ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಯಾಗಿರುವ ನಟ ದರ್ಶನ್ ತೂಗುದೀಪ ಅವರನ್ನು ಅವರ ಪತ್ನಿ ವಿಜಯಲಕ್ಷ್ಮಿ ಇಂದು (ಜುಲೈ 31) ಭೇಟಿಯಾಗಿದ್ದಾರೆ. ಜೈಲಿಗೆ ಆಗಮಿಸಿದ್ದ ಅವರು ಪತಿಗೆ ಹಣ್ಣು-ಹಂಪಲುಗಳನ್ನು ನೀಡಿ, ಯೋಗಕ್ಷೇಮ ವಿಚಾರಿಸಿ ಮರಳಿದ್ದಾರೆ. ಸಂಜೆ 4 ಗಂಟೆ ಸುಮಾರಿಗೆ ಜೈಲಿಗೆ ಎಂಟ್ರಿ ಕೊಟ್ಟ ಅವರು 5.30ಕ್ಕೆ ವಾಪಸಾದರು.
ಕಳೆದ ವರ್ಷ ಆಗಸ್ಟ್ನಲ್ಲಿ ದರ್ಶನ್ ಅವರಿಗೆ ನೀಡಲಾಗಿದ್ದ ಜಾಮೀನು ರದ್ದಾದ ನಂತರ ಅವರು ಮತ್ತೆ ಜೈಲು ಸೇರಿದ್ದರು. ಮುಂಬರುವ ಆಗಸ್ಟ್ ತಿಂಗಳಿಗೆ ದರ್ಶನ್ ಪುನಃ ಜೈಲು ಪಾಲಾಗಿ ಭರ್ತಿ 1 ವರ್ಷ ಪೂರೈಸಲಿದೆ. ಈ ಹಿನ್ನೆಲೆಯಲ್ಲಿ ವಿಜಯಲಕ್ಷ್ಮಿ ಅವರು ಆಗಾಗ್ಗೆ ಜೈಲಿಗೆ ಭೇಟಿ ನೀಡಿ ಪತಿಯ ಆರೈಕೆ ಹಾಗೂ ಯೋಗಕ್ಷೇಮ ನೋಡಿಕೊಳ್ಳುತ್ತಿದ್ದಾರೆ.
ದರ್ಶನ್ರನ್ನು ಭೇಟಿಯಾಗಿದ್ದ ನಟ ಧನ್ವೀರ್
ಕಳೆದ ಮೂರು ತಿಂಗಳಿಂದ ದರ್ಶನ್ ಭೇಟಿಯಿಂದ ದೂರ ಉಳಿದಿದ್ದ ನಟ ಧನ್ವೀರ್, ಮಂಗಳವಾರ (ಜುಲೈ 28) ತಮ್ಮ ಸ್ನೇಹಿತರೊಂದಿಗೆ ಪರಪ್ಪನ ಅಗ್ರಹಾರ ಜೈಲಿಗೆ ತೆರಳಿ ದರ್ಶನ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಇತ್ತೀಚೆಗೆ ದರ್ಶನ್ ಮತ್ತು ಧನ್ವೀರ್ ನಡುವಿನ ಸ್ನೇಹದಲ್ಲಿ ಬಿರುಕು ಮೂಡಿದೆ ಎಂಬ ವದಂತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು.
Actor Darshan: ಧನ್ವೀರ್ಗೆ ಸಾಥ್ ಕೊಟ್ಟ ದರ್ಶನ್; `ಡಿ ಬಾಸ್' ಪೋಸ್ಟ್ನಲ್ಲಿ ಏನಿದೆ?
ಆದರೆ ಈ ಭೇಟಿಯ ನಂತರ ಧನ್ವೀರ್ ತಮ್ಮ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ದರ್ಶನ್ ಜೊತೆಗಿನ ಫೋಟೋ ಹಂಚಿಕೊಂಡಿದ್ದ ಧನ್ವಿರ್, "ಪಡೆದುಕೊಂಡ ಮೇಲೆ... ನಡೆದುಕೊಳ್ಳುವ ರೀತಿ ಚೆನ್ನಾಗಿರಲಿ... ಅದು ವಸ್ತುವಾಗಲಿ, ವ್ಯಕ್ತಿಯಾಗಲಿ" ಎಂಬ ಮೋಟಿವೇಷನಲ್ ಸಾಲುಗಳನ್ನು ಪೋಸ್ಟ್ ಮಾಡಿದ್ದರು. ವಿಶೇಷವೆಂದರೆ, ಕೆಲ ದಿನಗಳ ಹಿಂದೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ಸಹ ಇದೇ ರೀತಿಯ ಪೋಸ್ಟ್ ಹಂಚಿಕೊಂಡಿದ್ದರು.
ಭಾವುಕರಾಗಿದ್ದ ನಟಿ ರಕ್ಷಿತಾ ಪ್ರೇಮ್
ಕಳೆದ ವಾರವಷ್ಟೇ ದರ್ಶನ್ ಅವರ ಆತ್ಮೀಯ ಗೆಳತಿ ಹಾಗೂ ನಟಿ ರಕ್ಷಿತಾ ಪ್ರೇಮ್ ಅವರು ವಿಜಯಲಕ್ಷ್ಮಿ ಅವರೊಂದಿಗೆ ಜೈಲಿಗೆ ಆಗಮಿಸಿದ್ದರ. ದರ್ಶನ್ ಅವರನ್ನು ಭೇಟಿಯಾಗಿ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಮಾತುಕತೆ ನಡೆಸಿ ಅವರ ಆರೋಗ್ಯ ವಿಚಾರಿಸಿದ್ದ ರಕ್ಷಿತಾ, ಗೆಳೆಯನ ಪ್ರಸ್ತುತ ಪರಿಸ್ಥಿತಿಯನ್ನು ಕಂಡು ಭಾವುಕರಾಗಿದ್ದರು.