ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Rajanivaasa Movie: ಟ್ರೇಲರ್‌ನಲ್ಲೇ ಕುತೂಹಲ ಮೂಡಿಸಿದೆ ʼರಾಜನಿವಾಸʼ ಚಿತ್ರ

Rajanivaasa Movie: ಮಿಥುನ್ ನಿರ್ದೇಶನದ, ರಾಘವ್ ನಾಯಕ್, ಕೃತಿಕ ಅಭಿನಯದ ಮತ್ತು ಶ್ರೀನಗರ ಕಿಟ್ಟಿ ವಿಶೇಷ ಪಾತ್ರದಲ್ಲಿ ನಟಿಸಿರುವ ʼರಾಜನಿವಾಸʼ ಚಿತ್ರದ ಟ್ರೇಲರ್ ಬಿಡುಗಡೆಯಾಯಿತು. ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರದ ಟ್ರೇಲರ್ ಅನ್ನು ಕ.ರ.ವೇ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣ ಗೌಡ ಅವರು ಬಿಡುಗಡೆ ಮಾಡಿದರು.

ಟ್ರೇಲರ್‌ನಲ್ಲೇ ಕುತೂಹಲ ಮೂಡಿಸಿದೆ ʼರಾಜನಿವಾಸʼ ಚಿತ್ರ

Profile Siddalinga Swamy Jul 11, 2025 6:09 PM

ಬೆಂಗಳೂರು: ಡಿ.ಪಿ. ಆಂಜನಪ್ಪ ನಿರ್ಮಿಸಿರುವ, ಲೋಕೇಶ್ ಗೌಡ ಅವರ ಸಹ ನಿರ್ಮಾಣವಿರುವ, ಮಿಥುನ್ ನಿರ್ದೇಶನದ ಹಾಗೂ ರಾಘವ್ ನಾಯಕ್, ಕೃತಿಕ ಅಭಿನಯದ ಮತ್ತು ಶ್ರೀನಗರ ಕಿಟ್ಟಿ ವಿಶೇಷ ಪಾತ್ರದಲ್ಲಿ ನಟಿಸಿರುವ ʼರಾಜನಿವಾಸʼ ಚಿತ್ರದ (Rajanivaasa Movie) ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಯಿತು. ಕ.ರ.ವೇ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣ ಗೌಡ ಅವರು ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರದ ಟ್ರೇಲರ್ ಅನ್ನು ಬಿಡುಗಡೆ ಮಾಡಿದರು. ನಟ ಆದಿತ್ಯ, ನಿರ್ಮಾಪಕರಾದ‌ ಉದಯ್ ಕೆ ಮೆಹ್ತಾ, ಸಂಜಯ್ ಗೌಡ, ವೀರಕಪುತ್ರ ಶ್ರೀನಿವಾಸ್, ರಾಬರ್ಟ್ ಕ್ರಿಸ್ಟೋಫರ್, ರಮೇಶ್ ಗೌಡ ಅವರು ಸೇರಿದಂತೆ ಅನೇಕ ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದು ʼರಾಜನಿವಾಸʼ ಚಿತ್ರಕ್ಕೆ ಶುಭ ಹಾರೈಸಿದರು.



ಟ್ರೇಲರ್ ಬಿಡುಗಡೆ ಮಾಡಿ ಮಾತನಾಡಿದ ಕ.ರ.ವೇ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ ಅವರು, ಕನ್ನಡ ಚಿತ್ರರಂಗದ ಇಂದಿನ ಪರಿಸ್ಥಿತಿ ಬಗ್ಗೆ ಕೇಳಿದಾಗ ಬಹಳ ಬೇಸರವಾಗುತ್ತದೆ. ಚಿತ್ರರಂಗದ ಹಿರಿಯರೊಡನೆ ನಾನು ಈ ಚಿತ್ರರಂಗದ ವಿಷಯಗಳನ್ನು ಮಾತನಾಡುತ್ತಿರುತ್ತೇನೆ.‌ ಹಿಂದೆ ರಾಜಕುಮಾರ್ ಅವರ ಜತೆಗೆ ಚಿತ್ರರಂಗದ ಪರವಾಗಿ ಸಾಕಷ್ಟು ಹೋರಾಟಗಳಲ್ಲಿ ಭಾಗಿಯಾಗಿದ್ದೇನೆ. ಕನ್ನಡ ಚಿತ್ರರಂಗಕ್ಕಾಗಿ ದುಡಿದಿರುವ ಹಲವು ಹಿರಿಯ ಕಲಾವಿದರು ಹಾಗೂ ತಂತ್ರಜ್ಞರು ಇದ್ದಾರೆ. ಆ ನಿಟ್ಟಿನಲ್ಲಿ ಕನ್ನಡ ಚಿತ್ರರಂಗದ ಗಣ್ಯರನ್ನು ಗೌರವಿಸಲು ಸದ್ಯದಲ್ಲೇ ನಮ್ಮ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಆಯೋಜಿಸಲಿದ್ದೇವೆ. ಬರೀ ಸ್ಮರಣಿಕೆ ಮಾತ್ರ ನೀಡದೆ, ಅದರ ಜತೆಗೆ ಒಂದು ಲಕ್ಷ ನಗದು ಸಹ ನೀಡುವ ಯೋಜನೆ ಹಾಕಿಕೊಂಡಿದ್ದೇವೆ. ಈ ಕುರಿತು ಚಿತ್ರರಂಗದ ಹಿರಿಯರೊಂದಿಗೆ ಮಾತುಕತೆ ನಡೆಸಿದ್ದೇವೆ. ಇನ್ನೂ ಈ ಚಿತ್ರದ ನಿರ್ಮಾಪಕ ಆಂಜನಪ್ಪ ಅವರು ಬಹಳ ವರ್ಷಗಳಿಂದ ಕನ್ನಡಪರ ಕೆಲಸ ಮಾಡಿಕೊಂಡು ಬರುತ್ತಿದ್ದಾರೆ. ಅವರ ನಿರ್ಮಾಣದ ʼರಾಜನಿವಾಸʼ ಚಿತ್ರ ಭರ್ಜರಿ ಯಶಸ್ಸು ಕಾಣಲಿ ಎಂದು ಹಾರೈಸಿದರು.

ʼರಾಜನಿವಾಸʼ ಚಿತ್ರದ ಟ್ರೇಲರ್ ನೋಡಿದಾಗ ಕೆಲವರಿಗೆ ʼಕಾಂತಾರʼ ಚಿತ್ರ ನೆನಪಾಗಬಹುದು. ಆದರೆ ಇದು ʼಕಾಂತಾರʼ ಚಿತ್ರಕ್ಕೂ ಮೊದಲೇ ಆರಂಭವಾದ ಚಿತ್ರ. ಆದರೆ ʼಕಾಂತಾರʼ ಮೊದಲು ಬಿಡುಗಡೆಯಾಯಿತು. ಆ ಚಿತ್ರವನ್ನು ನೋಡಿದ ನಂತರ ನಮ್ಮ ಚಿತ್ರದಲ್ಲಿ ಸಾಕಷ್ಟು ಬದಲಾವಣೆ ಮಾಡಿದ್ದೇವೆ. ಈಗ ನಮ್ಮ ಚಿತ್ರ ತೆರಗೆ ಬರಲು ಸಿದ್ದವಾಗಿದೆ. ಕನ್ನಡ ಸೇರಿದಂತೆ ದಕ್ಷಿಣ ಭಾರತದ ನಾಲ್ಕು ಭಾಷೆಗಳಲ್ಲಿ ನಮ್ಮ ಚಿತ್ರ ಬಿಡುಗಡೆಯಾಗಲಿದೆ. ಆನಂದ್ ಆಡಿಯೋ ಯೂಟ್ಯೂಬ್ ಚಾನಲ್‌ನಲ್ಲಿ ನಾಲ್ಕು ಭಾಷೆಗಳ ಟ್ರೇಲರ್ ಇಂದು ಬಿಡುಗಡೆಯಾಗಿದೆ. ಸದ್ಯದಲ್ಲೇ ಮೊದಲ ಹಾಡು ಸಹ ಅನಾವರಣವಾಗಲಿದೆ‌. ಚಿತ್ರ ಅಂದುಕೊಂಡ ಹಾಗೆ ಬರಲು ಸಹಕಾರ ನೀಡಿದ ನಿರ್ಮಾಪಕರಿಗೆ ಹಾಗೂ ಚಿತ್ರತಂಡಕ್ಕೆ ಧನ್ಯವಾದ ಎಂದರು ನಿರ್ದೇಶಕ ಮಿಥುನ್.

ಟ್ರೇಲರ್ ಬಿಡುಗಡೆ ಮಾಡಿಕೊಟ್ಟ ನಾರಾಯಣ ಗೌಡ ಅವರಿಗೆ ಹಾಗೂ ಆಗಮಿಸಿದ ಪ್ರತಿಯೊಬ್ಬ ಗಣ್ಯರಿಗೆ ಧನ್ಯವಾದ ಎಂದು ಮಾತು ಆರಂಭಿಸಿದ ನಿರ್ಮಾಪಕ ಆಂಜನಪ್ಪ, ನಮ್ಮ ಚಿತ್ರದ ಟ್ರೇಲರ್‌ಗೆ ಸಿಗುತ್ತಿರುವ ಮೆಚ್ಚುಗೆಗೆ ಮನತುಂಬಿ ಬಂದಿದೆ. ಚಿತ್ರ ಚೆನ್ನಾಗಿ ಮೂಡಿಬರಲು ನಿರ್ದೇಶಕರು ಹಾಗೂ ಚಿತ್ರತಂಡದ ಶ್ರಮ ಬಹಳಷ್ಟಿದೆ. ಸಹ ನಿರ್ಮಾಪಕರಾದ ಲೋಕೇಶ್ ಗೌಡ ಅವರು ಸೇರಿದಂತೆ ಅನೇಕ ಸ್ನೇಹಿತರು ನನ್ನೊಂದಿಗಿದ್ದಾರೆ‌. ನಾನು ಸಹ ಕಲಾಮಂದಿರದ ವಿದ್ಯಾರ್ಥಿಯಾಗಿದ್ದೆ. ಅಲ್ಲಿದ್ದಾಗ ಸಾಕಷ್ಟು ಚಿತ್ರರಂಗದವರು ಪರಿಚಯವಾದರು. ನಮ್ಮ ಚಿತ್ರ ಕರ್ನಾಟಕ ಮಾತ್ರವಲ್ಲದೆ ಭಾರತದಾದ್ಯಂತ ಎಲ್ಲರ ಮೆಚ್ಚುಗೆ ಪಡೆದುಕೊಳ್ಳುವ ಭರವಸೆ ಇದೆ. ಈ ಚಿತ್ರಕ್ಕೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು.

ಈ ಸುದ್ದಿಯನ್ನೂ ಓದಿ | Ashada Sale 2025: ಆಫರ್‌... ಆಫರ್‌! ಆಷಾಡಕ್ಕೆ ಭರ್ಜರಿ ಸೇಲ್‌

ಸಹ ನಿರ್ಮಾಪಕ ಲೋಕೇಶ್ ಗೌಡ ಅವರು ಸಹ ಎಲ್ಲರಿಗೂ ಧನ್ಯವಾದ ತಿಳಿಸಿದರು. ನಾಯಕ ರಾಘವ ಹಾಗೂ ನಾಯಕಿ ಕೃತಿಕ ತಮ್ಮ ಪಾತ್ರದ ಬಗ್ಗೆ ಮಾತನಾಡಿದರು. ಕಲಾವಿದರಾದ ನೀನಾಸಂ ಅಶ್ವತ್, ಯಮುನ ಶ್ರೀನಿಧಿ, ಸಹನ ಹಾಗೂ ಸಂಗೀತ ನಿರ್ದೇಶಕ ವಿಜಯ್ ಯಾರ್ಡ್ಲಿ ಮುಂತಾದವರು ಸಮಾರಂಭದಲ್ಲಿ ಉಪಸ್ಥಿತರಿದ್ದರು.