ಯಶ್ ನಟನೆಯ ಟಾಕ್ಸಿಕ್ ಸಿನಿಮಾದ ಟೀಸರ್ನಲ್ಲಿರುವ ದೃಶ್ಯಗಳ ಬಗ್ಗೆ ವಕೀಲರೊಬ್ಬರು ಆಕ್ಷೇಪ ಎತ್ತಿದ್ದಾರೆ. ಟಾಕ್ಸಿಕ್ ಟೀಸರ್ನಲ್ಲಿ ಸಾಕಷ್ಟು ಅಶ್ಲೀಲತೆಯಿಂದ ಕೂಡಿದೆ. ಸೆನ್ಸಾರ್ ಮಂಡಳಿ ಏನು ಮಾಡುತ್ತಿದೆ? ಟೀಸರ್ನಲ್ಲಿ ಸರ್ಟಿಫಿಕೇಟ್ ಅನ್ನು ಏಕೆ ಪ್ರದರ್ಶನ ಮಾಡಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ. ಹೌದು, ವಕೀಲ ಲೋಹಿತ್ ಕುಮಾರ್ ಎಂಬುವವರು ಈ ಬಗ್ಗೆ ಸೆನ್ಸಾರ್ ಮಂಡಳಿಗೆ ದೂರು ದಾಖಲು ಮಾಡಿದ್ದಾರೆ.
ಯಶ್ ಸಿನಿಮಾ ಅಂತ ಕುಟುಂಬಸಮೇತ ಕಾಯ್ತಾ ಇರ್ತಾರೆ
ಈ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿರುವ ಅವರು, "ಸೆನ್ಸಾರ್ ಮಂಡಳಿಗೆ ನಾನು ದೂರು ನೀಡಿದ್ದೇನೆ. ಸೆನ್ಸಾರ್ನಿಂದ ಎ, ಯು ಅಂತ ಪ್ರಮಾಣ ಸಿಗುತ್ತದೆ. ಥಿಯೇಟರ್ಗಳಲ್ಲಿ ಮಕ್ಕಳ ಜೊತೆಗೆ ಹೋದಾಗ ಆಧಾರ್ ಕಾರ್ಡ್ ನೋಡಿ ಒಳಗೆ ಬಿಡುವಂತಹ ಪದ್ಧತಿ ಇದೆ. ಯಾಕೆಂದರೆ, ಮಕ್ಕಳಿಗೆ ಇರುವಂತಹ ಕಾನೂನುಗಳು, ಮಕ್ಕಳಿಗೆ ಯಾವುದೇ ಥರದ ಪರಿಣಾಮ ಆಗಬಾರದು ಅನ್ನೋದು ಇದರ ಉದ್ದೇಶ. ಈ ಟೀಸರ್ ವಿರುದ್ಧ ಮಾತನಾಡುತ್ತಿರುವುದು ಏಕೆಂದರೆ, ಯಶ್ ಅವರ ಸಿನಿಮಾ ಎಂದಾಗ, ಕುಟುಂಬಸಮೇತ ಕಾಯ್ತಾ ಇರ್ತಾರೆ. ಆದರೆ, ಈ ಥರ ಒಂದು ಟೀಸರ್ ಬಿಡ್ತಾರೆ" ಎಂದಿದ್ದಾರೆ.
ಎಲ್ಲರೂ ಮೊಬೈಲ್ನಲ್ಲೇ ನೋಡ್ತಾರೆ
"ಈ ಟೀಸರ್ ಬಿಡುವುದಕ್ಕೂ ಮುನ್ನ ಒಂದು ಎಚ್ಚರಿಕೆಯನ್ನಾದರೂ ಕೊಡಬೇಕಿತ್ತು. ಆಗಿದ್ದಾಗ ನಾವು ಆ ಟೀಸರ್ನ ಮಕ್ಕಳ ಮುಂದೆ ಓಪನ್ ಮಾಡ್ತಾ ಇರಲಿಲ್ಲ. ಅದು ಕುಟುಂಬಸಮೇತ ಕುಳಿತು ನೋಡುವಂತಹ ಟೀಸರ್ ಅಂತೂ ಅಲ್ಲ. ಹಾಗಾಗಿ, ನಾನು ಸೆನ್ಸಾರ್ ಮಂಡಳಿ ವಿರುದ್ಧ ಯಶ್ ಅವರ ಈ ಚಿತ್ರವನ್ನು ಇಟ್ಟುಕೊಂಡು ಹೋರಾಟ ಮಾಡ್ತಾ ಇದ್ದೇನೆ. ಇಂತಹ ಟೀಸರ್ನ ಎಲ್ಲರೂ ಮೊಬೈಲ್ನಲ್ಲೇ ನೋಡ್ತಾರೆ. ಹಾಗಾಗಿ, ಸೆನ್ಸಾರ್ ಪ್ರಮಾಣ ಪತ್ರದೊಂದಿಗೆ ಬಿಡುಗಡೆ ಮಾಡಿ" ಎಂದು ಆಗ್ರಹಿಸಿದ್ದಾರೆ ಲೋಹಿತ್ ಕುಮಾರ್.
YashToxic: ಗೀತು ಮೋಹನ್ದಾಸ್ ‘ಟಾಕ್ಸಿಕ್’ ಸಿನಿಮಾ ಮಾಡಿದ್ದಾರೆ ಅಂದ್ರೆ ನಂಬಲು ಅಸಾಧ್ಯ; ಆರ್ಜಿವಿ
ನಮ್ಮ ಮಕ್ಕಳನ್ನು ಕಾಪಾಡಿಕೊಳ್ಳಲು ಈ ಹೋರಾಟ
"ನಮ್ಮ ಅಪ್ಪ ಅಮ್ಮನ ಜೊತೆ ನೋಡಿಬಿಟ್ಟೆ, ನಾಚಿಕೆ ಆಗ್ತಿದೆ ಎಂದು ಸುಮಾರು ಜನ ಹೇಳಿದ್ದಾರೆ. ಎಲ್ಲದಕ್ಕೂ ಸೆನ್ಸಾರ್ ಅಪ್ಲೈ ಆಗತ್ತೆ. ಆದರೆ ಟೀಸರ್ಗೆ ಅಪ್ಲೈ ಆಗಲ್ಲವಾ? ಸೆರ್ಟಿಫಿಕೇಟ್ ಸಿಕ್ಕಿದ್ದ ಮೇಲೆ ಟೀಸರ್ನಲ್ಲಿ ಅದನ್ನು ಹಾಕಿಲ್ಲ ಏಕೆ? ನನಗೆ ಯಶ್ ಅವರ ಸಿನಿಮಾಗಿಂತ ನಮ್ಮ ಸಮಾಜದ ಮಕ್ಕಳು ಮುಖ್ಯ. ಯಶ್ ಅವರ ಸಿನಿಮಾ ಬಂತು ಅಂತ ಕೇಸ್ ಹಾಕಿದ್ದಲ್ಲ. ನಮ್ಮ ದೇಶದ ಕಾನೂನನ್ನು ಕಾಪಾಡಲು, ನಮ್ಮ ಮಕ್ಕಳನ್ನು ಕಾಪಾಡಿಕೊಳ್ಳಲು ಈ ಹೋರಾಟ ಮಾಡಲಾಗಿದೆ. ಸೆನ್ಸಾರ್ ಮಂಡಳಿಯವರು ಈ ಟೀಸರ್ ಅನ್ನು ಹಿಂಪಡೆಯಿರಿ, ಟೀಸರ್ನಲ್ಲಿ ಪ್ರಮಾಣದ ಪತ್ರವನ್ನು ಹಾಕಬೇಕು ಎಂದು ರೂಲ್ಸ್ ಮಾಡಿ" ಎಂದಿದ್ದಾರೆ ಲೋಹಿತ್ ಕುಮಾರ್.
ದುಡ್ಡು ಮಾಡೋದನ್ನೇ ಉದ್ಯೋಗ ಮಾಡಿಕೊಳ್ಳಬೇಡಿ
"ಯೂಟ್ಯೂಬ್ ಅಲ್ಲಿ ಎಲ್ಲಾ ಬರತ್ತದೆ. ಅವರಿಗೆ ನಾವು ಹೇಳುವುದಕ್ಕೆ ಆಗೋದಿಲ್ಲ. ಹಾಗಾಗಿ, ಸೆನ್ಸಾರ್ ಮಂಡಳಿ ಅವರಿಗೆ ನಾವು ಕೇಳಬಹುದು. ಟೀಸರ್ನಲ್ಲಿ ಪ್ರಮಾಣ ಪತ್ರ ಹಾಕಬೇಕು. ಅದೇ ಥರ ಚಿತ್ರರಂಗದವರ ಜವಾಬ್ದಾರಿ ಕೂಡ ಇದೆ. ಬಂಗಾರದ ಮನುಷ್ಯ ನೋಡಿ ಜನರು ಬದಲಾಗಿದ್ದಾರೆ. ಸಿನಿಮಾಗಳು ಪ್ರಭಾವಿ ಮಾಧ್ಯಮ. ಸಿನಿಮಾತಂಡದವರು ಬರೀ ದುಡ್ಡು ಮಾಡೋದನ್ನೇ ಉದ್ಯೋಗ ಮಾಡಿಕೊಳ್ಳಬೇಡಿ. ಯಶ್ ಅವರಿಗೆ ತುಂಬಾ ಜವಾಬ್ದಾರಿ ಇದೆ. ಅದನ್ನು ಗಮನದಲ್ಲಿಟ್ಟುಕೊಳ್ಳಬೇಕು" ಎಂದಿದ್ದಾರೆ ಲೋಹಿತ್ ಕುಮಾರ್.