ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ರಿಷಬ್ ಶೆಟ್ಟಿಗೆ ‘ಲೀಡರ್‌ಶಿಪ್ ಇನ್ ಸಿನಿಮಾ’ ಅಂತಾರಾಷ್ಟ್ರೀಯ ಅವಾರ್ಡ್; ಮೆಲ್ಬೋರ್ನ್ ಚಲನಚಿತ್ರೋತ್ಸವದಲ್ಲಿ ಪ್ರತಿಷ್ಠಿತ ಪ್ರಶಸ್ತಿ ಪ್ರದಾನ

'ಕಾಂತಾರ' ಚಿತ್ರದ ಮೂಲಕ ಜಾಗತಿಕ ಮಟ್ಟದಲ್ಲಿ ಭಾರತೀಯ ಚಿತ್ರರಂಗದ ಕೀರ್ತಿ ಹೆಚ್ಚಿಸಿದ ನಟ, ನಿರ್ದೇಶಕ ರಿಷಬ್ ಶೆಟ್ಟಿ ಅವರಿಗೆ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ 'ಇಂಡಿಯನ್ ಫಿಲ್ಮ್ ಫೆಸ್ಟಿವಲ್ ಆಫ್ ಮೆಲ್ಬೋರ್ನ್' (IFFM) 2026 ರಲ್ಲಿ ಪ್ರತಿಷ್ಠಿತ 'ಲೀಡರ್‌ಶಿಪ್ ಇನ್ ಸಿನಿಮಾ ಅವಾರ್ಡ್' ನೀಡಲಾಗುತ್ತಿದೆ.

'ಕಾಂತಾರ' ಚಿತ್ರದ ಮೂಲಕ ಜಾಗತಿಕ ಮಟ್ಟದಲ್ಲಿ ಭಾರಿ ಸದ್ದು ಮಾಡಿರುವ ಕನ್ನಡದ ನಟ, ನಿರ್ದೇಶಕ ಹಾಗೂ ನಿರ್ಮಾಪಕ ರಿಷಬ್ ಶೆಟ್ಟಿ ಅವರ ಅಂತರರಾಷ್ಟ್ರೀಯ ಗೌರವ ಒಲಿದುಬಂದಿದೆ. ಭಾರತೀಯ ಚಲನಚಿತ್ರ ರಂಗಕ್ಕೆ ಪ್ರಪಂಚದಾದ್ಯಂತ ಅಪಾರ ಕೀರ್ತಿ-ಪ್ರತಿಷ್ಠೆ ತಂದುಕೊಟ್ಟಿದ್ದಕ್ಕಾಗಿ ಅವರಿಗೆ ಪ್ರತಿಷ್ಠಿತ 'ಲೀಡರ್‌ಶಿಪ್ ಇನ್ ಸಿನಿಮಾ ಅವಾರ್ಡ್' ಘೋಷಿಸಲಾಗಿದೆ.

ಆಸ್ಟ್ರೇಲಿಯಾದಲ್ಲಿ ಆಗಸ್ಟ್ 13ರಂದು ನಡೆಯಲಿರುವ ಇಂಡಿಯನ್ ಫಿಲ್ಮ್ ಫೆಸ್ಟಿವಲ್ ಆಫ್ ಮೆಲ್ಬೋರ್ನ್ (IFFM) 2026 ಉತ್ಸವಕ್ಕೆ ರಿಷಬ್ ಶೆಟ್ಟಿ ಮುಖ್ಯ ಅತಿಥಿಯಾಗಿ ಹಾಜರಾಗಲಿದ್ದು, ಆಯೋಜಕರು ಈ ವೇದಿಕೆಯಲ್ಲಿ ಪ್ರಶಸ್ತಿಯನ್ನು ಪ್ರದಾನ ಮಾಡಲಿದ್ದಾರೆ. ನಟನಾಗಿ, ನಿರ್ದೇಶಕನಾಗಿ ಮತ್ತು ನಿರ್ಮಾಪಕನಾಗಿ ಭಾರತೀಯ ಸಿನಿಮಾವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವಲ್ಲಿ ಅವರು ತೋರಿದ ಪ್ರತಿಭೆ ಮತ್ತು ಕೊಡುಗೆಯನ್ನು ಗುರುತಿಸಿ ಈ ಗೌರವ ನೀಡಲಾಗುತ್ತಿದೆ.

Rishab Shetty: ಹಾಲಿವುಡ್‌ನಲ್ಲಿ ಮಿಂಚಿದ ರಿಷಬ್ ಶೆಟ್ಟಿ! ಸ್ಪೈಡರ್ ಮ್ಯಾನ್ ಜೊತೆ ಡಿವೈನ್ ಸ್ಟಾರ್

ಸಂತಸ ವ್ಯಕ್ತಪಡಿಸಿದ ರಿಷಬ್ ಶೆಟ್ಟಿ

ಈ ಪ್ರಶಸ್ತಿ ಕುರಿತು ಪ್ರತಿಕ್ರಿಯಿಸಿರುವ ರಿಷಬ್ ಶೆಟ್ಟಿ, "ಐಎಫ್‌ಎಫ್‌ಎಂ ವೇದಿಕೆಯಲ್ಲಿ ಈ ಗೌರವ ಪಡೆಯುತ್ತಿರುವುದು ನನಗೆ ತೀವ್ರ ಹೆಮ್ಮೆಯ ವಿಷಯವಾಗಿದೆ. ಕಥೆ ಹೇಳುವುದು ಯಾವಾಗಲೂ ನಮ್ಮ ಸಂಸ್ಕೃತಿ ಮತ್ತು ಪರಂಪರೆಯನ್ನು ಸಂಭ್ರಮಿಸುವ ಹಾದಿ. ನಮ್ಮ ಮಣ್ಣಿನ ಕಥೆಗಳು ಪ್ರಪಂಚದಾದ್ಯಂತದ ಪ್ರೇಕ್ಷಕರನ್ನು ತಲುಪುತ್ತಿರುವುದು ಅತ್ಯಂತ ಅರ್ಥಪೂರ್ಣವಾಗಿದೆ. ಮೆಲ್ಬೋರ್ನ್‌ನಲ್ಲಿ ಭಾರತೀಯ ಚಿತ್ರರಂಗದ ವೈವಿಧ್ಯತೆಯನ್ನು ಆಚರಿಸಲು ನಾನು ಎದುರು ನೋಡುತ್ತಿದ್ದೇನೆ" ಎಂದು ಹೇಳಿದ್ದಾರೆ.

ರಿಷಬ್ ಶೆಟ್ಟಿಯನ್ನು ಸ್ವಾಗತಿಸಲು ನಾವು ಕಾತುರರಾಗಿದ್ದೇವೆ

ಉತ್ಸವದ ನಿರ್ದೇಶಕಿ ಮಿಟು ಭೌಮಿಕ್ ಬಸು ಮಾತನಾಡಿ, "ರಿಷಬ್ ಶೆಟ್ಟಿ ಹೊಸ ಪೀಳಿಗೆಯ ಅಪರೂಪದ ಸಿನಿಮಾ ನಿರ್ಮಾತೃ. ಮಣ್ಣಿನ ಸಂಸ್ಕೃತಿಯಲ್ಲಿ ಬೇರೂರಿರುವ ಕಥೆಗಳು ಹೇಗೆ ಗಡಿಗಳನ್ನು ದಾಟಿ ಜಾಗತಿಕ ಪ್ರೇಕ್ಷಕರನ್ನು ತಲುಪಬಲ್ಲವು ಎಂಬುದನ್ನು ಅವರು ನಿರೂಪಿಸಿದ್ದಾರೆ. ಅವರನ್ನು IFFM 2026ಕ್ಕೆ ಸ್ವಾಗತಿಸಲು ನಾವು ಕಾತುರರಾಗಿದ್ದೇವೆ" ಎಂದಿದ್ದಾರೆ.

Rishab shetty: `ಕಾಂತಾರ' ಮುಂದಿನ ಭಾಗದ ಬಗ್ಗೆ ರಿಷಬ್‌ ಬಿಗ್‌ ಅಪ್‌ಡೇಟ್‌! ಫ್ಯಾನ್ಸ್‌ ಖುಷ್‌

‘ಛತ್ರಪತಿ ಶಿವಾಜಿ ಮಹಾರಾಜ್’ ಪಾತ್ರದಲ್ಲಿ ರಿಷಬ್ ಶೆಟ್ಟಿ

'ಕಾಂತಾರ' ಸರಣಿಯ ಮೂಲಕ ಜೈ ಹನುಮಾನ್‌ ಸಿನಿಮಾದಲ್ಲಿ ತೊಡಗಿಕೊಂಡಿರುವ ನಟ ರಿಷಬ್ ಶೆಟ್ಟಿ, ಮುಂದಿನ ದಿನಗಳಲ್ಲಿ ಬಹುಭಾಷಾ ಐತಿಹಾಸಿಕ ಸಿನಿಮಾ 'ದಿ ಪ್ರೈಡ್ ಆಫ್ ಭಾರತ್: ಛತ್ರಪತಿ ಶಿವಾಜಿ ಮಹಾರಾಜ್'ನಲ್ಲಿ ಶಿವಾಜಿ ಮಹಾರಾಜರಾಗಿ ಕಾಣಿಸಿಕೊಳ್ಳಲಿದ್ದಾರೆ. ಸಂದೀಪ್ ಸಿಂಗ್ ನಿರ್ಮಿಸುತ್ತಿರುವ ಈ ಎರಡು ಭಾಗಗಳ ಸಿನಿಮಾದಲ್ಲಿ ನಟಿ ಭೂಮಿ ಪೆಡ್ನೇಕರ್ ಅವರು ರಾಣಿ ಬೆಳವಡಿ ಮಲ್ಲಮ್ಮ ಪಾತ್ರವನ್ನು ಮಾಡುತ್ತಿದ್ದು, ಅರ್ಜುನ್ ರಾಂಪಾಲ್ ಮತ್ತು ವಿವೇಕ್ ಓಬೆರಾಯ್ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಋಷಿ ವಿರ್ಮಾನಿ ಕಥೆ ಬರೆದಿರುವ ಈ ಚಿತ್ರದ ಪ್ರಿ-ಪ್ರೊಡಕ್ಷನ್ ಕೆಲಸಗಳು ಜೋರಾಗಿ ನಡೆಯುತ್ತಿದ್ದು, ಈ ವರ್ಷದ ಕೊನೆಯಲ್ಲಿ ಚಿತ್ರೀಕರಣ ಆರಂಭವಾಗಲಿದೆ.