ ನೆರವಿನಿಂದ 49 ಓವರ್ಗಳಲ್ಲಿ 6 ವಿಕೆಟ್ಗೆ 254 ಭಾರತಕ್ಕೆ ಗೆಲುವು ತಂದುಕೊಟ್ಟರು.
ಇದನ್ನೂ ಓದಿ IND vs NZ: ರೋಹಿತ್ ಶರ್ಮಾ ಬ್ಯಾಟಿಂಗ್ನಿಂದ ಬೌಲರ್ಗಳು ಭಯ ಬಿದ್ದಿದ್ದರೆಂದ ಮಿಚೆಲ್ ಸ್ಯಾಂಟ್ನರ್!
ಭಾರತ ಒಲಿಂಪಿಕ್ ಸಂಸ್ಥೆ ಜತೆಗಿನ ದೀರ್ಘಾವಧಿಯ ಪಾಲುದಾರಿಕೆಯ ಭಾಗವಾಗಿ ರಿಲಯನ್ಸ್ ಫೌಂಡೇಷನ್ ಮೂಲಕ ಕಳೆದ ವರ್ಷ ಪ್ಯಾರಿಸ್ನಲ್ಲಿ ನಡೆದಿದ್ದ ಒಲಿಂಪಿಕ್ಸ್ನಲ್ಲಿ ನೀತಾ ಅಂಬಾನಿ ಸಾರಥ್ಯದಲ್ಲಿ ‘ಇಂಡಿಯಾ ಹೌಸ್’ ನಿರ್ಮಿಸಿ ಭಾರತೀಯ ಅಥ್ಲೀಟ್ಗಳಿಗೆ ವಿಶೇಷ ವ್ಯವಸ್ಥೆ ಕಲ್ಪಿಸಲಾಗಿತ್ತು. ದೇಶದಿಂದ ದೂರ ಇರುವ ಆ್ಯತ್ಲೀಟ್ಗಳಿಗೆ ಮನೆಯ ವಾತಾವರಣವನ್ನು ಕಲ್ಪಿಸುವ ನಿಟ್ಟಿನಲ್ಲಿ ಅವರು ಈ ಮಹಾನ್ ಕಾರ್ಯ ನಡೆಸಿದ್ದರು. 2036ರ ಒಲಿಂಪಿಕ್ ಕ್ರೀಡಾಕೂಟದ ಆತಿಥ್ಯ ಭಾರತಕ್ಕೆ ಸಿಗುವಂತಾಗಲು ನೀತಾ ಅಂಬಾನಿ ಕೂಡ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದಾರೆ.