ಗೋಲ್ಡನ್ ಸ್ಟಾರ್ ಗಣೇಶ್ ಅವರ ಅಭಿಮಾನಿಗಳಿಗೆ ಯುಗಾದಿ ಹಬ್ಬದ ಈ ಸುಸಂದರ್ಭದಲ್ಲಿ ಸಿಹಿ ಸುದ್ದಿಯೊಂದು ಸಿಕ್ಕಿದೆ. 2024ರ ಸೂಪರ್ ಹಿಟ್ "ಕೃಷ್ಣಂ ಪ್ರಣಯ ಸಖಿ" ಚಿತ್ರದ ಭರ್ಜರಿ ಯಶಸ್ಸಿನ ನಂತರ, ಗಣೇಶ್ ಮತ್ತು ನಿರ್ದೇಶಕ ಶ್ರೀನಿವಾಸರಾಜು ಅವರ ಕಾಂಬಿನೇಶನ್ನಲ್ಲಿ ಮೂಡಿಬರುತ್ತಿರುವ ಹೊಸ ಚಿತ್ರಕ್ಕೆ ಅಧಿಕೃತವಾಗಿ ಶೀರ್ಷಿಕೆ ನಿಗದಿಯಾಗಿದೆ. ಈ ಬಹುನಿರೀಕ್ಷಿತ ಚಿತ್ರಕ್ಕೆ ʻಬೃಂದಾ ವಿಹಾರಿʼ ಎಂಬ ಆಕರ್ಷಕ ಹೆಸರಿಡಲಾಗಿದ್ದು, ಯುಗಾದಿಯ ಪ್ರಯುಕ್ತ ಟೈಟಲ್ ರಿವೀಲ್ ಮಾಡಲಾಗಿದೆ.
ಅಭಿಮಾನಿಗಳಿಂದ ಪಾಸಿಟಿವ್ ರೆಸ್ಪಾನ್ಸ್
ವಿರಾಟ್ ಸಾಯಿ ಕ್ರಿಯೇಷನ್ಸ್ ಅರ್ಪಿಸುವ ಈ ಚಿತ್ರವನ್ನು ನಿರ್ಮಾಪಕ ಸಮೃದ್ಧಿ ವಿ. ಮಂಜುನಾಥ್ ಅವರು ಅತ್ಯಂತ ಅದ್ಧೂರಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ. ಈಚೆಗಷ್ಟೇ ಇವರು ಹಯಗ್ರೀವ ಚಿತ್ರಕ್ಕೆ ಹಣ ಹಾಕಿದ್ದರು. ಗಣೇಶ್ ಅವರ ಸಿನಿಮಾಗಳಲ್ಲಿ ಅಲ್ಲಿ ಪ್ರೀತಿ, ಪ್ರೇಮ ಮತ್ತು ಕೌಟುಂಬಿಕ ಮೌಲ್ಯಗಳಿಗೆ ಹೆಚ್ಚಿನ ಒತ್ತು ಇರುತ್ತದೆ. ʻಬೃಂದಾ ವಿಹಾರಿʼ ಕೂಡ ಪಕ್ಕಾ ರೊಮ್ಯಾಂಟಿಕ್ ಜಾನರ್ನ ಚಿತ್ರವಾಗಿದ್ದು, ಶೀರ್ಷಿಕೆ ಕೇಳಿ ಅಭಿಮಾನಿಗಳಿಂದ ಪಾಸಿಟಿವ್ ರೆಸ್ಪಾನ್ಸ್ ಸಿಕ್ಕಿದೆ. ಸೋಷಿಯಲ್ ಮೀಡಿಯಾದಲ್ಲಿ ಮೆಚ್ಚುಗೆ ಸಿಕ್ಕಿದೆ.
Golden Star Ganesh Brother: ಅಣ್ಣ ಹಾಕಿಕೊಟ್ಟ 4 ಕೋಟಿ ಬ್ಯುಸಿನೆಸ್ ಲಾಸ್ ಮಾಡಿಬಿಟ್ಟೆ; ಗಣೇಶ್ ಸಹೋದರ ಬೇಸರ
ಈ ಚಿತ್ರದಲ್ಲಿ ಗಣೇಶ್ಗೆ ಇಬ್ಬರು ನಾಯಕಿಯರು
ʻಬೃಂದಾ ವಿಹಾರಿʼ ಚಿತ್ರದಲ್ಲಿ ಗಣೇಶ್ ಅವರಿಗೆ ಜೋಡಿಯಾಗಿ ದೇವಿಕಾ ಭಟ್ ಮತ್ತು ಮಾಳವಿಕ ಶರ್ಮ ಕಾಣಿಸಿಕೊಂಡಿದ್ದು, ಚಿತ್ರದ ಗ್ಲಾಮರ್ ಹೆಚ್ಚಿಸಿದ್ದಾರೆ. ಚಿತ್ರಕ್ಕೆ ನಿರ್ದೇಶಕ ಶ್ರೀನಿವಾಸರಾಜು ಅವರೇ ಕಥೆ ಮತ್ತು ಚಿತ್ರಕಥೆಯನ್ನು ಬರೆದಿದ್ದು, ವೆಂಕಟ್ ಪ್ರಸಾದ್ ಅವರ ಛಾಯಾಗ್ರಹಣ ಚಿತ್ರಕ್ಕಿದೆ.
ನಿರ್ದೇಶಕ ಶ್ರೀನಿವಾಸರಾಜು ಮತ್ತು ಗಣೇಶ್ ಅವರ ಈ ಹಿಂದಿನ ಸಿನಿಮಾಗಳಲ್ಲಿ ಸಂಗೀತಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇತ್ತು. ಹಾಗಾಗಿ, ಈ ಚಿತ್ರಕ್ಕಾಗಿ ಮಲಯಾಳಂನ ಖ್ಯಾತ ಸಂಗೀತ ನಿರ್ದೇಶಕ ಹೇಶಮ್ ಅಬ್ದುಲ್ ವಹಾಬ್ ಅವರನ್ನು ಕರೆದುಕೊಂಡು ಬಂದಿದ್ದಾರೆ. ಈಗಾಗಲೇ ಹಲವಾರು ಸುಮಧುರ ಹಾಡುಗಳನ್ನು ಸಂಯೋಜಿಸಿರುವ ಇವರು ಸದ್ಯದ ಸೆನ್ಸೇಷನಲ್ ಮ್ಯೂಸಿಕ್ ಡೈರೆಕ್ಟರ್ ಆಗಿದ್ದಾರೆ. ಈ ಚಿತ್ರಕ್ಕೆ ಹೇಶಮ್ ಅವರ ಸಂಗೀತವೇ ದೊಡ್ಡ ಪ್ಲಸ್ ಪಾಯಿಂಟ್ ಆಗಲಿದೆ ಎಂಬ ಮಾತುಗಳು ಕೇಳಿಬಂದಿದೆ.
ಗೋಲ್ಡನ್ ಸ್ಟಾರ್ ಗಣೇಶ್’ಗೆ ಹುಟ್ಟುಹಬ್ಬದ ಸಂಭ್ರಮ
ಬಿಡುಗಡೆಗೆ ಸಜ್ಜಾಗಿರುವ 'ಬೃಂದಾವಿಹಾರಿ'
'ಬೃಂದಾವಿಹಾರಿ' ಚಿತ್ರಕ್ಕೆ ಈಗಾಗಲೇ ಸಂಪೂರ್ಣ ಚಿತ್ರೀಕರಣ ಯಶಸ್ವಿಯಾಗಿ ಮುಗಿದಿದೆ. ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಬಿರುಸಿನಿಂದ ಸಾಗುತ್ತಿದ್ದು, ಚಿತ್ರತಂಡವು ಸದ್ಯದಲ್ಲೇ ಹಾಡುಗಳನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. "ಕೃಷ್ಣಂ ಪ್ರಣಯ ಸಖಿ" ಚಿತ್ರದ ಹಾಡುಗಳು ಹೇಗೆ ರಾಜ್ಯಾದ್ಯಂತ ವೈರಲ್ ಆಗಿದ್ದವೋ, ಅದೇ ರೀತಿ "ಬೃಂದಾವಿಹಾರಿ" ಚಿತ್ರದ ಹಾಡುಗಳು ಕೂಡ ಹೊಸ ದಾಖಲೆ ಬರೆಯಲಿವೆ ಎಂಬ ನಿರೀಕ್ಷೆ ಚಿತ್ರತಂಡಕ್ಕಿದೆ. ಸಿನಿಮಾ ಕೂಡ ಆದಷ್ಟು ಬೇಗ ತೆರೆಗೆ ಬರಲಿದೆ.