ಬೆಂಗಳೂರು, ಡಿ. 22: ಏರ್ ಇಂಡಿಯಾ ಮಾರ್ಚ್ 1ರಿಂದ ಮುಂಬೈ (Mumbai) ಮತ್ತು ಬೆಂಗಳೂರಿನಿಂದ (Bengaluru) ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೊಗೆ (San Francisco) ತನ್ನ ನೇರ ವಿಮಾನ ಸೇವೆಯನ್ನು ಸ್ಥಗಿತಗೊಳಿಸಲಿದೆ. ಆದರೆ ದೆಹಲಿಯಿಂದ ಸ್ಯಾನ್ ಫ್ರಾನ್ಸಿಸ್ಕೊಗೆ ನಡೆಸುವ ಸೇವೆಯನ್ನು ಗಣನೀಯವಾಗಿ ವಿಸ್ತರಿಸಲಾಗಿದ್ದು, ವಾರಕ್ಕೆ ಇದ್ದ ಏಳು ವಿಮಾನಗಳಿಂದ ಹತ್ತು ವಿಮಾನಗಳಿಗೆ ಹೆಚ್ಚಿಸಲಾಗುತ್ತಿದೆ.
ವರದಿಯ ಪ್ರಕಾರ, ಉತ್ತರ ಅಮೆರಿಕಾ ವೇಳಾಪಟ್ಟಿಯಲ್ಲಿ ಮಾಡಲಾದ ಈ ಬದಲಾವಣೆಗಳು, ಲಭ್ಯವಿರುವ ಸಾಮರ್ಥ್ಯವನ್ನು ಉತ್ತಮವಾಗಿ ಬಳಸಿಕೊಳ್ಳಲು ಮತ್ತು ಮುಂದುವರಿದಿರುವ ವಾಯು ಪ್ರದೇಶ ನಿರ್ಬಂಧಗಳಿಗೆ ಸಂಬಂಧಿಸಿದ ಹೆಚ್ಚುತ್ತಿರುವ ವೆಚ್ಚಗಳನ್ನು ನಿರ್ವಹಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಲಾಗಿದೆ.
ಈ ಮೊದಲು ನವೆಂಬರ್ 22ರಂದು ಏರ್ ಇಂಡಿಯಾ ಸಿಇಒ ಕ್ಯಾಂಪ್ಬೆಲ್ ವಿಲ್ಸನ್, ವಾಯು ಪ್ರದೇಶ ನಿರ್ಬಂಧಗಳು ಸೇರಿದಂತೆ ಹಲವು ಕಾರಣಗಳಿಂದಾಗಿ ಅಮೆರಿಕಗೆ ಪ್ರಯಾಣದ ಬೇಡಿಕೆಯಲ್ಲಿ ಕಂಪನಿಗೆ ಕೆಲವು ಮಟ್ಟದ ಹೊಡೆತ ಬಿದ್ದಿದೆ ಎಂದು ಹೇಳಿದ್ದರು. ಆದರೆ ಪರಿಸ್ಥಿತಿ ತಾತ್ಕಾಲಿಕವಾಗಿದ್ದು, ಮಾರುಕಟ್ಟೆಯ ದೀರ್ಘಕಾಲೀನ ನಿರೀಕ್ಷೆಗಳ ಬಗ್ಗೆ ವಿಮಾನಯಾನ ಸಂಸ್ಥೆಯು ಬಹಳ ವಿಶ್ವಾಸ ಹೊಂದಿದೆ ಎಂದು ಹೇಳಿದ್ದರು.
ಕೇಂದ್ರದ ಆದೇಶದ ನಂತರ ಪ್ರಯಾಣ ದರ ಮಿತಿ ಜಾರಿಗೆ ತಂದ ಏರ್ ಇಂಡಿಯಾ ಗ್ರೂಪ್
ಉತ್ತರ ಅಮೆರಿಕ ಏರ್ ಇಂಡಿಯಾಗೆ ಪ್ರಮುಖ ಅಂತಾರಾಷ್ಟ್ರೀಯ ವಿಭಾಗ. ಈ ವಿಮಾನ ಸಂಸ್ಥೆ ನ್ಯೂಯಾರ್ಕ್, ನ್ಯೂವಾರ್ಕ್, ಚಿಕಾಗೋ, ಸ್ಯಾನ್ ಫ್ರಾನ್ಸಿಸ್ಕೊ, ವ್ಯಾಂಕೂವರ್ ಮತ್ತು ಟೊರೊಂಟೊ ಸೇರಿದಂತೆ ಉತ್ತರ ಅಮೆರಿಕದ ಆರು ನಗರಗಳಿಗೆ ವಾರಕ್ಕೆ 51 ವಿಮಾನ ಸೇವೆಗಳನ್ನು ಒದಗಿಸುತ್ತಿದೆ. ಈ ಸೇವೆಗಳು ಬೋಯಿಂಗ್ 777 ಮತ್ತು ಏರ್ಬಸ್ A350 ವಿಮಾನಗಳ ಮೂಲಕ ಕಾರ್ಯಾಚರಿಸುತ್ತಿವೆ.
ಅಮೆರಿಕಗೆ ಪ್ರಯಾಣದ ಬೇಡಿಕೆ ಸಂಬಂಧಿತ ಪರಿಸ್ಥಿತಿಯು ತಾತ್ಕಾಲಿಕ ಎಂದು ವಿಲ್ಸನ್ ಹೇಳಿದ್ದಾರೆ. ನಾವು ಮಾರುಕಟ್ಟೆಯ ದೀರ್ಘಾವಧಿ ಭವಿಷ್ಯದ ಬಗ್ಗೆ ಇನ್ನೂ ತುಂಬಾ ವಿಶ್ವಾಸ ಹೊಂದಿದ್ದೇವೆ. ಈ ವಿಮಾನಗಳನ್ನು ನಿಯೋಜಿಸಲು ನಮಗೆ ಪರ್ಯಾಯ ಅವಕಾಶಗಳಿವೆ. ಆದ್ದರಿಂದ ನಾವು ಚುರುಕಾಗಿ ಮುಂದುವರಿಯುತ್ತೇವೆ ಎಂದು ಅವರು ಹೇಳಿದರು.
ಈಗಾಗಲೇ ಬೆಂಗಳೂರು-ಸ್ಯಾನ್ ಫ್ರಾನ್ಸಿಸ್ಕೊ ಅಥವಾ ಮುಂಬೈ-ಸ್ಯಾನ್ ಫ್ರಾನ್ಸಿಸ್ಕೊ ವಿಮಾನವನ್ನು ಬುಕ್ ಮಾಡಿರುವ ಪ್ರಯಾಣಿಕರಿಗೆ ಪರ್ಯಾಯ ಸೇವೆಗೆ ಅವಕಾಶ ಕಲ್ಪಿಸಲಾಗುವುದು ಅಥವಾ ಪೂರ್ಣ ಮರುಪಾವತಿಯನ್ನು ನೀಡಲಾಗುವುದು ಎಂದು ಸಂಸ್ಥೆ ತಿಳಿಸಿದೆ.
ಏರ್ ಇಂಡಿಯಾ ವಿಮಾನ ತುರ್ತು ಭೂ ಸ್ಪರ್ಶ
ಡಿಸೆಂಬರ್ 22ರಂದು ಮುಂಬೈಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನ AI887 ತಾಂತ್ರಿಕ ಸಮಸ್ಯೆಯಿಂದಾಗಿ ಟೇಕ್ ಆಫ್ ಆದ ಕೆಲವೇ ನಿಮಿಷಗಳ ನಂತರ ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮರಳಿತು. ದೆಹಲಿ-ಮುಂಬೈ ವಿಮಾನವು ನಿಗದಿತ ಕಾರ್ಯಾಚರಣೆ ಪ್ರಕ್ರಿಯೆಯ ಪ್ರಕಾರ ತುರ್ತು ಭೂಸ್ಪರ್ಶ ಮಾಡಿತು.
ಏರ್ ಇಂಡಿಯಾ ವಿಮಾನದಲ್ಲಿ ಹೆಲ್ಮೆಟ್ ಧರಿಸಿದ ವ್ಯಕ್ತಿ
ವಿಮಾನ (ಬೋಯಿಂಗ್ 777) ದೆಹಲಿಯಲ್ಲಿ ಸುರಕ್ಷಿತವಾಗಿ ಇಳಿಯಿತು. ಪ್ರಯಾಣಿಕರು ಮತ್ತು ಸಿಬ್ಬಂದಿ ಸುರಕ್ಷಿತವಾಗಿದ್ದಾರೆ. ಬೋಯಿಂಗ್ 777 ಟೇಕ್ ಆಫ್ ಆದ ಕೂಡಲೇ ಬಲಭಾಗದ ಎಂಜಿನ್ ಸಮಸ್ಯೆಗೆ ಒಳಗಾಯಿತು. ಕೆಲವು ವರದಿಗಳ ಪ್ರಕಾರ, ತೈಲ ಒತ್ತಡವು ಗಮನಾರ್ಹವಾಗಿ ಕಡಿಮೆಯಾದ ಕಾರಣ ಅದು ದೆಹಲಿ ವಿಮಾನ ನಿಲ್ದಾಣಕ್ಕೆ ಹಿಂತಿರುಗಬೇಕಾಯಿತು ಎಂದು ಹೇಳಲಾಗಿದೆ.
ಅದಕ್ಕೂ ಮುನ್ನ ಮುಂಬೈಯಿಂದ ವಾರಣಾಸಿಗೆ ಪ್ರಯಾಣಿಸುತ್ತಿದ್ದ ಏರ್ ಇಂಡಿಯಾ ವಿಮಾನವು ಹವಾಮಾನ ವೈಪರೀತ್ಯದಿಂದಾಗಿ ಗಮ್ಯಸ್ಥಾನ ವಿಮಾನ ನಿಲ್ದಾಣದಲ್ಲಿ ಇಳಿಯಲು ಸಾಧ್ಯವಾಗಲಿಲ್ಲ. ಈ ಕಾರಣ ಭುವನೇಶ್ವರಕ್ಕೆ ತುರ್ತು ಮಾರ್ಗ ಬದಲಾವಣೆ ಮಾಡಬೇಕಾಯಿತು. ಮುನ್ನೆಚ್ಚರಿಕೆ ಕ್ರಮವಾಗಿ ವಿಮಾನವು ಬಿಜು ಪಟ್ನಾಯಕ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯಿತು.