ಇಡೀ ದೇಶವೇ ಎದುರು ನೋಡುತ್ತಿದ್ದ ʻಧುರಂಧರ್ 2ʼ ಸಿನಿಮಾವು ಮಾರ್ಚ್ 19ರಂದು ತೆರೆಕಂಡಿದೆ. ಅದಕ್ಕೂ ಮುನ್ನ ನಡೆದ ಪೇಯ್ಡ್ ಪ್ರೀಮಿಯರ್ ಶೋಗಳಿಂದಲೂ ಭರ್ಜರಿ ಕಮಾಯಿ ಆಗಿದೆ. ಈ ಮಧ್ಯೆ ಕನ್ನಡಿಗರಿಗೆ ಧುರಂಧರ್ ನಿರ್ದೇಶಕ ಆದಿತ್ಯ ಧರ್ ಅವರು ಕ್ಷಮೆ ಕೇಳಿದ ಬೆಳವಣಿಗೆ ನಡೆದಿದೆ. ಬರೀ ಕನ್ನಡಿಗರಿಗೆ ಮಾತ್ರವಲ್ಲ ದಕ್ಷಿಣ ಭಾರತದ ಇತರೆ ಭಾಷಿಕರಿಗೂ ಆದಿತ್ಯ ಧರ್ ಕ್ಷಮೆ ಕೋರಿದ್ದಾರೆ. ಅಷ್ಟಕ್ಕೂ ಆಗಿದ್ದೇನು? ಮುಂದೆ ಓದಿ.
ಆದಿತ್ಯ ಧರ್ ಹಂಚಿಕೊಂಡ ಪೋಸ್ಟ್ನಲ್ಲಿ ಏನಿದೆ?
"ನಮ್ಮ ಪ್ರೀತಿಯ 'ಧುರಂಧರ್' ಕುಟುಂಬಕ್ಕೆ... 'ಧುರಂಧರ್' ನಮಗೆ ಕೇವಲ ಒಂದು ಸಿನಿಮಾವಲ್ಲ, ಇದು ನಾವು ಬದುಕಿದ, ಪೋಷಿಸಿದ ಮತ್ತು ನಿಮ್ಮೆಲ್ಲರೊಂದಿಗೆ ಒಂದೇ ಕ್ಷಣದಲ್ಲಿ, ಎಲ್ಲಾ ಭಾಷೆಗಳಲ್ಲೂ ಹಂಚಿಕೊಳ್ಳಬೇಕೆಂದು ಕಂಡ ಕನಸು. ಭಾರತದಾದ್ಯಂತ ನಮ್ಮ ಹೆಚ್ಚಿನ ಹಿಂದಿ ಪ್ರದರ್ಶನಗಳು ನಿಗದಿಯಂತೆ ಮಾ.18ರ ಸಂಜೆ 5 ಗಂಟೆಯಿಂದಲೇ ಆರಂಭವಾಗಿವೆ. ತಮಿಳು ಮತ್ತು ತೆಲುಗಿನ ಎಲ್ಲಾ ಪ್ರದರ್ಶನಗಳು ರಾತ್ರಿ 9 ಗಂಟೆಯಿಂದ ಪ್ರಾರಂಭವಾಗಲಿವೆ. ಆದರೆ, ಕೆಲವು ಅನಿರೀಕ್ಷಿತ ತಾಂತ್ರಿಕ ಕಾರಣಗಳಿಂದಾಗಿ, ನಮ್ಮ ಮಲಯಾಳಂ ಮತ್ತು ಕನ್ನಡ ಆವೃತ್ತಿಯ ಪ್ರದರ್ಶನಗಳು ನಾಳೆ ಬೆಳಿಗ್ಗೆಯಿಂದ ಆರಂಭವಾಗಲಿವೆ" ಎಂದು ತಿಳಿಸಿದ್ದಾರೆ ಆದಿತ್ಯ ಧರ್.
Dhurandhar 2 Review: ಆದಿತ್ಯ ಧರ್ ಸೃಷ್ಟಿಸಿದ ಧುರಂಧರ್ನ ರಿವೆಂಜ್ ಹಾದಿಯಲ್ಲಿ ಬೆಂಕಿಯ ಬೇಲಿಗಳು!
"ಒಂದು ವೇಳೆ ನೀವು ಟಿಕೆಟ್ ಕಾಯ್ದಿರಿಸಿದ ಭಾಷೆಯ ಆವೃತ್ತಿಯು ಸದ್ಯಕ್ಕೆ ನಿಮ್ಮ ಚಿತ್ರಮಂದಿರದಲ್ಲಿ ಪ್ರದರ್ಶನವಾಗದಿದ್ದರೆ, ನೀವು ಹಣವನ್ನು ಮರುಪಾವತಿ ಪಡೆಯಬಹುದು ಅಥವಾ ಸಬ್ಟೈಟಲ್ಗಳೊಂದಿಗೆ ಹಿಂದಿ ಆವೃತ್ತಿಯನ್ನು ವೀಕ್ಷಿಸಬಹುದು. ನಿಮಗಾದ ಅನಾನುಕೂಲಕ್ಕೆ ನಾವು ಕ್ಷಮೆಯಾಚಿಸುತ್ತೇವೆ. ಈ ಚಿತ್ರದ ಮೇಲೆ ನೀವು ತೋರಿಸುತ್ತಿರುವ ಪ್ರೀತಿಯೇ ನಮಗೆ ಸರ್ವಸ್ವ. ನಿಮ್ಮೊಂದಿಗೆ ಈ ಸಿನಿಮಾವನ್ನು ಹಂಚಿಕೊಳ್ಳಲು ನಾವು ಕಾತರರಾಗಿದ್ದೇವೆ" ಎಂದು ಆದಿತ್ಯ ಧರ್ ಹೇಳಿದ್ದಾರೆ.
Dhurandhar 2: 'ಧುರಂಧರ್ 2 ಚಿತ್ರದಲ್ಲಿ ಮೋದಿ ವಿಜಯೋತ್ಸವ ಭಾಷಣ ದೃಶ್ಯ! ಸೋಷಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆ
ಸದ್ಯ ಬುಕ್ ಮೈ ಶೋನಲ್ಲಿ ಧುರಂಧರ್ 2 ಚಿತ್ರದ ಹಿಂದಿ ವರ್ಷನ್ ಮಾತ್ರ ಟಿಕೆಟ್ ಬುಕಿಂಗ್ ಆಗುತ್ತಿದ್ದು, ಕನ್ನಡ, ತೆಲುಗು ಹಾಗೂ ಇನ್ನಿತರ ಭಾಷೆಯ ವರ್ಷನ್ಗಳ ಟಿಕೆಟ್ಗಳು ಮಾರ್ಚ್ 20ರಿಂದ ಶೋ ಆಗಲಿವೆ ಎಂದು ತೋರಿಸುತ್ತಿದೆ. ಕನ್ನಡದಲ್ಲಿ ಧುರಂಧರ್ 2 ಸಿನಿಮಾವನ್ನು ವೀಕ್ಷಣೆ ಮಾಡಬೇಕು ಎಂದುಕೊಂಡವರಿಗೆ ಇದರಿಂದ ನಿರಾಸೆ ಆಗಿದೆ.
ಧುರಂಧರ್ 2 ನಿರ್ದೇಶಕರ ಟ್ವೀಟ್
ʻಧುರಂಧರ್: ದಿ ರಿವೆಂಜ್ʼ ಸಿನಿಮಾವನ್ನು ಜಿಯೋ ಸ್ಟುಡಿಯೋಸ್ ಮತ್ತು ಬಿ62 ಸ್ಟುಡಿಯೋಸ್ ನಿರ್ಮಾಣ ಮಾಡಿದ್ದು, ಆದಿತ್ಯ ಧರ್ ನಿರ್ದೇಶಿಸಿದ್ದಾರೆ. ರಣವೀರ್ ಸಿಂಗ್, ಸಾರಾ ಅರ್ಜುನ್, ಅರ್ಜುನ್ ರಾಮ್ಪಾಲ್, ಸಂಜಯ್ ದತ್ ಮುಂತಾದವರು ನಟಿಸಿದ್ದು, ಬಾಕ್ಸ್ ಆಫೀಸ್ನಲ್ಲಿ ಮೊದಲ ದಿನ ಈ ಚಿತ್ರವು 200+ ಕೋಟಿ ರೂ. ಕಮಾಯಿ ಮಾಡಬಹುದು ಎಂದು ನಿರೀಕ್ಷೆ ಮಾಡಲಾಗಿದೆ.