'ರಾಧಾ ಕಲ್ಯಾಣ ' ಧಾರಾವಾಹಿ ಖ್ಯಾತಿಯ ನಟಿ ಕೃತ್ತಿಕಾ ರವೀಂದ್ರ ಹಾಗೂ ರಾಘವ್ ಒಟ್ಟಿಗೆ ನಟಿಸಿರುವ ʻರಾಜನಿವಾಸʼ ಸಿನಿಮಾದ ಟ್ರೇಲರ್ ಈಚೆಗೆ ರಿಲೀಸ್ ಆಗಿದೆ. ಆದರೆ ಈ ಟ್ರೇಲರ್ ನೋಡಿದವರು ರಿಷಬ್ ಶೆಟ್ಟಿಯ ಕಾಂತಾರ ಸಿನಿಮಾವನ್ನು ನೆನಪು ಮಾಡಿಕೊಳ್ಳುತ್ತಿದ್ದಾರೆ. ಆದರೆ ನಿರ್ದೇಶಕರು ಹೇಳುವುದೇ ಬೇರೆ!
ಇದು ತುಳುನಾಡಿನ ಕಥೆ
"ರಾಜನಿವಾಸ ಟ್ರೇಲರ್ ನೋಡಿದರೆ ತಕ್ಷಣವೇ ಕಾಂತಾರದ ಝಲಕ್ ಕಾಣಿಸಿತು ಅಂತಾರೆ. ಆದರೆ ಇದು ಕಾಂತಾರ ಚಿತ್ರಕ್ಕಿಂತಲೂ ಮೊದಲೇ ತಯಾರಾದಂಥ ಸಬ್ಜೆಕ್ಟ್. ಆದರೆ ಕೃತಿರೂಪಕ್ಕೆ ಇಳಿದು ತೆರೆಗೆ ಅಣಿಗೊಳಿಸಲು ಸಾಕಷ್ಟು ಸಮಯ ತೆಗೆದುಕೊಂಡಿದೆ. ನಿಜ ಹೇಳಬೇಕೆಂದರೆ ಕಾಂತಾರ ಬಂದ ಬಳಿಕ ಹೋಲಿಕೆಯ ಆರೋಪ ಎದುರಾಗಬಹುದು ಎಂದು ನಾವೇ ಸಾಕಷ್ಟು ಬದಲಾವಣೆಯನ್ನು ಮಾಡಿದ್ದೇವೆ. ಆದರೆ ಇದು ತುಳುನಾಡು ಭಾಗದ ಕಥೆಯಾದ ಕಾರಣ ಸಹಜವಾಗಿ ಒಂದಷ್ಟು ಹೋಲಿಕೆಗಳು ಕಾಣುತ್ತವೆ. ಆದರೆ ಆ ಚಿತ್ರದಲ್ಲಿ ಬೇರೆಯೇ ಕಥೆ ಇದೆ. ಅದನ್ನು ಚಿತ್ರಮಂದಿರದಲ್ಲೇ ಬಂದು ನೀವು ನೋಡಬೇಕು" ಎನ್ನುತ್ತಾರೆ ನಿರ್ದೇಶಕ ಮಿಥುನ್ ಸುವರ್ಣ.
'ಕಾಂತಾರ' ಬಳಿಕ 'ಕೊರಗಜ್ಜ' ಚಿತ್ರದಲ್ಲೂ ಗುಳಿಗ ಆರ್ಭಟ; ಮೊದಲ ಹಾಡು ರಿಲೀಸ್
"ರಾಜನಿವಾಸ ಸಿನಿಮಾದಲ್ಲಿ ಹೀರೋ ಆಗಿರುವ ರಾಘವ್ ಆಕ್ಷನ್ ಮತ್ತು ಹಾಡುಗಳ ಗ್ಲಿಂಪ್ಸ್ ಕಂಡವರು ಇದೊಂದು ಮಾಸ್ ಸಿನಿಮಾ ಆಗುವ ಎಲ್ಲಾ ಲಕ್ಷಣಗಳು ಇವೆ ಅಂತಾರೆ. ನಾಯಕಿಯಾಗಿ ಕೃತ್ತಿಕಾ ರವೀಂದ್ರ ನಟಿಸಿದ್ದಾರೆ. ಈ ಸಿನಿಮಾದಲ್ಲಿ ಶ್ರೀನಗರ ಕಿಟ್ಟಿ ಕೂಡ ವಿಶೇಷ ಪಾತ್ರದಲ್ಲಿದ್ದಾರೆ" ಎನ್ನುತ್ತಾರೆ ನಿರ್ದೇಶಕರು.
ರಾಜನಿವಾಸ ಸಿನಿಮಾದ ಟ್ರೇಲರ್ ನಾಲ್ಕು ಭಾಷೆಗಳಲ್ಲಿ ಬಿಡುಗಡೆಯಾಗಿದ್ದು ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗಲಿದೆ. ಈ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಮುಕ್ತಾಯ ಹಂತದಲ್ಲಿವೆ. ಫೆಬ್ರವರಿ ತಿಂಗಳಾಂತ್ಯಕ್ಕೆ ಬಿಡುಗಡೆ ದಿನಾಂಕವನ್ನು ಘೋಷಿಸಲಾಗುತ್ತದೆ. ಕನ್ನಡದ ದೊಡ್ಡ ವಿತರಕ ಸಂಸ್ಥೆಗಳು ಈ ಸಿನಿಮಾವನ್ನು ಬಿಡುಗಡೆ ಮಾಡಲು ಕೇಳುತ್ತಿದ್ದಾರೆ ಮತ್ತು ತಮಿಳು , ತೆಲುಗು ಭಾಷೆಯಲ್ಲೂ ಬೇಡಿಕೆ ಇದೆ" ಎಂದು ಚಿತ್ರತಂಡ ತಿಳಿಸಿದೆ.
Rishab Shetty: ಕಾಂತಾರ ಬಳಿಕ ಚಿತ್ರರಂಗದಿಂದ ರಿಷಬ್ ದೂರವಾಗ್ತಾರಾ? ಏನಿದು ಶಾಕಿಂಗ್ ನ್ಯೂಸ್!
"ರಾಜನಿವಾಸ" ಚಿತ್ರವನ್ನು ಡಿಎಎಂ36ಸ್ಟುಡೀಯೋಸ್ ಬ್ಯಾನರ್ ಅಡಿಯಲ್ಲಿ ಪಿ ಆಂಜನಪ್ಪ ನಿರ್ಮಾಣ ಮಾಡಿದ್ದಾರೆ. ಸಹ ನಿರ್ಮಾಪಕರಾಗಿ ಲೋಕೇಶ್ ಗೌಡ ಬಂಡವಾಳ ಹೂಡಿದ್ದಾರೆ. ಬಲರಾಜ್ವಾಡಿ, ಯಮುನಾ ಶ್ರೀನಿಧಿ, ನೀನಾಸಂ ಅಶ್ವಥ್, ಸಹನಾ, ಪ್ರಶಾಂತ್ ಮುಂತಾದವರು ನಟಿಸಿದ್ದಾರೆ. ವಿಜಯ್ ಯಾರ್ಡ್ಲಿ ಸಂಗೀತ ನಿರ್ದೇಶನ ಇರುವ ʻರಾಜನಿವಾಸʼ ಚಿತ್ರಕ್ಕೆ ರಮೇಶ್ ರಾಜ್ ಛಾಯಾಗ್ರಹಣ ಮಾಡಿದ್ದಾರೆ.