ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಜನವರಿ 29ರಿಂದ ಬೆಂಗಳೂರು ಚಲನಚಿತ್ರೋತ್ಸವ; ರಾಯಭಾರಿಯಾಗಿ ನಟ ಪ್ರಕಾಶ್ ರಾಜ್ ನೇಮಕ

Bengaluru International Film Festival: ಬೆಂಗಳೂರಿನಲ್ಲಿ ಜನವರಿ 29ರಿಂದ ಫೆಬ್ರವರಿ 06ರವರೆಗೆ 17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಆಯೋಜಿಸಲಾಗಿದೆ. ಕರ್ನಾಟಕ ಚಲನಚಿತ್ರ ಅಕಾಡೆಮಿ, ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಆಯೋಜಿರುವ ಬೆಂಗಳೂರು ಫಿಲ್ಮ್‌ ಫೆಸ್ಟಿವಲ್‌ನಲ್ಲಿ ಕನ್ನಡ ಮತ್ತು ಭಾರತೀಯ ಚಿತ್ರಗಳು ಸೇರಿದಂತೆ ಒಟ್ಟಾರೆ 60ಕ್ಕೂ ಹೆಚ್ಚು ದೇಶಗಳ 200 ಚಲನಚಿತ್ರಗಳ, 400ಕ್ಕೂ ಹೆಚ್ಚು ಪ್ರದರ್ಶನಗಳಿರಲಿವೆ.

ಬೆಂಗಳೂರು ಚಲನಚಿತ್ರೋತ್ಸವ ರಾಯಭಾರಿಯಾಗಿ ನಟ ಪ್ರಕಾಶ್ ರಾಜ್ ನೇಮಕ

ಬೆಂಗಳೂರು ಚಲನಚಿತ್ರೋತ್ಸವ ಲಾಂಛನವನ್ನು ಸಿಎಂ ಸಿದ್ದರಾಮಯ್ಯ ಬಿಡುಗಡೆ ಮಾಡಿದರು. -

Prabhakara R
Prabhakara R Dec 23, 2025 2:17 PM

ಬೆಂಗಳೂರು, ಡಿ.23: ಜನವರಿ 29ರಿಂದ ಫೆಬ್ರವರಿ 06ರವರೆಗೆ ಆಯೋಜಿಸಿರುವ 17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ರಾಯಭಾರಿಯಾಗಿ ( (Brand Ambassador) ಹಿರಿಯ ಚಲನಚಿತ್ರ ನಟ, ನಿರ್ದೇಶಕ, ನಿರ್ಮಾಪಕರು ಆದ ಪ್ರಕಾಶ್ ರಾಜ್ (Prakash Raj) ಅವರನ್ನು ನೇಮಿಸಲಾಗಿದೆ. ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಮಂಗಳವಾರ ನಡೆದ ಚಲನಚಿತ್ರೋತ್ಸವದ (17th Bengaluru International Film Festival) ಪೂರ್ವ ಭಾವಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಚಲನಚಿತ್ರೋತ್ಸವದ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಉದ್ಘಾಟನೆ ವಿಧಾನಸೌಧದ ಮುಂಭಾಗದಲ್ಲಿ ಭವ್ಯ ಮೆಟ್ಟಿಲುಗಳ ಮೇಲೆ ನಡೆಯಲಿದೆ. ಈ ಬಾರಿಯ ಚಲನಚಿತ್ರೋತ್ಸವದಲ್ಲಿ ಮಹಿಳಾ ಸಬಲೀಕರಣ ಕುರಿತಾದ ಥೀಮ್ ಇರಲಿದೆ ಎಂದು ಸಿಎಂ ತಿಳಿಸಿದರು.

ರಾಜಾಜಿನಗರದ ಲುಲುಮಾಲ್‌ನಲ್ಲಿರುವ ಸಿನಿ ಪೊಲೀಸ್‌ನ 11 ಸ್ಕ್ರೀನ್‌ಗಳಲ್ಲಿ ಚಿತ್ರೋತ್ಸವದ ಚಲನಚಿತ್ರಗಳ ಪ್ರದರ್ಶನ ನಡೆಯಲಿದೆ. ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಏಷಿಯನ್, ಭಾರತೀಯ ಮತ್ತು ಕನ್ನಡ ಸಿನಿಮಾ ಸ್ಪರ್ಧಾತ್ಮಕ ವಿಭಾಗಗಳಿಗೆ ಚಲನಚಿತ್ರಗಳ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು, ಇದಕ್ಕೆ ಉತ್ತಮ ಸ್ಪಂದನೆ ದೊರಕಿದೆ.

Bengaluru International Film Festival

ಡೈರಿ ಸರ್ಕಲ್‌-ನಾಗವಾರ, ಸಿಲ್ಕ್ ಬೋರ್ಡ್‌-ಕೆ.ಆರ್‌.ಪುರ ಮೆಟ್ರೋ ಮಾರ್ಗ 2026ರ ಡಿಸೆಂಬರ್‌ಗೆ ಉದ್ಘಾಟನೆ

60ಕ್ಕೂ ಹೆಚ್ಚು ದೇಶಗಳ 200 ಚಲನಚಿತ್ರಗಳ ಪ್ರದರ್ಶನ

ಈ ಮೂರು ಸ್ಪರ್ಧಾ ವಿಭಾಗಗಳಿಗೆ ಇದುವರೆಗೆ 110ಕ್ಕೂ ಹೆಚ್ಚು ಚಲನಚಿತ್ರಗಳು ಸಲ್ಲಿಕೆಯಾಗಿವೆ. ಚಲನಚಿತ್ರಗಳ ಸ್ಪರ್ಧಾತ್ಮಕ ವಿಭಾಗಗಳ ಅರ್ಜಿ ಸಲ್ಲಿಕೆಗೆ ಡಿಸೆಂಬರ್ 31, 2025 ಕಡೆಯ ದಿನಾಂಕವಾಗಿರುತ್ತದೆ. 17ನೇ ಅಂತರ ರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ರಾಜಾಜಿನಗರದ ಲುಲು  ಮಾಲ್, ಜೊತೆಗೆ ಡಾ. ರಾಜ್ ಕುಮಾರ್ ಭವನ, ಕಲಾವಿದರ ಸಂಘ, ಚಾಮರಾಜಪೇಟೆ ಹಾಗೂ ಬನಶಂಕರಿಯಲ್ಲಿರವ ಸುಚಿತ್ರ ಫಿಲಂ ಸೊಸೈಟಿ ಚಿತ್ರಮಂದಿರಗಳಲ್ಲೂ ಚಲನಚಿತ್ರಗಳ ಪ್ರದರ್ಶನವಿರಲಿದೆ. ಕನ್ನಡ ಮತ್ತು ಭಾರತೀಯ ಚಿತ್ರಗಳು ಸೇರಿದಂತೆ ಒಟ್ಟಾರೆ 60ಕ್ಕೂ ಹೆಚ್ಚು ದೇಶಗಳ 200 ಚಲನಚಿತ್ರಗಳ, 400ಕ್ಕೂ ಹೆಚ್ಚು ಪ್ರದರ್ಶನಗಳಿರಲಿವೆ ಎಂದು ಹೇಳಿದರು.

ದೇಶ-ವಿದೇಶದ ಅತ್ಯುತ್ತಮ ಚಲನಚಿತ್ರಗಳ ವೀಕ್ಷಣೆಗೆ ಅವಕಾಶ

ವಿಶ್ವದ ಪ್ರತಿಷ್ಠಿತ ಚಲನಚಿತ್ರೋತ್ಸವಗಳಲ್ಲಿ ಪಾಲ್ಗೊಂಡು ವಿವಿಧ ಪ್ರಶಸ್ತಿಗಳನ್ನು ಪಡೆದ ಮತ್ತು ಜನಮನ್ನಣೆಗಳಿಸಿದ ದೇಶ-ವಿದೇಶದ ಅತ್ಯುತ್ತಮ ಚಲನಚಿತ್ರಗಳು 17 ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಭಾಗವಹಿಸುತ್ತಿವೆ. ಕಾನ್ಸ್ (ಫ್ರಾನ್ಸ್), ಬರ್ಲಿನ್ (ಜರ್ಮನಿ, ವೆನಿಸ್ (ಇಟಲಿ), ಕಾರ್ಲೋವಿ ವೇರಿ (ಜೆಕ್‌ ರಿಪಬ್ಲಿಕ್, ಲೊಕಾರ್ನೂ (ಸಿಟ್ಟರ್ಲೆಂಡ್), ರಾಟರ್‌ಡ್ಯಾಮ್ (ನೆದರ್ ಲ್ಯಾಂಡ್), ಬೂಸಾನ್ (ದಕ್ಷಿಣ ಕೂರಿಯಾ), ಟೊರಂಟೋ (ಕೆನಡಾ) ದೇಶಗಳ ಚಿತ್ರೋತ್ಸವದಲ್ಲಿ ಭಾಗವಹಿಸಿ ಪ್ರಶಸ್ತಿ, ಮೆಚ್ಚುಗೆ ಪಡೆದ ಚಲನಚಿತ್ರಗಳು ಬೆಂಗಳೂರು ಚಿತ್ರೋತ್ಸವದಲ್ಲಿ ಒಂದೇ ಕಡೆ ಸಿನಿಮಾ ಪ್ರಿಯರಿಗೆ ವೀಕ್ಷಿಸಲು ದೊರೆಯಲಿವೆ.

ಜತೆಗೆ ಈ ಬಾರಿಯ ಆಸ್ಕರ್ ಪ್ರಶಸ್ತಿಗೆ ಶಾರ್ಟ್ ಲಿಸ್ಟ್ ಆಗಿರುವ ವಿವಿಧ ದೇಶದ ಅತ್ಯುತ್ತಮ ಚಲನಚಿತ್ರಗಳು ಸಹ ನಮ್ಮ ಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳಲಿವೆ. ಪೋಲಿಷ್ ಕಲ್ಪರಲ್ ಸೆಂಟರ್, ನವದೆಹಲಿ, ಗೋಥೆ ಇನ್ಸಿಟ್ಯೂಟ್ - ಮ್ಯಾಕ್ಸ್ ಮುಲ್ಲರ್ ಭವನ, ಬೆಂಗಳೂರು, ಅಲಿಯಾನ್ಸ್ ಫ್ರಾಂಸೇ - ಫ್ರೆಂಚ್ ಇನ್ಸಿಟ್ಯೂಟ್ ಹಾಗೂ ರಾಯಲ್ ಥೈಲ್ಯಾಂಡ್ ಕಾನ್ಸುಲೇಟ್‌ನವರು ಅವರ ದೇಶಗಳ ಅತ್ಯುತ್ತಮ ಚಲನಚಿತ್ರಗಳನ್ನು ಚಿತ್ರೋತ್ಸವದಲ್ಲಿ ಪ್ರದರ್ಶನ ನೀಡುತ್ತಿದ್ದಾರೆ.

ಹಾಗೆಯೇ ಪೋಲಿಷ್ ಕಲ್ಬರಲ್ ಸೆಂಟರ್ ಸಹಯೋಗದಲ್ಲಿ ಪೊಲೆಂಡ್‌ನ ಖ್ಯಾತ ನಿರ್ದೇಶಕರಾದ ಅಂದ್ರೆ ವಾಜ್ಞಾ ಅವರ ಶತಮಾನೋತ್ಸವ ಸ್ಮರಣಾರ್ಥವಾಗಿ ಅವರ ಆಯ್ದ ಚಲನಚಿತ್ರಗಳ ವಿಶೇಷ ಪುನರಾವಲೋಕನ (Retrospective), ಈ ಬಾರಿ ಚಿತ್ರೋತ್ಸವದಲ್ಲಿ ಆಯೋಜಿಸಲಾಗಿದೆ. ಇದರೊಂದಿಗೆ ಅಲಿಯಾನ್ಸ್ ಫ್ರಾಂಸೇ ಬೆಂಗಳೂರು ಹಾಗೂ ಫ್ರೆಂಚ್ ಇನ್ಸಿಟ್ಯೂಟ್ ಇನ್ ಇಂಡಿಯಾ ಸಹಯೋಗದಲ್ಲಿ ಆಫ್ರಿಕಾ ಸಿನಿಮಾಗಳ ಇತಿಹಾಸವನ್ನು ದಾಖಲಿಸುವ ವಿಶೇಷ ಚಲನಚಿತ್ರಗಳ ಸರಣಿಯನ್ನೂ ಈ ವರ್ಷದ ಚಿತ್ರೋತ್ಸವದಲ್ಲಿ ಪ್ರದರ್ಶಿಸಲಾಗುತ್ತಿದೆ.

ಈ ಬಾರಿ ಚಿತ್ರೋತ್ಸವದ ಫಿಲಂ ಅಕಾಡೆಮಿಕ್ ಕಾರ್ಯಕ್ರಮಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ನೋಂದಾಯಿತ ಪ್ರತಿನಿಧಿಗಳು ಭಾಗವಹಿಸಲು ಅನುಕೂಲವಾಗುವಂತೆ ಚಿತ್ರೋತ್ಸವದ ಪ್ರಧಾನ ಕೇಂದ್ರದಲ್ಲಿ ವಿಶೇಷ ವೇದಿಕೆ ಇರಲಿದೆ. ಇದೇ ವೇದಿಕೆಯ ಆವರಣದಲ್ಲಿ 91 ವರ್ಷಗಳ ವರ್ಣ ರಂಜಿತ, ಸ್ಮರಣೀಯ ಸಿನಿಮಾ ಸಂಸ್ಕೃತಿಯ ಇತಿಹಾಸವಿರುವ ಕನ್ನಡ ಚಿತ್ರರಂಗದ ಮೈಲಿಗಲ್ಲುಗಳನ್ನು ಬಿಂಬಿಸುವ ವೈವಿಧ್ಯಮಯ ಛಾಯಾಚಿತ್ರ ಪ್ರದರ್ಶನವನ್ನು ಸಹ ಏರ್ಪಡಿಸಲಾಗುತ್ತದೆ.

ಚಲನಚಿತ್ರೋತ್ಸವಕ್ಕೆ 7 ಕೋಟಿ ರೂ. ಅನುದಾನ

2025-26 ನೇರ ಸಾಲಿನ 17ನೇ ಅಂತರರಾಷ್ಟ್ರೀಯ ಚಲನ ಚಿತ್ರೋತ್ಸವ ಏರ್ಪಡಿಸಲು 7 ಕೋಟಿ ರೂಪಾಯಿಗಳ ಅಗತ್ಯವಿರುವ ಅನುದಾನ ಒದಗಿಸಲಾಗಿದೆ. ಸಮಾರೋಪ ಸಮಾರಂಭ ಅತ್ಯುತ್ತಮ ಚಲನಚಿತ್ರಗಳಿಗೆ ಪ್ರಶಸ್ತಿ, ಜೀವಮಾನ ಸಾಧನೆ ಪ್ರಶಸ್ತಿ ನೀಡಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಮೈಸೂರಿನ ಮೈಲಾರಿ ಹೋಟೆಲ್‌ನಲ್ಲಿ ಮಸಾಲೆ ದೋಸೆ ಸವಿದ ಸಿಎಂ ಸಿದ್ದರಾಮಯ್ಯ

ಈ ವೇಳೆ ಚಲನಚಿತ್ರ ಅಕಾಡೆಮಿ ಅಧ್ಯಕ್ಷರಾದ ಸಾಧು ಕೋಕಿಲ, ವಾರ್ತಾ ಇಲಾಖೆಯ ಕಾರ್ಯದರ್ಶಿ ಬಿ ಬಿ ಕಾವೇರಿ, ಆಯುಕ್ತರಾದ ಹೇಮಂತ್ ನಿಂಬಾಳ್ಕರ್, ಅಪರ ಮುಖ್ಯ ಕಾರ್ಯದರ್ಶಿ ಅಂಜುಂ ಪರ್ವೇಜ್, ಆರ್ಥಿಕ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಿತೇಶ್ ಕುಮಾರ್ ಸಿಂಗ್ ಹಾಗೂ ಅಕಾಡೆಮಿ ಸದಸ್ಯರು, ಸಂಘಟನಾ ಸಮಿತಿ ಸದಸ್ಯರು , ಚಲನಚಿತ್ರ ವಾಣಿಜ್ಯ ಮಂಡಳಿ ಪದಾಧಿಕಾರಿಗಳು ಪೂರ್ವಭಾವಿ ಸಭೆಯಲ್ಲಿ ಉಪಸ್ಥಿತರಿದ್ದರು.