#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Ranji Trophy: ದ್ವಿತೀಯ ಇನಿಂಗ್ಸ್‌ನಲ್ಲಿಯೂ ರೋಹಿತ್‌ ಶರ್ಮಾ ವೈಫಲ್ಯ!

ಜಮ್ಮು ಮತ್ತು ಕಾಶ್ಮೀರ ವಿರುದ್ದ ನಡೆಯುತ್ತಿರುವ ರಣಜಿ ಟ್ರೋಫಿ ಪಂದ್ಯದಲ್ಲಿಯೂ ಭಾರತ ತಂಡದ ನಾಯಕ ರೋಹಿತ್‌ ಶರ್ಮಾ ಬ್ಯಾಟಿಂಗ್‌ ವೈಓಲ್ಯ ಅನುಭವಿಸಿದ್ದಾರೆ. ಪ್ರಥಮ ಇನಿಂಗ್ಸ್‌ನಲ್ಲಿ 3 ರನ್‌ಗೆ ವಿಕೆಟ್‌ ಒಪ್ಪಿಸಿದ್ದ ಅವರು, ದ್ವಿತೀಯ ಇನಿಂಗ್ಸ್‌ನಲ್ಲಿ 28 ರನ್‌ ಗಳಿಸಿ ಔಟ್‌ ಆದರು.

ರಣಜಿ ಪಂದ್ಯದ ಎರಡೂ ಇನಿಂಗ್ಸ್‌ಗಳಲ್ಲಿಯೂ ರೋಹಿತ್‌ ಶರ್ಮಾ ವಿಫಲ!

Rohit Sharma suffers twin failure on Ranji match

Profile Ramesh Kote Jan 24, 2025 3:26 PM

ನವದೆಹಲಿ: ಭಾರತ ತಂಡದ ನಾಯಕ ರೋಹಿತ್‌ ಶರ್ಮಾ (Rohit Sharma) ಅವರ ಬ್ಯಾಟಿಂಗ್‌ ವೈಫಲ್ಯ ದೇಶಿ ಕ್ರಿಕೆಟ್‌ನಲ್ಲಿಯೂ ಮುಂದುವರಿದಿದೆ. ಮುಂಬೈನ ಶರದ್‌ ಪವಾರ್‌ ಕ್ರಿಕೆಟ್‌ ಅಕಾಡೆಮಿಯಲ್ಲಿ ಜಮ್ಮು ಮತ್ತು ಕಾಶ್ಮೀರ ವಿರುದ್ದ ನಡೆಯುತ್ತಿರುವ 2024-25ರ ಸಾಲಿನ ರಣಜಿ ಟ್ರೋಫಿ (Ranji Trophy 2024-25) ಪಂದ್ಯದಲ್ಲಿ ಮುಂಬೈ ಪರ ಕಣಕ್ಕಿ ಇಳಿದಿದ್ದ ರೋಹಿತ್‌ ಶರ್ಮಾ ಎರಡೂ ಇನಿಂಗ್ಸ್‌ಗಳಲ್ಲಿ ವೈಫಲ್ಯ ಅನುಭವಿಸಿದ್ದಾರೆ.

ಆಸ್ಟ್ರೇಲಿಯಾ ವಿರುದ್ದ ಬಾರ್ಡರ್‌-ಗವಾಸ್ಕರ್‌ ಟ್ರೋಫಿ ಟೆಸ್ಟ್‌ ಸರಣಿಯಲ್ಲಿ ಆಡಿದ್ದ ಮೂರು ಟೆಸ್ಟ್‌ ಪಂದ್ಯಗಳಲ್ಲಿ ರೋಹಿತ್‌ ಶರ್ಮಾ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದ್ದರು. ಅವರಿಂದ ಕನಿಷ್ಠ ಅರ್ಧಶತಕ ಕೂಡ ಸಿಡಿಸಲು ಸಾಧ್ಯವಾಗಿರಲಿಲ್ಲ. ವೇಗದ ಬೌಲರ್‌ಗಳ ಎದುರು ಅವರ ಫುಟ್‌ವರ್ಕ್‌ ಸರಿಯಾಗಿರಲಿಲ್ಲ. ಇದರಿಂದ ಅವರನ್ನು ಕಟ್ಟಿ ಹಾಕುವಲ್ಲಿ ಆಸೀಸ್‌ ಬೌಲರ್‌ಗಳು ಸಫಲರಾಗಿದ್ದರು.

Ranji Trophy: ರಣಜಿಯಲ್ಲೂ ರೋಹಿತ್‌, ಜೈಸ್ವಾಲ್‌, ಗಿಲ್‌ ವಿಫಲ

ಆಸ್ಟ್ರೇಲಿಯಾ ಪ್ರವಾಸ ಮುಗಿಸಿಕೊಂಡು ಭಾರತಕ್ಕೆ ಮರಳಿದ ಬಳಿಕ ಬಿಸಿಸಿಐ, ಶಿಸ್ತಿಗೆ ಸಂಬಂಧಿಸಿದಂತೆ 10 ಅಂಶಗಳ ಮಾರ್ಗಸೂಚಿಗಳನ್ನು ಪ್ರಕಟಿಸಿತ್ತು. ಇದರ ಪ್ರಕಾರ, ಅಂತಾರಾಷ್ಟ್ರೀಯ ಕ್ರಿಕೆಟ್‌ ಪಂದ್ಯಗಳು ಇಲ್ಲದ ಸಮಯದಲ್ಲಿ ಭಾರತ ತಂಡದ ಎಲ್ಲಾ ಆಟಗಾರರು ಕೂಡ ದೇಶಿ ಕ್ರಿಕೆಟ್‌ ಆಡಬೇಕು. ಅದರಂತೆ 2024-25ರ ಸಾಲಿನ ರಣಜಿ ಟ್ರೋಫಿ ಎರಡನೇ ಅವಧಿಯ ಪಂದ್ಯದಲ್ಲಿ ರೋಹಿತ್‌ ಶರ್ಮಾ, ಮುಂಬೈ ಹಾಗೂ ಜಮ್ಮು ಕಾಶ್ಮೀರ ನಡುವಣ ಪಂದ್ಯದಲ್ಲಿ ಕಣಕ್ಕೆ ಇಳಿದಿದ್ದರು.

ಅದರಂತೆ ರೋಹಿತ್‌ ಶರ್ಮಾ ಅವರ ಮೇಲೆ ಸಾಕಷ್ಟು ನಿರೀಕ್ಷೆ ಇತ್ತು. ಆದರೆ, ಪ್ರಥಮ ಇನಿಂಗ್ಸ್‌ಗಲ್ಲಿ 18 ಎಸೆತಗಳನ್ನು ಆಡಿದ್ದ ರೋಹಿತ್‌ ಶರ್ಮಾ ಕೇವಲ 3 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದ್ದರು. ಶುಕ್ರವಾರ ದ್ವಿತೀಯ ಇನಿಂಗ್ಸ್‌ನಲ್ಲಿ 35 ಎಸೆತಗಳಲ್ಲಿ 28 ರನ್‌ ಗಳಿಸಿದ್ದ ರೋಹಿತ್‌ ಶರ್ಮಾ ಉತ್ತಮ ಆರಂಭವನ್ನು ಪಡೆದಿದ್ದರು. ಆದರೆ, ಸಿಕ್ಕ ಉತ್ತಮ ಆರಂಭವನ್ನು ಸದುಪಯೋಗಪಡಿಸಿಕೊಳ್ಳುವಲ್ಲಿ ವಿಫಲರಾದರು. ಪ್ರಥಮ ಇನಿಂಗ್ಸ್‌ನಲ್ಲಿ ತಾನು ವಿಕೆಟ್‌ ಒಪ್ಪಿಸಿದ್ದ ಉಮರ್‌ ನಝಿರ್‌ ಅವರಿಗೆ ದ್ವಿತೀಯ ಇನಿಂಗ್ಸ್‌ನಲ್ಲಿ ಒಂದು ಸಿಕ್ಸರ್‌ ಸೇರಿದಂತೆ ಎರಡು ಬೌಂಡರಿಗಳನ್ನು ಸಿಡಿಸಿದ್ದರು. ಆ ಮೂಲಕ ಕೇವಲ 8 ಎಸೆತಗಳಲ್ಲಿ 15 ರನ್‌ ಸಿಡಿಸಿದ್ದರು.



ಯಧುವೀರ್‌ ಸಿಂಗ್‌ಗೆ ವಿಕೆಟ್‌ ಒಪ್ಪಿಸಿದ ರೋಹಿತ್‌

ದ್ವಿತೀಯ ಇನಿಂಗ್ಸ್‌ನಲ್ಲಿ ಉತ್ತಮ ಬ್ಯಾಟ್‌ ಮಾಡುತ್ತಿದ್ದ ರೋಹಿತ್‌ ಶರ್ಮಾ, ಯಧುವೀರ್‌ ಸಿಂಗ್‌ ಅವರ ಶಾರ್ಟ್‌ ಎಸೆತವನ್ನು ಪುಲ್‌ ಮಾಡಲು ಪ್ರಯತ್ನಿಸಿದರು. ಆದರೆ, ಚೆಂಡು ಬ್ಯಾಟ್‌ಗೆ ಸರಿಯಾಗಿ ಸಿಗದ ಕಾರಣ ಮಿಡ್‌ ವಿಕೆಟ್‌ನಲ್ಲಿ ಕ್ಯಾಚ್‌ ಕೊಟ್ಟರು. ಅಬಿದ್‌ ಮುಷ್ತಾಕ್‌ ಅವರು ಒಂದು ಕೈನಲ್ಲಿ ಕ್ಯಾಚ್‌ ಪಡೆದು ಟೀಮ್‌ ಇಂಡಿಯಾ ನಾಯಕನನ್ನು ಪೆವಿಲಿಯನ್‌ಗೆ ಕಳುಹಿಸಿದರು.

Ranji Trophy: ಡೆಲ್ಲಿ ವಿರುದ್ಧ 5 ವಿಕೆಟ್‌ ಕಿತ್ತ ರವೀಂದ್ರ ಜಡೇಜಾ

ಮುಂಬೈಗೆ ಶಾರ್ದುಲ್‌ ಠಾಕೂರ್‌ ಆಸರೆ

ಪ್ರಥಮ ಇನಿಂಗ್ಸ್‌ನಲ್ಲಿ ಕೇವಲ 120 ರನ್‌ಗಳಿಗೆ ಆಲ್‌ಔಟ್‌ ಆಗಿದ್ದ ಮುಂಬೈ ತಂಡ, ದ್ವಿತೀಯ ಇನಿಂಗ್ಸ್‌ನಲ್ಲಿ ಆಟವನ್ನು ಮುಂದುವರಿಸಿದೆ. 44 ಓವರ್‌ಗಳ ಅಂತ್ಯಕ್ಕೆ ಮುಂಬೈ ದ್ವಿತೀಯ ಇನಿಂಗ್ಸ್‌ನಲ್ಲಿ 7 ವಿಕೆಟ್‌ಗಳ ನಷ್ಟಕ್ಕೆ 174 ರನ್‌ಗಳನ್ನು ಗಳಿಸಿದೆ. ಕ್ರೀಸ್‌ನಲ್ಲಿ ತನುಷ್‌ ಕೋಟಿಯನ್‌ (33*) ಹಾಗೂ ಶಾರ್ದುಲ್‌ ಠಾಕೂರ್‌ (40*) ಇದ್ದಾರೆ. ಇದಕ್ಕೂ ಮುನ್ನ ಜಮ್ಮು ಮತ್ತು ಕಾಶ್ಮೀರ 206 ರನ್‌ಗಳಿಗೆ ಆಲ್‌ಔಟ್‌ ಆಗಿತ್ತು.