ಪಾರ್ವತಮ್ಮ ರಾಜ್ಕುಮಾರ್ ತಂಗಿ ಮಗನ 'ಯುವ ಸರ್ಕಾರ್' ಚಿತ್ರದಲ್ಲಿ ʻಬಿಗ್ ಬಾಸ್ʼ ಜಾಹ್ನವಿ; ಈ ಚಿತ್ರಕ್ಕೆ ಸಿಕ್ಕಿದೆ ಶಿವಣ್ಣನ ಆಶೀರ್ವಾದ
Yuva Sarkar Movie News: ಪಾರ್ವತಮ್ಮ ರಾಜ್ಕುಮಾರ್ ಅವರ ತಂಗಿ ಮಗ ಸಂತೋಷ್ ಕುಮಾರ್ ನಿರ್ದೇಶಿಸಿರುವ ಯುವ ಸರ್ಕಾರ್ ಚಿತ್ರಕ್ಕೆ ನಟ ಶಿವರಾಜ್ಕುಮಾರ್ ಶುಭ ಹಾರೈಸಿದ್ದಾರೆ. ಬಿಗ್ ಬಾಸ್ ಖ್ಯಾತಿಯ ಜಾಹ್ನವಿ ನಾಯಕಿಯಾಗಿ ನಟಿಸಿರುವ ಈ ಚಿತ್ರವು ತಾಯಿ-ಮಗನ ಎಮೋಷನಲ್ ಕಥೆಯನ್ನು ಹೊಂದಿದೆ.
-
ʻಬಿಗ್ ಬಾಸ್ʼ ಕನ್ನಡ ಸೀಸನ್ 12ರಲ್ಲಿ ಸ್ಪರ್ಧಿಯಾಗಿದ್ದ ನಿರೂಪಕಿ ಜಾಹ್ನವಿ ಅವರು ಇದೀಗ ಪುನಃ ಬೆಳ್ಳಿತೆರೆಗೆ ಕಂಬ್ಯಾಕ್ ಮಾಡಲು ಸಜ್ಜಾಗಿದ್ದಾರೆ. ಈ ಹಿಂದೆ ಅಧಿಪತ್ರ ಸಿನಿಮಾಗೆ ನಾಯಕಿಯಾಗಿದ್ದ ಜಾಹ್ನವಿ ಈಗ ʻಯುವ ಸರ್ಕಾರ್ʼ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಅಂದಹಾಗೆ, ಈ ʻಯುವ ಸರ್ಕಾರ್ʼ ಸಿನಿಮಾಕ್ಕೂ ದೊಡ್ಮನೆಗೂ ನೇರ ಸಂಬಂಧ ಇದೆ. ಅದೇನು? ಮುಂದೆ ಓದಿ.
ಶಿವಣ್ಣನ ಚಿಕ್ಕಮ್ಮನ ಮಗನ ಸಿನಿಮಾ ಇದು
ʻಯುವ ಸರ್ಕಾರ್ʼ ಸಿನಿಮಾಕ್ಕೆ ನಿರ್ದೇಶನ ಮಾಡಿರುವುದು ಸಂತೋಷ್ ಕುಮಾರ್. ಇವರು ಬೇರೆ ಯಾರೂ ಅಲ್ಲ, ಪಾರ್ವತಮ್ಮ ರಾಜ್ಕುಮಾರ್ ಅವರ ತಂಗಿ ಮಗ. ಅಂದರೆ, ಶಿವರಾಜ್ಕುಮಾರ್ಗೆ ಚಿಕ್ಕಮ್ಮನ ಮಗ. ಹಾಗಾಗಿ, ಯುವ ಸರ್ಕಾರ್ ಸಿನಿಮಾಕ್ಕೆ ಪ್ರೀತಿಯಿಂದ ಆಶೀರ್ವದಿಸಿದ್ದಾರೆ ಶಿವರಾಜ್ಕುಮಾರ್. ಚಿತ್ರದ ಟೀಸರ್ ನೋಡಿ, "ಸಂತೋಷ್ ನಮ್ಮ ಚಿಕ್ಕಮ್ಮನ ಮಗ. ಯುವಜನರಿಗೆ ಹತ್ತಿರವಾಗುವಂಥ ಒಂದೊಳ್ಳೆ ಕಂಟೆಂಟ್ ಇಟ್ಟುಕೊಂಡು ಈ ಸಿನಿಮಾ ಮಾಡಿದ್ದಾರೆ, ಇಡೀ ತಂಡಕ್ಕೆ ಒಳ್ಳೆಯದಾಗಲಿ" ಎಂದು ಶುಭ ಹಾರೈಸಿದ್ದಾರೆ.
ಹುಬ್ಬಳ್ಳಿಯಲ್ಲಿ ಪುನೀತ್ ರಾಜ್ಕುಮಾರ್ ಭೇಟಿ ಮಾಡಿದ್ದ ಅಭಿಮಾನಿ ಗೌರಮ್ಮ ಇನ್ನಿಲ್ಲ
ಈ ಹಿಂದೆ ಬಿಂದಾಸ್ ಗೂಗ್ಲಿ, ಕ್ಯಾಂಪಸ್ ಕ್ರಾಂತಿ ಸೇರಿದಂತೆ ಮೂರು ಚಿತ್ರಗಳನ್ನು ನಿರ್ದೇಶಿಸಿರುವ ಸಂತೋಷ್ ಕುಮಾರ್, ಈಗ ಸದ್ದಿಲ್ಲದೆ ತಮ್ಮ ನಿರ್ದೇಶನದ 4ನೇ ಚಿತ್ರ ಯುವ ಸರ್ಕಾರ್ನ ಚಿತ್ರೀಕರಣವನ್ನು ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ಬ್ಯಸಿ ಆಗಿದ್ದಾರೆ.
ಇನ್ನು, ಪ್ರೇಮಿಗಳ ದಿನದ ಅಂಗವಾಗಿ ಯುವ ಸರ್ಕಾರ್ ಚಿತ್ರದ ರೊಮ್ಯಾಂಟಿಕ್ ಹಾಡನ್ನು ಹಿರಿಯ ನಿರ್ಮಾಪಕ ಎಸ್. ಎ. ಚಿನ್ನೇಗೌಡ್ರು ಹಾಗೂ ಎಸ್. ಎ. ಗೋವಿಂದರಾಜ್ ಬಿಡುಗಡೆ ಮಾಡಿದ್ದಾರೆ. "ಸಂತೋಷ್ ನಮ್ಮ ಕುಟುಂಬದವನು, ನಮ್ಮ ಪ್ರೀತಿಯ ತಂಗಿ ಮಗ, ಈಗಿನ ಹುಡುಗರಿಗೆ ಉತ್ತಮ ಸಂದೇಶ ಇಟ್ಟುಕೊಂಡು ಈ ಚಿತ್ರ ಮಾಡಿದ್ದಾನೆ. ಒಳ್ಳೇದಾಗಲಿ" ಎಂದು ಶುಭ ಹಾರೈಸಿದರು.
ಯಾರೆಲ್ಲಾ ಈ ಸಿನಿಮಾದಲ್ಲಿ ನಟಿಸಿದ್ದಾರೆ?
ಯುವ ಸರ್ಕಾರ್ ಚಿತ್ರದಲ್ಲಿ ವೀರೇನ್ ಕೇಶವ್ ಅವರು ನಾಯಕನಾಗಿ ನಟಿಸಿದ್ದು, ನಾಯಕಿಯರಾಗಿ ಬಿಗ್ ಬಾಸ್ ಖ್ಯಾತಿಯ ಜಾಹ್ನವಿ, ಶೃತಿ ದೇಶಪಾಂಡೆ ಹಾಗೂ ಅಲ್ಫಿಯಾ ನಟಿಸಿದ್ದಾರೆ. ಈ ಚಿತ್ರವನ್ನು ಕನ್ನಡ, ಹಿಂದಿ ಹಾಗೂ ತಮಿಳು ಭಾಷೆಯಲ್ಲಿ ನೇರವಾಗಿ ಚಿತ್ರೀಕರಿಸಲಾಗಿದೆ. ಹಾಗಾಗಿ ಚಿತ್ರದಲ್ಲಿ ಮೂರು ಭಾಷೆಯ ಕಲಾವಿದರೂ ನಟಿಸಿದ್ದಾರೆ. ನಟ ಧರ್ಮಕೀರ್ತಿರಾಜ್ ಹಾಗೂ ಅವರ ತಂದೆ ಕೀರ್ತಿರಾಜ್ ಕೂಡ ಚಿತ್ರದ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ.
ನಿರ್ದೇಶನದ ಜೊತೆಗೆ ನಿರ್ಮಾಣ ಮಾಡಿರುವ ಸಂತೋಷ್
"ತಾಯಿ ಮಗನ ಮಧ್ಯೆ ನಡೆಯುವ ಎಮೋಷನಲ್ ಕಥೆ ಈ ಚಿತ್ರದಲ್ಲಿದೆ. ತಮಿಳಿನಲ್ಲಿ ಯುವನ್ ರಾಬಿನ್ ಹುಡ್, ಹಿಂದಿಯಲ್ಲಿ ಯುವ ಸರ್ಕಾರ್ ಎಂಬ ಹೆಸರನ್ನಿಟ್ಟಿದ್ದೇವೆ. ಆಕೆ ತನ್ನ ಮಗನನ್ನು ಗಾಂಧಿಯ ಥರ ಬೆಳೆಸುತ್ತಾಳೆ. ಆದರೆ ಆ ಮಗ ಯಾಕೆ ರಾಬಿನ್ ಹುಡ್ ರೀತಿ ಆಗ್ತಾನೆ ಅನ್ನೋದೇ ಈ ಚಿತ್ರದ ಕಥೆ. ಆ ರಾಬಿನ್ ಹುಡ್ ಬಡವರಿಗೆ ಸಹಾಯ ಮಾಡ್ತಿದ್ದ, ಆತನನ್ನು ಒಬ್ಬ ದರೋಡೆಕೋರನ ಥರ ತೋರಿಸಿದ್ದರು. ಆದರೆ ನಾವಿಲ್ಲಿ ಜನಸ್ನೇಹಿಯಾಗಿ ತೋರಿಸಿದ್ದೇವೆ. ನೇರವಾಗಿ ಮೂರು ಭಾಷೆಯಲ್ಲಿ ಚಿತ್ರೀಕರಿಸಿದ್ದೇವೆ" ಎನ್ನುತ್ತಾರೆ ಸಂತೋಷ್ ಕುಮಾರ್.
ಈ ಚಿತ್ರದಲ್ಲಿ 5 ಹಾಡುಗಳಿದ್ದು, 4 ಫೈಟ್ಗಳಿವೆ. ಚೆನ್ನೈ, ಚಿಕ್ಕಮಗಳೂರು, ಮೇಲುಕೋಟೆಯ ಸುತ್ತಮುತ್ತ ಚಿತ್ರದ ಚಿತ್ರೀಕರಣ ಮಾಡಲಾಗಿದ್ದು, ಏಪ್ರಿಲ್ನಲ್ಲಿ ಚಿತ್ರದ ಫಸ್ಟ್ ಕಾಪಿ ಹೊರಬರಲಿದೆ. ಮೇ ಅಥವಾ ಜೂನ್ ತಿಂಗಳಿನಲ್ಲಿ ರಿಲೀಸ್ ಮಾಡುವ ಆಲೋಚನೆ ಇದೆ.