ತಮಿಳುನಾಡು ವಿಧಾನಸಭೆಯಲ್ಲಿ ಇಂದು ವಿರೋಧ ಪಕ್ಷದ ನಾಯಕ ಉದಯನಿಧಿ ಸ್ಟಾಲಿನ್ ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. "ತಮಿಳುನಾಡಿನಿಂದ ಸನಾತನ ಧರ್ಮವನ್ನು ನಿರ್ಮೂಲನೆ ಮಾಡಬೇಕು" ಎಂದಿದ್ದಾರೆ. ಇದರ ಬಗ್ಗೆ ಈಗ ದೇಶಾದ್ಯಂತ ಚರ್ಚೆ ನಡೆಯುತ್ತಿದೆ. ಈ ಹಿಂದೆಯೂ ಕೂಡ ಸನಾತನ ಧರ್ಮದ ಕುರಿತು ಉದಯನಿಧಿ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಸದ್ಯ ಉದಯನಿಧಿ ಮಾತಿಗೆ ಸ್ಯಾಂಡಲ್ವುಡ್ ನಟ ಹಾಗೂ ಸಾಮಾಜಿಕ ಕಾರ್ಯಕರ್ತ ಅನಿರುದ್ಧ ಜತಕರ ಅವರು ಪ್ರತಿಕ್ರಿಯಿಸಿದ್ದಾರೆ.
ಅನಿರುದ್ಧ ಹೇಳಿದ್ದೇನು?
ತಮ್ಮ ಫೇಸ್ಬುಕ್ನಲ್ಲಿ ಪೋಸ್ಟ್ ಹಂಚಿಕೊಂಡಿರುವ ನಟ ಅನಿರುದ್ಧ ಜತಕರ, "ಉದಯನಿಧಿ ಸ್ಟಾಲಿನ್ ಸರ್, ಇಂದು ನೀವು ಮತ್ತೆ, 'ಜನರನ್ನು ವಿಭಜಿಸಿದ ಸನಾತನವನ್ನು ನಿರ್ಮೂಲನೆ ಮಾಡಬೇಕು' ಎಂದು ಹೇಳಿದ್ದೀರಿ. ಶತಮಾನಗಳಿಂದ ಅಸ್ತಿತ್ವದಲ್ಲಿರುವ ಸನಾತನ ಪರಂಪರೆ, ಕಾಲಾನುಸಾರ ಅನೇಕ ಸಾಮಾಜಿಕ ಸುಧಾರಣೆಗಳನ್ನು ಸ್ವೀಕರಿಸುತ್ತಾ ಬಂದಿದೆ" ಎಂದು ಹೇಳಿದ್ದಾರೆ.
ಇಡೀ ಜಗತ್ತೇ ಒಂದು ಕುಟುಂಬ
"ದಯವಿಟ್ಟು ಜನರ ಮನಸ್ಸಿನಲ್ಲಿ ನಕಾರಾತ್ಮಕತೆ ಅಥವಾ ವಿಭಜನೆಯ ಭಾವನೆಗಳನ್ನು ಹುಟ್ಟುಹಾಕುವ ಹೇಳಿಕೆಗಳನ್ನು ತಪ್ಪಿಸಿ. ಪರಸ್ಪರ ಗೌರವ ಮತ್ತು ರಚನಾತ್ಮಕ ಸಂವಾದವೇ ಸಮಾಜವನ್ನು ಉತ್ತಮ ದಿಕ್ಕಿನಲ್ಲಿ ಮುನ್ನಡೆಸುತ್ತದೆ. ವಸುಧೈವ ಕುಟುಂಬಕಂ, ಇಡೀ ಜಗತ್ತೇ ಒಂದು ಕುಟುಂಬ ಎಂಬ ವಿಶ್ವಮಾನವೀಯ ಚಿಂತನೆಯೂ ಸನಾತನ ಧರ್ಮದ ಆಂತರಿಕ ಮೌಲ್ಯಗಳಲ್ಲಿ ಒಂದಾಗಿದೆ" ಎಂದು ಕಿವಿಮಾತನ್ನು ನಟ ಅನಿರುದ್ಧ ಜತಕರ ಅವರು ಹೇಳಿದ್ದಾರೆ.
ಅನಿರುದ್ಧ ಅವರ ಪೋಸ್ಟ್
ನೆಟ್ಟಿಗರು ಏನಂದ್ರು?
ನಟ ಅನಿರುದ್ಧ ಜತಕರ ಅವರು ಈ ಹೇಳಿಕೆಗೆ ಪರ-ವಿರೋಧ ಪ್ರತಿಕ್ರಿಯೆಗಳು ಬಂದಿವೆ.
- "ಡಿಎಂಕೆ ಪಕ್ಷದವರು ಈ ತರಹದ ಹೇಳಿಕೆ ಮೊದಲಿನಿಂದಲೂ ಹೇಳುತ್ತಾ ಬಂದಿರುವುದರಿಂದಲೇ ಇಂದು ತಮಿಳುನಾಡಿನಲ್ಲಿ ಡಿಎಂಕೆ ಪಕ್ಷ ಧೂಳೀಪಟವಾಗಿದೆ. ಉದಯನಿಧಿ ತಂದೆ ಎಂಕೆ ಸ್ಟಾಲಿನ್ ಸೋತು ಮೂಲೆ ಗುಂಪಾಗಿರುವುದು"
- "ಎಷ್ಟೋ ಸೆಲೆಬ್ರಿಟಿಗಳು ಮಾತಾಡಲು ಹೆದರುವ ವಿಷಯವನ್ನು ನೀವು ಮಾತಾಡಿದ್ದೀರಾ, ಧನ್ಯವಾದಗಳು ಸರ್. ನಮ್ಮ ಭಾಷೆ, ದೇಶ, ಧರ್ಮದ ಬಗ್ಗೆ ಯಾರಾದರೂ ಅವಹೇಳನ ಮಾಡಿದರೆ, ಅದನ್ನು ವಿರೋಧ ಮಾಡಬೇಕು. ಇದು ರಾಜಕೀಯ ನಮಗೆ ಯಾಕೆ ಬೇಕು ಅಂತ ಹೇಳಿ ಸುಮ್ಮನೆ ಆಗುವುದು, ನಮ್ಮತನವನ್ನು ಬಿಟ್ಟು ಕೊಟ್ಟಂತೆ"
- "ತಾವು ಈ ಥರದ ವಿಷಯಗಳಿಂದ ಅಂತರ ಕಾಯ್ದುಕೊಳ್ಳುವುದು ಸೂಕ್ತ ಅನಿಸುತ್ತೆ. ಕಾರಣ ಸರಳ, ಯಾವುದೇ ಪಕ್ಷ, ಯಾವುದೇ ರಾಜಕಾರಣಿ ಯಾವಾಗ ಯಾವ ಬಣ್ಣಕ್ಕೆ ತಿರಗುತ್ತಾನೆ ಅನ್ನೋದನ್ನ ಹೇಳೋದು ಕಷ್ಟ. ಹಾಗಾಗಿ, ತಾವು ವಿಷ್ಣುದಾದಾ ಅವರಂತೆ ರಾಜಕೀಯ ಪ್ರೇರಿತ ವಿಷಯಗಳಿಂದ ದೂರವಿರುವುದು ನಮಗೆಲ್ಲಾ ತುಂಬ ಖುಷಿಕೊಡುತ್ತೆ"
ಉದಯನಿಧಿ ಸ್ಟಾಲಿನ್ ಏನೆಲ್ಲಾ ಹೇಳಿದ್ರು?
ಇಂದು (ಮೇ 12) ಸದನದಲ್ಲಿ ಮಾತನಾಡಿದ ಉದಯನಿಧಿ, "ವಂದೇ ಮಾತರಂ ಹಾಡಿದ ನಂತರ ತಮಿಳುನಾಡಿನ ರಾಜ್ಯ ಗೀತೆಯನ್ನು ನುಡಿಸಿರುವುದಕ್ಕೆ ವಿರೋಧ ಪಕ್ಷಗಳು ಕಳವಳ ವ್ಯಕ್ತಪಡಿಸಿವೆ. ಪಶ್ಚಿಮ ಬಂಗಾಳ ಮುಖ್ಯಮಂತ್ರಿಯ ಪ್ರಮಾಣವಚನ ಸಮಾರಂಭದಲ್ಲಿಯೇ ವಂದೇ ಮಾತರಂ ಹಾಡಿಲ್ಲ. ಆದರೆ ಇಲ್ಲಿ ಅದನ್ನು ಹಾಡಿಸಲಾಯಿತು. ಅಲ್ಲಿನ ರಾಜ್ಯಪಾಲರು ಯಾರು ಎಂದು ನಿಮಗೆಲ್ಲರಿಗೂ ತಿಳಿದಿದೆ. ಸರ್ಕಾರ ಮತ್ತೆ ಈ ರೀತಿ ಆಗದಂತೆ ನೋಡಿಕೊಳ್ಳಬೇಕು. ನಮ್ಮ ತಮಿಳುನಾಡು ರಾಜ್ಯ ಗೀತೆಯನ್ನು ಎಂದಿಗೂ 2ನೇ ಸ್ಥಾನಕ್ಕೆ ತಳ್ಳಬಾರದು" ಎಂದು ಉದಯನಿಧಿ ಹೇಳಿದ್ದಾರೆ.