ಶಿವರಾಜ್ಕುಮಾರ್, ಉಪೇಂದ್ರ ಅಅವರ ರಾಜ್ ಬಿ ಶೆಟ್ಟಿ ನಟಿಸಿರುವ ʻ45ʼ ಸಿನಿಮಾವು ತೆರೆಗೆ ಬರಲು ಕ್ಷಣಗಣನೆ ಆರಂಭವಾಗಿದೆ. ಡಿಸೆಂಬರ್ 24ರಿಂದಲೇ ಈ ಚಿತ್ರದ ಪೇಯ್ಡ್ ಪ್ರೀಮಿಯರ್ ಶೋಗಳು ಆರಂಭವಾಗಲಿದ್ದು, ಡಿಸೆಂಬರ್ 25ರಂದು ವಿಶ್ವಾದ್ಯಂತ ತೆರೆಗೆ ಬರಲಿದೆ. ಈ ನಡುವೆ ಚಿತ್ರದ ಪ್ರಮೋಷನ್ ವೇಳೆ ರಾಜ್ ಬಿ ಶೆಟ್ಟಿ ನೀಡಿರುವ ಮಾತೊಂದು ಭಾರಿ ವೈರಲ್ ಆಗುತ್ತಿದೆ. "ಬಡವರ ಮಕ್ಕಳು ಬೆಳಿಬೇಕು ಅಂತಾರೆ, ಆದ್ರೆ ಇಲ್ಲಿ ಅರ್ಹತೆ ಅಷ್ಟೇ ಮುಖ್ಯ" ಎಂದು ನೇರವಾಗಿ ಹೇಳಿದ್ದಾರೆ ನಟ ರಾಜ್ ಬಿ ಶೆಟ್ಟಿ.
ರಾಜ್ ಬಿ ಶೆಟ್ಟಿ ಹೇಳಿದ್ದೇನು?
ಸಂದರ್ಶನವೊಂದರಲ್ಲಿ ಮಾತನಾಡಿರುವ ರಾಜ್ ಬಿ ಶೆಟ್ಟಿ, "ಸಿನಿಮಾ ರಂಗದಲ್ಲಿ ಚಾನ್ಸ್ ಕೊಡುವುದಿಲ್ಲ ಎಂಬ ಮಾತುಗಳನ್ನು ಆಗಾಗ ಹೊಸಬರು ಹೇಳುವುದನ್ನು ಕೇಳಿದ್ದೇವೆ. ಆದರೆ ಅವಕಾಶ ಏಕೆ ಕೊಡಬೇಕು? ನಾವು ಯಾರಿಗೋ ಏಕೆ ಅವಕಾಶ ಕೊಡಬೇಕು? ಅವಕಾಶ ಕೊಡೋದು ಅಲ್ಲ. ಅವಕಾಶಕ್ಕೆ ನಾನು ಅರ್ಹನಾಗಬೇಕು" ಎಂದು ರಾಜ್ ಬಿ ಶೆಟ್ಟಿ ಖಡಕ್ ಆಗಿ ಹೇಳಿದ್ದಾರೆ.
ಬಡತನ ತಲೆಯಲ್ಲಿ ಇರಬೇಕು...
"ಬಡವರ ಮಕ್ಕಳು ಬೆಳೆಯಬೇಕು ಎನ್ನುತ್ತಾರೆ. ಆದರೆ ಇಲ್ಲಿ ಅದು ಮುಖ್ಯವಲ್ಲ. ಅರ್ಹತೆ ಅಷ್ಟೇ ಮುಖ್ಯ. ಬಡತನ ಎಂಬುದು ತಲೆಯಲ್ಲಿ ಇರಬೇಕು. ನಾನು ಇನ್ನು ಏನಾದರೂ ಕಲಿಯಬೇಕು ಎನ್ನುವ ಬಡತನ ನಮಗೆ ಬೇಕು. ಉಪೇಂದ್ರ ಅವರು ಕಷ್ಟದಿಂದಲೇ ಮೇಲೆ ಬಂದವರು. ನಾನು ಕೂಡ ಕಷ್ಟದಿಂದಲೇ ಬಂದಿದ್ದೇನೆ. ಆ ಕಷ್ಟದ ಬಗ್ಗೆ ಯಾರಿಗೆ ಬೇಕು? ಯಾಕೆ ಬೇಕು? ನಾನು ನನಗಸೋಸ್ಕರ ಕಷ್ಟಪಟ್ಟಿದ್ದು. ಅದರಲ್ಲಿ ಅಳುವಂತಹದ್ದು ಏನಿದೆ? ಅದನ್ನು ಟ್ರಂಪ್ ಕಾರ್ಡ್ ಆಗಿ ಏಕೆ ಬಳಸಿಕೊಳ್ಳಬೇಕು" ಎಂದು ರಾಜ್ ಬಿ. ಶೆಟ್ಟಿ ಕೇಳಿದ್ದಾರೆ.
ರಾಜ್ ಬಿ ಶೆಟ್ಟಿ ಹೇಳಿಕೆ ವೈರಲ್
ಇದೇ ವೇದಿಕೆಯಲ್ಲಿ ಶಿವರಾಜ್ಕುಮಾರ್ ಮತ್ತು ಉಪೇಂದ್ರ ಅವರು ಕೂಡ ಇದ್ದರು. "ರಾಜ್ ಬಿ. ಶೆಟ್ಟಿ ಅವರು ಹೇಳಿದ ರೀತಿ ಇಷ್ಟ ನನಗೆ ಆಯಿತು" ಎಂದು ಉಪೇಂದ್ರ ಹೇಳಿದ್ದಾರೆ.
ಇನ್ನು, ನೆಟ್ಟಿಗರು ಸೋಶಿಯಲ್ ಮೀಡಿಯಾದಲ್ಲಿ ರಾಜ್ ಬಿ. ಶೆಟ್ಟಿ ಅವರು ಹೇಳಿದ ಮಾತಿನ ವಿಡಿಯೋವನ್ನು ಹಂಚಿಕೊಂಡು, ಉತ್ತಮವಾಗಿ ಹೇಳಿದ್ದೀರಿ, ಹೌದು, ಈ ಮಾತಿನಲ್ಲಿ ಅರ್ಥವಿದೆ ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ. ಸದ್ಯ ರಾಜ್ ಬಿ ಶೆಟ್ಟಿ ಅವರ ಈ ವಿಡಿಯೋ ಸಾಕಷ್ಟು ವೈರಲ್ ಆಗುತ್ತಿದೆ.
ಪ್ರತಿಕ್ರಿಯಿಸಿದ ನಟ ಚೇತನ್
ಈ ಬಗ್ಗೆ ನಟ ಆ ದಿನಗಳು ಚೇತನ್ ಪ್ರತಿಕ್ರಿಯಿಸಿದ್ದು, "ಅರ್ಹತೆ ಅಷ್ಟೇ ಮುಖ್ಯವಾಗಬೇಕು, ಬಡತನವಲ್ಲ ಎಂಬ ಮಾತು ಯಥಾಸ್ಥಿತಿಯನ್ನು ಉಳಿಸಿಕೊಳ್ಳುವ ಎಲಿಟಿಸ್ಟ್ ಮನಸ್ಥಿತಿಯನ್ನು ತೋರಿಸುತ್ತದೆ. ಮೆರಿಟ್/ಅರ್ಹತೆ ಅಂದ್ರೆ ಏನು? ಈಗಾಗಲೇ ಸೌಲಭ್ಯ ಮತ್ತು ಸವಲತ್ತು ಇರುವವರಿಗೆ ಇನ್ನಷ್ಟು ಅವಕಾಶ ಸಿಗುವುದೇ? ನ್ಯಾಯವಿಲ್ಲದ ಮೆರಿಟ್, ಮೆರಿಟ್ ಅಲ್ಲ. ಅನ್ಯಾಯಕರ ವ್ಯವಸ್ಥೆಯಿಂದ ವಂಚಿತರಾದವರಿಗೆ ಹೆಚ್ಚು ಅವಕಾಶ ನೀಡಬೇಕು" ಎಂದು ಹೇಳಿದ್ದಾರೆ.