ಡೆಹ್ರಾಡೂನ್: ಹಾಲಿ ಮತ್ತು ಮಾಜಿ ಶಾಸಕರ ನಡುವೆ ಕ್ಷುಲ್ಲಕ ಕಾರಣಕ್ಕೆ ಶುರುವಾದ ಜಗಳ ಕೊನೆಗೆ ಶೂಟೌಟ್ನಲ್ಲಿ ಕೊನೆಯಾಗಿರುವ ಘಟನೆ ಉತ್ತರಾಖಂಡದ ಖಾನಾಪುರದಲ್ಲಿ ನಡೆದಿದೆ. ಖಾನಾಪುರ ಶಾಸಕ ಉಮೇಶ್ ಕುಮಾರ್ ಅವರ ಕಚೇರಿ ಮೇಲೆ ಮಾಜಿ ಶಾಸಕ ಕುನ್ವರ್ ಪ್ರಣವ್ ಸಿಂಗ್ ಚಾಂಪಿಯನ್ ಗುಂಡಿನ ದಾಳಿ ನಡೆಸಿರುವ ಆಘಾತಕಾರಿ ಘಟನೆ ನಡೆದಿರುವುದಾಗಿ ತಿಳಿದುಬಂದಿದೆ. ಮಾಜಿ ಶಾಸಕ ಕುನ್ವರ್ ಪ್ರಣವ್ ಸಿಂಗ್ ತಮ್ಮ ಬೆಂಬಲಿಗರೊಂದಿಗೆ ಶಾಸಕ ಉಮೇಶ್ ಕುಮಾರ್ ಅವರ ಅಧಿಕೃತ ನಿವಾಸದ ಮೇಲೆ ಗುಂಡು ಹಾರಿಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಘಟನೆಯ ವಿಡಿಯೊ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್(Viral Video) ಆಗಿದೆ. ದಾಳಿಗೂ ಮುನ್ನ ಹಾಲಿ ಶಾಸಕ ಉಮೇಶ್ ಕುಮಾರ್ ಮತ್ತು ಮಾಜಿ ಶಾಸಕರ ನಡುವೆ ಮಾತಿನ ಚಕಮಕಿ ನಡೆದಿತ್ತು ಎನ್ನಲಾಗಿದೆ.
ರೂರ್ಕಿಯಲ್ಲಿ ನಡೆದ ಈ ಹಿಂಸಾತ್ಮಕ ಘಟನೆಯ ನಂತರ, ಉತ್ತರಾಖಂಡ ಪೊಲೀಸರು ಬಿಜೆಪಿ ಮುಖಂಡ ಮತ್ತು ಮಾಜಿ ಶಾಸಕ ಕುನ್ವರ್ ಪ್ರಣವ್ ಚಾಂಪಿಯನ್ ಅವರನ್ನು ಬಂಧಿಸಿದ್ದಾರೆ. ಬಂಧನದ ಸಮಯದಲ್ಲಿ, ಮಾಜಿ ಶಾಸಕರು ಇದು ತನಗೆ ಮಾಡಲಾಗುತ್ತಿರುವ ಅನ್ಯಾಯ ಎಂದು ಹೇಳಿಕೊಂಡಿದ್ದಾರೆ. ಪೊಲೀಸರು ಮುಂದಿನ ಕ್ರಮ ತೆಗೆದುಕೊಂಡಿದ್ದಾರೆ ಮತ್ತು ಮಾಜಿ ಶಾಸಕರ ಶಸ್ತ್ರಾಸ್ತ್ರ ಪರವಾನಗಿಗಳನ್ನು ಶೀಘ್ರದಲ್ಲೇ ರದ್ದುಪಡಿಸಲಾಗುವುದು ಎಂಬುದಾಗಿ ತಿಳಿದುಬಂದಿದೆ.
ಡೆಹ್ರಾಡೂನ್ ಪೊಲೀಸರು ಮಾಜಿ ಶಾಸಕ ಕುನ್ವರ್ ಪ್ರಣವ್ ಸಿಂಗ್ ಚಾಂಪಿಯನ್ ಅವರನ್ನು ವಶಕ್ಕೆ ತೆಗೆದುಕೊಂಡು ನಂತರ ವಿಚಾರಣೆಗಾಗಿ ನೆಹರೂ ಕಾಲೋನಿ ಪೊಲೀಸ್ ಠಾಣೆಗೆ ಕರೆತಂದಿದ್ದಾರೆ.
ಶಾಸಕ ಉಮೇಶ್ ಕುಮಾರ್ ಅವರ ಕಚೇರಿಗೆ ಬೆಂಬಲಿಗರೊಂದಿಗೆ ಬಂದ ಮಾಜಿ ಶಾಸಕ ಕುನ್ವರ್ ಪ್ರಣವ್ ಸಿಂಗ್ ಹಾಡುಹಗಲೇ ಗುಂಡು ಹಾರಿಸಿದ್ದಾರೆ. ಇಡೀ ಘಟನೆಯನ್ನು ಸಿಸಿಟಿವಿಯಲ್ಲಿ ಸೆರೆಹಿಡಿಯಲಾಗಿದೆ. ಇದು ಈಗ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ಗುಂಡಿನ ಶಬ್ದವು ಆ ಪ್ರದೇಶದಾದ್ಯಂತ ಪ್ರತಿಧ್ವನಿಸಿದ್ದು, ಇದು ಅಲ್ಲಿನ ನಿವಾಸಿಗಳಲ್ಲಿ ಭೀತಿಯನ್ನು ಉಂಟುಮಾಡಿದೆ. ಆವರಣದ ಅನೇಕ ಸ್ಥಳಗಳಲ್ಲಿ ಬುಲೆಟ್ ಗುರುತುಗಳು ಕಂಡುಬಂದಿವೆ.
ಘಟನೆಯ ವಿಡಿಯೊವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ಉಮೇಶ್ ಕುಮಾರ್, "ನಿನ್ನೆ ನಡೆದ ಪುರಸಭೆ ಚುನಾವಣೆಯಲ್ಲಿ ಹೀನಾಯ ಸೋಲನ್ನು ಅನುಭವಿಸಿದ ನಂತರ, ಮಾಜಿ ಬಿಜೆಪಿ ಶಾಸಕ ಪ್ರಣವ್ ಸಿಂಗ್ ಚಾಂಪಿಯನ್, ಸಶಸ್ತ್ರ ದುಷ್ಕರ್ಮಿಗಳೊಂದಿಗೆ ಇಂದು ನನ್ನ ಅಧಿಕೃತ ನಿವಾಸದ ಮೇಲೆ ನೂರಾರು ಸುತ್ತು ಗುಂಡು ಹಾರಿಸಿದ್ದಾರೆ" ಎಂದು ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ:Israel Hamas : ಕೊನೆಗೂ ತಾಯ್ನಾಡಿಗೆ ಮರಳಿದ ಇಸ್ರೇಲ್ ಒತ್ತೆಯಾಳುಗಳು , ಭಾವುಕ ವಿಡಿಯೋ ವೈರಲ್
ವರದಿಗಳ ಪ್ರಕಾರ, ಕಳೆದ ಎರಡು ದಿನಗಳಿಂದ ಉಮೇಶ್ ಕುಮಾರ್ ಮತ್ತು ಕುನ್ವರ್ ಪ್ರಣವ್ ಸಿಂಗ್ ಚಾಂಪಿಯನ್ ನಡುವಿನ ಸೋಶಿಯಲ್ ಮೀಡಿಯಾದಲ್ಲಿನ ಜಗಳವು ಈ ಹಿಂಸಾತ್ಮಕ ಘರ್ಷಣೆಗೆ ಕಾರಣವಾಗಿತ್ತು ಎನ್ನಲಾಗಿದೆ.