ರಣವೀರ್ ಸಿಂಗ್ ಅಭಿನಯದ ʻಧುರಂಧರ್ 2ʼ ಸಿನಿಮಾವು ಬಾಕ್ಸ್ ಆಫೀಸ್ನಲ್ಲಿ ದೊಡ್ಡ ಸಂಚಲನವನ್ನು ಉಂಟು ಮಾಡಿದೆ. ಈವರೆಗೂ ಈ ಚಿತ್ರದ ಗಳಿಕೆಯು ವಿಶ್ವಾದ್ಯಂತ 900+ ಕೋಟಿ ರೂ. ದಾಟಿದೆ. ಬಾಲಿವುಡ್ ಮಾತ್ರವಲ್ಲದೆ, ದಕ್ಷಿಣ ಭಾರತದಲ್ಲೂ ಈ ಚಿತ್ರಕ್ಕೆ ದೊಡ್ಡ ಕ್ರೇಜ್ ಇದೆ. ದಕ್ಷಿಣದ ಹಲವು ತಾರೆಯರು ಧುರಂಧರ್ 2 ಸಿನಿಮಾವನ್ನು ಕೊಂಡಾಡಿದ್ದಾರೆ. ಇದೀಗ ʻಕರುನಾಡ ಚಕ್ರವರ್ತಿʼ ಡಾ. ಶಿವರಾಜ್ಕುಮಾರ್ ಅವರು ಕೂಡ ಧುರಂಧರ್ 2 ಸಿನಿಮಾವನ್ನು ವೀಕ್ಷಣೆ ಮಾಡಿ, ಖುಷಿ ಪಟ್ಟಿದ್ದಾರೆ.
ಸಿನಿಮಾ ನೋಡಿ ಶಿವಣ್ಣ ಏನಂದ್ರು?
ʻಧುರಂಧರ್ 2ʼ ಸಿನಿಮಾವನ್ನು ನೋಡಿ ಟ್ವೀಟ್ ಮಾಡಿರುವ ನಟ ಶಿವರಾಜ್ಕುಮಾರ್, "ಧುರಂಧರ್: ದಿ ರಿವೆಂಜ್ ಸಿನಿಮಾ ಅದ್ಭುತವಾಗಿದೆ! ಚಿತ್ರದ ಪ್ರತಿಯೊಂದು ಕ್ಷಣವನ್ನೂ ಆನಂದಿಸಿದೆ. ರಣವೀರ್ ಸಿಂಗ್ ಅವರ ನಟನೆ ಅಮೋಘವಾಗಿದೆ, ಇನ್ನು ಶಾಶ್ವತ್ ಸಚ್ದೇವ್ ಅವರ ಸಂಗೀತ ಅದ್ಭುತವಾಗಿದೆ, ವಿಶೇಷವಾಗಿ ಹಳೆಯ ಹಾಡುಗಳ ಬಳಕೆ ಸಿನಿಮಾದ ಮೇಲೆ ಬಲವಾದ ಪ್ರಭಾವ ಬೀರುತ್ತದೆ. ಆದಿತ್ಯ ಧರ್ ಅವರ ದೃಢ ವಿಶ್ವಾಸ ಮತ್ತು ಕಲೆಗಾರಿಕೆಗೆ ದೊಡ್ಡ ನಮಸ್ಕಾರಗಳು. ದೇಶಭಕ್ತಿಗಾಗಿ ಒಬ್ಬ ಸೈನಿಕ ಪಡುವ ಶ್ರಮವೇ ಈ ಸಿನಿಮಾದ ಆತ್ಮ. 'ಧುರಂಧರ್ 2: ದಿ ರಿವೆಂಜ್' ಚಿತ್ರತಂಡದ ಪ್ರತಿಯೊಬ್ಬರಿಗೂ ಅಭಿನಂದನೆಗಳು" ಎಂದು ಶಿವರಾಜ್ಕುಮಾರ್ ಅವರು ಟ್ವೀಟ್ ಮಾಡಿದ್ದಾರೆ.
Dhurandhar 2: 'ಧುರಂಧರ್ 2 ಚಿತ್ರದಲ್ಲಿ ಮೋದಿ ವಿಜಯೋತ್ಸವ ಭಾಷಣ ದೃಶ್ಯ! ಸೋಷಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆ
ಶಿವಣ್ಣ ಹಂಚಿಕೊಂಡ ಟ್ವೀಟ್ ಇಲ್ಲಿದೆ
ʻಧುರಂಧರ್ 2ʼ ಸಿನಿಮಾಗೆ ಅಜನೀಶ್ ಮೆಚ್ಚುಗೆ
ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಅವರು ʻಧುರಂಧರ್ 2ʼ ಸಿನಿಮಾವನ್ನು ವೀಕ್ಷಿಸಿ, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. "ಈಗಷ್ಟೇ 'ಧುರಂಧರ್ 2' ಸಿನಿಮಾ ನೋಡಿದೆ, ನಿಜ ಹೇಳಬೇಕೆಂದರೆ ಅದರ ಗುಂಗಿನಿಂದ ಇನ್ನೂ ಹೊರಬರಲು ಸಾಧ್ಯವಾಗುತ್ತಿಲ್ಲ. ಎಂತಹ ಅದ್ಭುತ ಅನುಭವ! ಈ ಸಿನಿಮಾದಲ್ಲಿ ನಿರ್ದೇಶನವೇ ಅತೀ ದೊಡ್ಡ ಗೆಲುವು. ನೈಜ ಘಟನೆಗಳ ಸರಣಿಯನ್ನು ಇಟ್ಟುಕೊಂಡು ಇಷ್ಟೊಂದು ಪ್ರಭಾವಶಾಲಿ ಸಿನಿಮಾ ಮಾಡುವುದು ಸುಲಭವಲ್ಲ. ಆದರೆ ಕಥೆಯನ್ನು ಹೆಣೆದಿರುವ ರೀತಿ ಮತ್ತು ಸನ್ನಿವೇಶಗಳನ್ನು ಜೋಡಿಸಿರುವ ರೀತಿ ತುಂಬಾ ನ್ಯಾಚುರಲ್ ಆಗಿ, ಆಕರ್ಷಕವಾಗಿ ಮೂಡಿಬಂದಿದೆ" ಎಂದು ಅಜನೀಶ್ ಲೋಕನಾಥ್ ಬರೆದುಕೊಂಡಿದ್ದಾರೆ.
ಈ ಚಿತ್ರ ಒಂದು ಕ್ಷಣವೂ ಬೋರ್ ಎನಿಸುವುದಿಲ್ಲ
"ಈ ಸಿನಿಮಾವು ದೀರ್ಘಾವಧಿಯದ್ದಾಗಿದ್ದರೂ, ಒಂದು ಕ್ಷಣವೂ ಬೋರ್ ಎನಿಸುವುದಿಲ್ಲ. ಕಥೆ ಹೇಳುವ ಶೈಲಿ ಮತ್ತು ಚಿತ್ರಕಥೆ ಎಷ್ಟು ಬಲಿಷ್ಠವಾಗಿದೆ ಎಂಬುದಕ್ಕೆ ಇದೇ ಸಾಕ್ಷಿ. ಬರಹವು ನಿಮ್ಮನ್ನು ಪೂರ್ತಿ ಸಿನಿಮಾದಲ್ಲಿ ತೊಡಗಿಸಿಕೊಳ್ಳುವಂತೆ ಮಾಡುತ್ತದೆ. ಯಾವುದೇ ಅವಸರವಿಲ್ಲದೆ ಭಾವನೆಗಳು ಮತ್ತು ತೀವ್ರತೆಯನ್ನು ನಿಧಾನವಾಗಿ ಕಟ್ಟಿಕೊಡುತ್ತದೆ. ಪ್ರತಿಯೊಂದು ದೃಶ್ಯವೂ ಅರ್ಥಪೂರ್ಣವಾಗಿದ್ದು, ಕಥೆಯ ಪಯಣಕ್ಕೆ ಹೆಚ್ಚಿನ ಆಳವನ್ನು ನೀಡುತ್ತದೆ" ಎಂದು ಅಜನೀಶ್ ಲೋಕನಾಥ್ ಹೇಳಿದ್ದಾರೆ.
ರಣವೀರ್ ಸಿಂಗ್ ಪಾತ್ರವಾಗಿಯೇ ಜೀವಿಸಿದ್ದಾರೆ
"ನಿರ್ದೇಶಕ ಆದಿತ್ಯ ಧರ್ ಅವರು ಎಲ್ಲವನ್ನೂ ಬಹಳ ಸುಂದರವಾಗಿ ಹಿಡಿದಿಟ್ಟಿದ್ದಾರೆ. ಪ್ರತಿ ಫ್ರೇಮ್ ಕೂಡ ದೃಶ್ಯಕಾವ್ಯದಂತಿದೆ. ಸುದೀರ್ಘ ಅವಧಿ ಇದ್ದರೂ ಸಿನಿಮಾ ಎಲ್ಲೂ ಲಯ ತಪ್ಪದಂತೆ ಎಡಿಟಿಂಗ್ ಬಿಗಿಯಾಗಿಟ್ಟಿದೆ. ಶಾಶ್ವತ್ ಸಚ್ದೇವ್ ಅವರ ಸಂಗೀತ ಮತ್ತು ಹಿನ್ನೆಲೆ ಸಂಗೀತ ನಿರೂಪಣೆಯ ತೀವ್ರತೆಯನ್ನು ಹೆಚ್ಚಿಸುವುದಲ್ಲದೆ, ಸಿನಿಮಾ ಮುಗಿದ ಮೇಲೂ ನಿಮ್ಮನ್ನು ಕಾಡುತ್ತದೆ. ರಣವೀರ್ ಸಿಂಗ್ ಅವರು ತಮ್ಮ ವೃತ್ತಿಜೀವನದ ಅತ್ಯುತ್ತಮ ನಟನೆಯನ್ನು ನೀಡಿದ್ದಾರೆ. ಅವರು ಆ ಪಾತ್ರದಲ್ಲಿ ನಟಿಸಿಲ್ಲ, ಬದಲಾಗಿ ಆ ಪಾತ್ರವಾಗಿಯೇ ಜೀವಿಸಿದ್ದಾರೆ ಎನಿಸುತ್ತದೆ" ಎಂದು ಅಜನೀಶ್ ಲೋಕನಾಥ್ ತಿಳಿಸಿದ್ದಾರೆ.