Vishwavani Award: ಮಸ್ಕತ್ನಲ್ಲಿ ಮಸ್ತಕಕ್ಕೆ ಚೈತನ್ಯ ನೀಡಿದ ವಿಶ್ವವಾಣಿ
ಸಮಾರಂಭದ ದಿವ್ಯ ಸಾನ್ನಿಧ್ಯವನ್ನು ಲಿಂಗಾಯತ ಪಂಚಮಸಾಲಿ ಜಗದ್ಗುರು ಮಹಾ ಪೀಠದ ಶ್ರೀ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಯವರು ವಹಿಸಿದ್ದರು. ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷ ಯು.ಟಿ. ಖಾದರ್ ಅವರು ಈ ಅಂತಾರಾಷ್ಟ್ರೀಯ ಸಮ್ಮಿಲನವನ್ನು ಉದ್ಘಾಟಿಸಿದರು.
17 ಮಂದಿ ವಿವಿಧ ಕ್ಷೇತ್ರಗಳ ಸಾಧಕರಿಗೆ ಗ್ಲೋಬಲ್ ಅಚೀವರ್ಸ್ ಪ್ರಶಸ್ತಿ ಪ್ರದಾನ; ಕರ್ನಾಟಕ ಸಂಘದ ಸಹಯೋಗದಲ್ಲಿ ವರ್ಣರಂಜಿತ ಸಮಾರಂಭ
ಪ್ರತ್ಯಕ್ಷ ವರದಿ: ರಾಜು ಅಡಕಳ್ಳಿ
Vishwavani Award: ʼಸಪ್ತ ಸಾಗರದಾಚೆ ಎಲ್ಲೋ ಸುಪ್ತ ಸಾಗರ ಕಾದಿದೆ’ ಎನ್ನುವಂತೆ ಗ್ಲೋಬಲ್ ಅಚೀವರ್ಸ್ (Global achievers award) ಸಮ್ಮೇಳನದ ಏಳನೆಯ ವಿಶ್ವಯಾತ್ರ ಕಾರ್ಯಕ್ರಮ ಒಮಾನ್ ದೇಶದ ರಾಜಧಾನಿ ಮಸ್ಕತ್ (Muscat) ನಗರದಲ್ಲಿ ಸಂಪನ್ನಗೊಂಡಿತು.
ವಿಶ್ವವಾಣಿಯ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ ಅವರ ನೇತೃತ್ವದ ವಿಶೇಷ ನಿಯೋಗವು ಕಳೆದ ಐದು ದಿನಗಳಿಂದ ಒಮಾನ್ ರಾಷ್ಟ್ರದ ವಿವಿಧ ತಾಣಗಳಿಗೆ ಅಧ್ಯಯನ ಪ್ರವಾಸ ಕೈಗೊಂಡಿದಲ್ಲದೇ, ಮಸ್ಕತ್ತಿನ ಕರ್ನಾಟಕ ಸಂಘದ ಸಹಯೋಗದಲ್ಲಿ ಏರ್ಪಡಿಸಿದ್ದ ವರ್ಣರಂಜಿತ ಸಮಾರಂಭದಲ್ಲಿ 17 ಮಂದಿ ವಿವಿಧ ಕ್ಷೇತ್ರಗಳ ಸಾಧಕರನ್ನು ಗೌರವಿಸಿ ಅವರಿಗೆ ಗ್ಲೋಬಲ್ ಅಚೀವರ್ಸ್ ಪ್ರಶಸ್ತಿ ಪ್ರದಾನ ಮಾಡಿದ್ದು ವಿಶೇಷ ವಾಗಿತ್ತು. ಈ ಸಮಾರಂಭವು ಸಾಧಕರ ಸಂಗಮವಾಗಿದಷ್ಟೇ ಅಲ್ಲ. ಕರ್ನಾಟಕ ಸಂಘದ ಸದಸ್ಯರ ಸಾಂಸ್ಕೃ ತಿಕ ಪ್ರದರ್ಶನಗಳ ಸಂಗಮವಾಗಿಯೂ ಗಮನ ಸೆಳೆಯಿತು.
ಸಮಾರಂಭದ ದಿವ್ಯ ಸಾನ್ನಿಧ್ಯವನ್ನು ಲಿಂಗಾಯತ ಪಂಚಮಸಾಲಿ ಜಗದ್ಗುರು ಮಹಾ ಪೀಠದ ಶ್ರೀ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಯವರು ವಹಿಸಿದ್ದರು. ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷ ಯು.ಟಿ. ಖಾದರ್ ಅವರು ಈ ಅಂತಾರಾಷ್ಟ್ರೀಯ ಸಮ್ಮಿಲನವನ್ನು ಉದ್ಘಾಟಿಸಿದರು. ವಿಶ್ವೇಶ್ವರ ಭಟ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕರ್ನಾಟಕ ಸಂಘದ ಅಧ್ಯಕ್ಷ ಎಸ್.ಡಿ.ಟಿ.ಪ್ರಸಾದ್ ಮತ್ತು ಒಮಾನ್ ದೇಶದ ವಿವಿಧ ಗಣ್ಯರು, ಕೈಗಾರಿಕೋದ್ಯಮಿಗಳು ಹಾಗೂ ಅನಿವಾಸಿ ಭಾರತೀಯ ಬಂಧುಗಳು ಭಾಗವಹಿಸಿದ್ದರು.
ಗಣ್ಯರಿಂದ ಕಳೆಕಟ್ಟಿದ ಸಮಾರಂಭ: ಮಸ್ಕತ್ತಿನ ಮಿಲೇನಿಯಂ ಗ್ಯ್ರಾಂಡ್ ಪಂಚತಾರಾ ಹೋಟೆಲಿನಲ್ಲಿ ಬೆಳಗಿನ ತುಂತುರು ಮಳೆಯ ಸಿಂಚನದ ತಂಪಿನಲ್ಲಿ ಭಾರತ ಮತ್ತು ಒಮಾನ್ ರಾಷ್ಟ್ರ ಗೀತೆಗಳೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದು, ಕಲಾವಿದೆ ತೀರ್ಥ ಕಟೀಲ್ ಅವರ ಪ್ರಾರ್ಥನಾ ನೃತ್ಯದೊಂದಿಗೆ ಸಾಂಸ್ಕೃತಿಕ ಕಹಳೆ ಮೊಳಗಿಸಿದ್ದು ಅರ್ಥಪೂರ್ಣವಾಗಿತ್ತು. ವಿಶ್ವ ವಾಣಿ ಬಳಗದ ನಾಗಾರ್ಜುನ ಅವರು ಸ್ವಾಗತ ಕೋರಿದರು. ವಿಶ್ವವಾಣಿ ಸಿಇಒ ಚಿದಾನಂದ ಕಡಲಾಸ್ಕರ ಅವರು ವಂದನಾರ್ಪಣೆ ಮಾಡಿದರು.
ಮಸ್ಕತ್ತಿನಲ್ಲಿ ನೆಲೆಸಿರುವ ಮೌನ ಪೊನ್ನಪ್ಪ ಮತ್ತು ರೀನಾ ಕೃಷ್ಣಪ್ಪ ಅವರು ಕಾರ್ಯಕ್ರಮ ಅಚ್ಚುಕಟ್ಟಾಗಿ ನಿರ್ವಹಿಸಿದರು. ಅನುಪಮಾ ಪ್ರಸಾದ್ ಅವರು ಪ್ರಾರ್ಥನಾ ಗೀತೆ ಹಾಡಿ ಕಾರ್ಯಕ್ರಮಕ್ಕೆ ಕಳೆಕಟ್ಟಿದರು. ಸಮಾರಂಭದಲ್ಲಿ ಕರ್ನಾಟಕ ಸಂಘದ ಅಧಿಕಾರಿಗಳು ಹಾಗೂ ಅನಿವಾಸಿ ಭಾರತೀಯ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದು ವಿಶೇಷವಾಗಿತ್ತು. ಕಾಂಗ್ರೆಸ್ ಮುಖಂಡ ವೆಂಕಟೇಶ್ ಹೆಗಡೆ ಹೊಸಬಾಳೆ, ಹಿರಿಯ ಪತ್ರಕರ್ತ ರಾಜು ಅಡಕಳ್ಳಿ, ಯುವ ಮುಖಂಡ ಸುರೇಶ್ ಹೆಗಡೆ ಹಲಗೇರಿ, ಮಾಧ್ಯಮ ತಜ್ಞೆ ದಿವ್ಯಾ ರಂಗೇನಹಳ್ಳಿ, ಯುವ ಉದ್ಯಮಿ ಸಿದ್ದೇಶ್ ಹಾರನಹಳ್ಳಿ ಪಾಲ್ಗೊಂಡಿದ್ದರು.
ಅಲ್ಲದೆ, ಮಸ್ಕತ್ತಿನಲ್ಲಿ ನೆಲೆಸಿರುವ ಕರ್ನಾಟಕದ ಖ್ಯಾತ ಉದ್ಯಮಿ ಹಾಗೂ ಕರ್ನಾಟಕ ಸಂಘದ ಅಧ್ಯಕ್ಷ ಎಸ್.ಟಿ.ಡಿ. ಪ್ರಸಾದ್, ಅನಿವಾಸಿ ಭಾರತೀಯ ಜಿ.ವಿ.ರಾಮಕೃಷ್ಣ ಮತ್ತು ಕವಿತಾ ರಾಮಕೃಷ್ಣ, ಲುಲು ಸಂಸ್ಥೆಯ ಪ್ರಾದೇಶಿಕ ನಿರ್ದೇಶಕ ಶಬ್ಬೀರ್, ಉದ್ಯಮಿಗಳಾದ ಅಬ್ದುಲ್ ಲತೀ-, ಶೇಖ್ ಸೌದ್ ಹಮೀದ್ ಇಸ್ಸಾ ಅಲ್ತಾಯಿ ಅವರೂ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇಡೀ ಪ್ರವಾಸ ಉಸ್ತುವಾರಿಯನ್ನು ಫನ್ಸ್ಟೇದ ಮುಖ್ಯಸ್ಥ ನಿತಿನ್ ಅಗರ್ವಾಲ್, ಮಂಜುನಾಥ್ ನಿರ್ವಹಿಸಿದ್ದರು.
ಪತ್ರಿಕೋದ್ಯಮ ಬದಲಾವಣೆಯ ರಾಯಭಾರಿಯಾಗಲಿ
ಕಾರ್ಯಕ್ರಮದಲ್ಲಿ ಮಾತನಾಡಿದ ವಿಶ್ವವಾಣಿ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ ಅವರು, ಪತ್ರಿಕೋ ದ್ಯಮ ನಿಂತ ನೀರಾಗಬಾರದು. ಬದಲಾವಣೆಯ ರಾಯಭಾರಿಯಂತಿರಬೇಕು ಎಂದು ಅಭಿಪ್ರಾಯಪಟ್ಟರು. ಕನ್ನಡನಾಡಿನ ಸಾಧಕರನ್ನು ಹೀಗೆ ಬೇರೆ ಬೇರೆ ದೇಶಗಳಲ್ಲಿ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಗೌರವಿ ಸುವ, ಅವರಿಗೆ ಪ್ರಶಸ್ತಿ ನೀಡಿ ಪ್ರೋತ್ಸಾಹಿಸುವ ಹೊಸ ಪರಂಪರೆಯನ್ನು ವಿಶ್ವವಾಣಿ ಹುಟ್ಟುಹಾಕಿದೆ. ಈಗಾ ಗಲೇ ಕಾಂಬೋಡಿಯಾ, ವಿಯೆಟ್ನಾಂ, ಇಂಡೋನೇಷಿಯಾ, ಮಾರಿಷಸ್, ಮಾಲ್ಡೀವ್ಸ್, ಜಪಾನ್ನಲ್ಲಿ ಇಂತಹ ಅರ್ಥಪೂರ್ಣ ಸಮಾರಂಭಗಳನ್ನು ಅತ್ಯಂತ ಯಶಸ್ವಿಯಾಗಿ ಆಯೋಜಿಸಿ, ಈಗ ಕರ್ನಾಟಕ ಸಂಘದ ಸಹಭಾ ಗಿತ್ವದೊಂದಿಗೆ, ಸಂಘದ ಅಧ್ಯಕ್ಷ ಎಸ್.ಡಿ.ಟಿ.ಪ್ರಸಾದ್ ಮತ್ತು ಇತರ ಪದಾಧಿಕಾರಿಗಳ ಸಹಕಾರದೊಂದಿಗೆ ಮಸ್ಕತ್ತಿನಲ್ಲಿಯೂ ಕಾರ್ಯಕ್ರಮ ಏರ್ಪಡಿಸಿದ್ದು ಹೆಮ್ಮೆಯ ಸಂಗತಿ. ಈ ಬಗ್ಗೆ ಮಸ್ಕತ್ತಿನ ಕರ್ನಾಟಕ ಸಂಘಕ್ಕೆ ಹೃತ್ಪೂರ್ವಕ ಧನ್ಯವಾದಗಳು ಎಂದು ಹೇಳಿದರು.
ಫೆಬ್ರವರಿಯಲ್ಲಿ ‘ಪ್ರವಾಸೋಮದ್ಯಕ್ಕೆ ಸಂಬಂಧಪಟ್ಟ ಪತ್ರಿಕೆ ವಿಶ್ವವಾಣಿ ಈಗ ದಶಮಾನೋತ್ಸವ ಸಂಭ್ರಮದ ನಿಮಿತ್ತ ಮುಂದಿನ ತಿಂಗಳು ವಿಶ್ವವಾಣಿ ಬಳಗದಿಂದ ‘ಪ್ರವಾಸಿ ಪ್ರಪಂಚ’ಎಂಬ ಪ್ರವಾಸೋದ್ಯಮದ ವಿಶೇಷ ಮಾಹಿತಿ ನೀಡುವ ಪತ್ರಿಕೆಯನ್ನು ಪ್ರಾರಂಭಿಸಲಾಗುವುದು. ವಿಶ್ವವಾಣಿ ಕಳೆದ ಹತ್ತು ವರ್ಷಗಳಲ್ಲಿ ರಾಜ್ಯಾದ್ಯಂತ ಆರು ವೃತ್ತಿಗಳನ್ನು ಪ್ರಾರಂಭಿಸಿ ಸುದ್ದಿ ಸೇವೆ ನೀಡುತ್ತಿದೆ. ಶಿರಸಿಯಿಂದ ಪ್ರಕಟ ವಾಗುತ್ತಿದ್ದ ಲೋಕಧ್ವನಿಯೂ ವಿಶ್ವವಾಣಿ ಬಳಗದಿಂದ ಪ್ರಕಟವಾಗುತ್ತಿದ್ದು, ಈಗ ಇದರ ಗಂಗಾವತಿ ಆವೃತ್ತಿಯನ್ನು ಪ್ರಾರಂಭಿಸಲಾಗಿದೆ.ಲೋಕಧ್ವನಿಯು ಶಿವಮೊಗ್ಗ , ದಾವಣಗೆರೆ ಆವೃತ್ತಿಗಳನ್ನೂ ಪ್ರಾರಂಭಿಸುವ ಸಿದ್ಧತೆ ನಡೆಸಲಾಗಿದೆ ಎಂದು ಹೇಳಿದರು.
ವಿಶ್ವವಾಣಿಯ ಕ್ಲಬ್ಹೌಸ್, ಪತ್ರಿಕೋದ್ಯಮದ ಶಿಕ್ಷಣ, ತರಬೇತಿ ನೀಡಲು ಮಾಧ್ಯಮ ವಿದ್ಯಾಪೀಠ, ವಿಶ್ವವಾಣಿ ಟಿವಿಯ ಯುಟ್ಯೂಬ್, ಆನ್ಲೈನ್ ಚಾನೆಲ್ಗಳು ಹೀಗೆ ಹಲವು ಹೊಸ ಪ್ರಯೋಗ, ಪ್ರಯತ್ನಗಳನ್ನು ವಿಶ್ವವಾಣಿ ಕೈಗೊಂಡು ಬೆಳೆಯುತ್ತಿದೆ. 185ಕ್ಕೂ ಹೆಚ್ಚು ಮಂದಿಗೆ ಪ್ರತ್ಯಕ್ಷವಾಗಿ ಉದ್ಯೋಗ ನೀಡಿರುವುದು ವಿಶ್ವವಾಣಿ ಬಳಗದ ಸಾಧನೆ. ವಿಶ್ವವಾಣಿ ಪುಸ್ತಕ ಪ್ರಕಾಶನ ಪ್ರಾರಂಭಿಸಿ ಕನ್ನಡ ಪುಸ್ತಕ ಪ್ರಪಂಚದ ಬೆಳವಣಿಗೆಗೆ ತನ್ನದೇ ಆದ ಕೊಡುಗೆ ನೀಡುತ್ತಿದೆ. ಈ ಎಲ್ಲಾ ನಮ್ಮ ಪ್ರಯತ್ನ ಕೈಗೂಡುವಲ್ಲಿ ಕನ್ನಡ ಓದುಗ ಬಾಂಧವರು ತೋರುತ್ತಿರುವ ಪ್ರೀತಿ ಪ್ರೋತ್ಸಾಹಗಳೇ ನಮಗೆ ಶ್ರೀರಕ್ಷೆಯಾಗಿವೆ.
- ವಿಶ್ವೇಶ್ವರ ಭಟ್ ವಿಶ್ವವಾಣಿ ಪ್ರಧಾನ ಸಂಪಾದಕ
ಮಗು ಬೆಳೆದಂತೆ ಅಲ್ಪಮಾನವನಾಗುತ್ತಾನೆ
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶ್ರೀ ಜಯ ಮೃತ್ಯುಂಜಯ ಸ್ವಾಮೀಜಿ ಮಾತನಾಡಿ, ಮಗು ಜನಿಸುವ ಸಮಯದಲ್ಲಿ ವಿಶ್ವಮಾನನಾಗಿ ಜನಿಸುತ್ತದೆ. ಆದರೆ ಮಗು ಬೆಳೆದಂತೆ ದೊಡ್ಡವನಾದಂತೆ ಅಲ್ಪಮಾನವ ನಾಗುತ್ತದೆ. ಆದರೆ ವಿಶಾಲ ವ್ಯಕ್ತಿತ್ವ , ಸಹೃದಯತೆ, ಭ್ರಾತೃತ್ವ ಬೆಳೆಸಿಕೊಳ್ಳಲು ವಿಶ್ವವಾ ಣಿಯ ಗ್ಲೋಬಲ್ ಅಚೀವರ್ಸ್ ಸಮ್ಮೇ ಳನದಂತಹ ಸಮಾರಂಭಗಳು ಪ್ರೇರಣೆ ನೀಡುತ್ತವೆ ಎಂದು ಪ್ರಶಂಸಿಸಿದರು. ನಮ್ಮ ಸಾಧಕರನ್ನು ಹೊರಗಿನ ಪ್ರಪಂಚಕ್ಕೆ ಪರಿಚಯಿಸುವುದು ಪುಣ್ಯದ ಕೆಲಸ, ಇದರಿಂದ ಸಾಧಕರಿಗೆ ಮತ್ತಷ್ಟು ಸ್ಪೂರ್ತಿ ಬರುವಂತಾಗುತ್ತದೆ. ಈ ಅರ್ಥಪೂರ್ಣ ಕೆಲಸ ಮಾಡುತ್ತಿರುವ ವಿಶ್ವವಾಣಿಗೆ, ವಿಶ್ವೇಶ್ವರ ಭಟ್ಟರಿಗೆ ಅಭಿನಂದನೆಗಳು. ಜಪಾನ್, ಅಮೆರಿಕ ತಂತ್ರಜ್ಞಾನದಲ್ಲಿ ನಂಬರ್ ಒನ್ ಆಗಿರಬಹುದು, ಆದರೆ ಭಾರತವು ತತ್ವಜ್ಞಾನದಲ್ಲಿ ನಂಬರ್ ಒನ್. ಮದ್ದುಗುಂಡು ಗಳಿಗಿಂತಲೂ ಹೆಚ್ಚಿನ ಶಕ್ತಿ ಭಾರತಕ್ಕಿದೆ. ಮನುಷ್ಯನಿಗೆ ರಾಷ್ಟ್ರಧರ್ಮ, ಕೃಷಿ ಧರ್ಮ ಮತ್ತು ಸ್ವಧರ್ಮಗಳು ಬಹುಮುಖ್ಯ. ಮಾಧ್ಯಮಗಳು ಕೂಡ ಇಂಥ ಸೂಕ್ಷ್ಮಗಳನ್ನು ಜನತೆಗೆ ಅರ್ಥ ಮಾಡಿಸಬೇಕು. ಭಾರತ ಬಡರಾಷ್ಟ್ರವಲ್ಲ, ಬಡವರಿಗೂ ಬೆಳಕು ನೀಡುವ ರಾಷ್ಟ್ರ ಈ ಭಾರತ ಎಂದು ಸ್ವಾಮೀಜಿ ಹೆಮ್ಮೆಯಿಂದ ನುಡಿದರು.
ಏಕತಾನತೆಯಿಂದ ಹೊರಬರಲು ಸಹಕಾರಿ
ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಸಚಿವ ಹಾಗೂ ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ, ಬಿಜೆಪಿಯಲ್ಲಿ ಇತ್ತೀಚೆಗೆ ನಡೆಯುತ್ತಿರುವ ಆಂತರಿಕ ತಾಕಲಾಟಗಳಿಂದ ನನ್ನ ಮನಸ್ಸಿಗೆ ಬೇಸರ ವಾಗಿರುವುದು ನಿಜ. ಆದರೆ ವಿಶ್ವವಾಣಿ ಹಮ್ಮಿಕೊಂಡಿರುವ ಈ ಕಾರ್ಯಕ್ರಮ ನನಗೆ ರಾಜಕಾರಣದ ಏಕತಾನತೆಯಿಂದ ಹೊರಬಂದು ಮತ್ತಷ್ಟು ಹೊಸ ಚಿಂತನೆಗಳಿಗೆ ಗ್ರಾಸ ನೀಡಿದೆ ಎಂದು ಹಾಸ್ಯ ಚಟಾಕಿ ಹಾರಿಸಿದರು.
ವ್ಯಕ್ತಿನಿಷ್ಠೆಗಿಂತಲೂ ಪಕ್ಷನಿಷ್ಠೆಗೆ ಹೆಚ್ಚು ಮಹತ್ವ ನೀಡಬೇಕೆಂಬುದು ನನ್ನ ರಾಜಕೀಯ ಗುರು ಅನಂತ ಕುಮಾರ್ ಅವರ ಸಂದೇಶವಾಗಿತ್ತು. ಇಂದು ಬಿಜೆಪಿ ಮುಖಂಡರು ಅನಂತಕುಮಾರ ಅವರ ಈ ತತ್ವವನ್ನು ಅನುಸರಿಸಿದ್ದರೆ ಇಷ್ಟೆಲ್ಲಾ ತಾಕಲಾಟಗಳು ಉದ್ಭವಿಸುತ್ತಿರಲಿಲ್ಲ ಎಂದು ಅಭಿಪ್ರಾಯಪಟ್ಟರು.
ಹೆಚ್ಚಿನ ಸಾಧನೆಗೆ ಪ್ರೇರಣೆ: ಮತ್ತೊಬ್ಬ ಪ್ರಶಸ್ತಿ ಪುರಸ್ಕೃತರಾದ ದಾವಣಗೆರೆಯ ಉದ್ಯಮಿ ಅನಿತ್ ಕುಮಾರ್ ಅವರು ಈ ಪ್ರಶಸ್ತಿಯಿಂದ ತಮ್ಮಂಥವರಿಗೆ ಇನ್ನೂ ಹೆಚ್ಚಿನ ಸಾಧನೆ ಕೈಗೊಳ್ಳಲು ಪ್ರೇರಣೆ ಸಿಗುವಂತಾಗಿದೆ. ಜತೆಗೆ ಬೇರೆ ಬೇರೆ ದೇಶಗಳ ವೈಶಿಷ್ಟ್ಯ ಅರಿತುಕೊಳ್ಳಲು ಸಹಕಾರಿಯಾಗುತ್ತದೆ ಎಂದು ಅಭಿಪ್ರಾಯ ಪಟ್ಟರು.
ವೈವಿಧ್ಯಗಳ ಯಾನ
ಸಮುದ್ರಯಾನ, ಸುಮಧುರ ಪ್ರಯಾಣ ಎನ್ನುವಂತೆ ವಿಶಿಷ್ಟವಾಗಿ ವಿಶ್ವವಾಣಿಯ ಒಮಾನ್ ರಾಷ್ಟ್ರದ ಪ್ರವಾಸವನ್ನು ಏರ್ಪಡಿಸಲಾಗಿತ್ತು. ಮಸ್ಕತ್ ನಗರದಲ್ಲಿರುವ ಪುರಾತನ ಶಿವಮಂದಿರ ಗೋಪಾಲಕೃಷ್ಣನ ದೇವಾಲಯಕ್ಕೆ ವಿಶ್ವವಾಣಿಯ ಈ ನಿಯೋಗ ಭೇಟಿ ಕೊಟ್ಟಾಗ, ಅಲ್ಲಿಯ ದೇವಾಲಯಗಳ ಮುಖ್ಯಸ್ಥರೇ ಆಗಮಿಸಿ ವಿಶೇಷ ಪೂಜೆಗಳನ್ನು ಏರ್ಪಡಿಸಿದ್ದು, ತೀರ್ಥ, ಪ್ರಸಾದಗಳ ವ್ಯವಸ್ಥೆ ಮಾಡಿದ್ದು ವಿಶೇಷ ವಾಗಿತ್ತು. ಮರದ ಕೆತ್ತನೆಗಳಿಂದ ಮಾಡಿದ್ದ ಬೋಟಿನಲ್ಲಿಯೇ ಸಾಗರಯಾನ ಮಾಡಿದ್ದು, ಸಮುದ್ರ ನಡುವಿನ ದ್ವೀಪದಲ್ಲಿ ಊಟೋಪಚಾರ ವ್ಯವಸ್ಥೆ ಕೈಗೊಂಡಿದ್ದು, ಸಮುದ್ರದಲ್ಲಿ ಸ್ಪೀಡ್ ಬೋಟ್, ವಾಟರ್ ಸ್ಕೂಟರ್, ದೋಣಿವಿಹಾರಗಳಂಥ ಚಟುವಟಿಕೆ ನಡೆಸಿದ್ದು, ಹಿರಿಯ ರಾಜಕೀಯ ಮುಖಂಡರಾದ ಸಿ.ಟಿ.ರವಿ, ಹರತಾಳು ಹಾಲಪ್ಪನವರೂ ಸೇರಿದಂತೆ ವಿವಿಧ ಗಣ್ಯರು ಸಮುದ್ರಯಾನದ ಸಂದರ್ಭದಲ್ಲಿ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು, ಯಕ್ಷಗಾನ ಶೈಲಿಯ ಸಾಂಸ್ಕೃತಿಕ ಅವತರಣಿಕೆಯನ್ನು ಪ್ರಸ್ತುತ ಪಡಿಸಿದ್ದು.... ಈ ನಿಯೋಗದ ಸಾಂಸ್ಕೃತಿಕ ಕ್ರಿಯಾಶೀಲತೆಗೆ ನಿದರ್ಶನವಾಗಿತ್ತು.
ಸ್ವಾಮೀಜಿಯಿಂದ ಶಿವಲಿಂಗ ಪೂಜೆ
ಸಮುದ್ರಯಾನದ ಸಂದರ್ಭದಲ್ಲಿ ಶ್ರೀಜಯಮೃತ್ಯುಂಜಯ ಸ್ವಾಮಿಗಳು ಸಮುದ್ರಸ್ನಾನ ಮಾಡಿ ಶಿವಲಿಂಗಕ್ಕೆ ಪೂಜೆ ಮತ್ತು ಜಲಾಭಿಷೇಕ ನೆರವೇರಿಸಿ, ಭಕ್ತಿ ಭಾವಗಳ ಸಿಂಚನಗೈದರು. ಮಸ್ಕತ್ತಿನ ಹೊರವಲಯದಲ್ಲಿರುವ ಮರುಭೂಮಿಯಲ್ಲಿ ಒಂದುದಿನ ತಂಗಿ ಅಲ್ಲಿಯ ಜನಜೀವನ ಪರಿಸರವನ್ನು ವಿಶ್ವವಾಣಿಯ ನಿಯೋಗವು ಪ್ರತ್ಯಕ್ಷ ಅರಿತುಕೊಂಡಿದ್ದಲ್ಲದೆ ಹಲವು ಸಾಹಸ ಕ್ರೀಡೆಗೆ ಸಾಕ್ಷಿಯಾಯಿತು. ಒಟ್ಟಾರೆ ವಿಶ್ವವಾಣಿಯ ವಿಶ್ವಸಂಘಟನೆ ಹಲವು ಆಕರ್ಷಗಳ ಸಂಗಮವಾಗಿ ಹೊಸ ಸಂಚಲನ ಮೂಡಿಸುವಲ್ಲಿ ಯಶಸ್ವಿಯಾಯಿತು ಎಂಬುದು ಭಾಗವಹಿಸಿದ್ದ ಎಲ್ಲರ ಪ್ರತಿಕ್ರಿಯೆ ಯಾಗಿತ್ತು.
ಗಂಗಾಸ್ನಾನದ ವಿಶೇಷ ಅನುಭವ
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್, ಸಂಸ್ಕೃತಿ ಬೇರೆ, ಧರ್ಮಗಳು ಬೇರೆ ಇವುಗಳನ್ನು ಸಕಾರಾತ್ಮಕವಾಗಿ ಸರ್ವರಿಗೂ ಗೌರವಿಸಬೇಕು. ಪ್ರಯಾಗರಾಜ್ನಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ ಇತ್ತೀಚಿಗೆ ಭಾಗವಹಿಸಿ, ಗಂಗಾ ನದಿಯಲ್ಲಿ ಸ್ನಾನಮಾಡಿ ಬಂದಿದ್ದು ವಿಶೇಷ ಅನುಭವ. ಇದರಿಂದ ಭಾರತದ ವೈವಿಧ್ಯ ಸಂಸ್ಕೃತಿಯನ್ನು, ಪರಂಪರೆಯನ್ನು ಪ್ರತ್ಯಕ್ಷವಾಗಿ ಅರಿತುಕೊಳ್ಳುವುದು ನನಗೆ ಸಾಧ್ಯವಾಯಿತು ಎಂದು ತಮ್ಮ ಅನುಭವವನ್ನು ಹಂಚಿಕೊಂಡರು.
ಕನ್ನಡ ಪುಸ್ತಕಗಳ ಖರೀದಿಗೆ ಉತ್ತೇಜನ
ಅಕ್ಷರಜ್ಞಾನ, ಪುಸ್ತಕ ಓದುವುದು ಮನುಷ್ಯನ ಅನಿವಾರ್ಯ ಅಗತ್ಯಗಳು, ಹೀಗಾಗಿ ವಿಧಾನಸೌಧ ಕೂಡ ಇವುಗಳಿಂದ ದೂರ ಇರಬಾರದು ಎಂಬ ಹಿನ್ನೆಲೆಯಲ್ಲಿ ಮುಂದಿನ ತಿಂಗಳು ವಿಧಾನಸೌಧದಲ್ಲಿ ಪುಸ್ತಕ ಮೇಳ ಪ್ರಾರಂಭಿಸಿ ಹೊಸ ಪರಂಪರೆಗೆ ನಾಂದಿ ಹಾಡಲಾ ಗುವುದು. ಕನ್ನಡ ಪುಸ್ತಕಗಳ ಖರೀದಿಗೆ ಸ್ಥಳೀಯವಾಗಿ ವಾಚನಾಲ ಯಗಳಿಗೆ ಅನುಕೂಲವಾಗುವಂತೆ ಶಾಸಕರ ನಿಧಿಯಲ್ಲೂ ಪುಸ್ತಕಗಳ ಖರೀದಿಗೆ ಅವಕಾಶ ಮಾಡಿಕೊಡಲಾಗುವುದು. ಕರ್ನಾಟಕದಲ್ಲಿ ದೊಡ್ಡ ಮಟ್ಟದ ಕಾರ್ಯಕ್ರಮ ಏರ್ಪಡಿಸುವುದೇ ಕಷ್ಟ, ಆದರೆ ವಿದೇಶದಲ್ಲೂ ಹೀಗೆ ಅತ್ಯಂತ ವ್ಯವಸ್ಥಿತವಾಗಿ ಸಮಾರಂಭ ಏರ್ಪಡಿಸಿರುವ ವಿಶ್ವವಾಣಿಗೆ ಅಭಿನಂದನೆಗಳು ಎಂದು ಅಭಿನಂದಿಸಿದರು.
ಮಸ್ಕತ್ತಿನ ಪ್ರವಾಸ ಬೆಣ್ಣೆ ಬಿಸ್ಕತ್ತಿನಂತೆ
ವಿಶಾಲ ಸಮುದ್ರ.... ಮನೆಯಲ್ಲಿ ಜಗುಲಿ ಅಂಗಳಗಳು ಇರುವಂತೆ ಈ ಸಮುದ್ರದ ಅಂಚಿಗೆ ಬಾಲಂಗೋಚಿ ಗಳಂತಿರುವ ಬೀಚುಗಳು ಎಲ್ಲಿ ನೋಡಿದರಲ್ಲಿ ಜ್ವಾಲಾಮು ಖಿಗಳ ಅಪಾರವಾದಂತೆ ಭಾಸವಾಗುವ ಶಿಲಾ ಪರ್ವತಗಳ ಸಾಲು, ಇನ್ನೊಂದೆಡೆ ನಿಗೂಢ ನಿಶ್ಯಬ್ದಗಳ ಮರುಭೂಮಿ..... ಇಂಥ ಆಕರ್ಷಣೆಗಳ ಆಗರ ವಾಗಿರುವ ಮಸ್ಕ ತ್ತಿನ ಪ್ರವಾಸವೆಂದರೆ ಅದು ಬೆಣ್ಣೆ ಬಿಸ್ಕತ್ತಿನಂತೆ!. ಇದರ ಸವಿರುಚಿ ಅವಿಸ್ಮರಣೀಯ.
ಒಟ್ಟಾರೆ ವಿಶ್ವವಾಣಿಯ ವಿಶ್ವಸಂಘಟನೆ ಹಲವು ಆಕರ್ಷಗಳ ಸಂಗಮವಾಗಿ ಹೊಸ ಸಂಚಲನ ಮೂಡಿಸು ವಲ್ಲಿ ಯಶಸ್ವಿಯಾಯಿತು ಎಂಬುದು ಭಾಗವಹಿಸಿದ್ದ ಎಲ್ಲರ ಪ್ರತಿಕ್ರಿಯೆಯಾಗಿತ್ತು.
ವಿಶ್ವೇಶ್ವರ ಭಟ್ಟರು ಕಳೆದ ಮೂರು ದಶಕಗಳಿಂದ ತಮ್ಮ ಹೊಸಹೊಸ ಪ್ರಯೋಗಶೀಲ ಪ್ರಯತ್ನಗಳಿಂದ ಕನ್ನಡ ಪತ್ರಿಕೋದ್ಯಮಕ್ಕೆ ಖದರು ಮೂಡಿಸಿದ್ದಾರೆ. ಪಾಟೀಲ ಪುಟ್ಟಪ್ಪನವರ ಕನಸಿನ ವಿಶ್ವವಾಣಿಯನ್ನು ವಿಶ್ವೇಶ್ವರ ಭಟ್ಟರು ಮುಂದುವರಿಸುತ್ತ ಅಭಿನಂದನಾರ್ಹರಾಗಿದ್ದಾರೆ.
- ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ, ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಜಗದ್ಗುರು ಮಹಾಪೀಠ
ಕರ್ನಾಟಕದಿಂದ ಬಹುದೂರ ವಿರುವ ಈ ಮಸ್ಕತ್ತಿನಲ್ಲಿ ವಿಶ್ವವಾಣಿ ಈ ಕಾರ್ಯಕ್ರಮ ನಡೆಸು ತ್ತಿರುವುದು ಇಲ್ಲಿಯ ಅನಿವಾಸಿ ಕನ್ನಡಿಗರಲ್ಲಿ ಹೊಸ ಉತ್ಸಾಹ ಮೂಡಿಸಿದೆ. ಈ ರೀತಿಯ ಚಿಂತನಾಶೀಲ ಚಟುವಟಿಕೆ ಗಳಿಂದ ಉಭಯ ದೇಶಗಳ ಬಾಂಧವ್ಯ ವೃದ್ಧಿಗೆ, ಸಾಂಸ್ಕೃತಿಕ ವಿನಿಮಯಕ್ಕೆ ಸಹಕಾರಿಯಾಗಿದೆ. ಮಸ್ಕತ್ತಿ ನಲ್ಲಿ ಆಗಾಗ ಕನ್ನಡ ಭಾಷೆ , ಸಾಹಿತ್ಯ, ಹಬ್ಬ-ಹರಿದಿನಗಳಿಗೆ ಸಂಬಂಧಪಟ್ಟಂತೆ ಕರ್ನಾಟಕ ಸಂಘವು ಆಸಕ್ತಿದಾಯಕ ಸಮಾರಂಭವನ್ನು ಏರ್ಪಡಿಸುತ್ತದೆ. ಮಕ್ಕಳಲ್ಲಿ ಕನ್ನಡ ಕಲಿಕೆಗೂ ವಿಶೇಷ ಪ್ರಯತ್ನ ನಡೆಸಲಾಗುತ್ತಿದೆ. ಕೃಷಿ, ವೈದ್ಯಕೀಯ, ಶಿಕ್ಷಣ, ಸಮಾಜಸೇವೆ, ರಾಜಕೀಯ, ಕಲೆ ಸಂಸ್ಕೃತಿ, ಕೈಗಾರಿಕೋ ದ್ಯಮ, ನ್ಯಾಯಾಂಗ, ಸರಕಾರಿ ಸೇವೆ, ಅನಿವಾಸಿಗಳ ಸೇವೆ ಮುಂತಾದ ವಿವಿಧ ಕ್ಷೇತ್ರಗಳಿಗೆ ಅನುಪಮ ಕೊಡುಗೆ ಕೊಟ್ಟ 17 ಸಾಧಕರನ್ನು ಈ ಸಂದರ್ಭದಲ್ಲಿ ಸನ್ಮಾನಿಸಿ ಅವರಿಗೆ ಗ್ಲೋಬಲ್ ಅಚೀವರ್ಸ್ ಪ್ರಶಸ್ತಿ ಪ್ರದಾನ ಮಾಡಲಾಯಿತು.
- ಎಸ್.ಡಿ.ಟಿ. ಪ್ರಸಾದ್, ಕರ್ನಾಟಕ ಸಂಘದ ಅಧ್ಯಕ್ಷ