Tumkur News: ತುಮಕೂರಲ್ಲಿ ಆಯಿಲ್ ಟ್ಯಾಂಕ್ ಸ್ಫೋಟವಾಗಿ ಇಬ್ಬರು ಕಾರ್ಮಿಕರ ದುರ್ಮರಣ, ಮೂವರಿಗೆ ಗಾಯ
Tumkur News: ತುಮಕೂರಿನ ಅಂತಸರಹಳ್ಳಿಯ ಕೈಗಾರಿಕಾ ಪ್ರದೇಶದಲ್ಲಿರುವಂತ ಪರಿಮಳ ಆಗ್ರೋ ಫುಡ್ ಇಂಡಸ್ಟ್ರೀಸ್ನಲ್ಲಿ ಆಯಿಲ್ ಟ್ಯಾಂಕ್ ಸ್ಫೋಟಗೊಂಡ ಪರಿಣಾಮ ಇಬ್ಬರು ಕಾರ್ಮಿಕರು ಸ್ಥಳದಲ್ಲೇ ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ.
ತುಮಕೂರು: ಆಯಿಲ್ ಟ್ಯಾಂಕ್ ಬ್ಲಾಸ್ಟ್ ಆಗಿ ಇಬ್ಬರು ಕಾರ್ಮಿಕರು ಮೃತಪಟ್ಟು, ಮೂವರು ಕಾರ್ಮಿಕರಿಗೆ ಗಂಭೀರ ಗಾಯಗಳಾಗಿರುವ ಘಟನೆ ತುಮಕೂರಿನ (Tumkur News) ಅಂತಸರನಹಳ್ಳಿಯ ಕೈಗಾರಿಕಾ ಪ್ರದೇಶದಲ್ಲಿ ನಡೆದಿದೆ. ಅಂತಸರಹಳ್ಳಿಯ ಕೈಗಾರಿಕಾ ಪ್ರದೇಶದಲ್ಲಿರುವಂತ ಪರಿಮಳ ಆಗ್ರೋ ಫುಡ್ ಇಂಡಸ್ಟ್ರೀಸ್ ನಲ್ಲಿ ಆಯಿಲ್ ಟ್ಯಾಂಕ್ ಸ್ಫೋಟಗೊಂಡ ಪರಿಣಾಮ ಇಬ್ಬರು ಕಾರ್ಮಿಕರು ಸ್ಥಳದಲ್ಲೇ ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ.
ಭತ್ತದ ಹೊಟ್ಟಿನಿಂದ ಎಣ್ಣೆ ತೆಗೆಯುವ ಫ್ಯಾಕ್ಟರಿ ಇದಾಗಿದ್ದು, ಆಯಿಲ್ ಟ್ಯಾಂಕ್ ಬಳಿ ಐವರು ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಈ ವೇಳೆ ಆಯಿಲ್ ಟ್ಯಾಂಕ್ ಬ್ಲಾಸ್ಟ್ ಆಗಿದೆ. ಆಗ ಇಬ್ಬರು ಕಾರ್ಮಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನುಳಿದ ಮೂವರು ಕಾರ್ಮಿಕರಿಗೆ ಗಂಭೀರ ಗಾಯಗಳಾಗಿವೆ. ಗಾಯಾಳು ಕಾರ್ಮಿಕರನ್ನು ತುಮಕೂರು ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ. ತುಮಕೂರು ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ತುಮಕೂರು ಗ್ರಾಮಾಂತರ ಪೊಲೀಸರು ಭೇಟಿ, ಪರಿಶೀಲನೆ ನಡೆಸಿದ್ದಾರೆ.
ಈ ಸುದ್ದಿಯನ್ನೂ ಓದಿ | Muda case: ಇಡಿ ವಿಚಾರಣೆಯಿಂದ ಸಿಎಂ ಪತ್ನಿ, ಸಚಿವ ಬೈರತಿ ಸುರೇಶ್ಗೆ ರಿಲೀಫ್; ಸಮನ್ಸ್ಗೆ ಮಧ್ಯಂತರ ತಡೆ
ಗ್ರಾಮಸ್ಥರ ಹೆಸರಿನಲ್ಲಿ ಲಕ್ಷ ಲಕ್ಷ ಸಾಲ ಪಡೆದು ದಂಪತಿ ಪರಾರಿ!
ಮಧುಗಿರಿ: ಸುಮಾರು 10ಕ್ಕೂ ಅಧಿಕ ಮೈಕ್ರೋ ಫೈನಾನ್ಸ್ ಕಂಪನಿಗಳಿಂದ ಗ್ರಾಮಸ್ಥರ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ಸಾಲ ಪಡೆದು, ಮರು ಪಾವತಿಸದೇ ಹಣದ ಸಮೇತ ದಂಪತಿ ಪರಾರಿಯಾಗಿರುವ ಘಟನೆ ತಾಲೂಕಿನ ಪುರವರ ಹೋಬಳಿ ದೊಡ್ಡಹೊಸಹಳ್ಳಿಯಲ್ಲಿ ನಡೆದಿದೆ.
ತಾಲೂಕಿನ ಪುರವರ ಹೋಬಳಿ ದೊಡ್ಡಹೊಸಹಳ್ಳಿ ಗ್ರಾಮದ ಪ್ರತಾಪ ಮತ್ತು ರತ್ನಮ್ಮ ಎಂಬುವರು ಸುಮಾರು 35 ಮಂದಿಯ ಆಧಾರ್ ಕಾರ್ಡ್, ಇತರೆ ದಾಖಲೆ ಪಡೆದಿದ್ದರು. 10 ಮೈಕ್ರೋ ಫೈನಾನ್ಸ್ ಕಂಪನಿಗಳಿಂದ 45 ರಿಂದ 50 ಲಕ್ಷದವರೆಗೆ ಸಾಲ ಮಂಜೂರು ಮಾಡಿಸಿದ್ದರು. ಜನರಿಗೆ ಮಂಜೂರಾದ ಸಾಲದ ಹಣ ಪಡೆದು ನಾವೇ ಕಟ್ಟಿಕೊಂಡು ಹೋಗುತ್ತೇವೆ ಎಂದು ನಂಬಿಸಿ ಮೋಸ ಮಾಡಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಮೈಕ್ರೋ ಫೈನಾನ್ಸ್ ಕಂಪನಿ ಜತೆಗೆ ದಂಪತಿ ಒಡನಾಟ ಇಟ್ಟುಕೊಂಡು ಪ್ರಾರಂಭದಲ್ಲಿ ಕೆಲವರಿಗೆ ಸಾಲ ಕೊಡಿಸಿದ್ದರು. ನಂತರ ಗ್ರಾಮದ 35 ಮಂದಿಗೆ ಸಾಲ ಕೊಡಿಸಿದ್ದಾರೆ. ಪ್ರತಿ ತಿಂಗಳು ನಾವೇ ಈ ಹಣವನ್ನು ಕಟ್ಟಿಕೊಂಡು ಹೋಗುತ್ತೇವೆ ಎಂದು ನಂಬಿಸಿ ಹಣದ ಸಮೇತ 2 ತಿಂಗಳ ಹಿಂದೆ ಪರಾರಿಯಾಗಿದ್ದಾರೆ.
ಮೈಕ್ರೋ ಫೈನಾನ್ಸ್ ಕಂಪನಿಗಳು ಸಾಲ ಮರು ಪಾವತಿ ಮಾಡುವಂತೆ ಗ್ರಾಮಸ್ಥರಿಗೆ ನೋಟಿಸ್ ಜಾರಿ ಮಾಡಿವೆ. ಫೈನಾನ್ಸ್ ಸಿಬ್ಬಂದಿ ಪ್ರತಿ ದಿನ ಮನೆಗಳ ಮುಂದೆ ಬಂದು ಸಾಲ ಕಟ್ಟುವಂತೆ ಒತ್ತಡ ಹೇರುತ್ತಿದ್ದಾರೆ. ನಮ್ಮ ಹಣವನ್ನು ಪಡೆದು ದಂಪತಿ ಪರಾರಿಯಾಗಿದ್ದಾರೆ. ಈ ಬಗ್ಗೆ ಕೊಡಿಗೇನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮದ ರಂಗಮ್ಮ, ಸಾವಿತ್ರಮ್ಮ, ನರಸಮ್ಮ, ಕೋಟೆಮ್ಮ ಸಿದ್ದಗಂಗಮ್ಮ, ರತ್ನಮ್ಮ, ಎಸ್.ರಂಗಮ್ಮ, ಕೋಮಲಮ್ಮ, ಲಕ್ಷ್ಮೀದೇವಮ್ಮ, ಮಂಜುಳಾ, ವೀರನಾಗಮ್ಮ, ಹನುಮಕ್ಕ, ಮಂಜುಳಮ್ಮ, ಮೇಘಾ, ಪುಟ್ಟ ತಾಯಪ್ಪ ತಿಳಿಸಿದ್ದಾರೆ.
ನಾವು ಗ್ರಾಮಸ್ಥರ ಹೆಸರಿನಲ್ಲಿ ಯಾವುದೇ ರೀತಿಯ ಸಾಲ ಪಡೆದು ಪರಾರಿಯಾಗಿಲ್ಲ. ಯಾವುದೇ ದಾಖಲೆಗಳನ್ನು ದುರ್ಬಳಕೆ ಮಾಡಿಕೊಂಡಿಲ್ಲ. ಈ ಬಗ್ಗೆ ಸುಮ್ಮನೆ ಸುಳ್ಳು ಆರೋಪ ಮಾಡಲಾಗುತ್ತಿದೆ ಎಂದು ದಂಪತಿ ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ | R Ashok: ಕಾಂಗ್ರೆಸ್ ಸರ್ಕಾರದಿಂದ ರೌಡಿಗಳಿಗೆ ಕೈ ತುಂಬಾ ಉದ್ಯೋಗ: ಆರ್.ಅಶೋಕ್