ʻಜೋಗಿʼ ಪ್ರೇಮ್ ಅವರ ನಿರ್ದೇಶನದ, ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ, ʻಕೆಡಿʼ ಚಿತ್ರದ ಟ್ರೇಲರ್ ಬಿಡುಗಡೆ ಆಗಿದೆ. ವಿಶೇಷವೆಂದರೆ, ಹಿರಿಯ ನಟ ದತ್ತಣ್ಣ ಅವರು ʻಕೆಡಿʼ ಚಿತ್ರದ ಟ್ರೇಲರ್ ರಿಲೀಸ್ ಮಾಡಿ, ಇಡೀ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಈ ಸಿನಿಮಾವನ್ನು ನೂರಾರು ಕೋಟಿ ವೆಚ್ಚದಲ್ಲಿ ಕೆ. ವೆಂಕಟ್ ನಾರಾಯಣ್ ಅವರು ನಿರ್ಮಾಣ ಮಾಡಿದ್ದಾರೆ.
ಎಲ್ಲರಿಂದ ಧ್ರುವಗೆ ಮೆಚ್ಚುಗೆ
"ಕೆಡಿ ಚಿತ್ರವು ಏಪ್ರಿಲ್ 30ಕ್ಕೆ ರಿಲೀಸ್ ಆಗುತ್ತಿದೆ. ಈ ಸಿನಿಮಾದ ನಿಜವಾದ ಹೀರೋ ಕೆವಿಎನ್. ಅವರಿಗೆ ತುಂಬಾ ಪ್ಯಾಶನ್ ಇದೆ, ಮೂರು ವರ್ಷ ಸಾವಿರಾರು ಜನಕ್ಕೆ ಅನ್ನ ಹಾಕಿದ್ದಾರೆ, ನಮ್ಮನ್ನೆಲ್ಲಾ ಮೇಂಟೆನ್ ಮಾಡಿದ್ದಾರೆ. ಅವರು ನಿಜಕ್ಕೂ ಗುಂಡಿಗೆ ಇರುವ ನಿರ್ಮಾಪಕರು, ಇಂಥ ನಿರ್ಮಾಪಕರು, ಇಂಥ ಸಂಸ್ಥೆ ಇನ್ನೂ ಎತ್ತರಕ್ಕೆ ಬೆಳೆಯಲಿ. ಇನ್ನು ಸೆನ್ಸಾರ್ ಟೀಮ್ ಅಲ್ಲದೆ ಸಿನಿಮಾ ನೋಡಿದ ಎಲ್ಲರೂ ಧ್ರುವ ಅಭಿನಯವನ್ನು ಮೆಚ್ಚಿಕೊಂಡಿದ್ದಾರೆ. ಇಲ್ಲಿ ಪ್ರತಿ ಪಾತ್ರಗಳೂ ಹುಟ್ಟುತ್ತವೆ, ಯಾವ ಪಾತ್ರವೂ ಎಂಡ್ ಆಗಲ್ಲ. ಅದೇ ಕೆಡಿ ಸಿನಿಮಾದ ವಿಶೇಷತೆ" ಎನ್ನುತ್ತಾರೆ ʻಜೋಗಿʼ ಪ್ರೇಮ್.
ಅಹೋಬಲ ಲಕ್ಷ್ಮೀ ನರಸಿಂಹಸ್ವಾಮಿ ಬ್ರಹ್ಮರಥೋತ್ಸವಕ್ಕೆ ಖ್ಯಾತ ನಟ ಅರ್ಜುನ್ ಸರ್ಜಾ, ಧ್ರುವ ಸರ್ಜಾ ಚಾಲನೆ
ಫ್ಯಾಮಿಲಿ ಸಮೇತ ನೋಡಬಹುದಾದ ಸಿನಿಮಾ ಇದು
"ಉತ್ತಮ ಚಿತ್ರಗಳನ್ನು ನೀವೆಲ್ಲಾ ಆರಂಭದಿಂದಲೂ ಪ್ರೋತ್ಸಾಹಿಸುತ್ತಿದ್ದೀರಿ. ನಮ್ಮ ಚಿತ್ರೋದ್ಯಮ ಈಗ 93 ವರ್ಷಗಳನ್ನು ಪೂರೈಸಿದೆ. ಹಾಗೇ ನಮ್ಮ ಚಿತ್ರಕ್ಕೂ ಎರಡೂವರೆ ಗಂಟೆ ಸಮಯ ಮಾಡಿಕೊಂಡು ನೋಡಲು ಬನ್ನಿ. ನಿಮಗೆ ಖಂಡಿತ ಖುಷಿ ಕೊಡುತ್ತೆ. ಕೆಡಿ ಒಂದೊಳ್ಳೆಯ ಫ್ಯಾಮಿಲಿ ಎಂಟರ್ಟೈನರ್. ಆದರೂ ಚಿತ್ರದಲ್ಲಿ ಸಿಚುಯೇಶನ್ಗೆ ತಕ್ಕಂತೆ ಸ್ವಲ್ಪ ವಯಲೆನ್ಸ್ ಇದೆ. ನಿರ್ಮಾಪಕರು ಪ್ರೇಕ್ಷಕರನ್ನು, ಕಥೆಯನ್ನು ನಂಬಿ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ನಾನಾಗಲೀ, ಪ್ರೇಮ್ ಅವರಾಗಲೀ ಈ ಚಿತ್ರದ ಹೀರೋ ಅಲ್ಲ, ನಮ್ಮ ನಿರ್ಮಾಪಕರೇ ನಿಜವಾದ ಹೀರೋ. ನಾಯಕಿ ರೀಷ್ಮಾ ನಾಣಯ್ಯ ಅದ್ಭುತ ನಟಿ. ತೆರೆಮೇಲೆ ಅದ್ಭುತವಾಗಿ ನಟಿಸಿದ್ದಾರೆ. ಅರ್ಜುನ್ ಜನ್ಯ ಜತೆ ಇದು ನನ್ನ ಮೊದಲ ಚಿತ್ರ. ಅದ್ಭುತವಾದ ಹಾಡುಗಳನ್ನು ಕೊಟ್ಟಿದ್ದಾರೆ" ಎನ್ನುತ್ತಾರೆ ಧ್ರುವ ಸರ್ಜಾ.
ಈ ಸಿನಿಮಾದಲ್ಲಿ ನಟ ರಮೇಶ್ ಅರವಿಂದ್ ಅವರು ಧರ್ಮ ಎಂಬ ಪಾತ್ರವನ್ನು ಮಾಡಿದ್ದಾರೆ. "ನಮ್ಮ ಚಿತ್ರ ಎಲ್ಲರ ಶ್ರಮದಿಂದ ದೊಡ್ಡದಾಗಿ ಬಂದಿದೆ. ಕೆಡಿ ಅಂದ್ರೆ ಕಾಳಿದಾಸ, ಆದರೆ ಆತ ರಕ್ತದಲ್ಲಿ ಕಾವ್ಯ ಬರೆಯುತ್ತಾನೆ. ಇಲ್ಲಿ ಪ್ರತಿ ಪಾತ್ರಗಳ ಕ್ಯಾರೆಕ್ಟರ್ ವ್ಯತಿರಿಕ್ತವಾಗಿದೆ" ಎಂದು ರಮೇಶ್ ಅರವಿಂದ್ ಅವರು ಹೇಳಿದ್ದಾರೆ. ಕೆಡಿ ಚಿತ್ರದಲ್ಲಿ 6 ಹಾಡುಗಳಿದ್ದು, ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮಾಡಿದ್ದಾರೆ.
1970-75ರ ಸಮಯದಲ್ಲಿ ನಡೆದ ನೈಜಘಟನೆ ಆಧಾರಿತ ಗ್ಯಾಂಗ್ಸ್ಟರ್ ಕಥೆ ಈ ಚಿತ್ರಲ್ಲಿದೆ. ಕೆಡಿ ಸಿನಿಮಾಕ್ಕೆ ವಿಕ್ರಾಂತ್ ರೋಣ ಖ್ಯಾತಿಯ ವಿಲಿಯಂ ಡೇವಿಡ್ ಛಾಯಾಗ್ರಹಣ ಮಾಡಿದ್ದಾರೆ. ಉಳಿದಂತೆ ಈ ಸಿನಿಮಾದಲ್ಲಿ ʻಕ್ರೇಜಿ ಸ್ಟಾರ್ʼ ರವಿಚಂದ್ರನ್, ಸಂಜಯ್ ದತ್, ಶಿಲ್ಪಾ ಶೆಟ್ಟಿ, ನೋರಾ ಫತೇಹಿ, ರವಿಶಂಕರ್ ಸೇರಿದಂತೆ ಅನೇಕ ಕಲಾವಿದರು ನಟಿಸಿದ್ದಾರೆ.