ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ʻರಾಮರಸʼ ಚಿತ್ರಕ್ಕೆ ಗುರು ಸಿದ್ಧನಾಗಿ ಎಂಟ್ರಿ ಕೊಟ್ಟ ಪ್ರಜ್ವಲ್‍ ದೇವರಾಜ್; ʻಬಿಗ್‌ ಬಾಸ್‌ʼ ಕಾರ್ತಿಕ್‌ ಮಹೇಶ್‌ಗೆ ಸಿಕ್ತು ಹೊಸ ಬಿರುದು

Ramarasa Movie Update: ಗುರು ದೇಶಪಾಂಡೆ ನಿರ್ಮಾಣದ ಮತ್ತು ಬಿ. ಎಂ. ಗಿರಿರಾಜ್ ನಿರ್ದೇಶನದ 'ರಾಮರಸ' ಚಿತ್ರದಲ್ಲಿ ಪ್ರಜ್ವಲ್ ದೇವರಾಜ್ 'ಗುರು ಸಿದ್ಧ' ಎಂಬ ವಿಶಿಷ್ಟ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಕರ್ನಾಟಕದ ಅಲೆಮಾರಿ 'ಸುಡುಗಾಡು ಸಿದ್ಧ' ಸಮುದಾಯದ ಹಿನ್ನೆಲೆ ಹೊಂದಿರುವ ಈ ಪಾತ್ರದ ಟೀಸರ್ ಅನ್ನು ಅವದೂತ ವಿನಯ್ ಗುರೂಜಿ ಬಿಡುಗಡೆ ಮಾಡಿದ್ದಾರೆ.

ಗುರು ದೇಶಪಾಂಡೆ ನಿರ್ಮಾಣದ ಹಾಗೂ ಬಿ. ಎಂ. ಗಿರಿರಾಜ್ ನಿರ್ದೇಶನದ ‘ರಾಮರಸ’ ಚಿತ್ರದಲ್ಲಿ ನಟ ಪ್ರಜ್ವಲ್ ದೇವರಾಜ್ ಅವರು ಗುರು ಸಿದ್ಧ ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಕರ್ನಾಟಕದ ಅಲೆಮಾರಿ ಪರಂಪರೆಯಾದ 'ಸುಡುಗಾಡು ಸಿದ್ಧ' ಸಮುದಾಯದ ಹಿನ್ನೆಲೆಯನ್ನು ಈ ಪಾತ್ರ ಹೊಂದಿದೆ. ಇತ್ತೀಚೆಗೆ ರಾಮನವಮಿ ಸಂದರ್ಭದಲ್ಲಿ ಅವದೂತ ವಿನಯ್ ಗುರೂಜಿ ಅವರು ʻಗುರು ಸಿದ್ದʼ ಪಾತ್ರದ ಕ್ಯಾರೆಕ್ಟರ್ ಟೀಸರ್ ಅನಾವರಣ ಮಾಡಿ ʻರಾಮರಸʼ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.

ನಟ ಪ್ರಜ್ವಲ್‌ ದೇವರಾಜ್‌ ಹೇಳಿದ್ದೇನು?

"ರಾಮರಸ ಚಿತ್ರವನ್ನು ಗುರು ದೇಶಪಾಂಡೆ ಅವರು ಹೇಗೆ ಕಡಿಮೆ ಬಜೆಟ್‌ನಲ್ಲಿ ಮಾಡೋಣ ಎಂದುಕೊಂಡರೋ ಗೊತ್ತಿಲ್ಲ. ಇದೊಂದು ಬಿಗ್ ಬಿಗ್ ಬಜೆಟ್ ಸಿನಿಮಾವಾಗಿದೆ. ಇದರಲ್ಲಿ ನನ್ನ ಪಾತ್ರ ಕೂಡ ಉತ್ತಮವಾಗಿದೆ. ವಿಎಫ್ಎಕ್ಸ್ ವರ್ಕ್ ಅಂತೂ ಅದ್ಬುತವಾಗಿದೆ. ರಾಮರಸ ಈ ವರ್ಷದ ದೊಡ್ಡ ಚಿತ್ರವಾಗಲಿದೆ" ಎಂದು ಭವಿಷ್ಯ ನುಡಿದರು ಪ್ರಜ್ವಲ್ ದೇವರಾಜ್. ಇದೇ ಸಂದರ್ಭದಲ್ಲಿ ರಾಜ್ಯ ಪ್ರಶಸ್ತಿ ಪಡೆದ ಪ್ರಜ್ವಲ್‌ ದೇವರಾಜ್‌ಗೆ ಸನ್ಮಾನ ಮಾಡಲಾಗಿದೆ.

Gana Movie: ಪ್ರಜ್ವಲ್‌ ದೇವರಾಜ್‌ ಅಭಿನಯದ ʼಗಣʼ ಚಿತ್ರ ಜ.31ಕ್ಕೆ ರಿಲೀಸ್‌

ನಿರ್ಮಾಪಕ ಗುರು ದೇಶಪಾಂಡೆ ಏನಂದ್ರು?

"ನಮ್ಮ ಚಿತ್ರದಲ್ಲಿ ಪ್ರಜ್ವಲ್ ದೇವರಾಜ್ ಅವರು ಅಭಿನಯಿಸಿರುವುದು ಬಹಳ ಖುಷಿ ನೀಡಿದೆ. ʻಜಂಟಲ್‌ಮನ್ʼ ಚಿತ್ರದ ನಂತರ ಅವರ ನಮ್ಮ ಸಂಸ್ಥೆಯ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಗುರು ಸಿದ್ದ‌ ಎಂಬ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಈ ಪಾತ್ರ ಪವಾಡ ಪುರುಷರು ಎಂದೇ ಕರೆಯಲ್ಪಡುವ ಸುಡುಗಾಡು ಸಿದ್ದರ ಪಾತ್ರವಾಗಿರುತ್ತದೆ. ಅವರು ಪರಮಶಿವನ ಪರಮ ಭಕ್ತರು. ಒಂದೇ ಕಡೆ ಇರದ ಸಿದ್ದರು ಹಳ್ಳಿಹಳ್ಳಿಗೆ ಸಂಚಾರ ಮಾಡುವುದರ ಜೊತೆಗೆ, ಭವಿಷ್ಯ ನುಡಿಯುವುದು ಮತ್ತು ಅಪರೂಪದ ಗಿಡಮೂಲಿಕೆಗಳ ಮೂಲಕ ಚಿಕಿತ್ಸೆ ನೀಡುವುದು ಮುಂತಾದ ಜನಾನುರಾಗಿ ಕೆಲಸಗಳನ್ನು ಮಾಡುತ್ತಾರೆ. ಈ ಚಿತ್ರದ ಕೊನೆಯ ಇಪ್ಪತ್ತು ನಿಮಿಷಗಳ ಕ್ಲೈಮ್ಯಾಕ್ಸ್ ಅನ್ನು ಜನರು ಚಪ್ಪಲಿ ಬಿಟ್ಟು ನೋಡುವುದಂತೂ ಖಂಡಿತ. ಅಷ್ಟು ಅದ್ಭುತವಾಗಿ ಮೂಡಿಬಂದಿದೆ. ಹಾಡುಗಳು ಸಹ ಒಂದಕ್ಕಿಂತ ಒಂದು ಚೆನ್ನಾಗಿದೆ" ಎಂದು ಗುರು ದೇಶಪಾಂಡೆ ತಿಳಿಸಿದರು. ಸದ್ಯದಲ್ಲೇ ಈ ಸಿನಿಮಾವು ಬಿಡುಗಡೆಯಾಗಲಿದೆಯಂತೆ.

Prajwal Devaraj: ದಾಖಲೆ ಮೊತ್ತಕ್ಕೆ ಪ್ರಜ್ವಲ್‌ ದೇವರಾಜ್‌ ಅಭಿನಯದ 'ರಾಕ್ಷಸ' ಚಿತ್ರದ ತೆಲುಗು ಥಿಯೇಟರ್ ಹಕ್ಕು ಮಾರಾಟ

ಬಿಗ್‌ ಬಾಸ್‌ ಕಾರ್ತಿಕ್‌ ಮಹೇಶ್‌ಗೆ ಹೊಸ ಬಿರುದು

ರಾಮರಸ ಸಿನಿಮಾದಲ್ಲಿ ಹೀರೋ ಆಗಿ ಬಿಗ್‌ ಬಾಸ್‌ ಖ್ಯಾತಿಯ ಕಾರ್ತಿಕ್‌ ಮಹೇಶ್‌ ಕಾಣಿಸಿಕೊಂಡಿದ್ದಾರೆ. ರಾಮರಸ ಸಿನಿಮಾತಂಡವು ಕಾರ್ತಿಕ್‌ ಮಹೇಶ್‌ ಅವರಿಗೆ ʻರೈಸಿಂಗ್‌ ಸ್ಟಾರ್‌ʼ ಎಂದು ಬಿರುದು ನೀಡಲಾಗಿದೆ. "ನಾನು ಪ್ರಜ್ವಲ್ ದೇವರಾಜ್ ಅವರಿಂದ ಈ ಬಿರುದು ಸ್ವೀಕರಿಸಿದ್ದು ಖುಷಿಯಾಗಿದೆ. ಒಂದೊಳ್ಳೆ ಚಿತ್ರದಲ್ಲಿ ನಟಿಸಲು ಅವಕಾಶ ನೀಡಿದ ನಿರ್ಮಾಪಕರಿಗೆ ಹಾಗೂ ನಿರ್ದೇಶಕರಿಗೆ ಧನ್ಯವಾದಗಳು" ಎಂದು ಕಾರ್ತಿಕ್‌ ಮಹೇಶ್‌ ಹೇಳಿದ್ದಾರೆ.

ಜಿ. ಸಿನಿಮಾಸ್ ಮತ್ತು ಸೆವೆನ್ ಸ್ಟಾರ್ ಮೂವೀಸ್ ಜಂಟಿಯಾಗಿ ನಿರ್ಮಿಸುತ್ತಿರುವ ಈ ಸಿನಿಮಾವು ಅತಿ ಶೀಘ್ರದಲ್ಲೇ ತೆರೆಗೆ ತರುವುದಕ್ಕೆ ಚಿತ್ರತಂಡ ರೆಡಿಯಾಗಿದೆ. ಕೆ.ಕೃಷ್ಣಕುಮಾರ್ ಛಾಯಾಗ್ರಹಣ ಮಾಡಿದ್ದಾರೆ. ಹಾಡುಗಳನ್ನು ಡಾ. ವಿ. ನಾಗೇಂದ್ರ ಪ್ರಸಾದ್, ಪುನೀತ್ ರಂಗಸ್ವಾಮಿ ಬರೆದಿದ್ದಾರೆ. ಹೊಸ್ಮನೆ ಮೂರ್ತಿ ಕಲಾ ನಿರ್ದೇಶನ ಮಾಡಿದ್ದಾರೆ. ಹೆಬಾ ಪಟೇಲ್‌, ಯಮುನಾ ಶ್ರೀನಿಧಿ ಮುಂತಾದವರು ಚಿತ್ರದಲ್ಲಿ ನಟಿಸಿದ್ದಾರೆ.