ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ʻನಾದಯೋಗಿ ಡಾ. ರಾಜಕುಮಾರ್' ಪುಸ್ತಕ ರಿಲೀಸ್‌ ಮಾಡಿದ ಅಣ್ಣಾವ್ರ ಪುತ್ರಿ ಪೂರ್ಣಿಮಾ ರಾಮ್‌ಕುಮಾರ್; ʻಪೂರ್ವ ಆಫ್ರಿಕಾಕ್ಕೂ ತಲುಪಲಿದೆ ಈ ಕೃತಿʼ

ವರನಟ ಡಾ. ರಾಜ್‌ಕುಮಾರ್ ಅವರ ಅಪ್ರತಿಮ ಸಂಗೀತ ಜ್ಞಾನವನ್ನು ಪರಿಚಯಿಸುವ "ನಾದಯೋಗಿ ಡಾ. ರಾಜಕುಮಾರ್" ಪುಸ್ತಕ ಇತ್ತೀಚೆಗೆ ಅದ್ದೂರಿಯಾಗಿ ಲೋಕಾರ್ಪಣೆಗೊಂಡಿತು. ಅಣ್ಣಾವ್ರ ಪುತ್ರಿ ಪೂರ್ಣಿಮಾ ರಾಮ್‌ಕುಮಾರ್ ಈ ಕೃತಿಯನ್ನು ಅನಾವರಣಗೊಳಿಸಿದರು. ವಿಶೇಷವೆಂದರೆ, ಈ ಪುಸ್ತಕವು ಪೂರ್ವ ಆಫ್ರಿಕಾಕ್ಕೂ ತಲುಪಲಿದೆ.

ಕನ್ನಡ ಚಿತ್ರರಂಗದ ಧ್ರುವತಾರೆ, ವರನಟ ಡಾ. ರಾಜ್‌ಕುಮಾರ್ ಅವರ ಅಪ್ರತಿಮ ಸಂಗೀತ ಜ್ಞಾನವನ್ನು ಅನಾವರಣಗೊಳಿಸುವ "ನಾದಯೋಗಿ ಡಾ. ರಾಜಕುಮಾರ್" ಪುಸ್ತಕವು ಇತ್ತೀಚೆಗೆ ಕಲಾವಿದರ ಸಂಘದಲ್ಲಿ ಅದ್ದೂರಿಯಾಗಿ ಲೋಕಾರ್ಪಣೆಗೊಂಡಿತು. ಆರ್. ಮಂಜುನಾಥ್ ಚವಾಣ್ ಹಾಗೂ ಡಾ. ಸೌಮ್ಯ ಮಂಜುನಾಥ್ ಚವಾಣ್ ದಂಪತಿ ಈ ಕೃತಿಯನ್ನು ರಚಿಸಿದ್ದಾರೆ.

ಪುಸ್ತಕ ರಿಲೀಸ್‌ ಮಾಡಿದ ಪೂರ್ಣಿಮಾ ರಾಮ್‌ಕುಮಾರ್

ಡಾ. ರಾಜ್‌ಕುಮಾರ್ ಅವರ ಪುತ್ರಿ ಪೂರ್ಣಿಮಾ ರಾಮ್‌ಕುಮಾರ್ ಅವರು ಈ ಪುಸ್ತಕವನ್ನು ಅನಾವರಣಗೊಳಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಪೂರ್ಣಿಮಾ, "ನಮ್ಮ ತಂದೆಗೆ ಸಂಗೀತವೆಂದರೆ ಪ್ರಾಣ. ಅವರಿಗೆ ಗಜಲ್ ಎಂದರೆ ಬಹಳ ಇಷ್ಟವಾಗಿತ್ತು. ನಮ್ಮ ಇಡೀ ಕುಟುಂಬವೇ ಸಂಗೀತ ಪ್ರೇಮಿಗಳಾಗಿದ್ದು, ಕುಟುಂಬಕ್ಕೆ ಆತ್ಮೀಯರಾದ ಮಂಜುನಾಥ್ ದಂಪತಿಯು ಅಪ್ಪಾಜಿ ಅವರ ಸಂಗೀತ ಜ್ಞಾನದ ಕುರಿತು ಈ ಪುಸ್ತಕ ಬರೆದಿರುವುದು ಸಂತೋಷದ ವಿಷಯ" ಎಂದು ಹೇಳಿದ್ದಾರೆ.

ಪೂರ್ವ ಆಫ್ರಿಕಾಕ್ಕೆ ರಾಜ್ ಪುಸ್ತಕ

ಈ ಸಮಾರಂಭಕ್ಕೆ ತಾಂಜಾನಿಯಾದ ಕಾವೇರಿ ಕನ್ನಡ ಸಂಘದ ಪ್ರತಿನಿಧಿ ಗೌಡ ಅವರು ವಿಶೇಷ ಆಹ್ವಾನಿತರಾಗಿ ಆಗಮಿಸಿದ್ದರು. ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಡಾ. ರಾಜ್‌ಕುಮಾರ್ ಅವರ ಕುರಿತಾದ ಪುಸ್ತಕವೊಂದು ಪೂರ್ವ ಆಫ್ರಿಕಾ ತಲುಪುತ್ತಿರುವುದು ವಿಶೇಷವಾಗಿದ್ದು, ಇದು ನಾಡು-ನುಡಿಯ ಹೆಮ್ಮೆಯ ಪ್ರತೀಕವಾಗಿದೆ.

ಡಾ. ರಾಜ್‌ಕುಮಾರ್ ಸಮಾಧಿ: ʻನನ್ನ ಹೇಳಿಕೆಗೆ ನಾನು ಬದ್ಧ, ದಬ್ಬಾಳಿಕೆ ಮಾಡಿದ್ರೆ ಒಪ್ಪಲ್ಲʼ ಎಂದ ನಟ ಚೇತನ್‌

ಲೇಖಕರು ಹೇಳಿದ್ದೇನು?

ಪುಸ್ತಕದ ಲೇಖಕ ಆರ್. ಮಂಜುನಾಥ್ ಚವಾಣ್, "1992ರ ಸಿನಿಮಾ 'ಜೀವನ ಚೈತ್ರ' ಸಂದರ್ಭದಿಂದ ನಮಗೆ ಅಣ್ಣಾವ್ರ ಒಡನಾಟವಿತ್ತು. ಅವರಿಗೆ ಕರ್ನಾಟಕ ಮತ್ತು ಹಿಂದೂಸ್ತಾನಿ ಸಂಗೀತದ ಬಗ್ಗೆ ಇದ್ದ ಜ್ಞಾನ ಅಪಾರ. 70ರ ಹರೆಯದಲ್ಲೂ ಹೊಸದನ್ನು ಕಲಿಯುವ ಅವರ ಉತ್ಸಾಹ ನಮಗೆ ಪ್ರೇರಣೆ. ಇದನೆಲ್ಲಾ ಹತ್ತಿರದಿಂದ ಕಂಡಿದ್ದ ನಾನು ಹಾಗೂ ನನ್ನ ಪತ್ನಿ ಸೌಮ್ಯ, ಡಾ. ರಾಜ್‌ಕುಮಾರ್ ಅವರಿಗಿದ್ದ ಸಂಗೀತ ಜ್ಞಾನವನ್ನು ಪುಸ್ತಕ ರೂಪದಲ್ಲಿ ಎಲ್ಲರಿಗೂ ತಿಳಿಸಬೇಕು ಎಂಬ ಉದ್ದೇಶದಿಂದ ʻನಾದಯೋಗಿ ಡಾ. ರಾಜಕುಮಾರ್ʼ ಎಂಬ ಪುಸ್ತಕವನ್ನು ಕನ್ನಡ ಹಾಗೂ ಇಂಗ್ಲೀಷ್ ನಲ್ಲಿ ಬರೆದಿದ್ದೇವೆ" ಎಂದು ಹೇಳಿದ್ದಾರೆ.

ಇದೊಂದು ವಿಶೇಷ ಕಾಕತಾಳೀಯ

7.5.1954ರಂದು ಡಾ. ರಾಜ್‌ಕುಮಾರ್ ಅಭಿನಯದ ಮೊದಲ ಚಿತ್ರ 'ಬೇಡರ ಕಣ್ಣಪ್ಪ' ಬಿಡುಗಡೆಯಾಗಿತ್ತು. ಇದೀಗ 72 ವರ್ಷಗಳ ನಂತರ, ಅದೇ ದಿನದಂದು (7.5.2026) ಈ ಪುಸ್ತಕ ಅನಾವರಣಗೊಂಡಿರುವುದು ಒಂದು ಅಪರೂಪದ ಕಾಕತಾಳೀಯವಾಗಿದೆ. ಈ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಡಾ. ಲತಾ, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ಲಹರಿ ಸಂಸ್ಥೆಯ ಮನೋಹರ ನಾಯ್ಡು ಹಾಗೂ ಲಹರಿ ವೇಲು ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.