Bigg Boss Kannada 12: ಬಿಗ್ಬಾಸ್ ಸ್ಪರ್ಧಿಗಳು ಬಿಡದಿಯ ಖಾಸಗಿ ರೆಸಾರ್ಟ್ಗೆ ಶಿಫ್ಟ್
Jollywood Studio: ಬಿಗ್ ಬಾಸ್ ಕನ್ನಡ ಸೀಸನ್ 12 ಎರಡನೇ ವಾರಕ್ಕೆ ಕಾಲಿಟ್ಟಿತ್ತು. ಆದರೆ, ಪರಿಸರ ನಿಯಮ ಉಲ್ಲಂಘಿಸಿದ್ದರಿಂದ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು, ಬಿಗ್ ಬಾಸ್ ರಿಯಾಲಿಟಿ ಶೋ ನಡೆಯುತ್ತಿರುವ ಜಾಲಿವುಡ್ ಸ್ಟುಡಿಯೋಗೆ ನೋಟಿಸ್ ಜಾರಿ ಮಾಡಿತ್ತು. ಇದೀಗ ಸ್ಟುಡಿಯೋ ಬಂದ್ ಮಾಡಲಾಗಿದೆ.

-

ಬೆಂಗಳೂರು: ಪರಿಸರ ನಿಯಮ ಉಲ್ಲಂಘನೆ ಹಿನ್ನೆಲೆಯಲ್ಲಿ ಬಿಡದಿಯ ಜಾಲಿವುಡ್ ಸ್ಟುಡಿಯೋಗೆ ಅಧಿಕಾರಿಗಳು ಬೀಗ ಜಡಿದಿದ್ದಾರೆ. ಇದರಿಂದ ಸ್ಟುಡಿಯೋದಲ್ಲಿ ನಡೆಯುತ್ತಿದ್ದ 'ಬಿಗ್ ಬಾಸ್ ಕನ್ನಡ ಸೀಸನ್ 12' ರಿಯಾಲಿಟಿ ಶೋ ಕೂಡ ಬಂದ್ ಆಗಿದ್ದು, ಸ್ಪರ್ಧಿಗಳನ್ನು ಬಿಡದಿ ಬಳಿಯ ಖಾಸಗಿ ರೆಸಾರ್ಟ್ಗೆ ಸ್ಥಳಾಂತರಿಸಲಾಗಿದೆ. ಇನ್ನು ಕಾರ್ಯಕ್ರಮಕ್ಕೆ ತಡೆ ನೀಡಿರುವುದನ್ನು ಪ್ರಶ್ನಿಸಿ ಬಿಗ್ ಬಾಸ್ (Bigg Boss Kannada 12) ಆಯೋಜಕರು ನಾಳೆ ಹೈಕೋರ್ಟ್ಗೆ ಅರ್ಜಿ ಸಲ್ಲಿಸಲು ಸಿದ್ಧತೆ ನಡೆಸಿದ್ದಾರೆ.
ಬಿಗ್ ಬಾಸ್ ಕನ್ನಡ ಸೀಸನ್ 12 ಎರಡನೇ ವಾರಕ್ಕೆ ಕಾಲಿಟ್ಟಿತ್ತು. ಆದರೆ, ಪರಿಸರ ನಿಯಮ ಉಲ್ಲಂಘಿಸಿದ್ದರಿಂದ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು, ಬಿಗ್ ಬಾಸ್ ರಿಯಾಲಿಟಿ ಶೋ ನಡೆಯುತ್ತಿರುವ ಜಾಲಿವುಡ್ ಸ್ಟುಡಿಯೋಗೆ ನೋಟಿಸ್ ಜಾರಿ ಮಾಡಿತ್ತು. ರಾಮನಗರ ಜಿಲ್ಲೆಯ ಬಿಡದಿ ಕೈಗಾರಿಕಾ ಪ್ರದೇಶದಲ್ಲಿರುವ ಈ ಸ್ಟುಡಿಯೋ, ಕೊಳಚೆ ನೀರನ್ನು ಸಂಸ್ಕರಿಸದೆ ನೇರವಾಗಿ ಮೋರಿಗೆ ಹರಿಬಿಡುತ್ತಿದೆ. ಇದು ಜಲ ಮಾಲಿನ್ಯ ನಿಯಂತ್ರಣ ಮತ್ತು ಸಂರಕ್ಷಣೆ ಕಾಯ್ದೆ 1974ರ ಉಲ್ಲಂಘನೆಯಾಗಿದೆ. ಈ ಹಿನ್ನೆಲೆಯಲ್ಲಿ ಸ್ಟುಡಿಯೋವನ್ನು ಮುಚ್ಚಲು ಮತ್ತು ವಿದ್ಯುತ್ ಸಂಪರ್ಕ ಕಡಿತಗೊಳಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿತ್ತು.
ಈ ಸುದ್ದಿಯನ್ನೂ ಓದಿ | Bigg Boss Kannada 12: ಬಿಗ್ ಬಾಸ್ ಶೋಗೆ ಬಿಗ್ ಸಂಕಷ್ಟ, ಪ್ರತಿಭಟನೆ, ಪೊಲೀಸ್ ಅನುಮತಿಯೂ ಇಲ್ಲ
ನೋಟಿಸ್ ನೀಡಿದ ಒಂದು ವಾರದ ನಂತರ, ಮಂಗಳವಾರ ಸಂಜೆ ರಾಮನಗರ ಜಿಲ್ಲಾಡಳಿತವು ಪೊಲೀಸ್ ಸಿಬ್ಬಂದಿ ಜತೆ ಜಾಲಿವುಡ್ ಸ್ಟೂಡಿಯೋಗೆ ತೆರಳಿ ಹೊರ ಭಾಗದಿಂದ ಬೀಗ ಹಾಕಿದೆ. ಸ್ಟುಡಿಯೋ ಬಂದ್ ಆದ ಕಾರಣ ಬಿಗ್ಬಾಸ್ ಶೋನ 17 ಸ್ಪರ್ಧಿಗಳನ್ನು ಆಯೋಜಕರು, ಬಿಡದಿಯ ಖಾಸಗಿ ರೆಸಾರ್ಟ್ಗೆ ಶಿಫ್ಟ್ ಮಾಡಿದ್ದಾರೆ. ಸ್ಪರ್ಧಿಗಳಿಗಾಗಿ 12 ರೂಮ್ ಬುಕ್ ಮಾಡಲಾಗಿದೆ. ಪೊಲೀಸ್ ಭದ್ರತೆಯಲ್ಲಿ ಸ್ಪರ್ಧಿಗಳನ್ನು ಸ್ಥಳಾಂತರ ಮಾಡಲಾಗಿದೆ.