ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಗಿಲ್ಲಿ ನಟ ಅವರು ಒನ್ ಮ್ಯಾನ್ ಶೋನಂತೆ ಇಡೀ ಆಟವನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿರುವುದು ಎಲ್ರಿಗೂ ಗೊತ್ತಿದೆ. ಗಿಲ್ಲಿ ನಟನಿಗಾಗಿಯೇ ಶೋವನ್ನು ನೋಡುತ್ತಿದ್ದೇವೆ ಎಂದು ಹೇಳುವ ವೀಕ್ಷಕರ ಸಂಖ್ಯೆ ಏನೂ ಕಮ್ಮಿ ಇಲ್ಲ. ಬಿಗ್ ಬಾಸ್ ಮನೆ ಆಚೆಗೂ ಸೆಲೆಬ್ರಿಟಿಗಳಿಂದ ಗಿಲಿ ನಟನಿಗೆ ಬೆಂಬಲ ಸಿಗುತ್ತಿದೆ. ಅದರಲ್ಲೂ ಮಾಜಿ ಬಿಗ್ ಬಾಸ್ ಸ್ಪರ್ಧಿಗಳೇ ಗಿಲ್ಲಿ ನಟನ ಆಟದ ಶೈಲಿಯನ್ನು ಮೆಚ್ಚಿಕೊಂಡು ಹೊಗಳುತ್ತಿದ್ದಾರೆ. ಅಷ್ಟಕ್ಕೂ ಈಗ ಹೊಗಳಿದವರು ಬೇರಾರು ಅಲ್ಲ, ಬಿಗ್ ಬಾಸ್ ಕನ್ನಡ ಸೀಸನ್ 11ರ ಸ್ಪರ್ಧಿ ಗೌತಮಿ ಜಾಧವ್.
ಗೌತಮಿ ಜಾಧವ್ ಏನಂದ್ರು?
ಈಚೆಗೆ ಮಾಧ್ಯಮಗಳಿಗೆ ರಿಯಾಕ್ಷನ್ ನೀಡಿರುವ ಗೌತಮಿ ಜಾಧವ್ ಅವರು ಗಿಲಿ ನಟನ ಆಟದ ವೈಖರಿಯನ್ನು ಪ್ರಶಂಸಿದ್ದಾರೆ. "ಈ ಸಲ ಒನ್ ಮ್ಯಾನ್ ಶೋ ತರಹ ಆಗುತ್ತಿದೆ. ಖಂಡಿತವಾಗಿಯೂ ಗಿಲ್ಲಿ ನಟ ಎಲ್ಲಾ ಫ್ರೇಮ್ನಲ್ಲೂ ಸರಿಯಾದ ಮನರಂಜನೆಯನ್ನು ನೀಡುತ್ತಿದ್ದಾರೆ. ಅವರು ತುಂಬಾ ಚೆನ್ನಾಗಿ ಆಟ ಆಡ್ತಿದ್ದಾರೆ. ಕೆಲವು ವೈಯಕ್ತಿಕ ವಿಷಯಗಳು ಕೆಲವರಿಗೆ ಬೇಜಾರಾಗಿರಬಹುದು. ಆದರೆ, ಟಾಸ್ಕ್ ಮತ್ತು ಎಲ್ಲಾ ಫ್ರೇಮ್ನಲ್ಲಿಯೂ ಗಿಲ್ಲಿ ನಟ ತುಂಬಾ ಚೆನ್ನಾಗಿ ಎಂಟರ್ಟೈನ್ ಮಾಡಿದ್ದಾರೆ. ಅಷ್ಟು ಜನರ ಮಧ್ಯೆ ನಗು ನಗುತ್ತಾ ಕೌಂಟರ್ ಕೊಡೋದು ಅಥವಾ ಮನರಂಜಿಸುವುದು ಅಷ್ಟು ಸುಲಭವಲ್ಲ. ಒಟ್ನಲ್ಲಿ ಗಿಲ್ಲಿ ನಟ ಚೆನ್ನಾಗಿ ಆಡ್ತಿದ್ದಾರೆ" ಎಂದು ಗೌತಮಿ ಜಾಧವ್ ಹೇಳಿದ್ದಾರೆ.
ಬಿಗ ಬಾಸ್ ಮನೆಯಲ್ಲಿರುವ ಮಾಜಿ ಸ್ಪರ್ಧಿಗಳು
ಸದ್ಯ ಬಿಗ್ ಬಾಸ್ ಮನೆಯು ಬಿಬಿ ಪ್ಯಾಲೇಸ್ ಆಗಿ ಬದಲಾಗಿದ್ದು, ಉಗ್ರಂ ಮಂಜು, ರಜತ್, ಮೋಕ್ಷಿತಾ ಪೈ, ಚೈತ್ರಾ ಕುಂದಾಪುರ, ತ್ರಿವಿಕ್ರಮ್ ಅವರು ಅತಿಥಿಗಳಾಗಿ ಹೋಗಿದ್ದಾರೆ. ಅದರಲ್ಲಿ ಮೋಕ್ಷಿತಾ ಮತ್ತು ತ್ರಿವಿಕ್ರಮ್ ಬಿಟ್ಟರೇ, ಉಳಿದ ಮೂವರು ಗಿಲ್ಲಿಯನ್ನು ಟಾರ್ಗೆಟ್ ಮಾಡಿದ್ದು ಮೇಲ್ನೋಟಕ್ಕೇ ಗೊತ್ತಾಗಿದೆ. ಅದರಲ್ಲೂ ಮಂಜು & ರಜತ್ ಅಂತೂ ಗಿಲ್ಲಿಗೆ ತುಂಬಾನೇ ಟಾರ್ಗೆಟ್ ಮಾಡಿದ್ದರು. ಇತ್ತ ಮನೆಯ ಆಚೆ ಗೌತಮಿ ಅವರು ಗಿಲ್ಲಿಯನ್ನೇ ಹೊಗಳಿರುವುದು ಅಚ್ಚರಿ ಮೂಡಿಸಿದೆ.
ಗೌತಮಿ ಏಕೆ ಹೋಗಲಿಲ್ಲ?
ಹೌದು, ಕಳೆದ ಸೀಸನ್ನ ಐವರು ಬಿಗ್ ಬಾಸ್ ಮನೆಯೊಳಗೆ ಹೋಗಿ, ಮಂಜು ಅವರ ಮದುವೆ ಬ್ಯಾಚುಲರ್ ಪಾರ್ಟಿ ಮಾಡುತ್ತಿದ್ದಾರೆ. ಆದರೆ ಗೌತಮಿ ಜಾಧವ್ ಅವರು ಏಕೆ ಹೋಗಲಿಲ್ಲ ಎಂಬ ಪ್ರಶ್ನೆ ಮೂಡುವುದು ಸಹಜ. ಅದಕ್ಕುತ್ತರವನ್ನು ಗೌತಮಿ ನೀಡಿದ್ದಾರೆ. "ಉಗ್ರಂ ಮಂಜು ಅವರ ಮದುವೆ ನಿಶ್ಚಯವಾಗಿದೆ. ಹಾಗಾಗಿ ಅವರ ಮದುವೆ ಬ್ಯಾಚುಲರ್ ಪಾರ್ಟಿ ಮಾಡಲು ಬಿಗ್ ಬಾಸ್ ಮನೆಗೆ ಹೋಗಿದ್ದಾರೆ. ಆದರೆ ನಾನು ಊರಿನಲ್ಲಿ ಇರಲಿಲ್ಲ. ಆದ್ದರಿಂದ ನಾನು ಅವರ ಜೊತೆಗೆ ಹೋಗಲು ಸಾಧ್ಯವಾಗಲಿಲ್ಲ" ಎಂದು ಗೌತಮಿ ಜಾಧವ್. ಹೇಳಿದ್ದಾರೆ.