ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

'ನನಗೆ ಮದುವೆ, ಲವ್ ಅಂದ್ರೆ ಇಷ್ಟವಿಲ್ಲ...'; 'ಯಜಮಾನ' ಸೀರಿಯಲ್‌ ನಟಿ ಮಧುಶ್ರೀ ಭೈರಪ್ಪ ಹಿಂಗ್ಯಾಕೆ ಹೇಳಿದ್ರು?

Madhushree Byrappa: 'ಯಜಮಾನ' ಧಾರಾವಾಹಿಯ ನಟಿ ಮಧುಶ್ರೀ ಭೈರಪ್ಪ ಅವರು ಇತ್ತೀಚೆಗೆ ವಿಶ್ವವಾಣಿ ಟಿವಿಗೆ ನೀಡಿದ ಸಂದರ್ಶನದಲ್ಲಿ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಕುತೂಹಲಕಾರಿ ವಿಷಯಗಳನ್ನು ಹಂಚಿಕೊಂಡಿದ್ದಾರೆ. ತಮಗೆ ಮದುವೆ ಮತ್ತು ಪ್ರೀತಿಯ ಬಗ್ಗೆ ಆಸಕ್ತಿ ಇಲ್ಲವೆಂದು ಹೇಳಿದ್ದಾರೆ.

ಯಜಮಾನ ಧಾರಾವಾಹಿಯಿಂದ ಕನ್ನಡ ಕಿರುತೆರೆಗೆ ಕಾಲಿಟ್ಟ ನಟಿ ಮಧುಶ್ರೀ ಭೈರಪ್ಪ ಅವರು ಈಚೆಗೆ ವಿಶ್ವವಾಣಿ ಟಿವಿಗೆ ಎಕ್ಸ್‌ಕ್ಲೂಸಿವ್‌ ಸಂದರ್ಶನ ನೀಡಿದ್ದರು. ಅದರಲ್ಲಿ ಲವ್‌, ಮದುವೆ ಬಗೆಗಿನ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಭವಿಷ್ಯದಲ್ಲಿ ಮದುವೆಯಾದರೆ, ಆ ಹುಡುಗ ಹೇಗಿರಬೇಕು ಎಂಬ ಬಗ್ಗೆಯೂ ತಿಳಿಸಿದ್ದಾರೆ. ಆದರೆ ಸದ್ಯಕ್ಕೆ ಅವರಿಗೆ ಮದುವೆ, ಲವ್‌ ಬಗ್ಗೆ ಯಾವುದೇ ಆಸಕ್ತಿ ಇಲ್ಲವಂತೆ.

ಮದುವೆ ಬಗ್ಗೆ ಆಸಕ್ತಿ ಇಲ್ಲ

"ನನಗೆ ಮದುವೆ ಬಗ್ಗೆ ಆಸಕ್ತಿ ಇಲ್ಲ. ಚಿಕ್ಕ ವಯಸ್ಸಿನಿಂದಲೂ ನನಗೆ ಲವ್‌, ಮದುವೆ ಬಗ್ಗೆ ಆಸಕ್ತಿ ಇಲ್ಲ. ನನ್ನ ಮನೆಯಲ್ಲಿ ಲವ್‌ ಮ್ಯಾರೇಜ್‌ಗೂ ಸಪೋರ್ಟ್‌ ಇದೆ. ಆದರೆ ನನಗೇ ಈ ಲವ್‌ ಮೇಲೆಲ್ಲಾ ಆಸಕ್ತಿ ಇಲ್ಲ. ನನಗೆ ಲವ್‌ ಕುರಿತಾಗಿ ಯಾವುದೇ ಕೆಟ್ಟ ಅನುಭವ ಆಗಿಲ್ಲ. ಆದರೂ ನನಗೆ ಆ ಬಗ್ಗೆ ಆಸಕ್ತಿ ಇಲ್ಲ" ಎಂದು ಮಧುಶ್ರೀ ಭೈರಪ್ಪ ಹೇಳಿದ್ದಾರೆ.

ದಿಢೀರ್ ಅಂತ ಮುಕ್ತಾಯಗೊಂಡ 'ಯಜಮಾನ' ಧಾರಾವಾಹಿ; ʻಝಾನ್ಸಿʼ ಪಾತ್ರಧಾರಿ ಮಧುಶ್ರೀ ಭೈರಪ್ಪ ಬೇಸರಕ್ಕೆ ಕಾರಣವೇನು?

ಲವ್‌ ಮ್ಯಾರೇಜ್‌ಗೆ ನಮ್ಮನೆಯಲ್ಲಿ ವಿರೋಧವಿಲ್ಲ

"ಬದುಕಿನಲ್ಲಿ ಏನಾದರೂ ಸಾಧನೆ ಮಾಡು ಎಂದೇ ನಮ್ಮ ಅಮ್ಮ ನನಗೆ ಹೇಳಿಕೊಟ್ಟಿರುವುದು. ಪ್ರೀತಿ-ಮದುವೆ ಕುರತಂತೆ ನನಗೆ ಮನೆಯಲ್ಲಿ ಯಾವುದೇ ನಿರ್ಬಂಧಗಳಿಲ್ಲ. ಇವತ್ತು ಕೂಡ ನಾನು ಯಾರನ್ನಾದರೂ ಇಷ್ಟಪಡುತ್ತೇನೆ ಎಂದರೆ, ಅವರು ವಿಚಾರಿಸುತ್ತಾರೆ. ಆದರೆ ಯಾವುದೇ ವಿರೋಧ ಮಾಡಲ್ಲ. ಲವ್‌ ಮ್ಯಾರೇಜ್‌ ಮಾಡ್ಕೋಬೇಡ ಎಂದೆಲ್ಲಾ ನಮ್ಮ ಮನೆಯಲ್ಲಿ ಹೇಳೋದಿಲ್ಲ" ಎಂದು ಮಧುಶ್ರೀ ಭೈರಪ್ಪ ಹೇಳಿದ್ದಾರೆ.

"ನನ್ನ ಸುತ್ತಮುತ್ತ ಇರೋರೆಲ್ಲಾ ಲವ್‌ ಮಾಡಿ ಮದುವೆ ಆಗಿದ್ದಾರೆ. ಅವರು ಅಷ್ಟೇನೂ ಸಕ್ಸಸ್‌ ಆಗಿರಲಿಲ್ಲ. ಅದು ನನಗೆ ಪ್ರಭಾವ ಬೀರಿರಬಹುದು. ಆದರೆ ಈಚೆಗೆ ನಮ್ಮ ಸೀರಿಯಲ್‌ನ ರಿತ್ವಿಕ್‌ನ ನೋಡಿದೆ. ಹೆಂಡತಿಯನ್ನು ಹೇಗೆ ನೋಡಿಕೊಳ್ಳಬೇಕು? ಹೇಗೆ ಪ್ರೀತಿ ಮಾಡಬೇಕು? ಎಷ್ಟು ಗೌರವ ಕೊಡಬೇಕು ಎಂಬುದನ್ನ ಅವನಲ್ಲಿ ನಾನು ಕಂಡೆ. ಬರೀ ಫೆಲ್ಯೂರ್ಸ್‌ ಅಷ್ಟೇ ಅಲ್ಲ, ಸಕ್ಸಸ್‌ ಆಗಿರೋರು ಇದ್ದಾರೆ ಎಂಬುದು ಇವನನ್ನು ನೋಡಿ ತಿಳಿದುಕೊಂಡೆ" ಎಂದಿದ್ದಾರೆ ಮಧುಶ್ರೀ ಭೈರಪ್ಪ.

ನಾನು ಯಾರ ಮೇಲೂ ಡಿಪೆಂಡ್‌ ಆಗಬಾರದು

"ನಾನು ಚಿಕ್ಕ ವಯಸ್ಸಿನಿಂದಲೂ ಕೆಲಸ ಮಾಡಬೇಕು ಎಂಬ ಗುರಿಯಲ್ಲೇ ಬೆಳೆದೆ. ನಾನು ಕೆಲಸ ಮಾಡಬೇಕಾದ ಅನಿವಾರ್ಯತೆ ಕೂಡ ಇತ್ತು. ನಮ್‌ ಅಮ್ಮನನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂಬ ಆಸೆ ಇತ್ತು. ಹಾಗಾಗಿ ನಾನು ಕೆಲಸ ಮಾಡಬೇಕಿತ್ತು. ನಮ್ಮ ಕುಟುಂಬ ಆರ್ಥಿಕವಾಗಿ ಚೆನ್ನಾಗಿದ್ದರೂ, ನನಗೆ ಯಾರ ಮೇಲೂ ಡಿಪೆಂಡ್‌ ಆಗಬಾರದು ಎಂಬ ಆಸೆ ಇತ್ತು" ಎಂದು ಮಧುಶ್ರೀ ಭೈರಪ್ಪ ಹೇಳಿದ್ದಾರೆ.

ಮಧುಶ್ರೀ ಭೈರಪ್ಪ ಅವರ ಸಂದರ್ಶನ



ಒಬ್ಬರಿಗೊಬ್ಬರು ಸಪೋರ್ಟಿವ್‌ ಆಗಿರಬೇಕು

"ಫೇಕ್‌ ಆಗಿರಬಾರದು, ಏನಿರತ್ತೋ ಅದನ್ನು ಹೇಳಬೇಕು. ನಾವು ಹೇಗಿರುತ್ತೇವೋ ಹಾಗೇ ಬದುಕಬೇಕು, ಬದಲಾಗಬಾರದು. ಬಾಹ್ಯ ಸೌಂದರ್ಯಗಿಂತ ಹೃದಯ ಚೆನ್ನಾಗಿರಬೇಕು. ಹುಡುಗ ಹೇಗಿರುತ್ತಾನೋ, ಹಾಗೇ ಇರೋದಕ್ಕೆ ಬಿಡಬೇಕು, ಹುಡುಗಿ ಹೇಗಿರುತ್ತಾಳೋ ಹಾಗೇ ಇರೋದಕ್ಕೆ ಬಿಡಬೇಕು. ಒಬ್ಬರಿಗೊಬ್ಬರು ಸಪೋರ್ಟಿವ್‌ ಆಗಿರಬೇಕು. ಹೊಂದಾಣಿಕೆ ಚೆನ್ನಾಗಿರಬೇಕು. ದುಡ್ಡು ಮ್ಯಾಟರ್‌ ಆಗೋದಿಲ್ಲ ಅಂತ ಹೇಳೋದಿಲ್ಲ" ಎಂದು ಮಧುಶ್ರೀ ಭೈರಪ್ಪ.

ನಮ್ಮಣ್ಣ ರೌಡಿ ಅಂತ ಹೇಳ್ತಿದ್ದೆ

"ಕಾಲೇಜ್‌ನಲ್ಲಿರುವಾಗ ನನಗೆ ತುಂಬ ಪ್ರಪೋಸಲ್‌ಗಳು ಬರುತ್ತಿದ್ದವು. ಆದರೆ ನಾನು ಯಾರನ್ನೂ ಎಂಟರ್‌ಟೇನ್‌ ಮಾಡುತ್ತಿರಲಿಲ್ಲ. ನಮ್ಮಣ್ಣ ಯಾರು ಗೊತ್ತಾ? ರೌಡಿ ಎಂದು ಹೇಳುತ್ತಿದ್ದೆ. ನಮ್ಮ ಅಮ್ಮನ ಕಡೆ ರಿಲೇಷನ್‌ ಒಬ್ರು ಇದ್ದಾರೆ. ಅವರು ಸ್ವಲ್ಪ ರೌಡಿ ರೌಡಿ ಥರ ಇರುತ್ತಾರೆ. ಹಾಗಾಗಿ, ನಮ್ಮ ಅಣ್ಣ ರೌಡಿ ಎಂದು ಹೇಳುತ್ತಿದ್ದೆ. ಲವ್‌ ಅಂದರೆ ನಾನು ಮಾತಾಡೋದನ್ನೆ ಬಿಡುತ್ತಿದ್ದೆ. ಎಲ್ಲಾ ಕಡೆ ಬ್ಲಾಕ್‌ ಮಾಡುತಿದ್ದೆ" ಎಂದು ಮಧುಶ್ರೀ ಹೇಳಿದ್ದಾರೆ.