ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾಗಳ ಮೂಲಕ ಫೇಮಸ್ ಆಗಿರುವ ನಿರ್ದೇಶಕ ದೇವಿ ಪ್ರಸಾದ್ ಶೆಟ್ಟಿ ಈಗ ʻಸೆಕೆಂಡ್ ಕೇಸ್ ಆಫ್ ಸೀತಾರಾಮ್ʼ ಚಿತ್ರದ ಮೂಲಕ ಮತ್ತೆ ಬಂದಿದ್ದಾರೆ. ಅಂದಹಾಗೆ, ಇದು 'ಸೀತಾರಾಮ್ ಬಿನೋಯ್: ಕೇಸ್ ನಂಬರ್ 18’ ಚಿತ್ರದ ಮುಂದುವರಿದ ಭಾಗವಾಗಿದ್ದು, ಮತ್ತೊಮ್ಮೆ ವಿಜಯ್ ರಾಘವೇಂದ್ರ ಪೊಲೀಸ್ ಪಾತ್ರದಲ್ಲಿ ಖಾಕಿ ತೊಟ್ಟು ಮಿಂಚಲಿದ್ದಾರೆ, ಮತ್ತೊಂದು ಥ್ರಿಲ್ಲಿಂಗ್ ಕೇಸ್ ಅನ್ನು ಭೇದಿಸಲಿದ್ದಾರೆ. ಸದ್ಯ ʻಸೆಕೆಂಡ್ ಕೇಸ್ ಆಫ್ ಸೀತಾರಾಮ್ʼ ಚಿತ್ರದ ಟ್ರೇಲರ್ ಅನ್ನು ಬಿಡುಗಡೆ ಮಾಡಲಾಯಿತು.
ಏನಂದ್ರು ವಿಜಯ್ ರಾಘವೇಂದ್ರ?
ʻಸೀತಾರಾಮ್ ಬಿನೋಯ್..ʼ ಚಿತ್ರದ ಬಗ್ಗೆ ವಿಜಯ್ ರಾಘವೇಂದ್ರಗೆ ವಿಶೇಷ ಪ್ರೀತಿ. ಈ ಬಗ್ಗೆ ಮಾತನಾಡುವ ಅವರು, "ಸೀತಾರಾಮ್ ಬಿನೋಯ್ ನನ್ನ ವೃತ್ತಿ ಜೀವನಕ್ಕೆ ವಿಶೇಷವಾಗಿ ಬಲ ಕೊಟ್ಟ ಸಿನಿಮಾ. ಆ ಚಿತ್ರದ ಬರವಣಿಗೆ, ಪ್ರೆಸೆಂಟೇಷನ್ ಎಲ್ಲವೂ ಶಕ್ತಿ ನೀಡಿತ್ತು. ನಂತರ ಕೇಸ್ ಆಫ್ ಕೊಂಡಾಣ ಮಾಡಿದೆವು. ಬಳಿಕ ಈಗ ಇನ್ನೊಂದು ʻ..ಸೀತಾರಾಮ್ʼ ಮಾಡಿದ್ದೇವೆ. ದೇವಿ ಪ್ರಸಾದ್ ಶೆಟ್ಟಿ ಅವರು ಒಳ್ಳೆಯ ಸ್ಕ್ರಿಪ್ಟ್ ಬರೆದಿದ್ದಾರೆ. ಸಾತ್ವಿಕ್ ಅದಕ್ಕೆ ಸಪೋರ್ಟ್ ಮಾಡಿದರು. ಇಡೀ ಚಿತ್ರತಂಡ ಸೇರಿಕೊಂಡು ಸೆಕೆಂಡ್ ಕೇಸ್ ಆಫ್ ಸೀತಾರಾಮ್ ಚಿತ್ರ ಮಾಡಿದೆವು. ನವನೀತ್ ಶ್ಯಾಮ್ ಸಂಗೀತ ಚಿತ್ರದ ಜೀವಾಳ. ಚಿತ್ರ ಮಾಡೋದು ಎಷ್ಟೋ ಕಷ್ಟವೋ ಬಿಡುಗಡೆ ಕೂಡ ಕಷ್ಟ. ನಮಗೆ ಈ ಚಿತ್ರಕ್ಕೆ ಪವನ್ ಒಡೆಯರ್ ಬೆಂಬಲವಾಗಿ ನಿಂತಿದ್ದಾರೆ. ಚಿತ್ರ ನೋಡಿ ಜೊತೆಗೆ ನಿಲ್ಲೋದಾಗಿ ಹೇಳಿದರು. ಫೆ.20ರಂದು ಈ ಸಿನಿಮಾ ತೆರೆಕಾಣಲಿದೆ" ಎನ್ನುತ್ತಾರೆ ನಟ ವಿಜಯ್ ರಾಘವೇಂದ್ರ.
ಸೀತಾರಾಮ್ಗೆ ಬೆಂಬಲವಾಗಿ ನಿಂತು ಪವನ್ ಒಡೆಯರ್
"ಸೀತಾರಾಮ್ ಬಿನೋಯ್ ಟ್ರೆಂಡ್ ಸೆಟ್ ಮಾಡಿದ ಚಿತ್ರ. ಬರವಣಿಗೆ, ಟೇಕಿಂಗ್, ಪ್ರೆಸೆಂಟೆಷನ್ ಎಲ್ಲವೂ ಚೆನ್ನಾಗಿತ್ತು. ಅದರ ಮುಂದುವರೆದ ಭಾಗ ಈ ಸೆಕೆಂಡ್ ಕೇಸ್ ಸೀತಾರಾಮ್. ನಿರ್ದೇಶಕರು ಹಾಗೂ ನಿರ್ಮಾಪಕರು ಇಬ್ಬರು ಫ್ಯಾಷನಿಂದ ಸಿನಿಮಾ ಮಾಡಿದ್ದಾರೆ. ಸಿನಿಮಾವನ್ನು ಹೋಮ್ ವರ್ಕ್ ಮಾಡಿದ ರೀತಿ ಮಾಡಿ ಕೆಲಸ ಮಾಡಿದ್ದಾರೆ. ಸಿನಿಮಾ ಮೇಲೆ ಇಡೀ ತಂಡಕ್ಕೆ ತುಡಿತ ಇದೆ. ರಫ್ ಕಟ್ ನೋಡಿದಾಗ ಬಹಳ ಇಷ್ಟವಾಯ್ತು. ಈ ಚಿತ್ರವನ್ನು ಪ್ರೆಸೆಂಟ್ ಮಾಡಲು ತುಂಬಾ ಖುಷಿ ಇದೆ. ಬೇರೆ ಭಾಷೆಗಳ ಸಸ್ಪೆನ್ಸ್ ಸಿನಿಮಾಗಳಿಗೆ ಹೋಲಿಕೆ ಮಾಡಿದರೆ ಈ ಚಿತ್ರ ಒಂದು ಹೆಜ್ಜೆ ಮುಂದೆ ಇದೆ. ಈ ಸಿನಿಮಾದ ಬಗ್ಗೆ ಹೇಳುವ ಬದಲು ಅದನ್ನು ಅನುಭವಿಸಬೇಕು" ಎನ್ನುತ್ತಾರೆ ನಿರ್ದೇಶಕ ಪವನ್ ಒಡೆಯರ್.
ʼಚಿನ್ನ ನಿನ್ನ ಮಗ ಪಾಸ್ ಆಗಿದ್ದಾನೆʼ; ದಿವಂಗತ ಪತ್ನಿ ನೆನಪಲ್ಲಿ ವಿಜಯ್ ರಾಘವೇಂದ್ರ ಪೋಸ್ಟ್
ಈ ಸಿನಿಮಾವನ್ನು ‘ಫ್ಲೈಯಿಂಗ್ ಎಲಿಫಂಟ್ ಸ್ಟೋರಿ ಟೆಲ್ಲರ್ಸ್’ ಮೂಲಕ ದೇವಿ ಪ್ರಸಾದ್ ಶೆಟ್ಟಿ ಹಾಗೂ ಸಾತ್ವಿಕ್ ಹೆಬ್ಬಾರ್ ನಿರ್ಮಾಣ ಮಾಡಿದ್ದಾರೆ. ವಿಜಯ್ ರಾಘವೇಂದ್ರ ಜೊತೆಗೆ ಗೋಪಾಲ್ ಕೃಷ್ಣ ದೇಶಪಾಂಡೆ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಹೇಮಂತ್ ಆಚಾರ್ಯ ಛಾಯಾಗ್ರಹಣ ಮಾಡಿದ್ದು, ನವನೀತ ಶಾಮ್ ಅವರ ಸಂಗೀತ ನಿರ್ದೇಶನ ಇದೆ.