ವಿಜಯ್ ಅಭಿನಯದ 'ಜನನಾಯಗನ್' (Jana Nayagan) ಚಿತ್ರದ ಸೆನ್ಸಾರ್ಶಿಪ್ ಪ್ರಕರಣದಲ್ಲಿ ಮದ್ರಾಸ್ ಹೈಕೋರ್ಟ್ ಇಂದು ತೀರ್ಪು ನೀಡಿದೆ. ಚಿತ್ರಕ್ಕೆ ಸೆನ್ಸಾರ್ ಪ್ರಮಾಣಪತ್ರ ನೀಡುವಂತೆ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (ಸಿಬಿಎಫ್ಸಿ)ಗೆ ನಿರ್ದೇಶನ ನೀಡಿದ್ದ ಹಿಂದಿನ ಏಕಸದಸ್ಯ ಪೀಠದ ಆದೇಶವನ್ನು ಮದ್ರಾಸ್ ಹೈಕೋರ್ಟ್ ಮಂಗಳವಾರ ರದ್ದುಗೊಳಿಸಿದೆ. ಈ ನಿರ್ಧಾರವು ಚಿತ್ರದ ನಿರ್ಮಾಪಕರ ಪರವಾಗಿ ಬಂದ ಹಿಂದಿನ ತೀರ್ಪನ್ನು ರದ್ದುಗೊಳಿಸುತ್ತದೆ. ಚಿತ್ರ ಬಿಡುಗಡೆ ಇನ್ನಷ್ಟು ವಿಳಂಬವಾಗಲಿದ್ದು, ಅಭಿಮಾನಿಗಳಲ್ಲಿ ಬೇಸರ ಮೂಡಿಸಿದೆ.
ಮುಖ್ಯ ನ್ಯಾಯಮೂರ್ತಿ ಮಣೀಂದ್ರ ಮೋಹನ್ ಶ್ರೀವಾಸ್ತವ ಮತ್ತು ನ್ಯಾಯಮೂರ್ತಿ ಜಿ. ಅರುಳ್ ಮುರುಗನ್ ಅವರಿದ್ದ ಪೀಠವು, ಈ ಹಿಂದೆ ಪ್ರಕರಣದ ವಿಚಾರಣೆಯ ಸಮಯದಲ್ಲಿ ನೈಸರ್ಗಿಕ ನ್ಯಾಯ ತತ್ವಗಳನ್ನು ಪಾಲಿಸಲಾಗಿಲ್ಲ ಎಂದು ನಿರ್ಮಾಪಕರಿಗೆ ತಿಳಿಸಿದೆ.
ನ್ಯಾಯಾಲಯದಲ್ಲಿ ಕೆವಿಎನ್ ಪ್ರೊಡಕ್ಷನ್ಸ್ ಪರ ಹಾಜರಿದ್ದ ಹಿರಿಯ ವಕೀಲ ಸತೀಶ್ ಪರಾಶರನ್, ಹಿರಿಯ ವಕೀಲ ಪ್ರದೀಪ್ ರೈ ಮತ್ತು ವಕೀಲ ವಿಜಯನ್ ಸುಬ್ರಮಣಿಯಂ, ಚಿತ್ರಕ್ಕೆ ಯು/ಎ ಪ್ರಮಾಣಪತ್ರ ನೀಡಲಾಗುವುದು ಎಂದು ಮಂಡಳಿಯು ನಿರ್ಮಾಪಕರಿಗೆ ಮೊದಲೇ ತಿಳಿಸಿತ್ತು, ಆದರೆ ಪ್ರಮಾಣೀಕರಣವನ್ನು ಎಂದಿಗೂ ನೀಡಿಲ್ಲ ಎಂದು ವಾದಿಸಿದರು. ಚಿತ್ರಕ್ಕೆ ಶಿಫಾರಸು ಮಾಡಿದ ಮಾರ್ಪಾಡುಗಳನ್ನು ಮಾಡಿದ್ದೇವೆ ಎಂದು ನಿರ್ಮಾಪಕರು ನ್ಯಾಯಾಲಯಕ್ಕೆ ಪದೇ ಪದೇ ಹೇಳಿದರು, ಆದರೆ ಮಂಡಳಿಯು ಪ್ರಮಾಣಪತ್ರವನ್ನು ತಡೆಹಿಡಿದೆ.
‘ಜನ ನಾಯಗನ್’ ಸಿನಿಮಾಕ್ಕೆ ಸುಮಾರು 13 ಕಟ್ಗಳನ್ನು ಸಿಬಿಎಫ್ಸಿ ಸೂಚಿಸಿತ್ತು. ಎಲ್ಲದಕ್ಕೂ ನಿರ್ಮಾಪಕರು ಒಪ್ಪಿಕೊಂಡಿದ್ದರು. ಆದರೂ ಸಹ ಸಿನಿಮಾವನ್ನು ರಿವ್ಯೂ ಕಮಿಟಿಗೆ ಕಳಿಸಲು ಸಿಬಿಎಫ್ಸಿ ಚೇರ್ಮನ್ ಏಕಪಕ್ಷೀಯ ನಿರ್ಧಾರ ತೆಗೆದುಕೊಂಡರು. ಸಿನಿಮಾ ರಿವ್ಯೂ ಕಮಿಟಿಗೆ ಹೋದರೆ ಬಿಡುಗಡೆ ತಡವಾಗುತ್ತದೆ ಎಂಬ ಉದ್ದೇಶದಿಂದ ನಿರ್ಮಾಪಕರು ಮದ್ರಾಸ್ ಹೈಕೋರ್ಟ್ ಮೊರೆ ಹೋಗಿದ್ದರು. ಆದರೆ ಅಲ್ಲಿಯೂ ಸಹ ನ್ಯಾಯ ವಿಳಂಬ ಆಗುತ್ತಿದೆ.