'ಪೆದ್ದಿ' ಚಿತ್ರದ ಚಿತ್ರೀಕರಣದ ವೇಳೆ ಮಣಿಕಟ್ಟಿನ ಗಾಯಕ್ಕೆ ಒಳಗಾಗಿದ್ದ ಟಾಲಿವುಡ್ ʻಮೆಗಾ ಪವರ್ ಸ್ಟಾರ್ʼ ರಾಮ್ ಚರಣ್ ಅವರಿಗೆ ಯಶಸ್ವಿ ಶಸ್ತ್ರಚಿಕಿತ್ಸೆ ನೆರವೇರಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬೆನ್ನಲ್ಲೇ ಅವರು ಪತ್ನಿ ಉಪಾಸನಾ ಕೊನಿಡೇಲ ಅವರೊಂದಿಗೆ ಕೊಯಮತ್ತೂರಿನ ಪ್ರಸಿದ್ಧ ಅಯ್ಯಪ್ಪ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದಾರೆ.
ಮಂಗಳವಾರ (ಜುಲೈ 28) ದೇವಸ್ಥಾನಕ್ಕೆ ಆಗಮಿಸಿದ್ದ ರಾಮ್ ಚರಣ್ ಸಂಪೂರ್ಣ ಕಪ್ಪು ಉಡುಪಿನಲ್ಲಿ, ಕೈಗೆ ಬ್ಯಾಂಡೇಜ್ ಹಾಕಿಕೊಂಡೇ ಆಗಮಿಸಿದ್ದರು. ಪ್ರಾರ್ಥನೆ ಸಲ್ಲಿಸುವ ವೇಳೆ ಪತ್ನಿ ಉಪಾಸನಾ ಅವರು ಹಸುವಿಗೆ ಬಾಳೆಹಣ್ಣು ತಿನ್ನಿಸುತ್ತಿರುವುದು ಕಂಡುಬಂದಿದೆ. ಚಿಕಿತ್ಸೆಯ ಸಮಯದಲ್ಲಿ ತಂದೆ ಮೆಗಾಸ್ಟಾರ್ ಚಿರಂಜೀವಿ, ತಾಯಿ ಸುರೇಖಾ ಮತ್ತು ಪತ್ನಿ ಉಪಾಸನಾ ಸೇರಿದಂತೆ ಇಡೀ ಕುಟುಂಬ ಕೊಯಮತ್ತೂರಿನಲ್ಲಿ ಅವರ ಜೊತೆಗಿತ್ತು.
ಪ್ರಸಿದ್ಧ ಅಂತಾರಾಷ್ಟ್ರೀಯ ವೈದ್ಯರ ತಂಡದಿಂದ ಶಸ್ತ್ರಚಿಕಿತ್ಸೆ
ಕೊಯಮತ್ತೂರಿನ 'ಗಂಗಾ ಆಸ್ಪತ್ರೆ'ಯಲ್ಲಿ ಈ ಶಸ್ತ್ರಚಿಕಿತ್ಸೆ ನಡೆದಿದೆ. ಗಾಯದ ಗಂಭೀರತೆಯನ್ನು ಪರಿಗಣಿಸಿ, ಆಸ್ಪತ್ರೆಯ ಅಧ್ಯಕ್ಷ ಡಾ. ಎಸ್. ರಾಜಶೇಖರನ್ ಮತ್ತು ಡಾ. ಪ್ರವೀಣ್ ಭಾರದ್ವಾಜ್ ಅವರೊಂದಿಗೆ ಮಯಾಮಿಯ ಪ್ರಸಿದ್ಧ ಹಸ್ತ ಮತ್ತು ಮಣಿಕಟ್ಟು ತಜ್ಞ ಡಾ. ಅಲೆಜಾಂಡ್ರೊ ಬಡಿಯಾ (Dr. Alejandro Badia) ನೇತೃತ್ವದ ತಜ್ಞ ವೈದ್ಯರ ತಂಡ ಈ ಸಂಕೀರ್ಣ ಸರ್ಜರಿಯನ್ನು ಯಶಸ್ವಿಯಾಗಿ ನೆರವೇರಿಸಿದೆ.
8 ವಾರಗಳ ಕಾಲ ಕಡ್ಡಾಯ ವಿಶ್ರಾಂತಿಗೆ ಸಲಹೆ
ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದ್ದು, ರಾಮ್ ಚರಣ್ ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ವೈದ್ಯಕೀಯ ತಂಡ ತಿಳಿಸಿದೆ. ಚಿತ್ರೀಕರಣಕ್ಕೆ ಹಿಂತಿರುಗುವ ಮೊದಲು, 8 ವಾರಗಳ ಕಾಲ ಕಡ್ಡಾಯ ವಿಶ್ರಾಂತಿ ಪಡೆಯಲು ಸೂಚಿಸಲಾಗಿದೆ. ವೈದ್ಯಕೀಯ ಅನುಮತಿ ದೊರೆತ ನಂತರವಷ್ಟೇ ಅವರು ಮತ್ತೆ ಕ್ಯಾಮೆರಾ ಎದುರಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
Ram Charan: ಮಗಳ ಮುಖವನ್ನು ಅಂತೂ ರಿವೀಲ್ ಮಾಡಿದ್ರು ರಾಮ್ ಚರಣ್ ದಂಪತಿ
ಬುಚಿ ಬಾಬು ಸನಾ ನಿರ್ದೇಶನದಲ್ಲಿ ಜಾನ್ವಿ ಕಪೂರ್ ಜೊತೆ ನಟಿಸುತ್ತಿದ್ದ 'ಪೆದ್ದಿ' ಚಿತ್ರದ ಶೂಟಿಂಗ್ ವೇಳೆ ಚರಣ್ ಗಾಯಗೊಂಡಿದ್ದರು. ಸಂಪೂರ್ಣ ಚೇತರಿಕೆಯ ನಂತರ ನಿರ್ದೇಶಕ ಸುಕುಮಾರ್ ಮುಂದಿನ ಸಿನಿಮಾದ ಚಿತ್ರೀಕರಣದಲ್ಲಿ ರಾಮ್ ಭಾಗವಹಿಸಲಿದ್ದಾರೆ. ನೆಚ್ಚಿನ ನಟ ಶಸ್ತ್ರಚಿಕಿತ್ಸೆಯ ನಂತರ ಆರೋಗ್ಯವಾಗಿದ್ದು, ದೇವಸ್ಥಾನಕ್ಕೆ ಭೇಟಿ ನೀಡಿದ ಫೋಟೋಗಳು ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಅಭಿಮಾನಿಗಳು ನಿರಾಳರಾಗಿದ್ದಾರೆ.