ʻವಿಶ್ವವಾಣಿ ಟಿವಿʼ ಯೂಟ್ಯೂಬ್ ಚಾನೆಲ್ನ ನೀಡಿದ ವಿಶೇಷ ಸಂದರ್ಶನದಲ್ಲಿ ಇಡೀ ಪುರುಷ ಸಮುದಾಯದ ವಿರುದ್ಧ ಅಸಭ್ಯ ಹಾಗೂ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎನ್ನಲಾದ ಆರೋಪದ ಮೇಲೆ ಬಿಗ್ ಬಾಸ್ ಮಾಜಿ ಸ್ಪರ್ಧಿ ಸೋನು ಶ್ರೀನಿವಾಸ್ ಗೌಡ ವಿರುದ್ಧ ಕಾನೂನು ಸಮರಕ್ಕೆ ಸಿದ್ಧತೆ ನಡೆದಿದೆ.
‘ವಿಶ್ವವಾಣಿ ಟಿವಿ’ ಚಾನೆಲ್ಗೆ ನೀಡಿದ ನಡೆದ ಸಂದರ್ಶನ ವೇಳೆ, "ಎಲ್ಲಾ ಹುಡುಗ್ರು ಕಳ್ಳ ನನ್ ಮಕ್ಕಳೇ" ಎಂಬ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಸೋನು ಗೌಡ ಪುರುಷರನ್ನು ನಿಂದಿಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಹೇಳಿಕೆ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು, ದೊಡ್ಡ ಮಟ್ಟದ ಚರ್ಚೆ ಹಾಗೂ ವಿರೋಧ ವ್ಯಕ್ತವಾಗುತ್ತಿದೆ.
ವಾಣಿಜ್ಯ ಮಂಡಳಿ ಮತ್ತು ಪೊಲೀಸ್ ಠಾಣೆಗೆ ದೂರು
ಈ ಹಿನ್ನೆಲೆಯಲ್ಲಿ ಇಡೀ ಪುರುಷ ಸಮುದಾಯಕ್ಕೆ ಮಾಡಿರುವ ಅವಮಾನವನ್ನು ಖಂಡಿಸಿ, ಕನ್ನಡ ಚಿತ್ರರಂಗದ ಮುರುಳಿ ಸಿರಾ ಎಂಬುವವರ ಜೊತೆಗೆ ವಿವಿಧ ಪ್ರಗತಿಪರ ಸಂಘಟನೆಗಳ ಪದಾಧಿಕಾರಿಗಳು ಜಂಟಿಯಾಗಿ ಪ್ರತಿಭಟಿಸಲು ಮುಂದಾಗಿದ್ದಾರೆ. ಈ ಸಂಬಂಧ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ (KFCC) ದೂರು ನೀಡಲು ಸಂಘಟನೆಗಳು ಹೋಗಿದ್ದವು. ಆದರೆ ಸೋನು ಶ್ರೀನಿವಾಸ್ ಗೌಡ ವಾಣಿಜ್ಯ ಮಂಡಳಿಯಲ್ಲಿ ಸದಸ್ಯರಲ್ಲದ ಕಾರಣದಿಂದ ದೂರು ಪಡೆಯಲಿಲ್ಲ. ಬದಲಿಗೆ, ಕಲಾವಿದರ ಸಂಘಕ್ಕೆ ದೂರು ನೀಡಿ ಎಂದು ಹೇಳಲಾಗಿದೆ ಎಂಬ ಮಾಹಿತಿ ಸಿಕ್ಕಿದೆ. ಆದರೆ ಸೋನು ಕಲಾವಿದರ ಸಂಘದ ಸದಸ್ಯತ್ವವನ್ನೂ ಕೂಡ ಹೊಂದಿಲ್ಲ ಎಂಬ ಮಾಹಿತಿ ಇದೆ.
ಇನ್ನು, ಬೆಂಗಳೂರಿನ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲೂ ಸೋನು ಶ್ರೀನಿವಾಸ್ ಗೌಡ ವಿರುದ್ಧ ಅಧಿಕೃತವಾಗಿ ದೂರು ದಾಖಲಿಸಲು ನಿರ್ಧರಿಸಲಾಗಿದೆ. ಈ ಕುರಿತು ಇನ್ನಷ್ಟೇ ಮಾಹಿತಿಗಳು ಲಭ್ಯವಾಗಬೇಕಿದೆ. ಅಂದಹಾಗೆ, ಸಾಮಾಜಿಕ ಸ್ವಾಸ್ಥ್ಯ ಕೆಡಿಸುವ ಹಾಗೂ ಒಂದು ಪುರುಷ ಸಮುದಾಯವನ್ನು ಗುರಿಯಾಗಿಸಿ ಅವಹೇಳನ ಮಾಡುವ ಇಂತಹ ಪ್ರವೃತ್ತಿಗೆ ಬ್ರೇಕ್ ಹಾಕಬೇಕು ಎಂದು ಆಗ್ರಹಿಸಿರುವ ಮುರುಳಿ ಸಿರಾ ಮತ್ತು ತಂಡ, ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದೆ.
ಸೋನು ಶ್ರೀನಿವಾಸ್ ಗೌಡ ನೀಡಿದ ಸಂದರ್ಶನ
ಅಷ್ಟಕ್ಕೂ ಆಗಿದ್ದೇನು?
ಈಚೆಗೆ ʻಕೇಕೆʼ ಸಿನಿಮಾದ ಐಟಂ ಸಾಂಗ್ ಅನ್ನು ರಿಲೀಸ್ ಮಾಡಲಾಗಿತ್ತು. ಆ ಸಾಂಗ್ನಲ್ಲಿ ಸೋನು ಶ್ರೀನಿವಾಸ್ ಗೌಡ ಡ್ಯಾನ್ಸ್ ಮಾಡಿದ್ದಾರೆ. ಇದೇ ಮೊದಲ ಬಾರಿಗೆ ಅವರು ಇಂಥದ್ದೊಂದು ಹಾಡಿನಲ್ಲಿ ಡ್ಯಾನ್ಸ್ ಮಾಡಿದ್ದು, ಅವರ ಹುಟ್ಟುಹಬ್ಬದ ದಿನವೇ ಆ ಹಾಡಿನ ರಿಲೀಸ್ ಆಗಿತ್ತು. ಈ ವೇಳೆ ವಿಶ್ವವಾಣಿ ಟಿವಿ ಚಾನೆಲ್ಗೆ ಸೋನು ಸಂದರ್ಶನ ನೀಡಿದ್ದರು.
ಆ ವೇಳೆ, "ರಿಲೇಷನ್ಶಿಪ್ ಅಲ್ಲಿ ಮೋಸ ಮಾಡೋರಿಗೆ ಏನ್ ಹೇಳೋಕೆ ಇಷ್ಟ ಪಡ್ತೀರಾ" ಎಂದು ಪ್ರಶ್ನೆ ಕೇಳಲಾಗಿತ್ತು. ಅದಕ್ಕೆ ಉತ್ತರಿಸಿದ್ದ ಸೋನು, "ಪ್ರಸ್ತುತ ದಿನಗಳಲ್ಲಿ ಎಲ್ಲರೂ ಒಳ್ಳೆಯವರೇ ಇರುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ, ಕೆಟ್ಟ ಹುಡುಗರು ಇರುತ್ತಾರೆ. ಹಾಗಾಗಿ ನಾವು ಹುಡುಗಿಯರು ಜಾಗರೂಕರಾಗಿರಬೇಕು. ಎಲ್ಲಾ ಹುಡುಗ್ರು ಕಳ್ಳ ನನ್ ಮಕ್ಕಳೇ. ಎಲ್ಲರೂ ಮುಖವಾಡ ಧರಿಸಿದವರೇ ಆಗಿರುತ್ತಾರೆ. ಹುಡುಗರು ಆರಂಭದಲ್ಲಿ ಅತ್ಯಂತ ಮೃದುವಾಗಿ ಎಲ್ಲವನ್ನೂ ಕೇಳಿ ತಿಳಿದುಕೊಳ್ಳುತ್ತಾರೆ, ಬಳಿಕ ತಮಗೆ ಬೇಕಾದ್ದನ್ನು ಮಾಡಿಕೊಳ್ಳುತ್ತಾರೆ. ಕೊನೆಗೆ ಎಲ್ಲ ತಪ್ಪುಗಳ ಹೊಣೆಯನ್ನು ಹುಡುಗಿಯರ ಮೇಲೆ ಹಾಕಿ, ಅವರನ್ನೇ ಅಪರಾಧಿಗಳು ಎಂಬಂತೆ ಬಿಂಬಿಸುತ್ತಾರೆ" ಎಂದು ಹೇಳಿದ್ದರು.
ಸಂದರ್ಶನದ ವೇಳೆ ನಡೆದಿದ್ದೇನು?
ಸೋನು ಮೇಲೆ ಹುಡುಗರ ಕೆಂಗಣ್ಣು
"ನಾನು ಹುಡುಗಿಯರು ನೂರಕ್ಕೆ ನೂರರಷ್ಟು ಪರಿಪೂರ್ಣರು ಎಂದು ಹೇಳುತ್ತಿಲ್ಲ. ಕೆಲವೊಮ್ಮೆ ಹುಡುಗಿಯರು ಸರಿ ಇರುವುದಿಲ್ಲ, ಇನ್ನು ಕೆಲವು ಬಾರಿ ಹುಡುಗರು ಸರಿ ಇರುವುದಿಲ್ಲ. ಹುಡುಗಿ ಯೋಗ್ಯಳಾಗಿದ್ದರೆ ಹುಡುಗ ಯೋಗ್ಯನಾಗಿರುವುದಿಲ್ಲ, ಹುಡುಗ ಯೋಗ್ಯನಾಗಿದ್ದರೆ ಹುಡುಗಿ ಯೋಗ್ಯಳಾಗಿರುವುದಿಲ್ಲ. ಇಬ್ಬರೂ ಯೋಗ್ಯರಾಗಿದ್ದರೆ ವಿಧಿಯೇ ಪೂರಕವಾಗಿರುವುದಿಲ್ಲ. ಹೀಗಾಗಿ ಇದಕ್ಕೆ ಏನೂ ಮಾಡಲು ಸಾಧ್ಯವಿಲ್ಲ. ಕಷ್ಟಗಳನ್ನು ಅನುಭವಿಸುತ್ತಾ, ಪರಸ್ಪರ ಹೊಂದಾಣಿಕೆ ಮಾಡಿಕೊಳ್ಳುತ್ತಾ ಸಾಗಬೇಕು. ನಾವು ಚಿನ್ನದ ಒಡವೆಯನ್ನು ಕೊಂಡಾಗ ಅದು ಒಡೆದುಹೋಯಿತು ಅಥವಾ ಸವೆದುಹೋಯಿತು ಎಂಬ ಕಾರಣಕ್ಕೆ ಎಸೆದುಬಿಡಲು ಸಾಧ್ಯವಿಲ್ಲವಷ್ಟೇ? ಹಾಗೆಯೇ ಅವರನ್ನು ತಿದ್ದಿ, ಬುದ್ಧಿ ಹೇಳಿ ಸರಿಪಡಿಸಿಕೊಂಡು ಜೀವನ ನಡೆಸಬೇಕು" ಎಂದು ಸೋನು ಹೇಳಿದ್ದರು. ಆದರೆ, "ಎಲ್ಲಾ ಹುಡುಗ್ರು ಕಳ್ಳ ನನ್ ಮಕ್ಕಳೇ" ಎಂಬ ಮಾತು ಮಾತ್ರ ಈಗ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದೆ.