ʻಲವ್ ಯು ಮುದ್ದುʼ ಸಿನಿಮಾವು ಸೊಲ್ಲಾಪುರದ ಪ್ರಸಿದ್ಧ ಯೂಟ್ಯೂಬ್ ಜೋಡಿಯ ನೈಜ ಪ್ರೇಮಕಥೆಯನ್ನಾಧರಿಸಿದ್ದು, ಸದ್ಯ ಅಮೇಜಾನ್ ಪ್ರೈಮ್ನಲ್ಲಿ ಸ್ಟ್ರೀಮ್ ಆಗ್ತಿದೆ. ಈ ಚಿತ್ರವನ್ನು ವೀಕ್ಷಿಸಿದ ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಅವರು ಚಿತ್ರತಂಡಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ.
ಸಿದ್ದುಗೆ ಕರೆ ಮಾಡಿದ ಶಿವಣ್ಣ
ಸೊಲ್ಲಾಪುರದ ಜನಪ್ರಿಯ ಯೂಟ್ಯೂಬ್ ಜೋಡಿಯಾದ ಆಕಾಶ್ ನಾರಾಯಣಕರ್ ಮತ್ತು ಅಂಜಲಿ ಶಿಂಧೆ ಅವರ ನೈಜ ಪ್ರೇಮಕಥೆಯನ್ನು ಆಧರಿಸಿದ್ದ ಲವ್ ಯು ಮುದ್ದು ಸಿನಿಮಾವು ಕಳೆದ ವರ್ಷ ನವೆಂಬರ್ನಲ್ಲಿ ರಿಲೀಸ್ ಆಗಿತ್ತು. ಸಿದ್ದು ಮೂಲಿಮನಿ ಮತ್ತು ರೇಷ್ಮಾ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಈ ಸಿನಿಮಾವು ಒಟಿಟಿಗೆ ಎಂಟ್ರಿ ಕೊಟ್ಟಿದ್ದು, ಅಮೇಜಾನ್ ಪ್ರೈಮ್ ವಿಡಿಯೋದಲ್ಲಿ ಪ್ರಸಾರವಾಗುತ್ತಿದೆ. ಸದ್ಯ ಈ ಚಿತ್ರವನ್ನು ನಟ ಶಿವರಾಜ್ಕುಮಾರ್ ಅವರು ವೀಕ್ಷಣೆ ಮಾಡಿದ್ದು, ಬಹಳವಾಗಿ ಮೆಚ್ಚಿಕೊಂಡಿದ್ದಾರೆ.
ಕೆಮಿಸ್ಟ್ರಿ ಆಫ್ ಕರಿಯಪ್ಪ ಖ್ಯಾತಿಯ ಕುಮಾರ್ ನಿರ್ದೇಶನದ ಮಾಡಿದ್ದ ʻಲವ್ ಯೂ ಮುದ್ದುʼ ಚಿತ್ರವು ನೈಜ ಪ್ರೇಮಿಗಳ ಕಥೆಯನ್ನಾಧರಿಸಿ ರೂಪುಗೊಂಡಿತ್ತು. ಭಾಷೆಯ ಗಡಿಯನ್ನು ಮೀರಿಕೊಂಡು ಈ ಕಥನ ಕರುನಾಡ ಸಿನಿಮಾ ಪ್ರೇಮಿಗಳ ಮನ ಗೆದ್ದಿತ್ತು. ಇದೀಗ ಅಮೇಜಾನ್ ಪ್ರೈಮ್ನಲ್ಲಿ ಲವ್ ಯೂ ಮುದ್ದು ಸಿನಿಮಾವನ್ನು ನೋಡಿರುವ ಹ್ಯಾಟ್ರಿಕ್ ಹೀರೋ ಶಿವಣ್ಣ, ನಟ ಸಿದ್ದು ಮೂಲಿಮನಿಗೆ ಕರೆ ಮಾಡಿದ್ದಾರೆ.
ಹೊಸಬರಿಗೆ ಬೆನ್ನುತಟ್ಟುವ ಶಿವಣ್ಣ
ಸದಾ ಒಳ್ಳೆಯ ಕನ್ನಡ ಸಿನಿಮಾಗಳನ್ನು ಬೆಂಬಲಿಸುತ್ತಾ, ಸಿನಿಮಾ ತಂಡದ ಬೆನ್ತಟ್ಟಿ ಪ್ರೋತ್ಸಾಹಿಸುತ್ತಾ ಬರುತ್ತಿರುವವರು ಶಿವಣ್ಣ, ಲವ್ ಯೂ ಮುದ್ದು ಚಿತ್ರದ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ. ಚಿತ್ರತಂಡದ ಸಮೇತ ಭೇಟಿಯಾಗುವಂತೆ ಆಹ್ವಾನಿಸಿದ್ದಾರೆ. ಇದರಿಂದ ಖುಷಿಗೊಂಡ ಸಿದ್ದು ಮೂಲಿಮನಿ, ರೇಷ್ಮಾ, ಕುಮಾರ್, ನಿರ್ಮಾಪಕ ನರಸಿಂಹ ಮೂರ್ತಿ, ವಿತರಕ ಜಗದೀಶ್ ಗೌಡ ಸೇರಿದಂತೆ ಇಡೀ ತಂಡ ಕಂಠೀರವ ಸ್ಟುಡಿಯೋದಲ್ಲಿ ಶಿವಣ್ಣನನ್ನು ಭೇಟಿ ಮಾಡಿದ್ದಾರೆ. ಚಿತ್ರೀಕರಣದ ನಡುವೆಯೂ ಬಿಡುವು ಮಾಡಿಕೊಂಡ ಶಿವಣ್ಣ ಲವ್ ಯೂ ಮುದ್ದು ಚಿತ್ರದ ಬಗ್ಗೆ ಮಾತನಾಡಿ, ಸಿನಿಮಾ ಮೂಡಿಬಂದಿರೋ ರೀತಿಯ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ.
ಲವ್ ಯು ಮುದ್ದು ಚಿತ್ರ ತನ್ನ ಕಂಟೆಂಟಿನ ಕಾರಣದಿಂದಲೇ ಪ್ರೇಕ್ಷಕರನ್ನು ಸೆಳೆದುಕೊಂಡಿತ್ತು. ಒಂದು ಸತ್ಯ ಕಥೆಯನ್ನು ನೈಜವಾಗಿ ಮನಸಿಗೆ ಸೋಕುವಂತೆ ಕಟ್ಟಿ ಕೊಟ್ಟಿದ್ದ ಕುಮಾರ್ ಪ್ರೇಕ್ಷಕರನ್ನು ಸೆಳೆದುಕೊಂಡಿದ್ದರು. ಬಾಯಿಂದ ಬಾಯಿಗೆ ಸದಭಿಪ್ರಾಯ ಹಬ್ಬಿಕೊಳ್ಳುವ ಮೂಲಕ ಈ ಸಿನಿಮಾ ಯಶಸ್ವೀ ಪ್ರದರ್ಶನ ಕಂಡಿತ್ತು. ಆ ನಂತರ ಅಮೇಜಾನ್ ಪ್ರೈಮ್ಗೆ ಎಂಟ್ರಿ ಕೊಟ್ಟಿದ್ದ ಲವ್ ಯೂ ಮುದ್ದು ಅಲ್ಲಿಯೂ ಯಶಸ್ಸು ಕಾಣುತ್ತಿದೆ.
Love You Muddu OTT: ರಿಯಲ್ ಲವ್ ಸ್ಟೋರಿ! ʻಲವ್ ಯು ಮುದ್ದುʼ ಮೂವಿ ಈ ಒಟಿಟಿಯಲ್ಲಿ ಸ್ಟ್ರೀಮಿಂಗ್
ಇಂತಹ ಹೊತ್ತಿನಲ್ಲಿ ಶಿವಣ್ಣನ ಮೆಚ್ಚುಗೆಯ ಮಾತುಗಳಿಂದ ಚಿತ್ರತಂಡ ಖುಷಿಗೊಂಡಿದೆ. ಕಿಶನ್ ಎಂಟರ್ಟೈನ್ಮೆಂಟ್ ಬ್ಯಾನರಿನಡಿಯಲ್ಲಿ ಕಿಶನ್ ಟಿ.ಎನ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಲಕ್ಷ್ಮಿಕಾಂತ್ ಟಿ.ಎಸ್ ಕಾರ್ಯಕಾರಿ ನಿರ್ಮಾಪಕರಾಗಿ ಜೊತೆಯಾಗಿದ್ದಾರೆ. ಕೃಷ್ಣ ದೀಪಕ್ ಛಾಯಾಗ್ರಹಣ, ಅನಿರುದ್ಧ್ ಶಾಸ್ತ್ರಿ ಸಂಗೀತ ನಿರ್ದೇಶನ, ಸಿಎಸ್ ದೀಪು ಸಂಕಲನ ಈ ಚಿತ್ರಕ್ಕಿದೆ.