ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ʻಗೌರಿ ಕಲ್ಯಾಣʼ ಧಾರಾವಾಹಿಗೆ ನಾಯಕಿಯಾದ ಶಿಲ್ಪಾ ಕಾಮತ್‌; ಈ ಸೀರಿಯಲ್‌ ಯಾವಾಗ ಪ್ರಸಾರ?

Gowri Kalyana Serial: ನಟಿ ಶಿಲ್ಪಾ ಕಾಮತ್‌ ಮುಖ್ಯಭೂಮಿಕೆಯಲ್ಲಿರುವ ಗೌರಿ ಕಲ್ಯಾಣ ಧಾರಾವಾಹಿಯು ಕಲರ್ಸ್‌ ಕನ್ನಡದಲ್ಲಿ ಜನವರಿ 27ರಿಂದ ಪ್ರತಿ ರಾತ್ರಿ 8ಕ್ಕೆ ಪ್ರಸಾರವಾಗಲಿದೆ. ತನ್ನ ಮೂವರು ಹೆಣ್ಣು ಮಕ್ಕಳನ್ನು ಶ್ರೀಮಂತ ಮನೆತನಕ್ಕೆ ಸೊಸೆಯಾಗಿ ಕಳುಹಿಸಬೇಕೆಂಬ ತಾಯಿ ಕಾಂತಲಕ್ಷ್ಮಿಯ ಹಂಬಲವೇ ಈ ಕಥೆಯ ಜೀವಾಳ.

ಕನ್ನಡ ಕಿರುತೆರೆ ವೀಕ್ಷಕರಿಗೆ ಮನರಂಜನೆಯ ಮಹಾಪೂರವನ್ನೇ ಹರಿಸುವ ಕಲರ್ಸ್‌ ಕನ್ನಡ ವಾಹಿನಿ ಇದೀಗ ಹೊಸ ಕಥೆಯೊಂದಿಗೆ ಆಗಮಿಸುತ್ತಿದೆ. ʻಗೌರಿ ಕಲ್ಯಾಣʼ ಹೆಸರಿನ ಹೊಸ ಸೀರಿಯಲ್‌ ಆರಂಭಕ್ಕೆ ಇದೀಗ ದಿನಾಂಕ ನಿಗದಿಯಾಗಿದೆ. ತನ್ನ ಮೂರು ಹೆಣ್ಣು ಮಕ್ಕಳನ್ನು ಉತ್ತಮ ಶ್ರೀಮಂತ ಮನೆತನಕ್ಕೆ ಸೇರಿಸಬೇಕು ಅಂತ ತನಗೆ ತಾನೆ ಮಾತು ಕೊಟ್ಕೊಂಡಿರೋ ಅಮ್ಮನ ಕಥೆಯನ್ನು ʻಗೌರಿ ಕಲ್ಯಾಣʼ ಧಾರಾವಾಹಿಯಲ್ಲಿ ಹೇಳುವುದಕ್ಕೆ ಮುಂದಾಗಿದೆ ಕಲರ್ಸ್‌ ಕನ್ನಡ ವಾಹಿನಿ. ಜನವರಿ 27ರ ಮಂಗಳವಾರದಿಂದ ರಾತ್ರಿ 8ಕ್ಕೆ ಕಲರ್ಸ್‌ ಕನ್ನಡದಲ್ಲಿ ಈ ಧಾರಾವಾಹಿ ಪ್ರಸಾರವಾಗಲಿವೆ.

ʻಗೌರಿ ಕಲ್ಯಾಣʼ ಕಥೆ ಏನು?

ಮಧ್ಯಮ ವರ್ಗದ, ಸಂಪ್ರದಾಯಸ್ಥ ಮನೆತನದ ಸಭ್ಯ ಗೃಹಿಣಿ ಕಾಂತಲಕ್ಷ್ಮಿಗೆ ಮೂವರು ಸುಂದರ ಹೆಣ್ಣುಮಕ್ಕಳು. ಮೋನಿಕಾ, ಗೌರಿ ಮತ್ತು ಚಿನ್ಮಯಿ. ತನ್ನ ಮೂರೂ ಮಕ್ಕಳನ್ನು ಶ್ರೀಮಂತ ಕುಟುಂಬಕ್ಕೆ ಸೊಸೆಯಾಗಿ ಕಳಿಸಬೇಕು ಅನ್ನೋ ಮಹದಾಸೆ ಆಕೆಯದ್ದು. ಬಡತನದಲ್ಲಿ ತಾನು ಅನುಭವಿಸಿದ ಕಷ್ಟ ತನ್ನ ಮಕ್ಕಳು ಅನುಭವಿಸಬಾರದು ಎಂದದು ಹಂಬಲಿಸೋ ಆ ತಾಯಿಗೆ, ತನ್ನ ಮಕ್ಕಳ ಸುಂದರ ಭವಿಷ್ಯದ್ದೇ ಕನಸು.

ದೀನಬಂಧು ಮನೆತನದ ಶ್ರೀಮಂತಿಕೆಗೆ ಮರುಳಾಗಿ ತನ್ನ ದೊಡ್ಡಮಗಳನ್ನು ಆ ಮನೆಗೆ ಸೊಸೆಯಾಗಿಸಲು ಹಂಬಲಿಸ್ತಾಳೆ ತಾಯಿ ಕಾಂತಲಕ್ಷ್ಮಿ. ಅದಕ್ಕಾಗಿ ಪರಿಪರಿಯಾದ ಪ್ರಯತ್ನ ಮಾಡ್ತಾಳೆ. ಆಕೆಯ ಆ ಪ್ರಯತ್ನ, ಆಕೆ ತನ್ನ ಗುರಿ ಸಾಧನೆಗೆ ಹಿಡಿದ ದಾರಿ ಆಕೆಯ ಮಕ್ಕಳಿಗೆ ಹೂವಿನ ಹಾಸಿಗೆ ಹಾಸುತ್ತೋ? ಅಥವಾ ಮುಳ್ಳಿನ ದಾರಿಯಾಗುತ್ತೋ? ಕಾದುನೋಡಬೇಕು. ಮುಂದಿನ ದಿನಗಳಲ್ಲಿ ಇವರು ಎದುರಿಸುವ ಭಾವನಾತ್ಮಕ ಸವಾಲುಗಳು ಎಂಥವು? ಮದುವೆಯ ನಂತರ ಘಟಿಸೋ ತಿರುವುಗಳೇನು? ಅನ್ನೋದೆ ʻಗೌರಿ ಕಲ್ಯಾಣʼ ಧಾರಾವಾಹಿಯ ಜೀವಾಳ.

ಗೌರಿಯಾಗಿ ನಟಿ ಶಿಲ್ಪಾ ಕಾಮತ್

ಇಲ್ಲಿ ಕಥಾನಾಯಕಿ ಗೌರಿ ಪಾತ್ರದಲ್ಲಿ ಶಿಲ್ಪಾ ಕಾಮತ್‌ ಕಾಣಿಸಲಿದ್ದಾರೆ. ಗೌರಿ ಓರ್ವ ಬೆರಗುಗಣ್ಣಿನ ಕನಸುಗಾರ್ತಿ. ಆಕೆಗೆ ಸಂಬಂಧಗಳೇ ಉಸಿರು. ಸ್ವಾಭಿಮಾನಕ್ಕೆ ಪೆಟ್ಟು ಬಿದ್ದರೆ ಸಿಡಿದೇಳುವ ಗಟ್ಟಿಗಿತ್ತಿ! ತಾನಾಯ್ತು ತನ್ನ ಪುಟ್ಟ ಕುಟುಂಬದ ಹಿತವೇ ಆಕೆಯ ಡೆಸ್ಟಿನೇಷನ್.‌ ತನ್ನ ಕುಟುಂಬಕ್ಕೆ ಆಸರೆಯಾಗಿ ನಿಲ್ಲಬೇಕು ಎಂದು ಕನಸು ಕಾಣೋ ಸ್ವಾವಲಂಬಿ ಜೀವ. ಒಬ್ಬ ಒಳ್ಳೆಯ ಡಿಸೈನರ್ ಆಗಬೇಕೆಂಬ ಛಲ ಅವಳಲ್ಲಿದೆ. ಯಾರ ಹಂಗಲ್ಲೂ ಬದುಕದೇ ಸ್ವಂತ ಶಕ್ತಿಯ ಮೇಲೆ ನಿಲ್ಲಬೇಕೆಂಬ ಹಠ ಅವಳದ್ದು. ಆದರೆ, ಬದುಕು ಅಡೆತಡೆ ಇಲ್ಲದ ಸಲೀಸು ರಸ್ತೆಯಲ್ಲವಲ್ಲ!

ʻಬಿಗ್‌ ಬಾಸ್‌ʼ ಸೂರಜ್ ಸಿಂಗ್‌ಗೆ ಒಲಿದ 'ಪವಿತ್ರ ಬಂಧನ'; ಇನ್ಮೇಲೆ ಪ್ರತಿದಿನ ಕಲರ್ಸ್‌ ಕನ್ನಡದಲ್ಲಿ ಬರ್ತಾರೆ ವೈಲ್ಡ್ ಕಾರ್ಡ್ ಹೀರೋ!

ಮೇಲ್ವರ್ಗ ಕೆಳವರ್ಗಗಳ ನಡುವಿನ ಸಂಘರ್ಷ

"ಮಧ್ಯಮ ವರ್ಗದ ಜನರ ಸರಳತೆ ಮತ್ತು ಶ್ರೀಮಂತ ಸಮಾಜದ ನಿರೀಕ್ಷೆಗಳ ನಡುವೆ ನಡೆಯುವ ಭಾವನಾತ್ಮಕ ಹೋರಾಟ 'ಗೌರಿ ಕಲ್ಯಾಣ'ದ ಹೈಲೈಟ್‌. ಇಲ್ಲಿ ಹಣ ಮತ್ತು ಅಧಿಕಾರದ ಅಮಲಿದೆ, ಮೇಲ್ವರ್ಗ ಕೆಳವರ್ಗಗಳ ನಡುವಿನ ಸಂಘರ್ಷವೂ ಕಾಣಿಸುತ್ತದೆ. ಸಂಬಂಧಗಳಲ್ಲಿನ ಮೌಲ್ಯಗಳನ್ನು ಸಾರುವುದಷ್ಟೇ ಅಲ್ಲದೆ, ಅಕ್ಕ-ತಂಗಿಯರ ನಡುವಿನ ಬಾಂಧವ್ಯಕ್ಕೂಈ ಧಾರಾವಾಹಿ ಕನ್ನಡಿಯಾಗಲಿದೆ. ಶ್ರೀಮಂತ ಮತ್ತು ಬಡವ ಅನ್ನೋ ಎರಡು ವರ್ಗಗಳ ನಡುವಿನ ಕಂದಕ ಎಷ್ಟು ಆಳವಿದೆ ಅನ್ನೋದನ್ನೂ ಈ ಧಾರಾವಾಹಿ ಮಾರ್ಮಿಕವಾಗಿ ಬಿಚ್ಚಿಡಲಿದೆ" ಎಂಬುದು ʻಗೌರಿ ಕಲ್ಯಾಣʼ ಧಾರಾವಾಹಿ ತಂಡದ ಮಾತು.

ವಿವೇಕ್‌ ಚಕ್ರವರ್ತಿಯಾಗಿ ಶರತ್‌ ಕುಮಾರ್‌, ಕಾಂತಲಕ್ಷ್ಮೀ ಪಾತ್ರದಲ್ಲಿ ದೀಪಿಕಾ ಶರಣ್‌ ಶೆಟ್ಟಿ, ಶಾಂತವೀರಣ್ಣ ಪಾತ್ರದಲ್ಲಿ ಅಶೋಕ್‌ ಜಂಬೆ, ಮೋನಿಕಾ ಪಾತ್ರದಲ್ಲಿ ಸಹನಾ, ಚಿನ್ಮಯಿ ಪಾತ್ರದಲ್ಲಿ ನಿಹಾರಿಕಾ ಶೆಟ್ಟಿ, ಚಕ್ರವರ್ತಿ ಪಾತ್ರದಲ್ಲಿ ಗುರುದತ್‌, ಸರಿತಾ ಪಾತ್ರದಲ್ಲಿ ಶೀಲಾ, ಚಂಚಲ ಪಾತ್ರದಲ್ಲಿ ಜ್ಯೋತಿ ನಟಿಸುತ್ತಿದ್ದಾರೆ. ರಾಮ್‌ಜಿ ಈ ಸೀರಿಯಲ್‌ ನಿರ್ಮಾಣ ಮಾಡುತ್ತಿದ್ದು, ಭರತ್‌ ಕುಮಾರ್‌ ಎನ್‌ ಮೈಸೂರು ಅವರ ನಿರ್ದೇಶನ ಇರಲಿದೆ.