ಬಹುತೇಕ ಹೊಸ ಪ್ರತಿಭೆಗಳೇ ಸೇರಿ ನಿರ್ಮಿಸಿರುವ ಸೈಕಾಲಜಿಕಲ್-ಥ್ರಿಲ್ಲರ್ ಕಥಾಹಂದರ ಹೊಂದಿರುವ ʻವಿಕಲ್ಪʼ ಚಿತ್ರ ತೆರೆಗೆ ಬರಲು ರೆಡಿಯಾಗಿದೆ. ʻವಿಕಲ್ಪʼ ಚಿತ್ರದ ಬಹುತೇಕ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಪೂರ್ಣಗೊಂಡಿದ್ದು, ಪ್ರಚಾರ ಕಾರ್ಯಗಳಿಗೆ ಚಿತ್ರತಂಡ ಚಾಲನೆ ನೀಡಿದೆ. ಇತ್ತೀಚೆಗೆ ವಿಕಲ್ಪ ಚಿತ್ರದ ಮೊದಲ ಟೀಸರ್ ಅನ್ನು ಹಿರಿಯ ಪತ್ರಕರ್ತ ಜೋಗಿ ಬಿಡುಗಡೆ ಮಾಡಿ, ಚಿತ್ರತಂಡದ ಪ್ರಯತ್ನದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.
"ನಾನು ಈಗಾಗಲೇ ಈ ಸಿನಿಮಾದ ಒಂದಷ್ಟು ತುಣುಕುಗಳನ್ನು ನೋಡಿದ್ದೇನೆ. ಸಿನಿಮಾದ ಬಗ್ಗೆ ತುಡಿತವಿರುವಂಥವರು ಸೇರಿ ಮಾಡಿದ ಚಿತ್ರ ಈ ವಿಕಲ್ಪ. ಕನ್ನಡದಲ್ಲಿ ಇಂಥ ಹೊಸ ಪ್ರಯತ್ನದ ಸಿನಿಮಾಗಳು ಬರುವಂತಾಗಬೇಕು. ಈ ಸಿನಿಮಾದ ಕಥೆ, ಟೀಸರ್, ಹಾಡುಗಳು ಭರವಸೆ ಮೂಡಿಸುವಂತಿದೆ. ಚಿತ್ರ ಬಿಡುಗಡೆಯಾದ ಮೇಲೆ ಮೂಡಿಸಿರುವ ನಿರೀಕ್ಷೆಯನ್ನು ನಿಜ ಮಾಡಲಿ. ಹೊಸಬರ ವಿಕಲ್ಪ ಸಿನಿಮಾಕ್ಕೆ ಶುಭವಾಗಲಿ" ಎಂದು ಪತ್ರಕರ್ತ ಜೋಗಿ ಹಾರೈಸಿದರು.
Kiran Raj: ಹೊಸ ಸೀರಿಯಲ್ ಬೆನ್ನಲ್ಲೇ ಹೊಸ ಸಿನಿಮಾ ಅನೌನ್ಸ್ ಮಾಡಿದ ಕಿರಣ್ ರಾಜ್
ಒಂದು ಸಂಪೂರ್ಣ ಥ್ರಿಲ್ಲರ್ ಚಿತ್ರ
ಸೈಕಾಲಜಿಕಲ್-ಥ್ರಿಲ್ಲರ್ ಕಥಾಹಂದರದ ಹೊಂದಿರುವ ವಿಕಲ್ಪ ಸಿನಿಮಾದಲ್ಲಿ ಮನುಷ್ಯನ ಮನಸ್ಸಿನ ಸುಪ್ತ ಭಾವನೆಗಳು, ತುಮುಲ-ತಲ್ಲಣಗಳನ್ನು ಹೇಳಲಾಗುತ್ತಿದೆಯಂತೆ. ʻವಿಕಲ್ಪʼ ಎಂದರೆ ವಾಸ್ತವ ಮತ್ತು ಕಲ್ಪನೆಗಳ ನಡುವಿನ ಒಂದು ಸ್ಥಿತಿ ಎಂದರ್ಥ. ನಮ್ಮ ಚಿತ್ರದ ಶೀರ್ಷಿಕೆಯ ಪ್ರಕಾರ, ಇದೊಂದು ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ ಕಥೆ ಎಂದೆನಿಸಿದರೂ, ಇದು ಒಂದು ಸಂಪೂರ್ಣ ಥ್ರಿಲ್ಲರ್ ಚಿತ್ರ ಎನ್ನುವುದು ವಿಶೇಷ. ಸೈಕಾಲಜಿಕಲ್-ಥ್ರಿಲ್ಲರ್ ಅಂಶಗಳ ಜೊತೆಗೆ ನವಿರಾದ ಹಾಸ್ಯ ಮತ್ತು ಮನೋರಂಜನೆಗೆ ಹೆಚ್ಚಿನ ಒತ್ತನ್ನು ಕೊಟ್ಟು ಇಡೀ ಚಿತ್ರದ ಕಥೆಯನ್ನು ಹೆಣೆಯಲಾಗಿದೆ" ಎನ್ನುತ್ತದೆ ಚಿತ್ರತಂಡ
ಎಲ್ಲಾ ಪ್ರಬುದ್ಧ ಪ್ರೇಕ್ಷಕರಿಗೆ ಈ ಚಿತ್ರ ಇಷ್ಟವಾಗಲಿದೆ
ನಟಿ ಹರಿಣಿ ಶ್ರೀಕಾಂತ್ ಅವರು ಈ ಸಿನಿಮಾದಲ್ಲಿ ಒಂದು ಮುಖ್ಯ ಪಾತ್ರ ಮಾಡಿದ್ದಾರೆ. "ಈ ಸಿನಿಮಾದಲ್ಲಿ ನಾನು ಸೈಕಿಯಾಟ್ರಿಸ್ಟ್ ಪಾತ್ರದಲ್ಲಿ ಅಭಿನಯಿಸಿದ್ದೇನೆ. ಇಡೀ ಚಿತ್ರತಂಡ ಹೊಸಬರಾದರೂ, ತುಂಬ ವೃತ್ತಿಪರವಾಗಿ ಸಿನಿಮಾ ಮಾಡಿದ್ದಾರೆ. ನಿರ್ದೇಶಕ ಪೃಥ್ವಿರಾಜ್ ಸಾಕಷ್ಟು ತಯಾರಿ ಮಾಡಿಕೊಂಡು ಈ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಒಂದು ಚಿತ್ರಕ್ಕೆ ಕಥೆ ಮತ್ತು ಬರವಣಿಗೆಯೇ ಮುಖ್ಯ ಎಂದು ಅಪೇಕ್ಷಿಸುವ ಕನ್ನಡದ ಎಲ್ಲಾ ಪ್ರಬುದ್ಧ ಪ್ರೇಕ್ಷಕರಿಗೆ ಈ ಚಿತ್ರ ಖಂಡಿತವಾಗಿಯೂ ಇಷ್ಟವಾಗಲಿದೆ" ಎಂದು ನಟಿ ಹರಿಣಿ ಶ್ರೀಕಾಂತ್ ಭರವಸೆ ವ್ಯಕ್ತಪಡಿಸಿದರು.
"ಈ ಸಿನಿಮಾದಲ್ಲಿ ನಾನು ಸಮುದ್ಯತಾ ಎಂಬ ಹೆಸರಿನ ಪಾತ್ರವನನ್ನು ನಿರ್ವಹಿಸಿದ್ದೇನೆ. ತನ್ನೊಳಗೆ ಅಗಾಧ ತಲ್ಲಣಗಳನ್ನು ಇಟ್ಟುಕೊಂಡರೂ, ಮೇಲ್ನೋಟಕ್ಕೆ ಶಾಂತವಾಗಿರುವಂಥ ಪಾತ್ರ. ಇಲ್ಲಿಯವರೆಗೆ ರಂಗಭೂಮಿಯಲ್ಲಿ ಅಭಿನಯಿಸಿದ್ದ ನನಗೆ ಈ ಸಿನಿಮಾ ಹೊಸತರದ ಅನುಭವ ತಂದುಕೊಟ್ಟಿದೆ" ಎಂದರು ನಾಯಕಿ ನಾಗಶ್ರೀ ಹೆಬ್ಬಾರ್ .
ಸುರೂಸ್ ಟಾಕೀಸ್ ಸಂಸ್ಥೆಯ ಅಡಿಯಲ್ಲಿ ಇಂದಿರಾ ಶಿವಸ್ವಾಮಿ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಈ ಚಿತ್ರವನ್ನು ಪೃಥ್ವಿರಾಜ್ ಪಾಟೀಲ್ ನಿರ್ದೇಶಿಸಿದ್ದಾರೆ ಮತ್ತು ತೆರೆಮೇಲೂ ಅವರೇ ಮುಖ್ಯಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸಂಧ್ಯಾ ವಿನಾಯಕ್, ಗಣಪತಿ ವಡ್ಡಿನಗದ್ದೆ, ಸ್ವರೂಪ್ ಬಚ್ಚ್, ಪೂಜಾ ಬಚ್ಚ್, ಜಯಂತ್ ಡೇವಿಡ್, ಗಿರೀಶ್ ಹೆಗಡೆ, ಡಾ. ಪ್ರಕೃತಿ, ಮಾಸ್ಟರ್ ಆಯುಷ್ ಸಂತೋಷ್, ಗಣಪತಿ ಹಿತ್ತಲಕೈ, ಪ್ರಜ್ಞಾ ಗಣಪತಿ, ಮಾಧವ ಶರ್ಮಾ, ಗಣಪತಿ ಎ. ಆರ್, ʼರಾಜ್ಯ ಪ್ರಶಸ್ತಿʼ ವಿಜೇತ ಯಕ್ಷಗಾನ ಕಲಾವಿದ ಗೋಡೆ ನಾರಾಯಣ ಹೆಗಡೆ ಇನ್ನಿತರರು ನಟಿಸಿದ್ದಾರೆ.
ಬೆಂಗಳೂರು, ತೀರ್ಥಹಳ್ಳಿ, ಸಾಗರ, ಶಿರಸಿ, ಕುಂದಾಪುರ, ಯಲ್ಲಾಪುರ ಸುತ್ತಮುತ್ತ ʻವಿಕಲ್ಪʼ ಚಿತ್ರದ ಬಹುತೇಕ ಚಿತ್ರೀಕರಣ ನಡಸಲಾಗಿದ್ದು, ಸಿಂಗಪುರ, ನೆದರ್ಲ್ಯಾಂಡ್ ಸೇರಿದಂತೆ ವಿದೇಶಗಳಲ್ಲೂ ʻವಿಕಲ್ಪʼದ ಚಿತ್ರೀಕರಣ ಮಾಡಲಾಗಿದೆ. ʻವಿಕಲ್ಪʼ ಚಿತ್ರಕ್ಕೆ ಮಿಥುನ್ ತೀರ್ಥಹಳ್ಳಿ ಸಹ ನಿರ್ದೇಶನವಿದೆ. ಅಭಿರಾಮ್ ಗೌಡ ಛಾಯಾಗ್ರಹಣ, ಸುರೇಶ್ ಆರುಮುಗಮ್ ಸಂಕಲನ ಕಾರ್ಯ ನಿರ್ವಹಿಸಿದ್ದಾರೆ. ಹಾಡುಗಳಿಗೆ ಸಂವತ್ಸರ ಸಂಗೀತ ಸಂಯೋಜಿಸಿದ್ದು, ಪೃಥ್ವಿರಾಜ್ ಪಾಟಿಲ್ ಮತ್ತು ಕೌಂಡಿನ್ಯ ಕುಡ್ಲುತೋಟ ಹಾಡುಗಳಿಗೆ ಸಾಹಿತ್ಯ ರಚಿಸಿದ್ದಾರೆ.