ಸ್ಯಾಂಡಲ್ವುಡ್ ನಟ ಸತೀಶ್ ನೀನಾಸಂ ಅಭಿನಯದ ʻದಿ ರೈಸ್ ಆಫ್ ಅಶೋಕʼ ಸಿನಿಮಾವು ಫೆಬ್ರವರಿ 27ರಂದು ತೆರೆಗೆ ಬರಲಿದೆ. ಕನ್ನಡದ ಜೊತೆಗೆ ತಮಿಳು ಮತ್ತು ತೆಲುಗು ಭಾಷೆಯಲ್ಲಿ ಈ ಚಿತ್ರವನ್ನು ತೆರೆಗೆ ತರಲು ಚಿತ್ರತಂಡ ಪ್ಲ್ಯಾನ್ ಮಾಡಿಕೊಂಡಿದೆ. ಈ ಮಧ್ಯೆ ʻದಿ ರೈಸ್ ಆಫ್ ಅಶೋಕʼ ಸಿನಿಮಾದ ಟ್ರೇಲರ್ ಅನ್ನು ರಿಲೀಸ್ ಮಾಡಲಾಗಿದೆ. ಕನ್ನಡದ ರವಿಚಂದ್ರನ್, ದುನಿಯಾ ವಿಜಯ್, ವಸಿಷ್ಠ ಸಿಂಹ, ಲೂಸ್ ಮಾದ ಯೋಗಿ, ದಿಗಂತ್, ನಾಗಭೂಷಣ್ ಮತ್ತು ಶಿವರಾಜ್ ಕೆ. ಆರ್. ಪೇಟೆ ಮುಂತಾದವರು ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಸತೀಶ್ ಸಿನಿಮಾದ ಬಗ್ಗೆ ರವಿಚಂದ್ರನ್ ಏನಂದ್ರು ನೋಡಿ
"ನನಗೆ ಈ ಚಿತ್ರದ ಟ್ರೇಲರ್, ಹಾಡು ಯಾವುದು ಕಾಣಿಸಲಿಲ್ಲ. ಸತೀಶ್ ಕಣ್ಣಲ್ಲಿ ನೀರು ಕಾಣಿಸಿತು. ಅದು ಹೊರಗಡೆ ಬರಲಿಲ್ಲ. ನೀನು ಅಲ್ಲೇ ಅರ್ಧ ಗೆದ್ದಾಯ್ತು. ಗಂಡಸು ಕಣ್ಣೀರು ಹಾಕಬಾರದು. ಒಳಗೆ ಇಟ್ಟುಕೊಳ್ಳಬೇಕು. ಸಿನಿಮಾ ಮೇಲೆ ಪ್ರೀತಿ, ಆಸೆ, ಕನಸು ಇದೆ ಅನ್ನೋದು ನಿನ್ನ ಮಾತು, ನಿನ್ನ ಸ್ನೇಹಿತರು ಹೇಳ್ತಾರೆ. ನಿನ್ನ ಕನಸು, ಆಸೆ ನಿಜ ಆಗಲಿ. ಹೆಣ್ಮಕ್ಕಳಿಗೆ ಡೆಲಿವರಿ ನೋವು ಗೊತ್ತು. ಆದರೆ ಪ್ರತಿ ಸಿನಿಮಾ ಮಾಡುವಾಗ ಆಗುವುದು ಡೆಲಿವರಿ ನೋವೇ. ಆ ಆಪರೇಷನ್ ಮಾಡುವುದು ಪ್ರೇಕ್ಷಕರು. ಸಿಸರಿನ್ ಮಾಡುವುದು ನೀವೇ. ಮೊದಲು ಆಪರೇಷನ್ ಮಾಡಿ. ಮೊದಲು ಬದುಕಿಸಲು ಪ್ರಯತ್ನಿಸಿ" ಎಂದು ಪ್ರೇಕ್ಷಕರಿಗೆ ರವಿಚಂದ್ರನ್ ಹೇಳಿದ್ದಾರೆ.
ವಿಮರ್ಶೆ ಮಾಡೋಕೆ ಸಿನಿಮಾ ನೋಡಬೇಡಿ
"ಮೊದಲು ಸಿನಿಮಾ ನೋಡಿ. ಪ್ರೇಕ್ಷಕರ ರೀತಿ ಸಿನಿಮಾಗೆ ಹೋಗಿ. ಅದುಬಿಟ್ಟು ವಿಮರ್ಶೆ ಮಾಡಲು ಹೋಗಬೇಡಿ. ಸಿನಿಮಾದವರು ಕೂಡ ಲೈಕ್ಗೆ ಸಾಯುವುದನ್ನು ಬಿಡಿ. ಪ್ರೇಕ್ಷಕರನ್ನು ಸಿನಿಮಾ ಥಿಯೇಟರ್ ನಲ್ಲಿ ಸಿನಿಮಾ ನೋಡಲು ಬಿಡಿ. ಎರಡೂವರೆ ಗಂಟೆ ಅವರನ್ನು ಮೈಮರೆಸಲು ಬಿಡಿ. ಈ ಸಿನಿಮಾ ಚೆನ್ನಾಗಿ ಆಗಲಿ ಎಂದು ಬಯಸುತ್ತೇವೆ. ಚೆನ್ನಾಗಿ ಮಾಡುವುದು ಸಿನಿಮಾದವರ ಕೆಲಸ. ಕನ್ನಡ ಪ್ರೇಕ್ಷಕರು ಕೂಡ ನೂರು ರೂಪಾಯಿ ಕೊಟ್ಟು ಸಿನಿಮಾ ನೋಡಿ. ಒಂದಷ್ಟು ಸಿನಿಮಾ ಗೆಲ್ಸಿ, ಇದರಿಂದ ನಿಮ್ಮ ಗಂಟೇನೂ ಹೋಗೋದಿಲ್ಲ" ಎಂದಿದ್ದಾರೆ ರವಿಚಂದ್ರನ್.
ಸಿನಿಮಾರಂಗದ ಗೆಳೆಯರಿಗೆ ಸತೀಶ್ ಧನ್ಯವಾದ
"ರವಿಚಂದ್ರನ್ ಅವರು ನಮಗೆ ತಂದೆ ಸಮಾನರು. ದುನಿಯಾ ವಿಜಯ್ಗೆ ಒಂದು ಕಾಲ್ ಮಾಡಿದೆ, ಬಂದರು. ಯೋಗಿ ನನ್ನ ಗೆಳೆಯ. ವಸಿಷ್ಠ ಹೃದಯದಿಂದ ಮಾತನಾಡುವ ಗೆಳೆಯ. ನಾಗಭೂಷಣ್, ದಿಗಂತ್, ಶಿವರಾಜ್ ಕೆ ಆರ್ ಪೇಟೆ ಎಲ್ಲರೂ ನನಗೆ ಸಪೋರ್ಟ್ ಮಾಡಲು ಬಂದಿರುವುದಕ್ಕೆ ಧನ್ಯವಾದ. ನಮ್ಮ ದಿ ರೈಸ್ ಆಫ್ ಅಶೋಕ ಸಿನಿಮಾವನ್ನು ಇದೇ ಫೆ.27ರಂದು ಪ್ರೇಕ್ಷಕರ ಮುಂದೆ ಇಡುತ್ತಿದ್ದೇವೆ. ನನ್ನ ಸ್ನೇಹಿತರು ಎಲ್ಲರೂ ಟ್ರೇಲರ್ ಲಾಂಚ್ ಗೆ ಬಂದಿದ್ದಾರೆ" ಎಂದರು ಸತೀಶ್.
"ನಾನು ತೆಲುಗು, ತಮಿಳಿನಲ್ಲೂ ಈ ಸಿನಿಮಾ ಮಾಡ್ತೀನಿ ಎಂದು ಹೇಳಿಕೊಂಡು ಬರ್ತಿದ್ದೆ. ಎಲ್ಲರೂ ಇವನಿಗೆ ಕೆಜಿಎಫ್, ಕಾಂತಾರ ಹುಚ್ಚು ಹಿಡಿದಿದೆ ಅಂದರು. ನನಗೆ ಕೆಜಿಎಫ್, ಕಾಂತಾರ ಹುಚ್ಚು ಹಿಡಿದಿಲ್ಲ. ನನಗಿರುವುದು ನನ್ನ ಸಿನಿಮಾದ ಹುಚ್ಚು. ನಮ್ಮ ಸಿನಿಮಾವನ್ನು ಪರಭಾಷೆಯವರು ನೋಡಲಿ ಅನ್ನೋದು. ನಾನು ಅವರಿಗೆ ಮೊದಲು ಚಿತ್ರ ತೋರಿಸಿದೆ. ಸಿನಿಮಾ ಸಖತ್ ಆಗಿ ಇದೆ ಎಂದು ತೆಲುಗು, ತಮಿಳಿನಲ್ಲಿ 200 ಥಿಯೇಟರ್ನಲ್ಲಿ ರಿಲೀಸ್ ಮಾಡುತ್ತಿದ್ದಾರೆ. ಸಿನಿಮಾ ಬಗ್ಗೆ ಜಾಸ್ತಿ ಮಾತಾನಾಡಲ್ಲ. ನನ್ನ ಕಷ್ಟ ಕಾಲದಲ್ಲಿ ನಿಂತ ಎಲ್ಲರಿಗೂ ಧನ್ಯವಾದ" ಎಂದು ಸತೀಶ್ ನೀನಾಸಂ ಹೇಳಿದರು.
ʻದಿ ರೈಸ್ ಆಫ್ ಅಶೋಕʼ ಚಿತ್ರದಲ್ಲಿ ಸತೀಶ್ಗೆ ಜೋಡಿಯಾಗಿ ʻಕಾಂತಾರʼ ಸಿನಿಮಾ ಖ್ಯಾತಿಯ ಸಪ್ತಮಿ ಗೌಡ ನಟಿಸಿದ್ದಾರೆ. ಬಿ. ಸುರೇಶ, ರವಿಶಂಕರ್, ಗೋಪಾಲಕೃಷ್ಣ ದೇಶಪಾಂಡೆ, ಸಂಪತ್ ಮೈತ್ರೇಯಾ, ಯಶ್ ಶೆಟ್ಟಿ, ಡ್ರಾಗನ್ ಮಂಜು, ವಿಕ್ರಮ್ ವೇದ ಖ್ಯಾತಿಯ ಹರೀಶ್ ಪೆರಾಡಿ, ಜಗಪ್ಪ ತಾರಾಬಳಗದಲ್ಲಿದ್ದಾರೆ. ಈ ಚಿತ್ರಕ್ಕೆ ವೃದ್ಧಿ ಕ್ರಿಯೇಷನ್ ಹಾಗೂ ಸತೀಶ್ ಪಿಕ್ಚರ್ಸ್ ಹೌಸ್ ಪ್ರೊಡಕ್ಷನ್ ನಡಿ ವರ್ಧನ್ ನರಹರಿ, ಜೈಷ್ಣವಿ ಜೊತೆ ಸೇರಿ ಸತೀಶ್ ನೀನಾಸಂ ಕೂಡ ಹಣ ಹಾಕಿದ್ದಾರೆ.