ಸ್ಯಾಂಡಲ್ವುಡ್ ಸಲಗ ವಿಜಯ್ ಕುಮಾರ್ (ದುನಿಯಾ ವಿಜಯ್) ಅವರ ಲ್ಯಾಂಡ್ಲಾರ್ಡ್ ಸಿನಿಮಾಕ್ಕೆ ಮುಖ್ಯಮಂತ್ತಿ ಸಿದ್ದರಾಮಯ್ಯ ಅವರು ತೆರಿಗೆ ವಿನಾಯಿತಿ ಘೋಷಣೆ ಮಾಡಿದ್ದಾರೆ. ಆ ಹಿನ್ನೆಲೆಯಲ್ಲಿ ಸಿದ್ದರಾಮಯ್ಯಗೆ ದುನಿಯಾ ವಿಜಯ್ ಧನ್ಯವಾದಗಳನ್ನು ತಿಳಿಸಿದ್ದಾರೆ. "ನಮಗೆ ಬೆಂಬಲವಾಗಿ ನಿಂತ ಮುಖ್ಯಮಂತ್ರಿಗಳಿಗೆ ಹಾಗೂ ಸಂಘಟನೆಯ ಎಲ್ಲಾ ನಾಯಕರಿಗೂ ನಮ್ಮ ಸಿನಿಮಾ ತಂಡ ಸದಾ ಕೃತಜ್ಞವಾಗಿರುತ್ತದೆ" ಎಂದಿದ್ದಾರೆ ದುನಿಯಾ ವಿಜಯ್.
ದುನಿಯಾ ವಿಜಯ್ ಪೋಸ್ಟ್ನಲ್ಲಿ ಏನಿದೆ?
"ಲ್ಯಾಂಡ್ ಲಾರ್ಡ್ ಚಿತ್ರಕ್ಕೆ ಬೆಂಬಲ ನೀಡಿದ ಮುಖ್ಯಮಂತ್ರಿಗಳಿಗೆ ಹಾಗೂ ಡಿಎಸ್ಎಸ್ ಮುಖಂಡರಿಗೆ ಕೃತಜ್ಞತೆಗಳು. ನಮ್ಮ 'ಲ್ಯಾಂಡ್ ಲಾರ್ಡ್' ಸಿನಿಮಾಗೆ ತೆರಿಗೆ ವಿನಾಯಿತಿ ನೀಡುವಂತೆ ಕೋರಿ ಇಂದು ಗೌರವಾನ್ವಿತ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ ದಲಿತ ಸಂಘರ್ಷ ಸಮಿತಿಯ (DSS) ಹಿರಿಯ ಮುಖಂಡರಿಗೆ ನಮ್ಮ ಚಿತ್ರತಂಡದ ಪರವಾಗಿ ಹೃತ್ಪೂರ್ವಕ ಧನ್ಯವಾದಗಳು.
ಈ ಸಂದರ್ಭದಲ್ಲಿ ನಮ್ಮ ಜೊತೆಗಿದ್ದ ಅಣ್ಣ ಮಾವಳ್ಳಿ ಶಂಕರ್, ಸುಬ್ಬು ಹೊಲೆಯಾರ್, ಗೊಲ್ಲಹಳ್ಳಿ ಶಿವಪ್ರಸಾದ್, ಹುಲಿಕುಂಟೆ ಮೂರ್ತಿ, ಚಂದ್ರು ತರಹುಣಸೆ, ರವಿಕುಮಾರ್ ಈಚಲಮರ,ಹರೀಶ್ ಭೈರಪ್ಪ, ಮುರಳಿ ಕಾಟಿ ಹಾಗೂ ವಿಜಯಕುಮಾರ್ ಸೋನಾರೆ ಅವರಿಗೆ ನಾವು ಸದಾ ಚಿರಋಣಿಯಾಗಿರುತ್ತೇವೆ" ಎಂದು ದುನಿಯಾ ವಿಜಯ್ ಬರೆದುಕೊಂಡಿದ್ದಾರೆ.
ನಮಗೆ ಹೊಸ ಹುರುಪು ನೀಡಿದೆ
"ಈ ಕಾರ್ಯ ನೆರವೇರಲು ಸಹಕರಿಸಿದ ಮುಖ್ಯಮಂತ್ರಿಗಳ ಮಾಧ್ಯಮ ಕಾರ್ಯದರ್ಶಿಗಳಾದ ಶ್ರೀ ಪ್ರಭಾಕರ್ ಅವರು ಹಾಗು ಮುಖ್ಯಮಂತ್ರಿಗಳ ಆಪ್ತ ಕಾರ್ಯದರ್ಶಿಗಳಾದ ಡಾ. ನೆಲ್ಕುಂಟೆ ವೆಂಕಟೇಶಯ್ಯ ಅವರನ್ನು ತುಂಬು ಹೃದಯದಿಂದ ನೆನೆಯುತ್ತೇವೆ. ನಮ್ಮ ಮನವಿಗೆ ಅತ್ಯಂತ ಸಕಾರಾತ್ಮಕವಾಗಿ ಸ್ಪಂದಿಸಿದ ಮುಖ್ಯಮಂತ್ರಿಗಳು, ತೆರಿಗೆ ವಿನಾಯಿತಿ ನೀಡುವ ಭರವಸೆ ನೀಡಿದ್ದಾರೆ. ಸರ್ಕಾರದ ಈ ನಡೆ ತಳಸಮುದಾಯಗಳ ಹಕ್ಕು ಮತ್ತು ಹೋರಾಟಗಳ ಕುರಿತು ಇನ್ನಷ್ಟು ಅರ್ಥಪೂರ್ಣ ಚಿತ್ರಗಳನ್ನು ಮಾಡಲು ನಮಗೆ ಹೊಸ ಹುರುಪು ನೀಡಿದೆ. ನಮಗೆ ಬೆಂಬಲವಾಗಿ ನಿಂತ ಮುಖ್ಯಮಂತ್ರಿಗಳಿಗೆ ಹಾಗೂ ಸಂಘಟನೆಯ ಎಲ್ಲಾ ನಾಯಕರಿಗೂ ನಮ್ಮ ಸಿನಿಮಾ ತಂಡ ಸದಾ ಕೃತಜ್ಞವಾಗಿರುತ್ತದೆ" ಎಂದಿದ್ದಾರೆ ದುನಿಯಾ ವಿಜಯ್.
ಲ್ಯಾಂಡ್ ಲಾರ್ಡ್ ದುನಿಯಾ ವಿಜಯ್ ಜತೆಯಾದ ʼಡೇರ್ ಡೆವಿಲ್ ಹೀರೋʼ
"ಸಿನಿಮಾ ಬಿಡುಗಡೆಯಾದಾಗಿನಿಂದ ನಮ್ಮೊಂದಿಗೆ ನಿಂತು ಜನರನ್ನು ಪ್ರೇರೇಪಿಸಿದ ಎಲ್ಲಾ ಸಂಘಟನೆಗಳಿಗೆ, ನಾಯಕರಿಗೆ, ಕಾರ್ಯಕರ್ತರಿಗೆ ತುಂಬು ಹೃದಯದ ಧನ್ಯವಾದಗಳನ್ನು ತಿಳಿಸುತ್ತೇವೆ. ಜೈ ಭೀಮ್" ಎಂದು ದುನಿಯಾ ವಿಜಯ್ ಹೇಳಿದ್ದಾರೆ.
ದುನಿಯಾ ವಿಜಯ್ ಟ್ವೀಟ್
ಸಿಎಂ ಸಿದ್ದರಾಮಯ್ಯ ಟ್ವೀಟ್ನಲ್ಲಿ ಏನಿದೆ?
"ಸಾಮಾಜಿಕ ಅಸಮಾನತೆ ಮತ್ತು ಜಾತಿಯಾಧಾರಿತ ಶೋಷಣೆ ವಿಷಯಾಧಾರಿತ ದುನಿಯಾ ವಿಜಯ್ ನಾಯಕತ್ವದ "ಲ್ಯಾಂಡ್ ಲಾರ್ಡ್" ಚಲನಚಿತ್ರಕ್ಕೆ ತೆರಿಗೆ ವಿನಾಯಿತಿ ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಮೌಲ್ಯಯುತ ಸಂದೇಶವನ್ನು ಜನರಿಗೆ ತಲುಪಿಸಿ, ಸಾರ್ವತ್ರಿಕ ಅಭಿಪ್ರಾಯ ರೂಪಿಸಲು ಹಾಗೂ ಸಾಮಾಜಿಕ ಪರಿವರ್ತನೆಯನ್ನು ಸಾಧಿಸಲು ಸಿನೆಮಾಗಳು ಅತ್ಯಂತ ಪರಿಣಾಮಕಾರಿ ಮಾಧ್ಯಮ ಎನ್ನುವುದು ನನ್ನ ಭಾವನೆ. ಸಾಮಾಜಿಕ ಕಳಕಳಿಯ ಸಿನೆಮಾವನ್ನು ಮಾಡಿದಾಗ ಅಂಥವರ ಜೊತೆ ನಿಂತು ಬೆನ್ನು ತಟ್ಟಬೇಕಿರುವುದು ಕೂಡ ಸರ್ಕಾರವಾಗಿ ನಮ್ಮ ನೈತಿಕ ಹೊಣೆ. ಮುಂದಿನ ದಿನಗಳಲ್ಲಿ ಸಾಮಾಜಿಕ ವ್ಯವಸ್ಥೆಯ ಮೇಲೆ ಬೆಳಕು ಚೆಲ್ಲುವ ಲ್ಯಾಂಡ್ ಲಾರ್ಡ್ ನಂತಹ ಇನ್ನಷ್ಟು ಚಿತ್ರಗಳು ಮೂಡಿಬರಲು ನಮ್ಮ ಈ ನಿರ್ಧಾರ ಸ್ಪೂರ್ತಿಯಾಗಲಿದೆ ಎಂದು ನಂಬಿದ್ದೇನೆ" ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.