The Rise of Ashoka: 'ಒಂದು ಸಿನಿಮಾಗೆ 50 ಲಕ್ಷ ತಗೊಂಡಿದ್ರು 3 ವರ್ಷದಲ್ಲಿ 6 ಫಿಲ್ಮ್ ಮಾಡ್ತಿದ್ದೆ': ಸತೀಶ್ 'ನೀನಾಸಂ' ಹೇಳಿದ ಸತ್ಯವಿದು!
The Rise Of Ashoka First Song Released: ನಟ ಸತೀಶ್ ನೀನಾಸಂ ಅವರ 'ದಿ ರೈಸ್ ಆಫ್ ಅಶೋಕ' ಸಿನಿಮಾ ಬಿಡುಗಡೆಗೆ ಸಿದ್ಧವಾಗಿದ್ದು, ಇತ್ತೀಚೆಗೆ ಈ ಚಿತ್ರದ ಹಾಡೊಂದನ್ನು ಬಿಡುಗಡೆ ಮಾಡಲಾಗಿದೆ. ಈ ವೇಳೆ ಭಾವುಕರಾಗಿ ಮಾತನಾಡಿದ ಸತೀಶ್, ʻಈ ಸಿನಿಮಾಕ್ಕಾಗಿ ಒಂದು ರೂಪಾಯಿಯೂ ತೆಗೆದುಕೊಂಡಿಲ್ಲʼ ಎಂದಿದ್ದಾರೆ.
-
ನಟ ಸತೀಶ್ ʻನೀನಾಸಂʼ ಅವರ ಮುಂದಿನ ಸಿನಿಮಾ ʻದಿ ರೈಸ್ ಆಫ್ ಅಶೋಕʼ ತೆರೆಗೆ ಸಜ್ಜಾಗುತ್ತಿದೆ. ಟೈಟಲ್ ಹಾಗೂ ಕಂಟೆಂಟ್ ಮೂಲಕ ಪ್ರೇಕ್ಷಕರ ವಲಯದಲ್ಲಿ ಕುತೂಹಲ ಮೂಡಿಸಿರುವ ಈ ಚಿತ್ರದ ಮೊದಲ ಹಾಡು ಈಚೆಗಷ್ಟೇ ರಿಲೀಸ್ ಆಗಿದೆ. ಮಾದೇವನ ಕುರಿತ ಹಾಡನ್ನು ಬೆಂಗಳೂರಿನ ಪ್ರಸಿದ್ಧ ಗವಿ ಗಂಗಾಧರೇಶ್ವರ ದೇವಸ್ಥಾನದಲ್ಲಿ ಬಿಡುಗಡೆ ಮಾಡಲಾಗಿದೆ. ಈ ಹಾಡನ್ನು ಸ್ವತಃ ನೀನಾಸಂ ಸತೀಶ್ ಅವರೇ ಬರೆದಿರುವುದು ವಿಶೇಷ.
ಸತೀಶ್ ಭಾವುಕ ಮಾತು
ʻದಿ ರೈಸ್ ಆಫ್ ಅಶೋಕʼ ಚಿತ್ರದ ಬಗ್ಗೆ ಭಾವುಕರಾಗಿ ಮಾತನಾಡಿದ ಸತೀಶ್ ನೀನಾಸಂ, "ಪ್ಯಾನ್ ಇಂಡಿಯಾ ಸಿನಿಮಾ ಮಾಡುವ ಹುಚ್ಚ ಅಂತ ಕೇಳ್ತಾರೆ? ಕೆಜಿಎಫ್, ಕಾಂತಾರ ಥರ ಸಿನಿಮಾ ಮಾಡಬೇಕು ಅನ್ನೋ ಆಸೆ ನನಗೂ ಇದೆ. ಅಶೋಕ ಚಿತ್ರಕ್ಕಾಗಿ ನಾನು ಒಂದು ರೂಪಾಯಿ ಕೂಡ ತಗೊಂಡಿಲ್ಲ. ಬಹಳ ಶ್ರಮದಿಂದ ಈ ಸಿನಿಮಾ ಮಾಡಿದ್ದೇವೆ. ನಾಳೆ ಶೂಟಿಂಗ್ ಮಾಡಬೇಕು ಅಂತ ಹೊರಟಾಗ ಮರುದಿನವೇ ನಿರ್ದೇಶಕರು ಆತ್ಮಹತ್ಯೆ ಮಾಡ್ಕೊಂಡಿದ್ದರು. ಅಲ್ಲಿಂದ ಜವಾಬ್ದಾರಿ ಜಾಸ್ತಿ ಆಯ್ತು" ಎಂದಿದ್ದಾರೆ.
ನನ್ನ ಅಣ್ಣ ತೀರಿಕೊಂಡ್ರು
"ಎಲ್ಲಾ ಸಮಸ್ಯೆಗಳನ್ನು ಸರಿದೂಗಿಸಿಕೊಂಡು ಇನ್ನೇನು ಶೂಟಿಂಗ್ಗೆ ಮತ್ತೆ ಹೊರಡಬೇಕು, ನಮ್ಮಣ್ಣ ಆಕ್ಸಿಡೆಂಟ್ನಲ್ಲಿ ತೀರಿಕೊಂಡ್ರು. ಮೂರು ವರ್ಷ ರಾತ್ರಿ ಹಗಲು ಕಣ್ಣೀರು ಹಾಕುತ್ತಾ ಈ ಸಿನಿಮಾ ಕಂಪ್ಲೀಟ್ ಮಾಡಿದ್ದೇವೆ. ನನ್ನ ಶತ್ರುಗಳು ಈ ಸಿನಿಮಾ ನೋಡಿ ಹೆಮ್ಮೆ ಪಡ್ತಾರೆ. ಒಂದು ಸಿನಿಮಾಗೆ 50 ಲಕ್ಷ ರೂ. ತಗೊಂಡು ಮೂರು ವರ್ಷದಲ್ಲಿ 6 ಸಿನಿಮಾ ಮಾಡಬೋದಿತ್ತು. ಆದರೆ ನನಗೆ ಮನಸ್ಸು ಒಪ್ಪಲಿಲ್ಲ. ನಮಗೆ ಸರ್ವಸ್ವವು ರೈಸ್ ಆಫ್ ಅಶೋಕ ಆಗಿದೆ. ಇಡೀ ತಂಡ ತುಂಬಾ ಶ್ರದ್ಧೆಯಿಂದ ಕೆಲಸ ಮಾಡಿದೆ" ಎಂದು ನೀನಾಸಂ ಸತೀಶ್ ಹೇಳಿದ್ದಾರೆ.
Ninasam Satish: 39 ನೇ ವಸಂತಕ್ಕೆ ಕಾಲಿಟ್ಟ ನೀನಾಸಂ ಸತೀಶ್; ನಟನ ಆರಂಭಿಕ ಜೀವನ ಹೇಗಿತ್ತು ಗೊತ್ತಾ?
ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ ಸಪ್ತಮಿ ಗೌಡ
"ಈ ಸಿನಿಮಾವನ್ನು ಮಾಡಿರುವುದಕ್ಕೆ ಬಹಳ ಖುಷಿಯಾಗುತ್ತಿದೆ. ನಾನೇ ಕೊನೆಯದಾಗಿ ಈ ಸಿನಿಮಾಕ್ಕೆ ಸೇರಿಕೊಂಡಿದ್ದೆ. ನಾನು ಈ ಚಿತ್ರ ಭಾಗವಾಗಿದ್ದೇನೋ ಅಂದಿನಿಂದ ಇಂದಿನವರೆಗೂ ಯಾವುದೇ ಸಾಂಗ್, ಡೈಲಾಗ್ , ಸೀನ್, ಕಾಸ್ಟ್ಯೂಮ್ ಎಲ್ಲರ ಬಗ್ಗೆಯೂ ಚರ್ಚೆ ನಡೆಸುತ್ತಾರೆ. ನಮ್ಮ ಅಭಿಪ್ರಾಯ ಕೇಳುತ್ತಾರೆ. ಸತೀಶ್ ಸರ್ ತುಂಬಾ ಸಪೋರ್ಟ್ ಮಾಡಿದ್ದಾರೆ. ಹೂ ಮಾರುವ ಹುಡುಗಿ ಅಂಬಿಕಾ ಎಂಬ ಪಾತ್ರವನ್ನು ನಾನು ಮಾಡಿದ್ದೇನೆ" ಎಂದು ಸಪ್ತಮಿ ಗೌಡ ಹೇಳಿದ್ದಾರೆ.
ʻದಿ ರೈಸ್ ಆಫ್ ಅಶೋಕʼ ಸಿನಿಮಾದಲ್ಲಿ 70ರ ದಶಕದಲ್ಲಿ ನಡೆಯುವ ಕಥೆಯನ್ನು ಹೊಂದಿದ್ದು, ಈ ಚಿತ್ರದಲ್ಲಿ ಸತೀಶ್ ನೀನಾಸಂ ಅವರು ಅನ್ಯಾಯದ ವಿರುದ್ಧ ಹೋರಾಡುವ ಕ್ರಾಂತಿಕಾರಿ ಯುವಕನಾಗಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಬಿ. ಸುರೇಶ್, ರವಿಶಂಕರ್, ಗೋಪಾಲಕೃಷ್ಣ ದೇಶಪಾಂಡೆ, ಸಂಪತ್ ಮೈತ್ರೇಯಾ, ಯಶ್ ಶೆಟ್ಟಿ, ಡ್ರಾಗನ್ ಮಂಜು, ವಿಕ್ರಮ್ ವೇದ ಖ್ಯಾತಿಯ ಹರೀಶ್ ಪೆರಾಡಿ, ಜಗಪ್ಪ ತಾರಾಬಳಗದಲ್ಲಿದ್ದಾರೆ. ಸತೀಶ್ ಅವರ ವೃತ್ತಿಜೀವನದಲ್ಲೇ ಇದು ಬಿಗ್ ಬಜೆಟ್ ಚಿತ್ರವಾಗಿದೆ. ದಿ ರೈಸ್ ಆಫ್ ಆಫ್ ಅಶೋಕ ಚಿತ್ರಕ್ಕೆ ಟಿ ಕೆ ದಯಾನಂದ್ ಕಥೆ ಬರೆದಿದ್ದು, ಪೂರ್ಣಚಂದ್ರ ತೇಜಸ್ವಿ ಸಂಗೀತ ನಿರ್ದೇಶನ ಮಾಡಿದ್ದಾರೆ. ಲವಿತ್ ಛಾಯಾಗ್ರಹಣ ಮಾಡಿದ್ದಾರೆ.