ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಸಿನಿಮಾಗಳ ಮೂಲಕ ಗುರುತಿಸಿಕೊಂಡಿರುವ ನಿರ್ದೇಶಕ ಪಿ.ಸಿ. ಶೇಖರ್ ಹಾಗೂ ನಟ ‘ಡಾರ್ಲಿಂಗ್’ ಕೃಷ್ಣ ಕಾಂಬಿನೇಶನ್ನಲ್ಲಿ ಹೊಸದೊಂದು ಚಿತ್ರ ಸೆಟ್ಟೇರಿದೆ. ಆಕಾಶ ಪಿಕ್ಚರ್ಸ್ ಲಾಂಛನದಲ್ಲಿ ನಿರ್ಮಾಪಕ ಪ್ರಕಾಶ್ ಬೂದೂರು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.
ಶೇಷಾದ್ರಿಪರಂನ ಶ್ರೀಮಹಾಲಕ್ಷ್ಮೀ ದೇವಸ್ಥಾನದಲ್ಲಿ ಸರಳ ಪೂಜಾ ಸಮಾರಂಭದೊಂದಿಗೆ ಈ ನೂತನ ಚಿತ್ರಕ್ಕೆ ಅಧಿಕೃತ ಚಾಲನೆ ನೀಡಲಾಯಿತು. ಸದ್ಯಕ್ಕೆ ಚಿತ್ರದ ಘೋಷಣೆಯನ್ನಷ್ಟೇ ಮಾಡಲಾಗಿದ್ದು, ಶೀರ್ಷಿಕೆ ಸೇರಿದಂತೆ ತಾಂತ್ರಿಕ ವರ್ಗದ ಉಳಿದ ಮಾಹಿತಿಗಳನ್ನು ಮುಂದಿನ ದಿನಗಳಲ್ಲಿ ಹಂಚಿಕೊಳ್ಳುವುದಾಗಿ ಚಿತ್ರತಂಡ ತಿಳಿಸಿದೆ.
ವಂಡರ್ಲಾದಲ್ಲಿ ಹೊಸ ರೈಡ್ಗೆ ಚಾಲನೆ ನೀಡಿದ ನಟ ಡಾರ್ಲಿಂಗ್ ಕೃಷ್ಣ
ʻಮಹಾನ್ʼ ನಿರ್ಮಾಪಕರ ಎರಡನೇ ಸಿನಿಮಾ
ನಿರ್ಮಾಪಕ ಪ್ರಕಾಶ್ ಬೂದೂರು ಅವರಿಗೆ ಇದು ಆಕಾಶ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಎರಡನೇ ಸಿನಿಮಾವಾಗಿದೆ. ಪ್ರಸ್ತುತ ಇವರ ನಿರ್ಮಾಣದಲ್ಲಿ ವಿಜಯ್ ರಾಘವೇಂದ್ರ ನಟನೆಯ "ಮಹಾನ್" ಚಿತ್ರ ಮೂಡಿಬರುತ್ತಿದ್ದು, ಆ ಚಿತ್ರಕ್ಕೂ ಪಿ.ಸಿ.ಶೇಖರ್ ಅವರೇ ನಿರ್ದೇಶಕರಾಗಿದ್ದಾರೆ.
ಶೇಖರ್ ಸಾಮರ್ಥ್ಯದ ಮೇಲೆ ನನಗೆ ವಿಶ್ವಾಸವಿದೆ
ಹೊಸ ಚಿತ್ರದ ಕುರಿತು ಮಾತನಾಡಿದ ನಿರ್ಮಾಪಕ ಪ್ರಕಾಶ್ ಬೂದೂರು, "ಮಹಾನ್ ಚಿತ್ರದ ಯಶಸ್ವಿ ಪಯಣದ ನಂತರ ನಿರ್ದೇಶಕ ಪಿ.ಸಿ. ಶೇಖರ್ ಅವರೊಂದಿಗೆ ಕೆಲಸ ಮಾಡುತ್ತಿರುವುದು ಹೆಮ್ಮೆಯ ವಿಷಯ. ಅವರ ಕಥೆ ಹೇಳುವ ಶೈಲಿ ಹಾಗೂ ಕಮರ್ಷಿಯಲ್ ಅಂಶಗಳನ್ನು ಸಮತೋಲನವಾಗಿ ಕಟ್ಟಿಕೊಡುವ ಸಾಮರ್ಥ್ಯದ ಮೇಲೆ ನನಗೆ ವಿಶ್ವಾಸವಿದೆ. ಶೇಖರ್ ಅವರು ಈ ಚಿತ್ರದ ಕಥೆ ಹೇಳಿದಾಗ ನನಗೆ ತಕ್ಷಣ ನೆನಪಾಗಿದ್ದು ಡಾರ್ಲಿಂಗ್ ಕೃಷ್ಣ. ಅವರ ಸಹಜ ಅಭಿನಯ, ಕಾಮಿಡಿ ಟೈಮಿಂಗ್ ಹಾಗೂ ಭಾವನಾತ್ಮಕ ಪಾತ್ರಗಳನ್ನು ಜೀವಂತಗೊಳಿಸುವ ಶಕ್ತಿ ಈ ಪಾತ್ರಕ್ಕೆ ಅತ್ಯಂತ ಸೂಕ್ತವಾಗಿದೆ. ಈ ಸಿನಿಮಾ ಅವರ ವೃತ್ತಿಜೀವನದಲ್ಲಿ ಹೊಸ ಅಧ್ಯಾಯವಾಗಲಿದೆ" ಎಂದು ಭರವಸೆ ವ್ಯಕ್ತಪಡಿಸಿದರು.
Darling Krishna-Milana Nagaraj: ಫ್ಯಾಮಿಲಿ ಕೋರ್ಟ್ನಲ್ಲಿ ನಟ ಡಾರ್ಲಿಂಗ್ ಕೃಷ್ಣ- ಮಿಲನಾ ನಾಗರಾಜ್; ಕಾರಣವೇನು?
ನಾನು ಈವರೆಗೆ ಮಾಡಿರದ ವಿಭಿನ್ನ ಪಾತ್ರ
ನಟ ಡಾರ್ಲಿಂಗ್ ಕೃಷ್ಣ ಮಾತನಾಡಿ, "ಲವ್ ಬರ್ಡ್ಸ್ ಚಿತ್ರದ ನಂತರ ನಿರ್ದೇಶಕ ಪಿ.ಸಿ. ಶೇಖರ್ ಅವರೊಂದಿಗೆ ಒಟ್ಟಿಗೆ ಕೆಲಸ ಮಾಡುತ್ತಿರುವ ಎರಡನೇ ಸಿನಿಮಾ ಇದಾಗಿದೆ. ಇದು ಪ್ರೇಕ್ಷಕರಿಗೆ ಎರಡೂವರೆ ಗಂಟೆಗಳ ಕಾಲ ಪರಿಶುದ್ಧ ಮನರಂಜನೆ ನೀಡುವ ಚಿತ್ರ. ಇದು ಒಂದು ಹೊಸ ಜಾನರ್ನ ಸಿನಿಮಾವಾಗಿದ್ದು, ನನ್ನ ವೃತ್ತಿಜೀವನದಲ್ಲಿ ಈವರೆಗೆ ನಾನು ಮಾಡಿರದ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಕನ್ನಡ ಚಿತ್ರಗಳ ಮೇಲೆ ಅಪಾರ ಪ್ರೀತಿಯಿಟ್ಟು ಸಿನಿಮಾ ನಿರ್ಮಿಸುತ್ತಿರುವ ಪ್ರಕಾಶ್ ಬೂದೂರು ಅವರ ಬ್ಯಾನರ್ನಲ್ಲಿ ನಟಿಸುತ್ತಿರುವುದು ಖುಷಿ ತಂದಿದೆ" ಎಂದರು.
ಕಾಮಿಡಿ ಎಂಟರ್ಟೇನರ್ ಥ್ರಿಲ್ಲರ್ ಕಥಾಹಂದರ
ಈ ಚಿತ್ರದ ಜಾನರ್ ಕುರಿತು ಮಾಹಿತಿ ಹಂಚಿಕೊಂಡ ನಿರ್ದೇಶಕ ಪಿ.ಸಿ. ಶೇಖರ್, "ಕೃಷ್ಣ ಅವರು ನಿರ್ದೇಶಕರ ನಟ. ತಾವೇ ಸ್ವತಃ ಒಬ್ಬ ನಿರ್ದೇಶಕರಾಗಿದ್ದರೂ, ಸೆಟ್ನಲ್ಲಿ ಸಂಪೂರ್ಣವಾಗಿ ನಿರ್ದೇಶಕರಿಗೆ ಶರಣಾಗುತ್ತಾರೆ. ಇದೊಂದು ಕಾಮಿಡಿ ಎಂಟರ್ಟೈನರ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಚಿತ್ರವಾಗಿದ್ದು, ನನಗೂ ಮತ್ತು ಕೃಷ್ಣ ಇಬ್ಬರಿಗೂ ಹೊಸ ಜಾನರ್ ಆಗಿದೆ. ನನ್ನ ಹಿಂದಿನ ಸಿನಿಮಾಗಳಿಗೆ ಕೆಲಸ ಮಾಡಿದ್ದ ಪ್ರಶಾಂತ್ ರಾಜಪ್ಪ ಅವರು ಈ ಚಿತ್ರಕ್ಕೂ ಸಂಭಾಷಣೆ ಬರೆಯುತ್ತಿದ್ದಾರೆ" ಎಂದು ತಿಳಿಸಿದರು.