ಬಿಗ್ ಬಾಸ್ ವಿನ್ನರ್ ಗಿಲ್ಲಿ ನಟ ಅವರು ಕೊನೆಗೂ ಹೀರೋ ಆಗಿ ಸ್ಯಾಂಡಲ್ವುಡ್ನಲ್ಲಿ ಲಾಂಚ್ ಆಗಿದ್ದಾರೆ. ಅವರ ನಟನೆಯ ʻಪಳಾರ್ʼ ಸಿನಿಮಾವು ಅವರ ಹುಟ್ಟುಹಬ್ಬದ ಪ್ರಯುಕ್ತ ಭಾನುವಾರ (ಜೂನ್ 21) ಮುಹೂರ್ತ ನೆರವೇರಿದೆ. ಕೆವಿಎನ್ ಪ್ರೊಡಕ್ಷನ್ಸ್ ಪ್ರೆಸೆಂಟ್ ಮಾಡುತ್ತಿರುವ ಈ ಸಿನಿಮಾವನ್ನು ಚಂದ್ರಮೋಹನ್ ಅವರು ನಿರ್ದೇಶನ ಮಾಡುತ್ತಿದ್ದಾರೆ. ಸದ್ಯ ʻಪಳಾರ್ʼ ಚಿತ್ರಕ್ಕೆ ನಾಯಕಿ ಯಾರು ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.
ನಾಯಕಿ ಆಗ್ತಾರಾ ಕಾವ್ಯ ಶೈವ?
ಬಿಗ್ ಬಾಸ್ ಮನೆಯಲ್ಲಿ ಗಿಲ್ಲಿ ನಟ ಮತ್ತು ಕಾವ್ಯ ಶೈವ ಅವರ ಜೋಡಿಯು ಬಹಳ ಫೇಮಸ್ ಆಗಿತ್ತು. ಹಾಗಾಗಿ, ಈ ಹೊಸ ಸಿನಿಮಾಕ್ಕೂ ಕಾವ್ಯ ಅವರೇ ನಾಯಕಿ ಆಗ್ತಾರಾ ಎಂಬ ಪ್ರಶ್ನೆ ಮೂಡಿದೆ. ಆ ಬಗ್ಗೆ ಚಿತ್ರತಂಡಕ್ಕೆ ಪ್ರಶ್ನೆ ಎದುರಾಗಿದೆ. ಅದಕ್ಕೆ ಗಿಲ್ಲಿ ಏನಂದ್ರು ನೋಡಿ? "ನಮ್ಮ ಚಿತ್ರದ ನಾಯಕಿ ಯಾರು ಅನ್ನೋ ಕುತೂಹಲ ನಿಮ್ಮೆಲ್ಲರಲ್ಲೂ ಇದೆ. ಆದರೆ ಆ ಸಸ್ಪೆನ್ಸ್ ಸದ್ಯಕ್ಕೆ ಹಾಗೇ ಇರಲಿ. ಚಿತ್ರಕ್ಕೆ ಸೂಕ್ತವಾದ ಸಮಯದಲ್ಲಿ, ಕರೆಕ್ಟ್ ಟೈಮ್ ನೋಡಿ ನಾಯಕಿಯ ಹೆಸರನ್ನು ನಾವೇ ಅಧಿಕೃತವಾಗಿ ರಿವೀಲ್ ಮಾಡುತ್ತೇವೆ. ಸದ್ಯಕ್ಕೆ ನನ್ನ ಮನಸ್ಸಿನಲ್ಲಿ ಯಾವುದೇ ಹೆಸರಿಲ್ಲ. ಚಿತ್ರದಲ್ಲಿ ನಟಿಸಲಿರುವ ಉಳಿದ ಕಲಾವಿದರೆಲ್ಲರೂ ಹೊಸಬರೇ ಆಗಿದ್ದಾರೆ. ಈಗಾಗಲೇ ಚಿತ್ರದ ವರ್ಕ್ಶಾಪ್ಗಳು ಆರಂಭವಾಗಿದ್ದು, ನಾವೆಲ್ಲರೂ ಒಟ್ಟಿಗೆ ಕೆಲಸ ಮಾಡುತ್ತಿದ್ದೇವೆ" ಎಂದು ಗಿಲ್ಲಿ ನಟ ಹೇಳಿಕೊಂಡಿದ್ದಾರೆ.
ಜನರನ್ನು ಬೋರ್ ಮಾಡಲ್ಲ
"ನಾನು ಹೀರೋ ಅಂದ ತಕ್ಷಣ ಫುಲ್ ಮಾಸ್ ಆಗಿ, ಹೊಡೆದಾಡೋ ಪಾತ್ರ ಮಾಡ್ತಾ ಇಲ್ಲ. ನನ್ನ ಶಕ್ತಿ ಇರೋದೇ ಹಾಸ್ಯದಲ್ಲಿ. ಜನ ನನ್ನನ್ನು ಹೇಗೆ ನೋಡಿ ಇಷ್ಟಪಟ್ಟಿದ್ದಾರೋ, ಅದೇ ಮಂಡ್ಯ-ಮೈಸೂರು ಭಾಗದ ಟೋನ್ ಹಾಗೂ ಹಳ್ಳಿ ಹಿನ್ನೆಲೆಯ ಎಂಟರ್ಟೈನಿಂಗ್ ಪಾತ್ರವೇ ಇಲ್ಲೂ ಇರಲಿದೆ. ಯಾವುದೇ ಹೊಸ ರೀತಿಯ ಪ್ರಯೋಗ ಮಾಡಿ, ಜನರಿಗೆ ಬೋರ್ ಮಾಡಿಸಲ್ಲ. ಸಿನಿಮಾ ತುಂಬಾ ಸೀರಿಯಸ್ ಆಗಿ ಸಾಗಿದರೂ, ನನ್ನ ಸುತ್ತ ನಡೆಯುವ ಘಟನೆಗಳು ಪ್ರೇಕ್ಷಕರನ್ನು ನಗಿಸುತ್ತವೆ" ಎಂದು ಗಿಲ್ಲಿ ನಟ ಹೇಳಿದ್ದಾರೆ.
ಗಿಲ್ಲಿ ಹೊಸ ಸಿನಿಮಾ ಲಾಂಚ್
ನಮ್ ಕಡೆ 'ಪಳಾರ್ ನನ್ನ ಮಗ' ಎಂದು ಕರೆಯುತ್ತಾರೆ
'ಪಳಾರ್' ಎಂಬ ಶೀರ್ಷಿಕೆ ಫೈನಲ್ ಆಗಿದ್ದೇಗೆ ಎಂಬ ಬಗ್ಗೆಯೂ ಮಾತನಾಡಿರುವ ಗಿಲ್ಲಿ ನಟ, "ನಮ್ಮ ಹಳ್ಳಿ ಕಡೆ ತುಂಬಾ ಕಿಲಾಡಿ, ಕಳ್ಳಾಟ ಆಡುವವರನ್ನು 'ಪಳಾರ್ ನನ್ನ ಮಗ' ಎಂದು ಕರೆಯುವುದು ರೂಢಿ. ಈ ಚಿತ್ರದ ನನ್ನ ಪಾತ್ರಕ್ಕೂ ಆ ಗುಣಕ್ಕೂ ಪಕ್ಕಾ ಮ್ಯಾಚ್ ಆಗುತ್ತದೆ. ವಿಶೇಷ ಏನೆಂದರೆ, ಅಭಿಮಾನಿಯೊಬ್ಬರು ನನಗೆ 'ಪಳಾರ್ ಗಿಲ್ಲಿ' ಎಂದು ಬರೆದಿರೋ ಫೋಟೋ ಫ್ರೇಮ್ ಉಡುಗೊರೆ ಕೊಟ್ಟಿದ್ದರು. ಆಫೀಸ್ನಲ್ಲಿ ಟೈಟಲ್ ಹುಡುಕುವಾಗ ಕಣ್ಣಿಗೆ ಬಿದ್ದಿದ್ದೇ ಈ ಹೆಸರು. ನಿರ್ದೇಶಕ ಚೇತನ್ ಕುಮಾರ್ ಅವರಿಗೂ ಈ ಟೈಟಲ್ ಇಷ್ಟವಾಯಿತು. ಜನ ಈಗಾಗಲೇ ಈ ಹೆಸರನ್ನು ಇಷ್ಟಪಟ್ಟಿದ್ದಾರೆ" ಎಂದು ಗಿಲ್ಲಿ ನಟ ಹೇಳಿದ್ದಾರೆ.