Vijay Raghavendra: ಪ್ರೀತಿ ಎಂದರೆ ನೀನೇ; ಜನ್ಮದಿನದಂದು ಪತ್ನಿ ಸ್ಪಂದನಾ ನೆನೆದು ವಿಜಯ್ ರಾಘವೇಂದ್ರ ಭಾವುಕ ಪೋಸ್ಟ್
Vijay Raghavendra: ಇಂದು ಸ್ಯಾಂಡಲ್ವುಡ್ ನಟ ವಿಜಯ ರಾಘವೇಂದ್ರ ಅವರ ಹುಟ್ಟುಹಬ್ಬ. ಹುಟ್ಟುಹಬ್ಬದಂದು ಪತ್ನಿ ಸ್ಪಂದನಾರನ್ನು ನೆನೆದು ನಟ ವಿಜಯ ರಾಘವೇಂದ್ರ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ಹೀಗಾಗಿ ವಿಜಯ ರಾಘವೇಂದ್ರ ಅಭಿಮಾನಿಗಳು ಕೂಡ ಭಾವುಕರಾಗಿ, ತಮ್ಮ ನೆಚ್ಚಿನ ನಟನಿಗೆ ಶುಭಾಶಯ ಕೋರಿದ್ದಾರೆ.



ಕನ್ನಡ ಚಿತ್ರರಂಗದ ನಟ ವಿಜಯ ರಾಘವೇಂದ್ರ ಅವರು 47 ವರ್ಷಕ್ಕೆ ಕಾಲಿಟ್ಟಿದ್ದು, ತಮ್ಮ ಹುಟ್ಟುಹಬ್ಬದ ದಿನದಂದು ದಿವಂಗರ ಪತ್ನಿ ಸ್ಪಂದನಾ ಅವರನ್ನು ನೆನೆದು ಭಾವುಕರಾಗಿದ್ದಾರೆ.

ಜನ್ಮದಿನದ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ವಿಜಯ್ ರಾಘವೇಂದ್ರ ಅವರು, "ಪ್ರತೀ ಜನುಮದಿನ… ಪ್ರತೀ ದಿನ… ನಿನ್ನ ನೆನೆಸಿದೆ ಮನ, ನೀನು ನನ್ನ ಹುಟ್ಟನ್ನು ವಿಶೇಷವಾಗಿಸಿದವಳು, ಐ ಲವ್ ಯು ಚಿನ್ನ! ಎಂದು ಹೇಳಿದ್ದಾರೆ.

ಚಿನ್ನಾರಿ ಮುತ್ತ ಎಂದು ಖ್ಯಾತಿ ಪಡೆದ ಇವರು 1979ರ ಮೇ 26ರಂದು ಜನಿಸಿದರು. ಅನಿರೀಕ್ಷಿತವಾಗಿ ಅಗಲಿದ ಪತ್ನಿಯ ನೆನಪಿನಲ್ಲಿ ತನ್ನ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಇವರ ಪೋಸ್ಟ್ಗೆ ಅಭಿಮಾನಿಗಳು ಕೂಡ ಭಾವುಕರಾಗಿದ್ದಾರೆ.

ಚಲಿಸುವ ಮೋಡಗಳು, ಪರಶುರಾಮ್, ಅರಲಿದ ಹೂವುಗಳು, ಜಗ ಮೆಚ್ಚಿದ ಹುಡುಗ, ಕೊಲ್ಲೂರು ಶ್ರೀ ಮೂಕಾಂಬಿಕೆ ಮುಂತಾದ ಸಿನಿಮಾಗಳಲ್ಲಿ ನಟಿಸಿದ ಬಳಿಕ ಇವರು ಚಿನ್ನಾರಿ ಮುತ್ತ ಸಿನಿಮಾದಲ್ಲಿ ನಟಿಸಿದರು. ಈ ಸಿನಿಮಾದ ನಟನೆಯ ಮೂಲಕ ಚಿನ್ನಾರಿ ಮುತ್ತನೆಂದು ಇವರು ಖ್ಯಾತಿ ಪಡೆದರು.

ಕೊಟ್ರೇಶಿ ಕನಸು, ಸಂಗೀತ ಸಾಗರ ಜ್ಞಾನಯೋಗಿ ಪಂಚಾಕ್ಷರ ಗವಾಯಿ, ಸ್ವಾಮಿ ವಿವೇಕಾನಂದ, ನಿನಗಾಗಿ, ಪ್ರೇಮಖೈದಿ, ರೋಮಿಯೊ ಜೂಲಿಯಟ್, ಪ್ರೀತಿಸಲೇಬೇಕು ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ. ವಿಕ್ರಮ್, ಖುಷಿ, ವಿಜಯ ಸಿಂಹ, ರಿಷಿ, ಶ್ರೀ, ಸೇವಂತಿ ಸೇವಂತಿ, ಕಲ್ಲರಲಿ ಹೂವಾಗಿ.... ಕೇಸ್ ಆಫ್ ಕೊಂಡಾಣ, ಜೋಗ್ 101, ಗ್ರೇ ಗೇಮ್ಸ್ ಸೇರಿಂದಂತೆ ಹಲವು ಸಿನಿಮಾಗಳಲ್ಲಿ ಇವರು ನಟಿಸಿದ್ದಾರೆ. 2007ರ ಆಗಸ್ಟ್ 26ರಂದು ನಟ ವಿಜಯ್ ರಾಘವೇಂದ್ರ ಅವರು ಸ್ಪಂದನಾ ಅವರ ಜತೆಗ ಮದುವೆ ಆಗಿ, ಸಪ್ತಪದಿ ತುಳಿದಿದ್ದರು. ಈ ಮೂಲಕ ತಾವು ಇಷ್ಟಪಟ್ಟ ಹುಡುಗಿಯ ಜತೆಯಲ್ಲೇ ಜೀವನದ ಹೊಸ ಪಯಣ ಆರಂಭ ಮಾಡಿದ್ದರು.

ಇವರದ್ದು ಲವ್ ಸ್ಟೋರಿ. ಬೆಂಗಳೂರಿನ ಮಲ್ಲೇಶ್ವರಂ ಕಾಫಿ ಡೇಯಲ್ಲಿ ಸ್ಪಂದನಾ ಅವರನ್ನು ಮೊದಲು ನೋಡಿದ್ದರು. ಮೊದಲ ಭೇಟಿಯ ಸಮಯದಲ್ಲಿ ಮ್ಯೂಸಿಕ್ ವಿಷಯದಲ್ಲಿ ಇವರ ನಡುವೆ ಚಿಕ್ಕ ಜಗಳವಾಗಿತ್ತು. ನಂತರ ಇದೇ ಕಾಫಿ ಡೇಯಲ್ಲಿ ಇವರ ಭೇಟಿಯಾಗಿತ್ತು. ಆ ಸಮಯದಲ್ಲಿ ಸ್ಪಂದನಾಗೆ ಪ್ರಪೋಸ್ ಮಾಡಿದ್ದರು. ಅವರು ಕೂಡ ಚಿನ್ನಾರಿ ಮುತ್ತನ ಪ್ರೀತಿ ಒಪ್ಪಿಕೊಂಡಿದ್ದರು. ನಂತರ ಮದುವೆ ನಡೆದಿತ್ತು.

ಹೀಗಿದ್ದಾಗಲೇ 2023ರ ಆಗಸ್ಟ್ 7 ಸೋಮವಾರ ನಟ ವಿಜಯ್ ರಾಘವೇಂದ್ರರ ಬಾಳಲ್ಲಿ ಘೋರ ದುರಂತ ಸಂಭವಿಸಿತ್ತು. ಬ್ಯಾಂಕಾಂಕ್ನಲ್ಲಿ ಹೃದಯಘಾತದಿಂದ ಸ್ಪಂದನಾ ಅನಿರೀಕ್ಷಿತವಾಗಿ ನಿಧನರಾದರು. ಸದಾ ಸ್ಪಂದನಾ ನೆನಪಿನಲ್ಲಿರುವ ವಿಜಯ ರಾಘವೇಂದ್ರ ಅವರು ಆಗಾಗ ಸೋಷಿಯಲ್ ಮೀಡಿಯಾದಲ್ಲಿ ಪತ್ನಿಯ ನೆನಪಿನಲ್ಲಿ ಪೋಸ್ಟ್ಗಳನ್ನು ಮಾಡುತ್ತಿರುತ್ತಾರೆ. ಇದೀಗ ಹುಟ್ಟುಹಬ್ಬದಂದು ಪತ್ನಿಯ ನೆನಪಲಿ ಪೋಸ್ಟ್ ಹಾಕಿದ್ದಾರೆ.
ಇನ್ನು ʼರಿಪ್ಪನ್ ಸ್ವಾಮಿʼ ಇವರ ಮುಂಬರುವ ಸಿನಿಮಾ ಆಗಿದೆ. ಕಿಶೋರ್ ಮೂಡಬಿದ್ರೆ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ.