ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

'ರುದ್ರಾಭಿಷೇಕಂ' ಮೂಲಕ ವೀರಗಾಸೆ ಕಲೆಯ ಇತಿಹಾಸ ಹೇಳಲು ಬಂದ 'ಚಿನ್ನಾರಿ ಮುತ್ತ': ದ್ವಿಪಾತ್ರದದಲ್ಲಿ ವಿಜಯ ರಾಘವೇಂದ್ರ

ಕನ್ನಡದ ಹೆಮ್ಮೆಯ ಜನಪದ ಕಲೆ 'ವೀರಗಾಸೆ' ಮತ್ತು ವೀರಭದ್ರ ದೇವರ ಇತಿಹಾಸದ ಹಿನ್ನೆಲೆಯುಳ್ಳ 'ರುದ್ರಾಭಿಷೇಕಂ' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ವಿಜಯ್ ರಾಘವೇಂದ್ರ ಈ ಚಿತ್ರದಲ್ಲಿ ಮೊದಲ ಬಾರಿಗೆ ತಂದೆ-ಮಗನ ದ್ವಿಪಾತ್ರದಲ್ಲಿ ನಟಿಸಿದ್ದು, ವೀರಗಾಸೆ ಕಲಾವಿದನ ಸವಾಲಿನ ಪಾತ್ರ ನಿರ್ವಹಿಸಿದ್ದಾರೆ.

ಕರ್ನಾಟಕದ ವೀರಪರಂಪರೆಯ ಸಂಕೇತವಾದ 'ವೀರಗಾಸೆ' ಕಲೆ ಮತ್ತು ವೀರಭದ್ರ ದೇವರ ಮಹಿಮೆಯನ್ನು ಸಾರುವ ಚಿತ್ರ 'ರುದ್ರಾಭಿಷೇಕಂ' ಬಿಡುಗಡೆಗೆ ಸಜ್ಜಾಗಿದೆ. ಇತ್ತೀಚೆಗೆ ಚಿತ್ರದ ಹಾಡೊಂದನ್ನು ಹಾಪ್‌ಕಾಮ್ಸ್ ಅಧ್ಯಕ್ಷರಾದ ಚಂದ್ರೇಗೌಡ ಅವರು ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ವಸಂತ್ ಕುಮಾರ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿರುವ ಈ ಚಿತ್ರದಲ್ಲಿ ವಿಜಯ್ ರಾಘವೇಂದ್ರ, ಪ್ರಿಯಾಕಾ ತಿಮ್ಮೇಶ್ ನಟಿಸಿದ್ದಾರೆ. ಈಗಾಗಲೇ ಚಿತ್ರದ ಶೂಟಿಂಗ್ ಹಾಗೂ ಪೋಸ್ಟ್ ಪ್ರೊಡಕ್ಷನ್ ಮುಗಿದಿದ್ದು, ಇತ್ತೀಚೆಗೆ ಹಾಡೊಂದರ ಬಿಡುಗಡೆ ಸಮಾರಂಭ ನಡೆಯಿತು.

'ಚಿನ್ನಾರಿ ಮುತ್ತ'‌ ವಿಜಯ್ ರಾಘವೇಂದ್ರ ಅವರು ಈ ಚಿತ್ರದಲ್ಲಿ ಮೊದಲ ಬಾರಿಗೆ ತಂದೆ ಮತ್ತು ಮಗನಾಗಿ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಒಬ್ಬ ವೀರಗಾಸೆ ಕಲಾವಿದನಾಗಿ ಅವರ ಅಭಿನಯ ಈ ಚಿತ್ರದ ಪ್ರಮುಖ ಆಕರ್ಷಣೆ. ಈ ಬಗ್ಗೆ ಮಾತನಾಡಿದ ಅವರು, "ವೀರಗಾಸೆ ಕಲಾವಿದನ ಪಾತ್ರ ಮಾಡುವುದು ದೊಡ್ಡ ಸವಾಲಾಗಿತ್ತು. ಪೂರ್ವಜರ ಕಾಲದ ಘಟನೆಗಳು ಇಂದಿನ ತಲೆಮಾರಿಗೆ ಹೇಗೆ ಕನೆಕ್ಟ್ ಆಗುತ್ತವೆ ಎಂಬುದನ್ನು ಈ ಚಿತ್ರದಲ್ಲಿ ಅದ್ಭುತವಾಗಿ ತೋರಿಸಲಾಗಿದೆ. ತಂದೆ, ಮಗನಾಗಿ ಎರಡೂ ಪಾತ್ರಗಳನ್ನು ನಿಭಾಯಿಸಿದ್ದೇನೆ" ಎಂದರು.

Raakshasa Web Series: ನಿರೂಪಕಿ ಅನುಶ್ರೀ ಮದುವೆಯಲ್ಲಿ ಆಗಿದ್ದೇನು? ವಿಜಯ್‌ ರಾಘವೇಂದ್ರ - ತರುಣ್‌ ಸುಧೀರ್‌ ಥ್ಯಾಂಕ್ಸ್‌ ಹೇಳಿದ್ದೇಕೆ? ಇಲ್ಲಿದೆ ಇಂಟರೆಸ್ಟಿಂಗ್‌ ಕಥೆ

ಮೂರು ಶೇಡ್‌ನ ಪಾತ್ರದಲ್ಲಿ ಪ್ರಿಯಾಂಕಾ ತಿಮ್ಮೇಶ್‌

ಬಿಗ್‌ ಬಾಸ್‌ ಖ್ಯಾತಿಯ ಪ್ರಿಯಾಂಕಾ ತಿಮ್ಮೇಶ್‌ ಅವರು ʻರುದ್ರಾಭಿಷೇಕಂʼ ಚಿತ್ರದಲ್ಲಿ ಶಿವಭಕ್ತೆಯಾಗಿ, ಹಳ್ಳಿ ಹುಡುಗಿಯಾಗಿ ಮತ್ತು ಸಿಟಿ ಹುಡುಗಿ.. ಹೀಗೆ ಮೂರು ವಿಭಿನ್ನ ಶೇಡ್‌ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. "ನಾನು ಈ ಸಿನಿಮಾವನ್ನು ಒಪ್ಪಿಕೊಳ್ಳಲು ವಿಜಯ್ ರಾಘವೇಂದ್ರ ಅವರ ಸೌಮ್ಯ ಸ್ವಭಾವ ಮತ್ತು ಚಿತ್ರದ ಕಥಾಹಂದರ ಮುಖ್ಯ ಕಾರಣ" ಎಂದು ಪ್ರಿಯಾಂಕಾ ತಿಮ್ಮೇಶ್‌ ಹೇಳುತ್ತಾರೆ.

ವಸಂತ್ ಕುಮಾರ್ ಅವರು ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆದು ನಿರ್ದೇಶನ ಮಾಡುವುದರ ಜೊತೆಗೆ ಚಿತ್ರದಲ್ಲಿ ತತ್ವಜ್ಞಾನಿಯ ಪಾತ್ರವನ್ನೂ ಮಾಡಿದ್ದಾರೆ. 'ಫ್ಯಾನ್ ಇಂಡಿಯಾ ಕ್ರಿಯೇಶನ್ಸ್' ಬ್ಯಾನರ್ ಅಡಿಯಲ್ಲಿ ವೆಂಕಟೇಶ್ ಸೇರಿದಂತೆ ಒಟ್ಟು 9 ಸ್ನೇಹಿತರು ಸೇರಿ ಈ ಚಿತ್ರವನ್ನು ಅದ್ದೂರಿಯಾಗಿ ನಿರ್ಮಿಸಿದ್ದಾರೆ. ದೇವನಹಳ್ಳಿ, ಗೋಕರ್ಣ, ಹೊನ್ನಾವರ, ಕುಮಟಾ ಮತ್ತು ಅಘನಾಶಿನಿ ಹಿನ್ನೀರಿನ ಪ್ರದೇಶಗಳಲ್ಲಿ, ಯಾರೂ ಚಿತ್ರೀಕರಿಸದಂತಹ ಅದ್ಭುತ ಲೊಕೇಶನ್‌ಗಳಲ್ಲಿ 50ಕ್ಕೂ ಹೆಚ್ಚು ದಿನಗಳ ಕಾಲ ಶೂಟಿಂಗ್ ನಡೆಸಲಾಗಿದೆಯಂತೆ

ವಿ. ಮನೋಹರ್ ಅವರು ಈ ಚಿತ್ರದ ಹಾಡುಗಳಿಗೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಉದಯೋನ್ಮುಖ ಗಾಯಕರು ಹಾಡುಗಳಿಗೆ ಧ್ವನಿ ನೀಡಿದ್ದಾರೆ. ಉಳಿದಂತೆ, ಬಲ ರಾಜವಾಡಿ, ವಿ. ಮನೋಹರ್, ಮನು, ಸನತ್, ಬುಲೆಟ್ ವಿನು, ಮಮತಾ ತುರುವೇಕೆರೆ ಸೇರಿದಂತೆ ಅನೇಕ ಕಲಾವಿದರು ಚಿತ್ರದಲ್ಲಿದ್ದಾರೆ. ನಮ್ಮ ಮಣ್ಣಿನ ಜನಪದ ಕಲೆ ಮತ್ತು ನೂರಾರು ವರ್ಷಗಳ ಇತಿಹಾಸವಿರುವ ವೀರಭದ್ರ ದೇವರ ಉಗಮದ ಕಥೆಯನ್ನು ಹೊಂದಿರುವ 'ರುದ್ರಾಭಿಷೇಕಂ' ಸಿನಿಮಾವು ಶೀಘ್ರದಲ್ಲೇ ತೆರೆಗೆ ಬರಲಿದೆಯಂತೆ.