45 Movie: ʻಶಿವಣ್ಣ ಚಿನ್ನ ಅಲ್ಲ, ಅಪರಂಜಿʼ; ಹ್ಯಾಟ್ರಿಕ್ ಹೀರೋಗೆ ಹೊಗಳಿಕೆಯ ಸುರಿಮಳೆಗೈದ ಉಪೇಂದ್ರ
45 Movie Trailer Release: ಶಿವರಾಜ್ಕುಮಾರ್, ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಅಭಿನಯದ '45' ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಅರ್ಜುನ್ ಜನ್ಯ ಚೊಚ್ಚಲ ನಿರ್ದೇಶನದ ಈ ಸಿನಿಮಾವನ್ನು ರಮೇಶ್ ರೆಡ್ಡಿ ಅದ್ದೂರಿಯಾಗಿ ನಿರ್ಮಿಸಿದ್ದಾರೆ. ಟ್ರೇಲರ್ ರಿಲೀಸ್ ವೇಳೆ, "ಶಿವಣ್ಣ ಚಿನ್ನ ಅಲ್ಲ, ಅಪರಂಜಿ" ಎಂದು ಉಪೇಂದ್ರ ಹೇಳಿದ್ದಾರೆ.
-
ನಟ ಶಿವರಾಜಕುಮಾರ್, ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸಿರುವ, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಚೊಚ್ಚಲ ಬಾರಿಗೆ ನಿರ್ದೇಶನ ಮಾಡಿರುವ ಹಾಗೂ ಎಂ ರಮೇಶ್ ರೆಡ್ಡಿ ಅವರು ತಮ್ಮ ಸೂರಜ್ ಪ್ರೊಡಕ್ಷನ್ ಬ್ಯಾನರ್ನಲ್ಲಿ ನಿರ್ಮಿಸಿರುವ ಕನ್ನಡದ ಬಹುನಿರೀಕ್ಷಿತ ಮಲ್ಟಿಸ್ಟಾರರ್ ʻ45ʼ ಚಿತ್ರ ಆರಂಭದಿಂದಲೂ ಸಾಕಷ್ಟು ಸದ್ದು ಮಾಡುತ್ತಿದೆ. ಡಿಸೆಂಬರ್ 25 ರಂದು ತೆರೆಗೆ ಬರುತ್ತಿದೆ. ಅದಕ್ಕೂ ಮುನ್ನ ಈ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ.
ನನಗೆ ಹೆಮ್ಮೆ ಇದೆ
ಈ ಚಿತ್ರದ ಟ್ರೇಲರ್ ಲಾಂಚ್ ವೇಳೆ ಶಿವರಾಜ್ಕುಮಾರ್ ಅವರ ಬಗ್ಗೆ ಮೆಚ್ಚುಗೆಯ ಮಹಾಪೂರವನ್ನೇ ಹರಿಸಿದ್ದಾರೆ ಉಪೇಂದ್ರ. "ನಮ್ಮ ಶಿವಣ್ಣ ಚಿನ್ನ ಅಲ್ಲ, ಅಪರಂಜಿ. ಎಲ್ಲರನ್ನೂ ಸೆಳೆಯುವಂತಹ ಗುಣ ಅವರಲ್ಲಿದೆ. ಇಪ್ಪತ್ತರ ಯುವಕರನ್ನು ನಾಚಿಸುವ ಉತ್ಸಾಹ ಶಿವಣ್ಣ ಅವರಲ್ಲಿದೆ. ಶಿವಣ್ಣನ ಜೊತೆ ಸ್ಕ್ರೀನ್ ಶೇರ್ ಮಾಡಿದ್ದು ನನಗೆ ಹೆಮ್ಮೆ ಅನ್ನಿಸುತ್ತಿದೆ. ಅಣ್ಣಾವ್ರು ಅಭಿಮಾನಿಗಳಲ್ಲಿ ದೇವರನ್ನು ಕಂಡರು. ಅಭಿಮಾನಿಗಳನ್ನು ಹೇಗೆ ನೋಡಿಕೊಳ್ಳಬೇಕು ಎಂದು ದೊಡ್ಮನೆಯವರು ಹೇಳಿಕೊಟ್ಟಿದ್ದಾರೆ" ಎಂದು ಉಪೇಂದ್ರ ಹೇಳಿದ್ದಾರೆ.
Star Fashion 2025: ನಟ ಡಾ. ಶಿವರಾಜ್ಕುಮಾರ್ ಮಾಸ್ ಸ್ಟೈಲ್ಗೆ ಫ್ಯಾಷನ್ ದಿಗ್ಗಜರ ಫುಲ್ ಮಾರ್ಕ್ಸ್!
"ಈ ಸಿನಿಮಾದಲ್ಲಿ ತೆರೆಯ ಮೇಲೆ ಮೂರು ಸ್ಟಾರ್ ಗಳು ಕಾಣಿಸಿದ್ದೇವೆ. ಅದರೆ ತೆರೆಯ ಹಿಂದೆ ಮೂರು ಸ್ಟಾರ್ ಗಳು ಇದ್ದಾರೆ. ಮೊದಲ ಸ್ಟಾರ್ ನಿರ್ಮಾಪಕ ರಮೇಶ್ ರೆಡ್ಡಿ. ಅವರು ದುಡಿದಿದ್ದನ್ನೆಲ್ಲಾ ಈ ಚಿತ್ರಕ್ಕೆ ಸುರಿದಿದ್ದಾರೆ. ಎರಡನೇ ಸ್ಟಾರ್ ನಿರ್ದೇಶಕ ಅರ್ಜುನ್ ಜನ್ಯ ಎರಡು ವರ್ಷದಿಂದ ಶ್ರಮ ಹಾಕಿದ್ದಾರೆ. ಮೂರನೇ ಸ್ಟಾರ್ ಛಾಯಾಗ್ರಾಹಕ ಸತ್ಯ ಹೆಗಡೆ. ಸು ಫ್ರಮ್ ಸೋ ಚಿತ್ರದ ಮೂಲಕ ಬಹುಬೇಡಿಕೆಯ ನಟರಾಗಿರುವ ರಾಜ್ ಬಿ ಶೆಟ್ಟಿ ಅವರ ಜೊತೆಗೆ ಕೆಲಸ ಮಾಡಿದ್ದು ಸಂತೋಷವಾಗಿದೆ" ಎಂದರು ಉಪೇಂದ್ರ.
ಶಿವರಾಜ್ಕುಮಾರ್ ಏನಂದ್ರು?
"ಟ್ರೇಲರ್ ಚೆನ್ನಾಗಿ ಮೂಡಿಬಂದಿದೆ. ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಅವರ ಜೊತೆಗೆ ಕೆಲಸ ಮಾಡಿದ್ದು ಬಹಳ ಖುಷಿಯಾಗಿದೆ. ನಟಿ ಸುಧಾರಾಣಿ ಕೂಡ ಈ ಚಿತರದಲ್ಲಿ ಅತಿಥಿ ಪಾತ್ರದಲ್ಲಿ ಅಭಿನಯಿಸಿದ್ದಾರೆ. ರಮೇಶ್ ರೆಡ್ಡಿ ಅವರ ನಿರ್ಮಾಣದ ಬಗ್ಗೆ ಎಷ್ಟು ಹೇಳಿದರು ಕಡಿಮೆ. ಅಷ್ಟು ಅದ್ದೂರಿಯಾಗಿ ನಿರ್ಮಾಣ ಮಾಡಿದ್ದಾರೆ. ನಾನು ಮೊದಲು ಹೇಳಿದ್ದೆ. ಈಗಲೂ ಹೇಳುತ್ತಿದ್ದೇನೆ. ಈ ಚಿತ್ರ ಬಿಡುಗಡೆ ಆದ ಮೇಲೆ ಅರ್ಜುನ್ ಜನ್ಯ ಎಲ್ಲಿಗೋ ಹೋಗುತ್ತಾರೆ" ಎಂದು ನಟ ಶಿವರಾಜಕುಮಾರ್ ಹೇಳಿದರು.
ನಾವು ಕೂಡ ಹಾವಳಿ ಕೊಡುವ ಚಿತ್ರ ಮಾಡಬೇಕು!
"ನಾನು ಈ ಚಿತ್ರದ ಕುರಿತು ನಿರ್ದೇಶಕ ಅರ್ಜುನ್ ಜನ್ಯ ಹಾಗೂ ನಿರ್ಮಾಪಕ ರಮೇಶ್ ರೆಡ್ಡಿ ಅವರ ಬಳಿ ವಿಚಾರಿಸುತ್ತಿದ್ದೆ. ಶಿವರಾಜಕುಮಾರ್ ಹಾಗೂ ಉಪೇಂದ್ರ ಅವರಿಗೆ ನಾನು ಅಭಿಮಾನಿ. ಈ ಚಿತ್ರ ಮುಗಿದ ಮೇಲೆ ಎಷ್ಟೋ ಜನ ನನ್ನನ್ನು ಕೇಳಿದರು. ಅಂತಹ ದೊಡ್ಡ ಸ್ಟಾರ್ ಗಳ ಜೊತೆಗೆ ಕೆಲಸ ಮಾಡಿದ್ದೀರಿ. ಏನು ಅನಿಸಿತು ಅಂತ. ನಾನು ಹೇಳಿದೆ. ನಾನು ಸ್ಟಾರ್ ಗಳ ಜೊತೆಗೆ ಕೆಲಸ ಮಾಡಿದ್ದೀನಿ ಅಂತ ಅನಿಸಲೇ ಇಲ್ಲ ಎಂದು. ಅವರಿಬ್ಬರೂ ಅಷ್ಟು ಸರಳವಾಗಿದ್ದರು. ಇನ್ನೂ, ನಾವು ಪರಭಾಷಾ ಹಾವಳಿ ಅನ್ನುತ್ತೇವೆ. ನಾವು ಕೂಡ ಹಾವಳಿ ಕೊಡುವ ಚಿತ್ರ ಮಾಡಬೇಕು. ಆ ರೀತಿಯ ಚಿತ್ರ 45 ಆಗಲಿದೆ ಎನ್ನುವ ಭರವಸೆ ನನಗಿದೆ" ಎಂದು ರಾಜ್ ಬಿ ಶೆಟ್ಟಿ ತಿಳಿಸಿದರು.
45 ಸಿನಿಮಾ ಟ್ರೇಲರ್ ರಿವ್ಯೂ
"ನಾನು ಮೂವರು ಹೀರೋಗಳ ಅಭಿಮಾನಿಯಾಗಿ ಈ ಸಿನಿಮಾ ನಿರ್ದೇಶನ ಮಾಡಿದ್ದೇನೆ. ಹಾಗಾಗಿ ನನಗೆ ಈ ಸಿನಿಮಾ ನಿರ್ದೇಶಿಸುವುದು ಅಷ್ಟು ಕಷ್ಟ ಆಗಲಿಲ್ಲ. ನಾನು ಸಿನಿಮಾ ನಿರ್ದೇಶಕನಾಗಲು ಶಿವರಾಜಕುಮಾರ್ ಅವರೇ ಕಾರಣ. ಇನ್ನೂ, ಈ ಚಿತ್ರದ ನಾಲ್ಕನೇ ಹೀರೋ ನಿರ್ಮಾಪಕ ರಮೇಶ್ ರೆಡ್ಡಿ. ಅವರು ಯಾವುದೇ ಕೊರತೆ ಬಾರದ ಹಾಗೆ ಈ ಸಿನಿಮಾ ಮಾಡಿದ್ದಾರೆ. ನಾನು ಚಿತ್ರ ನಿರ್ದೇಶನಕ್ಕೂ ಮುನ್ನ ಅನಿಮೇಶನ್ ನಲ್ಲಿ ಈ ಸಿನಿಮಾ ಕಥೆ ಮಾಡಿ ಶಿವಣ್ಣ ಹಾಗೂ ರಮೇಶ್ ರೆಡ್ಡಿ ಅವರಿಗೆ ತೋರಿಸಿದ್ದೆ. ಅವರು ಅದನ್ನು ನೋಡಿ ಮೆಚ್ಚಿಕೊಂಡಿದ್ದರು. ನಮ್ಮ ಹಿರಿಯರು ನಮಗೆ ತಿಳಿಸಿಕೊಟ್ಟಿರುವ ಅನೇಕ ಸಂಸ್ಕೃತಿಯನ್ನು ನಾವು ಮರೆತಿದ್ದೇವೆ. ಆ ವಿಷಯದ ಒಂದೊಳ್ಳೆ ಇಟ್ಟುಕೊಂಡು ಈ ಸಿನಿಮಾ ಕಥೆ ಮಾಡಿದ್ದೇನೆ. ಎಲ್ಲಾ ತಂತ್ರಜ್ಞರ ಹಾಗೂ ಕಲಾವಿದರ ಸಹಕಾರದಿಂದ ಚಿತ್ರ ಚೆನ್ನಾಗಿ ಬಂದಿದೆ. ಡಿಸೆಂಬರ್ 25ರಂದು ಬಿಡುಗಡೆಯಾಗುತ್ತಿದೆ" ಎನ್ನುತ್ತಾರೆ ಅರ್ಜುನ್ ಜನ್ಯ.