ಬೆಂಗಳೂರು: ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸದಂತೆ ನಟ ದರ್ಶನ್ (Actor Darshan) ಪವಿತ್ರಾ ಗೌಡ ಸೇರಿದಂತೆ ಏಳು ಆರೋಪಿಗಳಿಗೆ ಕರ್ನಾಟಕ ಹೈಕೋರ್ಟ್ ನೀಡಿದ್ದ ಜಾಮೀನನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ. ನಾಳೆ ದರ್ಶನ್ ನಟನೆಯ ಬಹು ನಿರೀಕ್ಷಿತ ಚಿತ್ರ ದಿ ಡೆವಿಲ್ ಸಿನಿಮಾದ ಇದ್ರೆ ನೆಮ್ಮದಿಯಾಗಿ ಇರ್ಬೇಕು ಹಾಡು ರಿಲೀಸ್ ಆಗುತ್ತಿದೆ. ಆದರೆ ಇದೀಗ ದರ್ಶನ್ ಮತ್ತೆ ಜೈಲು ಪಾಲಾಗಿರುವುದರಿಂದ ಚಿತ್ರಕ್ಕೆ ಸಮಸ್ಯೆ ಎದುರಾಗಬಹುದಾ ಎಂಬ ಪ್ರಶ್ನೆ ಕಾಡುತ್ತಿದೆ. ಈಗಾಗಲೇ ಚಿತ್ರ ತಂಡ ವಿದೇಶದಲ್ಲಿ ಸೇರಿದಂತೆ ಹಲವು ಕಡೆ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದು, ಇನ್ನೇನು ಕೆಲವೇ ಕೆಲಸಗಳು ಉಳಿದಿವೆ.
ಸುಪ್ರೀಂ ಕೋರ್ಟ್ನಲ್ಲಿ ಬೇಲ್ ಸಿಗದಿದ್ರೆ ಡೆವಿಲ್ ಚಿತ್ರ ತಂಡಕ್ಕೆ ತೊಂದರೆಯಾಗಬಾರದೆಂದು ಶೂಟಿಂಗ್ ಸಂಪೂರ್ಣ ಮುಗಿಸಲಾಗಿದೆ. ಕಳೆದ ವಾರವಷ್ಟೇ ರಾಜಸ್ಥಾನದಲ್ಲಿ ಸಂಪೂರ್ಣ ಚಿತ್ರೀಕರಣ ಮುಗಿಸಿ ದರ್ಶನ್ ವಾಪಸ್ ಆಗಿದ್ದರು. ಡೆವಿಲ್ ಸಿನಿಮಾದ ತನ್ನ ಪತ್ರದ ಡಬ್ಬಿಂಗ್ ಕೂಡ ಮಾಡಿ ಕೊಟ್ಟಿದ್ದಾರೆ. ಸಿನಿಮಾ ಸಂಬಂಧಿಸಿದ ಬಹುತೇಕ ಕೆಲಸಗಳು ಪೂರ್ಣಗೊಂಡಿವೆ. ಡೆವಿಲ್ ಸಿನಿಮಾಗೆ ಸುಮಾರು 40 ಕೋಟಿಗೂ ಅಧಿಕ ಬಂಡವಾಳವನ್ನು ಹೂಡಿದ್ದಾರೆ.
ಈ ಮೊದಲು ದರ್ಶನ್ ಜೈಲಿಗೆ ಹೋದಾಗ ಚಿತ್ರೀಕರಣ ಅರ್ಧಕ್ಕೆ ನಿಂತಿತ್ತು. ಬಳಿಕ ಹೈಕೋರ್ಟ್ನಲ್ಲಿ ಅವರಿಗೆ ಜಾಮೀನು ನೀಡಲಾಗಿತ್ತು. ಜಾಮೀನಿನ ಮೇಲೆ ಹೊರಗಿದ್ದ ದರ್ಶನ್ ಚಿತ್ರೀಕರಣಕ್ಕೆಂದು ಥೈಲ್ಯಾಂಡ್ಗೆ ತೆರಳಿದ್ದರು. ನಂತರ ಅಲ್ಲಿಂದ ಬಂದು ಡಬ್ಬಿಂಗ್ ಕಾರ್ಯ ಮುಗಿಸಿದ್ದರು. ನಾಳೆ ಡೆವಿಲ್ ಚಿತ್ರದ ಸಾಂಗ್ ಕೂಡ ರಿಲೀಸ್ ಆಗಲಿದೆ. ಚಿತ್ರದ ರಿಲೀಸ್ ಡೇಟ್ ಫಿಕ್ಸ್ ಮಾಡಲು ಚಿತ್ರತಂಡ ಕಾಯುತ್ತಿತ್ತು. ಗಣೇಶ ಚತುರ್ಥಿ ಹಬ್ಬದ ಸಮಯದಲ್ಲಿ ಚಿತ್ರದ ಬಿಡುಗಡೆ ದಿನಾಂಕವನ್ನು ಬಹಿರಂಗಪಡಿಸಲಾಗುವುದು ಎಂದು ಚಿತ್ರತಂಡ ಹೇಳಿತ್ತು. ಆದರೆ ಇದೀಗ ದರ್ಶನ್ ಮತ್ತೆ ಜೈಲು ಸೇರಬೇಕಾಗಿದ್ದರಿಂದ ಸಿನಿಮಾ ರಿಲೀಸ್ಗೆ ಕೊಂಚ ತಡವಾಗಬಹುದು.
ಈ ಸುದ್ದಿಯನ್ನೂ ಓದಿ: Actor Darshan: ದರ್ಶನ್ ಬೇಲ್ ರದ್ದು, ರೇಣುಕಾ ಸ್ವಾಮಿ ಕುಟುಂಬದ ಫಸ್ಟ್ ರಿಯಾಕ್ಷನ್ ಹೇಗಿತ್ತು?
ದರ್ಶನ್ ಜಾಮೀನು ರದ್ದುಗೊಳಿಸುವಂತೆ ಕರ್ನಾಟಕ ಸರ್ಕಾರ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಗುರುವಾರ ಮಹತ್ವದ ತೀರ್ಪು ನೀಡಿದೆ. ದರ್ಶನ್ ಸೇರಿದಂತೆ ಎಲ್ಲಾ ಆರೋಪಿಗಳ ಜಾಮೀನನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ. ಕೂಡಲೇ ಸರೆಂಡರ್ ಆಗಬೇಕು, ಎಲ್ಲರೂ ಸರೆಂಡರ್ ಆಗಬೇಕು. ಆರೋಪಿಗೆ ಯಾವುದೇ ವಿಐಪಿ ತೀರ್ಪು ನೀಡಬಾರದು ಎಂದು ಕೋರ್ಟ್ ಹೇಳಿದೆ.