ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ನಟ-ನಟಿಯರು ರಾಜಕೀಯಕ್ಕೆ ಧುಮುಕುವುದು ಹೊಸದೇನಲ್ಲ. ಆಂಧ್ರಪ್ರದೇಶದಲ್ಲಿ ನಟ ಪವನ್ ಕಲ್ಯಾಣ್ ಉಪ ಮುಖ್ಯಮಂತ್ರಿಯಾಗಿದ್ದರೆ, ತಮಿಳುನಾಡಿನಲ್ಲಿ ನಟ ವಿಜಯ್ ಸಕ್ರಿಯ ರಾಜಕೀಯ ಪ್ರವೇಶಿಸಿ ಗಮನ ಸೆಳೆದಿದ್ದಾರೆ. ಧನುಷ್ ಕೂಡ ಪೊಲಿಟಿಕ್ಸ್ ಎಂಟ್ರಿ ಕೊಡುತ್ತಾರೆ ಎಂಬ ಸುದ್ದಿಗಳ ನಡುವೆ, ‘ಐಕಾನ್ ಸ್ಟಾರ್’ ಅಲ್ಲು ಅರ್ಜುನ್ ಕೂಡ ರಾಜಕೀಯ ಅಂಗಳಕ್ಕೆ ಕಾಲಿಡಲಿದ್ದಾರೆ ಎಂಬ ಸುದ್ದಿ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿತ್ತು.
ಕಾಂಗ್ರೆಸ್ ಪಕ್ಷದ ಪ್ರಮುಖ ನಾಯಕರಾಗಿರುವ ತಮ್ಮ ಮಾವ ಕಂಚಾರ್ಲ ಚಂದ್ರಶೇಖರ್ ರೆಡ್ಡಿ ಅವರ ಮೂಲಕವೇ ಅಲ್ಲು ಅರ್ಜುನ್ ನೇರವಾಗಿ ಪೊಲಿಟಿಕಲ್ ಎಂಟ್ರಿ ಕೊಡಲಿದ್ದಾರೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ಚರ್ಚೆಯಾಗುತ್ತಿತ್ತು. ಆದರೆ, ಈ ಎಲ್ಲಾ ಊಹಾಪೋಹಗಳಿಗೆ ನಟನ ಆಪ್ತ ವಲಯದಿಂದ ಅಧಿಕೃತ ಸ್ಪಷ್ಟನೆ ಸಿಕ್ಕಿದ್ದು, ವದಂತಿಗಳಿಗೆ ತೆರೆಬಿದ್ದಿದೆ.
ಅದೆಲ್ಲವೂ ಬರಿ ಫೇಕ್ ನ್ಯೂಸ್
ಅಲ್ಲು ಅರ್ಜುನ್ ಅವರ ರಾಜಕೀಯ ರಂಗಪ್ರವೇಶದ ಕುರಿತು ಹರಿಡುತ್ತಿರುವ ಸುದ್ದಿಗಳ ಬಗ್ಗೆ ಪ್ರತಿಕ್ರಿಯಿಸಿರುವ ಅವರ ಮ್ಯಾನೇಜರ್ ಶರತ್ ಚಂದ್ರ ನಾಯ್ಡು, "ಅಲ್ಲು ಅರ್ಜುನ್ ರಾಜಕೀಯಕ್ಕೆ ಬರುತ್ತಾರೆ ಎಂಬ ಸುದ್ದಿಗಳಲ್ಲಿ ಯಾವುದೇ ಸತ್ಯಾಂಶವಿಲ್ಲ, ಅವೆಲ್ಲವೂ ಸಂಪೂರ್ಣವಾಗಿ ಫೇಕ್ ನ್ಯೂಸ್. ಇಂತಹ ಕಲ್ಪಿತ ವರದಿಗಳು ಇಂಟರ್ನೆಟ್ನಲ್ಲಿ ಕಾಣಿಸಿಕೊಂಡ ತಕ್ಷಣವೇ ನಾವು ನೇರವಾಗಿ ಪ್ರತಿಕ್ರಿಯಿಸಿ ಖಂಡಿಸಿದ್ದೇವೆ" ಎಂದು ಸ್ಪಷ್ಟಪಡಿಸಿದ್ದಾರೆ. ಮಾವನ ಮೂಲಕ ರಾಜಕೀಯಕ್ಕೆ ಎಂಟ್ರಿ ಕೊಡುತ್ತಾರೆ ಎಂಬ ಪ್ರಚಾರದಲ್ಲೂ ಯಾವುದೇ ಆಧಾರವಿಲ್ಲ ಎಂದು ಅವರು ತಳ್ಳಿಹಾಕಿದ್ದಾರೆ.
ಮುಂದಿನ 10 ವರ್ಷ ಸಿನಿಮಾಗಳೇ ಫುಲ್!
ಪ್ರಸ್ತುತ 'ಪುಷ್ಪ' ಸಿನಿಮಾದ ಭಾರಿ ಯಶಸ್ಸಿನ ಬಳಿಕ ಅಲ್ಲು ಅರ್ಜುನ್ ಭಾರತದಾದ್ಯಂತ ದೊಡ್ಡ ಮಟ್ಟದ ಮಾರುಕಟ್ಟೆ ಮತ್ತು ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಂಡಿದ್ದಾರೆ. ಭಾರತದ ಅತ್ಯಂತ ಬೇಡಿಕೆಯ ಸಾಲು ಸಾಲು ಪ್ಯಾನ್ ಇಂಡಿಯಾ ಪ್ರಾಜೆಕ್ಟ್ಗಳಲ್ಲಿ ನಿರತರಾಗಿರುವ ಅವರು, ತಮ್ಮ ವೃತ್ತಿಜೀವನದ ಅತ್ಯುನ್ನತ ಹಂತದಲ್ಲಿದ್ದಾರೆ.
"ಪ್ರಸ್ತುತ ಅವರ ಗಮನವೆಲ್ಲವೂ ಸಂಪೂರ್ಣವಾಗಿ ಸಿನಿಮಾಗಳ ಮೇಲೆಯೇ ಇದೆ. ಕೈಯಲ್ಲಿ ಬೃಹತ್ ಸಿನಿಮಾಗಳಿವೆ ಮತ್ತು ಮುಂದಿನ ಸುಮಾರು 10 ವರ್ಷಗಳ ಕಾಲ ಅವರ ಡೇಟ್ಸ್ ಸಂಪೂರ್ಣವಾಗಿ ಬುಕ್ ಆಗಿವೆ. ಇಷ್ಟೊಂದು ಬ್ಯುಸಿ ಶೆಡ್ಯೂಲ್ ಮಧ್ಯೆ ರಾಜಕೀಯಕ್ಕೆ ಬರಬೇಕಾದ ಅಗತ್ಯವಾಗಲಿ ಅಥವಾ ಯೋಚಿಸುವ ಸಮಯವಾಗಲಿ ಅವರಿಗೆ ಇಲ್ಲ" ಎಂದು ಶರತ್ ಚಂದ್ರ ಖಚಿತಪಡಿಸಿದ್ದಾರೆ. ಈ ಮೂಲಕ ಕಳೆದ ಕೆಲವು ದಿನಗಳಿಂದ ಹರಿಡುತ್ತಿದ್ದ ಅಲ್ಲು ಅರ್ಜುನ್ ಪೊಲಿಟಿಕಲ್ ಎಂಟ್ರಿ ವದಂತಿಗಳಿಗೆ ಸಂಪೂರ್ಣ ತೆರೆಬಿದ್ದಂತಾಗಿದೆ.