ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್’ ವೇದಿಕೆ ಮೇಲೆ ನಿಲ್ಲಬೇಕು, ದೊಡ್ಮನೆ ಪ್ರವೇಶಿಸಬೇಕು ಎಂಬುದು ಅದೆಷ್ಟೋ ಜನರ ಕನಸು. ಈ ಬಾರಿಯ ‘ಬಿಗ್ ಬಾಸ್ ಅಗ್ನಿಪರೀಕ್ಷೆ’ ಮೂಲಕ ಸಾಮಾನ್ಯ ಜನರಿಗೂ ಆ ಸುವರ್ಣಾವಕಾಶ ಕಲ್ಪಿಸಲಾಗಿತ್ತು.
ಈ ಆಡಿಷನ್ ವೇದಿಕೆಯಲ್ಲಿ ‘ನಾನು ಹಳ್ಳಿ ಹುಡುಗಿ ಕುಮಾರಿ...’ ಎಂದು ಪರಿಚಯಿಸಿಕೊಂಡು, ತಮ್ಮ ಮುಗ್ಧ ಮಾತು ಹಾಗೂ ನಡವಳಿಕೆಯಿಂದ ತೀರ್ಪುಗಾರರಷ್ಟೇ ಅಲ್ಲದೆ ಇಡೀ ಕರ್ನಾಟಕದ ಜನರ ಮನಗೆದ್ದವರು ಲಾವಣ್ಯ ಕುಮಾರಿ. ಅವರ ಪ್ರತಿಭೆ ಹಾಗೂ ವ್ಯಕ್ತಿತ್ವಕ್ಕೆ ಮೆಚ್ಚಿದ ತೀರ್ಪುಗಾರರು ಅವರನ್ನು ‘ಸ್ಟಾರ್ ಕಂಟೆಂಡರ್’ ಆಗಿ ಆಯ್ಕೆ ಮಾಡಿದ್ದರು.
ಬಿಗ್ ಬಾಸ್ಗೆ ಅವಕಾಶ ಮಿಸ್ ಮಾಡಿಕೊಂಡ ಕುಮಾರಿ
ಆದರೆ, ಅಂತಿಮವಾಗಿ ಬಿಗ್ ಬಾಸ್ ಮನೆಯೊಳಗೆ ಪ್ರವೇಶಿಸುವ ಹೊಸ್ತಿಲಲ್ಲೇ ಕುಮಾರಿಗೆ ನಿರಾಸೆ ಎದುರಾಗಿದೆ. ಆರೋಗ್ಯ ಸಮಸ್ಯೆಯ ಕಾರಣದಿಂದಾಗಿ ಅವರು ಆಟ ಮುಂದುವರಿಸುವುದು ಸೂಕ್ತವಲ್ಲ ಎಂದು ವೈದ್ಯರು ಸಲಹೆ ನೀಡಿದ್ದಾರೆ. ವೈದ್ಯಕೀಯ ಕಾರಣಗಳಿಂದಾಗಿ ಬಿಗ್ ಬಾಸ್ ಮನೆಗೆ ಹೋಗುವ ಅವರ ಪ್ರಯಾಣವನ್ನು ಅರ್ಧಕ್ಕೇ ಮೊಟಕುಗೊಳಿಸಿ ಹೊರಬರಬೇಕಾದ ಅನಿವಾರ್ಯತೆ ಎದುರಾಯಿತು.
ಈ ಸಂದರ್ಭದಲ್ಲಿ ಭಾವುಕರಾಗಿ ಕಣ್ಣೀರಿಟ್ಟ ಕುಮಾರಿ, "ನಾನು ಹುಟ್ಟಿದಾಗಿನಿಂದ ಒಮ್ಮೆಯೂ ಬೆಂಗಳೂರು ನೋಡಿರಲಿಲ್ಲ. ಊರಿಂದ ಬರುವಾಗ ಎಲ್ಲವನ್ನೂ ಎಂಜಾಯ್ ಮಾಡಿಕೊಂಡು ಬಂದಿದ್ದೆ. ವಾಪಸ್ ಹೋದರೆ ಮತ್ತೆ ಯಾವಾಗ ಬರುತ್ತೇನೋ ಗೊತ್ತಿಲ್ಲ, ಇದೇ ಕೊನೆ ಆಗುತ್ತದಲ್ಲ ಎನ್ನುವುದೇ ಬೇಸರ" ಎಂದು ತಮ್ಮ ನೋವು ತೋಡಿಕೊಂಡಿದ್ದರು.
5 ಲಕ್ಷ ರೂ. ಜೊತೆ ಜಾಬ್ ಆಫರ್
ಬಿಗ್ ಬಾಸ್ ಮನೆ ಪ್ರವೇಶಿಸಲು ಸಾಧ್ಯವಾಗದಿದ್ದರೂ ಕುಮಾರಿಯ ಮುಗ್ಧತೆಗೆ ಅದೃಷ್ಟದ ಬಾಗಿಲು ತೆರೆದಿದೆ. ಬಿಗ್ ಬಾಸ್ ಕಾರ್ಯಕ್ರಮದ ಪ್ರಾಯೋಜಕರಾದ ‘ಇಕೋ ಪ್ಲ್ಯಾನೆಟ್ ಎಲಿವೇಟರ್’ ಸಂಸ್ಥೆಯು ಕುಮಾರಿಯ ನೆರವಿಗೆ ಧಾವಿಸಿದ್ದು, ಅವರಿಗೆ ₹5 ಲಕ್ಷ ನಗದು ಬಹುಮಾನವನ್ನು ನೀಡಿ ಗೌರವಿಸಿದೆ. ಇಷ್ಟೇ ಅಲ್ಲದೆ, ಕುಮಾರಿಯ ಶಿಕ್ಷಣ ಮುಗಿದ ನಂತರ ಸಂಸ್ಥೆಯಲ್ಲಿ ಉದ್ಯೋಗ ನೀಡುವುದಾಗಿ ಭರವಸೆ ನೀಡಿದೆ. ಕರ್ನಾಟಕದಲ್ಲಿರುವ ಸಂಸ್ಥೆಯ ಯಾವುದೇ ಶಾಖೆಯಲ್ಲಿ ಅಥವಾ ದುಬೈನಲ್ಲಿರುವ ಸಂಸ್ಥೆಯ ಶಾಖೆಯಲ್ಲಿ ಕೆಲಸ ಮಾಡುವ ಉತ್ತಮ ಅವಕಾಶವನ್ನೂ ಸಂಸ್ಥೆ ಘೋಷಿಸಿದೆ.
ವಿನಯ್ ಗೌಡ ಭಾವುಕ ಮಾತು
ಇನ್ನೊಂದೆಡೆ, ಅಗ್ನಿಪರೀಕ್ಷೆಯ ತೀರ್ಪುಗಾರರಾಗಿದ್ದ ನಟ ವಿನಯ್ ಗೌಡ ಅವರು ಕುಮಾರಿ ನಿರ್ಗಮನದ ವೇಳೆ ಅತ್ಯಂತ ಭಾವುಕರಾಗಿ ಬೆಂಬಲ ಸೂಚಿಸಿದ್ದಾರೆ. ಕುಮಾರಿ ತಮಗೆ ರಾಖಿ ಕಟ್ಟಿದ ಫೋಟೋವನ್ನು ಹಂಚಿಕೊಂಡಿರುವ ವಿನಯ್ ಗೌಡ, "ಲೋ ಪುಟ್ಟಿ, ನೀನ್ ಕಟ್ಟಿರೋ ಈ ರಾಖಿ ನಂಗೆ ಸಕತ್ ಸ್ಪೆಷಲ್ ಅಂಡ್ ಪ್ರೆಶಿಯಸ್. ಪ್ರಾಮಿಸ್ ಮಾಡ್ತೀನಿ, ನನ್ನಲ್ಲಿ ಉಸಿರಿರೋವರೆಗೂ ನಿನ್ನ ರಕ್ಷಣೆಗೆ ಸದಾ ಇರ್ತೀನಿ. ಯಾರಿಗೂ ಹೆದರಬೇಡ, ನಿನ್ನ ಹಿಂದೆ ಈ ಅಣ್ಣ ಯಾವಾಗಲೂ ಇರ್ತಾನೆ" ಎಂದು ಧೈರ್ಯ ತುಂಬುವ ಮೂಲಕ ಅಣ್ಣ-ತಂಗಿಯ ಸುಂದರ ಬಾಂಧವ್ಯವನ್ನು ಮೆರೆದಿದ್ದಾರೆ. ಬಿಗ್ ಬಾಸ್ ಅವಕಾಶ ತಪ್ಪಿದರೂ ಕುಮಾರಿಗೆ ಸಿಕ್ಕ ಜನರ ಪ್ರೀತಿ, ಆರ್ಥಿಕ ನೆರವು ಮತ್ತು ಭವಿಷ್ಯದ ಭರವಸೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.