ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಾಣದ, ʻಜೋಗಿʼ ಪ್ರೇಮ್ ಅವರ ನಿರ್ದೇಶನದ ʻಕೆಡಿ: ದಿ ಡೆವಿಲ್ʼ ಚಿತ್ರವು ಏಪ್ರಿಲ್ 30ರಂದು ಅದ್ದೂರಿಯಾಗಿ ತೆರೆಗೆ ಬರಲು ಸಿದ್ಧವಾಗಿದೆ. ಅಂದಹಾಗೆ, ಈ ಸಿನಿಮಾದ ʻಸರ್ಸೆ ಸರ್ಸೆ ನಿನ್ನ ಸೆರಗ ಸರ್ಸೆʼ ಸಾಂಗ್ ಸಾಕಷ್ಟು ವಿವಾದವನ್ನು ಉಂಟು ಮಾಡಿತ್ತು. ಈಚೆಗೆ ನಡೆದ ಪತ್ರಿಕಾಗೋಷ್ಠಿಯಲ್ಲಿ ನಟ ಕಿಚ್ಚ ಸುದೀಪ್ ಅವರು ಈ ವಿವಾದದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. "ಒಂದು ತಪ್ಪು ನಡೆದಿದೆ, ಅದನ್ನು ಸರಿಪಡಿಸಿಕೊಂಡಿದ್ದಾರೆ, ನಮ್ಮವರನ್ನು ನಾವು ಕಡೆಗಣಿಸದೆ ಕೈಹಿಡಿಯಬೇಕು" ಎಂದು ಸುದೀಪ್ ಹೇಳಿದ್ದಾರೆ.
ಪ್ರೇಮ್ ನನಗೆ ಒಬ್ಬ ವ್ಯಕ್ತಿಯಾಗಿ ಇಷ್ಟ
"ಪ್ರೇಮ್ ಈ ಹಿಂದೆ ಸಾಕಷ್ಟು ಸದಭಿರುಚಿಯ ಹಾಡುಗಳನ್ನು ಬರೆದು, ತಂದೆ, ತಾಯಿ, ಮಕ್ಕಳು ಒಂದಾಗುವಂತೆ ಮಾಡಿದ್ದುಂಟು. ಈಗ ಆಗಿರುವ ತಪ್ಪನ್ನು ಸರಿಪಡಿಸಿಕೊಂಡಿದ್ದಾರೆ. ನಮ್ಮವರನ್ನು ನಾವು ಕಡೆಗಣಿಸಬಾರದು" ಎಂದ ಕಿಚ್ಚ, "ಪ್ರೇಮ್ ತುಂಬಾ ಪ್ಯಾಷನ್ ಇರುವಂತಹ ನಿರ್ದೇಶಕ. ಆಗುಹೋಗುಗಳ ಬಗ್ಗೆ ಒಂದೊಳ್ಳೇ ಸಿನಿಮಾ ಕೊಡಲು ಪ್ರಯತ್ನಿಸುತ್ತಾರೆ, ಅವರು ತೆಗೆದಿರುವ ಪ್ರತಿ ಫ್ರೇಮ್ ತುಂಬಾ ಇಷ್ಟವಾಯ್ತು. ಪ್ರೇಮ್ ನನಗೆ ಒಬ್ಬ ವ್ಯಕ್ತಿಯಾಗಿ ಇಷ್ಟ, ನಾವು ಇಷ್ಟಪಟ್ಟವರಿಗಾಗಿ ನಾನು ಏನು ಬೇಕಾದರೂ ಮಾಡಲು ಸಿದ್ದ. ಅವರು ಎಲ್ಲಿರುತ್ತಾರೋ ಅಲ್ಲಿ ಎನರ್ಜಿ ಇರುತ್ತೆ. ಆಗ ನಮ್ಮ ಎನರ್ಜಿಯೂ ಜಾಸ್ತಿ ಆಗುತ್ತೆ" ಎಂದು ಹೇಳಿದ್ದಾರೆ.
KD The Devil: ‘ಕೆಡಿ’ ಟ್ರೈಲರ್ ಡಿಲೀಟ್ ಆಗೋಕೆ ಅದೇ ಕಾರಣ; ಪ್ರೇಮ್ ಉತ್ತರ ಇಲ್ಲಿದೆ
ಧ್ರುವ ನನ್ನ ಸೋದರನಿದ್ದಂತೆ
"ಧ್ರುವ ಸರ್ಜಾ ಅವರಿಗೆ ಅಪಾರ ಸಂಖ್ಯೆಯ ಅಭಿಮಾನಿ ಬಳಗವಿದೆ, ಅವರೇ ಪೈರಸಿ ಆಗದಂತೆ ನೋಡಿಕೊಳ್ಳುತ್ತಾರೆ. ಅದನ್ನೂ ಮೀರಿ ನಮಗೆ ಚಿತ್ರಮಂದಿರ ದೇವಾಲಯವಿದ್ದಂತೆ. ದೇವರನ್ನು ನೋಡಲು ದೇವಸ್ಥಾನಕ್ಕೆ ಬರಬೇಕು. ಹಾಗೇ ನಮ್ಮ ಮೇಲೆ ಪ್ರೀತಿಯಿರುವವರು ಚಿತ್ರಮಂದಿರಕ್ಕೆ ಬಂದೇ ಬರುತ್ತಾರೆ. ಧ್ರುವ ನನ್ನ ಸೋದರನಿದ್ದಂತೆ, ಆತ ಒಂದು ದೊಡ್ಡ ಸಿನಿಮಾ ಮಾಡಿದಾಗ, ಅದರ ಭಾಗವಾಗಿ ನಿಲ್ಲಬೇಕೆಂದು ನಾನು ಬಂದೆ. ನಾಯಕಿ ರೀಷ್ಮಾ ನಾಣಯ್ಯ ಕೂಡ ಉತ್ತಮ ನಟಿ. ಸದ್ಯ ಕನ್ನಡ ಚಿತ್ರರಂಗ ಅಳಿವಿನಂಚಿನಲ್ಲಿದೆ, ಮಾಧ್ಯಮಗಳು ಇಂತಹ ಚಿತ್ರಗಳು ಬಂದಾಗ ಸಪೋರ್ಟ್ ಮಾಡಬೇಕು" ಎಂದು ಸುದೀಪ್ ಅವರು ಮನವಿ ಮಾಡಿದರು.
ಪ್ರೇಮ್ ಏನಂದ್ರು ನೋಡಿ
"ಸುದೀಪ್ ಅವರು ನನಗೆ ಸಹೋದರನಿದ್ದಂತೆ. ನನ್ನ ಬಗ್ಗೆ ಯಾವುದೇ ವಿವಾದ ಆಗಲಿ, ಅವರು ಸದಾ ನನ್ನ ಬೆಂಬಲಕ್ಕೆ ನಿಲ್ಲುತ್ತಾರೆ. ಈ ಸಿನಿಮಾದಲ್ಲಿ ಒಂದು ಪವರ್ ಫುಲ್ ಪಾತ್ರವಿದೆ, ಅದನು ನೀವು ಮಾಡಬೇಕು ಎಂದು ಅವರನ್ನು ಕೇಳಿದಾಗ ಒಂದೇ ಮಾತಿಗೆ ಆಯ್ತು ಮಾಡುತ್ತೇನೆ ಎಂದರು, ಚಿತ್ರದಲ್ಲಿ ಅವರು ಕಾಲಭೈರವನಾಗಿ ಅಬ್ಬರಿಸಿದ್ದಾರೆ. ಅವರ ಪಾತ್ರ ತುಂಬಾ ವೈಲೆಂಟ್ ಆಗಿದೆ, ಅದು ಎಷ್ಟು ಪವರ್ ಫುಲ್ ಅಂತ ನೀವೆಲ್ಲಾ ಸಿನಿಮಾ ನೋಡಿದಾಗ ಗೊತ್ತಾಗುತ್ತೆ" ಎಂದು ಪ್ರೇಮ್ ಹೇಳಿದರು.
ʼಸೆರಗ ಸರ್ಸೆʼ ಸಾಂಗ್ ಕಾಂಟ್ರವರ್ಸಿ; ಕಿಚ್ಚ ಸುದೀಪ್ ಫಸ್ಟ್ ರಿಯಾಕ್ಷನ್!
ಏಪ್ರಿಲ್ 30ರಂದು ರಿಲೀಸ್ ಆಗಲಿರುವ ಕೆಡಿ ಸಿನಿಮಾದಲ್ಲಿ ಧ್ರುವ ಸರ್ಜಾ, ರೀಷ್ಮಾ ನಾಣಯ್ಯ ಜೊತೆಗೆ ಸಂಜಯ್ ದತ್, ಶಿಲ್ಪಾ ಶೆಟ್ಟಿ, ರವಿಚಂದ್ರನ್, ರಮೇಶ್ ಅರವಿಂದ್, ರವಿಶಂಕರ್, ಯಶ್ ಶೆಟ್ಟಿ ಮುಂತಾದವರು ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.