ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ 'ಭಾರ್ಗವಿ ಎಲ್ಎಲ್ಬಿ' ತಂಡದಲ್ಲಿ ಮಹತ್ತರ ಬದಲಾವಣೆಯಾಗಿದ್ದು, ಸೀರಿಯಲ್ನ ಪ್ರಮುಖ ಪಾತ್ರಧಾರಿಯಾಗಿದ್ದ ಖ್ಯಾತ ನಟಿ ಸುಜಾತಾ ಅಕ್ಷಯ್ ಅವರನ್ನು ಏಕಾಏಕಿ ರೀಪ್ಲೇಸ್ ಮಾಡಲಾಗಿದೆ.
ವಿಡಿಯೋ ಮೂಲಕ ಸ್ಪಷ್ಟನೆ ನೀಡಿದ ಸುಜಾತ
ಈ ಧಾರಾವಾಹಿಯಲ್ಲಿ ಜೆಪಿ ಪಾಟೀಲ್ ಪತ್ನಿ ನಿರ್ಮಲಾ ಪಾಟೀಲ್ ಎಂಬ ಪ್ರಮುಖ ಪಾತ್ರವನ್ನು ಸುಜಾತಾ ನಿರ್ವಹಿಸುತ್ತಿದ್ದರು. ಆದರೆ, ಇದೀಗ ಅವರ ಜಾಗಕ್ಕೆ ನಟಿ ಸ್ವಾತಿ ಎಂಟ್ರಿ ಕೊಟ್ಟಿದ್ದಾರೆ. ವಿಶೇಷವೆಂದರೆ, ತಾವಾಗಿಯೇ ಧಾರಾವಾಹಿಯಿಂದ ಹೊರಬಂದಿಲ್ಲ ಮತ್ತು ತಮ್ಮನ್ನು ಬದಲಾಯಿಸುತ್ತಿರುವ ವಿಚಾರ ಸೀರಿಯಲ್ ತಂಡ ತಮಗೆ ತಿಳಿಸಿಯೇ ಇಲ್ಲ ಎಂಬ ಶಾಕಿಂಗ್ ಸತ್ಯವನ್ನು ಸುಜಾತಾ ಅಕ್ಷಯ್ ಇನ್ಸ್ಟಾಗ್ರಾಮ್ ವಿಡಿಯೋ ಮೂಲಕ ಬಹಿರಂಗಪಡಿಸಿದ್ದಾರೆ.
Bhargavi LL.B: ಮಹಾ ತಿರುವಿನಲ್ಲಿ ಭಾರ್ಗವಿ LL.B! ಜೆಪಿ ವಿರುದ್ಧ ನಿಂತೇ ಬಿಟ್ಟ ಅರ್ಜುನ್
ಟ್ರೋಲ್ ಪೇಜ್ಗಳ ಮೂಲಕ ವಿಷಯ ತಿಳಿಯಿತು
ಪ್ರಸ್ತುತ ಬ್ಯಾಂಕಾಕ್ ಪ್ರವಾಸದಲ್ಲಿರುವ ಸುಜಾತಾ, ಅಲ್ಲಿನ ಸುವರ್ಣಭೂಮಿ ಏರ್ಪೋರ್ಟ್ನಿಂದ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. "ನಾನು ವೈಯಕ್ತಿಕ ಕಾರಣ ಹಾಗೂ ಆರೋಗ್ಯದ ಸಮಸ್ಯೆಯಿಂದ ಸೀರಿಯಲ್ ಬಿಟ್ಟಿದ್ದೇನೆ ಎಂದು ಟ್ರೋಲ್ ಪೇಜ್ಗಳು ಮತ್ತು ವೀಕ್ಷಕರ ಮೆಸೇಜ್ಗಳಿಂದ ನನಗೆ ರೀಪ್ಲೇಸ್ಮೆಂಟ್ ವಿಷಯ ತಿಳಿಯಿತು. ಆದರೆ ನಾನು ಸಂಪೂರ್ಣ ಆರೋಗ್ಯವಾಗಿದ್ದೇನೆ, ಫ್ರೆಂಡ್ಸ್ ಜೊತೆ ಮುಂಚಿತವಾಗಿಯೇ ಪ್ಲಾನ್ ಮಾಡಿದ್ದ ವೆಕೇಶನ್ನಲ್ಲಿದ್ದೇನೆ. ಚಾನೆಲ್ನವರು ನನ್ನನ್ನು ಯಾವಾಗಲೂ ಗೌರವಿಸಿದ್ದಾರೆ. ಆದರೆ ಪ್ರೊಡಕ್ಷನ್ ಹೌಸ್ನವರು ನನ್ನನ್ನು ಶೂಟಿಂಗ್ಗೆ ಕರೆಯಲಿಲ್ಲ, ಡೇಟ್ಸ್ ಕೂಡ ಕೇಳಲಿಲ್ಲ. ಅವರು ಯಾಕೆ ಈ ನಿರ್ಧಾರ ತಗೊಂಡ್ರೋ ನನಗೆ ಗೊತ್ತಿಲ್ಲ" ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
Bhargavi LLB: ಭಾರ್ಗವಿ LL. B ಯಲ್ಲಿ ಹೊಸ ಟ್ವಿಸ್ಟ್! ಧಾರಾವಾಹಿಗೆ ಉಗ್ರಂ ಮಂಜು ಎಂಟ್ರಿ
ನನ್ನ ಪಾತ್ರವನ್ನ ಮಾಡುತ್ತಿರುವವರಿಗೂ ಆಲ್ ದಿ ಬೆಸ್ಟ್
"ಕಳೆದ ಒಂದು ವರ್ಷ ಎಂಟು ತಿಂಗಳಿನಿಂದ ನಿರ್ಮಲಾ ಪಾತ್ರಕ್ಕೆ ಪ್ರಾಮಾಣಿಕವಾಗಿ ನ್ಯಾಯ ಒದಗಿಸಿದ್ದೇನೆ. ಹೊಸದಾಗಿ ನನ್ನ ಪಾತ್ರವನ್ನ ಯಾರು ಮಾಡ್ತಿದ್ದಾರೋ.. ಅವರಿಗೂ ಆಲ್ ದಿ ಬೆಸ್ಟ್. ಅವರೂ ಮಿಂಚಲಿ" ಎಂದು ಹಾರೈಸುತ್ತಾ, ತಮಗೆ ಅವಕಾಶ ನೀಡಿದ ಕಲರ್ಸ್ ವಾಹಿನಿಗೆ ಧನ್ಯವಾದ ತಿಳಿಸಿದ್ದಾರೆ. ಶೀಘ್ರದಲ್ಲೇ ಮತ್ತೊಂದು ಹೊಸ ಪ್ರಾಜೆಕ್ಟ್ ಮೂಲಕ ಕಿರುತೆರೆಗೆ ಮರಳುವುದಾಗಿ ಅವರು ಭರವಸೆ ನೀಡಿದ್ದಾರೆ.
ಸುಜಾತ ಅಕ್ಷಯ ಹಂಚಿಕೊಂಡಿರುವ ವಿಡಿಯೋ
ಮುಕ್ತಾಯದ ಹಂತದಲ್ಲಿದೆಯೇ ಧಾರಾವಾಹಿ?
ಆರಂಭದಲ್ಲಿ ಭಾರಿ ಟಿಆರ್ಪಿ ದಾಖಲಿಸಿದ್ದ 'ಭಾರ್ಗವಿ ಎಲ್ಎಲ್ಬಿ', ಇತ್ತೀಚಿನ ದಿನಗಳಲ್ಲಿ ರೇಟಿಂಗ್ನಲ್ಲಿ ಕೊಂಚ ಹಿನ್ನಡೆ ಅನುಭವಿಸುತ್ತಿದೆ ಎನ್ನಲಾಗುತ್ತಿದೆ. ಇದರ ನಡುವೆ ‘ಬಿಗ್ ಬಾಸ್ ಕನ್ನಡ’ ಶೋನ ಹೊಸ ಸೀಸನ್ ಆರಂಭವಾಗುತ್ತಿರುವುದರಿಂದ, ವಾಹಿನಿಯು ಈ ಸೀರಿಯಲ್ ಅನ್ನು ಮುಕ್ತಾಯಗೊಳಿಸುವ ಸಾಧ್ಯತೆ ಇದೆ ಎಂಬ ಚರ್ಚೆಗಳು ಕಿರುತೆರೆ ವಲಯದಲ್ಲಿ ಕೇಳಿಬರುತ್ತಿವೆ.