ದಳಪತಿ ವಿಜಯ್ ಅವರ ‘ಜನ ನಾಯಗನ್’ ಸಿನಿಮಾಗಳಿಗೆ ಎದುರಾಗಿರುವ ಸಂಕಷ್ಟಗಳು ಸದ್ಯಕ್ಕೆ ಮುಗಿಯುವಂತೆ ಕಾಣುತ್ತಿಲ್ಲ. ಈಗಾಗಲೇ ಸೆನ್ಸಾರ್ ಮಂಡಳಿಯಿಂದ ಅಡಚಣೆ ಎದುರಿಸುತ್ತಿರುವ ಈ ಚಿತ್ರವು ಸುಪ್ರೀಂ ಕೋರ್ಟ್ವರೆಗೂ ಹೋಗಿಬಂದಿದೆ. ಇದೀಗ ಪುನರ್ ಸೆನ್ಸಾರ್ ಮಾಡಿಸಲು ಚಿತ್ರತಂಡ ರೆಡಿಯಾಗಿತ್ತು. ಅದಕ್ಕೆ ಮುಹೂರ್ತವು ನಿಗದಿಯಾಗಿತ್ತು. ಸೋಮವಾರ (ಮಾ.9) ಮಧ್ಯಾಹ್ನ 2 ಗಂಟೆಗೆ ಜನ ನಾಯಗನ್ ಸಿನಿಮಾವನ್ನು ನೋಡಬೇಕಾಗಿತ್ತು. ಆದರೆ ಎಲ್ಲವೂ ತಲೆಕೆಳಗಾಗಿದೆ.
ಕೊನೇ ಕ್ಷಣದ ಬದಲಾವಣೆ ಏಕೆ?
ಇಂದು (ಮಾ.9) ಮಧ್ಯಾಹ್ನ ಸೆನ್ಸಾರ್ ಮಂಡಳಿಯ ಪುನರ್ ಪರಿಶೀಲನಾ ಸಮಿತಿಯು ಗಂಟೆಗೆ ಚಿತ್ರವನ್ನು ಪುನಃ ಸೆನ್ಸಾರ್ ಮಾಡಬೇಕಿತ್ತು. ಆದರ ಈ ಚಿತ್ರದ ಪುನರ್ ಸೆನ್ಸಾರ್ ಪ್ರಕ್ರಿಯೆಯು ಕೊನೆಯ ಕ್ಷಣದಲ್ಲಿ ಮುಂದೂಡಲ್ಪಟ್ಟಿದೆ ಎನ್ನಲಾಗಿದೆ. ಕಾರಣ ಏನೆಂದರೆ, ಸಮಿತಿಯ ಕೆಲವು ಸದಸ್ಯರು ಅನಾರೋಗ್ಯಕ್ಕೆ ಒಳಗಾದ ಕಾರಣ ಇಂದು ಅವರಿಂದ ಸಿನಿಮಾ ವೀಕ್ಷಣೆ ಮಾಡಲು ಸಾಧ್ಯವಿಲ್ಲವಂತೆ. ಆ ಕಾರಣಕ್ಕಾಗಿ ಮುಂದೂಡಲಾಗಿದೆ ಎಂದು ತಿಳಿದುಬಂದಿದೆ. ಸದಸ್ಯರಿಗೆ ಹುಷಾರಿಲ್ಲವೆಂದರೆ, ಹೆಚ್ಚುವರಿ ಸದಸ್ಯರು ಇರಬೇಕಲ್ಲವೇ ಎಂಬ ಪ್ರಶ್ನೆ ಕೇಳಿಬಂದಿದೆ.
ದಳಪತಿ ವಿಜಯ್ 'ಜನ ನಾಯಗನ್' ಬಿಡುಗಡೆಗೆ ಕಾನೂನು ಸಂಕಷ್ಟ: ಜನವರಿ 27ಕ್ಕೆ ಹೈಕೋರ್ಟ್ ಅಂತಿಮ ತೀರ್ಪು!
ಇದು ವಿಜಯ್ ಅವರ ಕೊನೆಯ ಸಿನಿಮಾ.
ವಿಜಯ್ ಅವರು ಪೂರ್ಣ ಪ್ರಮಾಣದಲ್ಲಿ ರಾಜಕೀಯಕ್ಕೆ ಪ್ರವೇಶಿಸಿರುವುದಿರಂದ, ಇನ್ಮುಂದೆ ಸಿನಿಮಾಗಳಲ್ಲಿ ನಟಿಸೋದಿಲ್ಲ. ಹಾಗಾಗಿ, ಜನ ನಾಯಗನ್ ಅವರ ಸಿನಿಮಾ. ಆದ್ದರಿಂದ ಈ ಚಿತ್ರದ ಮೇಲೆ ಭಾರಿ ನಿರೀಕ್ಷೆಗಳಿವೆ. ಈ ಚಿತ್ರವನ್ನು ಕರ್ನಾಟಕದ ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಿಸಿದೆ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ಜನ ನಾಯಗನ್ ಸಿನಿಮಾ ತೆರೆಕಂಡು ಭರ್ತಿ 60 ದಿನಗಳಾಗಿರಬೇಕಿತ್ತು. ಆದರೆ ಸದ್ಯಕ್ಕಂತೂ ರಿಲೀಸ್ ಆಗುವ ಸಾಧ್ಯತೆಗಳೇ ಕಾಣುತ್ತಿಲ್ಲ.
ಚಿತ್ರತಂಡದ ಪ್ಲ್ಯಾನ್ ಏನು?
ಇನ್ನೇನು ಸದ್ಯದಲ್ಲೇ ತಮಿಳುನಾಡು ವಿಧಾನಸಭಾ ಚುನಾವಣೆ ಘೋಷಣೆ ಆಗುತ್ತಿರುವುದರಿಂದ ಸದ್ಯಕ್ಕಂತೂ ಜನ ನಾಯಗನ್ ಸಿನಿಮಾವನ್ನು ರಿಲೀಸ್ ಮಾಡಲು ಸಾಧ್ಯವಿಲ್ಲ. ಆದರೆ ಮೇ ಮೊದಲ ವಾರದೊತ್ತಿಗೆ ಚುನಾವಣೆ ಫಲಿತಾಂಶ ಬರುವುದರಿಂದ, ಅಷ್ಟೊತ್ತಿಗೆ ಸಿನಿಮಾವನ್ನು ಸೆನ್ಸಾರ್ ಮಾಡಿಸಿದ್ದರೆ, ತಕ್ಷಣವೇ ಆಗ ರಿಲೀಸ್ ಮಾಡಬಹುದು ಎನ್ನುವುದು ಚಿತ್ರತಂಡದ ಲೆಕ್ಕಚಾರ. ಆದರೆ ಸದ್ಯಕ್ಕೆ ಸೆನ್ಸಾರ್ ಸಮಸ್ಯೆಗಳೇ ಮುಗಿಯುವಂತೆ ಕಾಣುತ್ತಿಲ್ಲ.