Kamal Haasan: ಸರಿಯಾದ ಸಮಯದಲ್ಲಿ ಮಾತನಾಡುತ್ತೇನೆ: ಭಾಷಾ ವಿವಾದ ಬಗ್ಗೆ ಕಮಲ್ ಹಾಸನ್
ಕಮಲ್ ಹಾಸನ್ “ಕನ್ನಡ ತಮಿಳಿನಿಂದ ಹುಟ್ಟಿದ್ದು” ಎಂಬ ಹೇಳಿಕೆ ಮೂಲಕ ಭಾರಿ ವಿವಾದ ಹುಟ್ಟು ಹಾಕಿದ್ದಾರೆ. ಕರ್ನಾಟಕ ಹೈಕೋರ್ಟ್ ತರಾಟೆಗೆ ತೆಗೆದುಕೊಂಡ ಒಂದು ದಿನದ ನಂತರ ಕಮಲ್ ಹಾಸನ್ ತಮಗೆ ಬೆಂಬಲ ನೀಡಿದವರಿಗೆ ಧನ್ಯವಾದ ತಿಳಿಸಿದ್ದಾರೆ. ಆದರೆ ವಿವಾದದ ಬಗ್ಗೆ ಮಾತನಾಡಲು ನಿರಾಕರಿಸಿದ್ದಾರೆ. “ಸರಿಯಾದ ಸಮಯದಲ್ಲಿ ಈ ಬಗ್ಗೆ ಮಾತನಾಡುತ್ತೇನೆ,” ಎಂದು ಚೆನ್ನೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ.

ಕಮಲ್ ಹಾಸನ್.

ಚೆನ್ನೈ: ನಟ-ರಾಜಕಾರಣಿ ಕಮಲ್ ಹಾಸನ್ (Kamal Haasan) ತಮ್ಮ “ಕನ್ನಡ ತಮಿಳಿನಿಂದ ಹುಟ್ಟಿದ್ದು” ಎಂಬ ವಿವಾದಾತ್ಮಕ ಹೇಳಿಕೆಗೆ ಕರ್ನಾಟಕ ಹೈಕೋರ್ಟ್ (Karnataka High Court) ತರಾಟೆಗೆ ತೆಗೆದುಕೊಂಡ ಒಂದು ದಿನದ ನಂತರ ಅವರು ತಮಗೆ ಬೆಂಬಲ ನೀಡಿದವರಿಗೆ ಧನ್ಯವಾದ ತಿಳಿಸಿದ್ದಾರೆ. ಆದರೆ ವಿವಾದದ ಬಗ್ಗೆ ಮಾತನಾಡಲು ನಿರಾಕರಿಸಿದ್ದಾರೆ. “ಸರಿಯಾದ ಸಮಯದಲ್ಲಿ ಈ ಬಗ್ಗೆ ಮಾತನಾಡುತ್ತೇನೆ,” ಎಂದು ಚೆನ್ನೈನಲ್ಲಿ (Chennai) ನಡೆದ ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ.
ಕಮಲ್ ಹಾಸನ್ ಹೇಳಿಕೆ
ಮಣಿರತ್ನಂ ನಿರ್ದೇಶನದ ‘ತಗ್ ಲೈಫ್’ ಚಿತ್ರದ ಬಿಡುಗಡೆಗೆ ಒಂದು ದಿನ ಉಳಿದಿರುವಾಗ ಮಾತನಾಡಿದ ಕಮಲ್, “ತಮಿಳುನಾಡಿನ ಜನತೆ, ಮಾಧ್ಯಮಗಳು ಮತ್ತು ನನಗೆ ಬೆಂಬಲ ನೀಡಿದ ಎಲ್ಲರಿಗೂ ಧನ್ಯವಾದ. ಮಣಿರತ್ನಂ ಚಿತ್ರದಲ್ಲಿ ನಟಿಸುವುದು ನನಗೆ ಗೌರವ. ನಾವು ಚರ್ಚಿಸಲು ಇನ್ನೂ ಬಹಳ ಇದೆ, ಆದರೆ ಈಗಲ್ಲ,” ಎಂದರು. ಈ ಚಿತ್ರದ ತಂಡದೊಂದಿಗೆ ವೇದಿಕೆ ಹಂಚಿಕೊಂಡ ಅವರು, ವಿವಾದದ ಬಗ್ಗೆ ಮೌನವಹಿಸಿದರು.
ಈ ಸುದ್ದಿಯನ್ನೂ ಓದಿ: Kamal Hassan Controversy: ಕರ್ನಾಟಕದಲ್ಲಿ ಕಮಲ್ ಹಾಸನ್ ಚಿತ್ರ ರಿಲೀಸ್ ಇಲ್ಲ; ಜೂ.10ಕ್ಕೆ ವಿಚಾರಣೆ ಮುಂದೂಡಿದ ಹೈಕೋರ್ಟ್
ಕರ್ನಾಟಕದಲ್ಲಿ ಬಿಡುಗಡೆ ರದ್ದು
ಕರ್ನಾಟಕ ಹೈಕೋರ್ಟ್ನ ತರಾಟೆಯ ಬಳಿಕ, ‘ಥಗ್ ಲೈಫ್’ ನಿರ್ಮಾಪಕರು ಜೂ. 5ರಂದು ಕರ್ನಾಟಕದಲ್ಲಿ ಚಿತ್ರವನ್ನು ಬಿಡುಗಡೆ ಮಾಡದಿರಲು ತೀರ್ಮಾನಿಸಿದ್ದಾರೆ. ಈ ಚಿತ್ರವು ಭಾರತದಾದ್ಯಂತ ಬಿಡುಗಡೆಯಾಗಬೇಕಿತ್ತು. ಕಮಲ್ ಹಾಸನ್ ಕ್ಷಮೆಯಾಚಿಸದ ಹಿನ್ನೆಲೆಯಲ್ಲಿ ಕರ್ನಾಟಕ ಫಿಲ್ಮ್ ಚೇಂಬರ್ ಆಫ್ ಕಾಮರ್ಸ್ (KFCC) ರಾಜ್ಯದಲ್ಲಿ ಚಿತ್ರ ಪ್ರದರ್ಶನವನ್ನು ನಿಷೇಧಿಸಿತ್ತು.
ಕೋರ್ಟ್ ಆಕ್ಷೇಪ
“ಒಂದು ಕ್ಷಮೆಯಾಚನೆಯಿಂದ ಈ ಸಮಸ್ಯೆ ಬಗೆಹರಿಯಬಹುದಿತ್ತು. ಸ್ವಾತಂತ್ರ್ಯವನ್ನು ಜನರ ಭಾವನೆಗಳಿಗೆ ಧಕ್ಕೆ ತರುವಂತೆ ಬಳಸಿಕೊಳ್ಳುವಂತಿಲ್ಲ” ಎಂದು ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ನಾಗಪ್ರಸನ್ನ ಹೇಳಿದರು. “ಹೇಳಿದ ಮಾತುಗಳನ್ನು ವಾಪಸ್ ಪಡೆಯಲಾಗದು, ಕ್ಷಮೆಯಾಚಿಸುವುದೊಂದೇ ಮಾರ್ಗ. ಒಡೆದ ಮೊಟ್ಟೆಯನ್ನು ಮರಳಿ ಜೋಡಿಸಲಾಗದು” ಎಂದು ಕೋರ್ಟ್ ತಿಳಿಸಿತು.
ಬಿಜೆಪಿಯ ಟೀಕೆ
ಹಿರಿಯ ಬಿಜೆಪಿ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, “ಕಮಲ್ ಹಾಸನ್ ಕನ್ನಡ ಭಾಷೆಯ ಬಗ್ಗೆ ಸಂವೇದನಾರಹಿತವಾಗಿ ಮಾತನಾಡಿದ್ದಾರೆ. ಅವರು ಕನ್ನಡಿಗರಿಗೆ ಗೌರವಪೂರ್ವಕವಾಗಿ ಕ್ಷಮೆಯಾಚಿಸಬೇಕು. ಕ್ಷಮೆಯಾಚಿಸುವುದರಿಂದ ಯಾರೂ ಚಿಕ್ಕವರಾಗುವುದಿಲ್ಲ, ಗರ್ವದಿಂದ ದೊಡ್ಡವರೂ ಆಗುವುದಿಲ್ಲ” ಎಂದು ಟೀಕಿಸಿದ್ದಾರೆ.