ನವದೆಹಲಿ, ಆ. 11: ಕೇಂದ್ರ ಗೃಹ ಸಚಿವ ಅಮಿತ್ ಶಾ (Amith Shah) ಕೈಗಳನ್ನು ಹಿಂದಕ್ಕೆ ಕಟ್ಟಿಕೊಂಡು ನಿರಾಳವಾಗಿ ನಿಂತು, ತಮ್ಮ ಸರದಿಗಾಗಿ ಕಾಯುತ್ತಿದ್ದರು. ಅವರಿಂದ ಕೆಲವೇ ಅಡಿ ದೂರದಲ್ಲಿ ರಾಹುಲ್ ಗಾಂಧಿ (Rahul Gandhi) ನಿಂತಿದ್ದರು. ಆದರೆ ಇದು ಸಂಸತ್ತಾಗಿರಲಿಲ್ಲ. ಬದಲಾಗಿ ಸಂಸದೆ ಸುಪ್ರಿಯಾ ಸುಳೆ (Supriya Sule) ಅವರ ಪುತ್ರಿಯ ವಿವಾಹದ ಆರತಕ್ಷತೆ ಸಮಾರಂಭವಾಗಿತ್ತು. ಸೋಮವಾರ (ಆ. 10) ರಾತ್ರಿ ನಡೆದ ಈ ಕಾರ್ಯಕ್ರಮದಲ್ಲಿ ಪಕ್ಷ ಬೇಧ ಮರೆತು ಪ್ರಧಾನಿ ನರೇಂದ್ರ ಮೋದಿ (PM Narendra Modi), ಸೋನಿಯಾ ಗಾಂಧಿ, ಅಖಿಲೇಶ್ ಯಾದವ್, ಪ್ರಫುಲ್ ಪಟೇಲ್ ಸೇರಿ ಹಲವು ರಾಜಕೀಯ ಬಣಗಳ ನಾಯಕರು ಭಾಗವಹಿಸಿದರು.
ದೆಹಲಿಯ 6 ಜನಪಥ್ನಲ್ಲಿ ರೇವತಿ ಸುಳೆ ಮತ್ತು ನಾಗ್ಪುರ ಮೂಲದ ಕೈಗಾರಿಕೋದ್ಯಮಿ ಸಾರಂಗ್ ಲಖಾನಿ ಅವರ ಅದ್ಧೂರಿ ಆರತಕ್ಷತೆ ಸಮಾರಂಭ ನಡೆಯಿತು. ಈ ಜೋಡಿ ಜೂನ್ನಲ್ಲಿ ಮುಂಬೈನಲ್ಲಿ ವಿವಾಹವಾಗಿತ್ತು. ದೆಹಲಿಯಲ್ಲಿ ಅದ್ಧೂರಿ ಆರತಕ್ಷತೆ ನಡೆಯಿತು. ಸಮಾರಂಭದಲ್ಲಿ ಅಪರೂಪದ ಕ್ಷಣವೊಂದು ಗಮನ ಸೆಳೆಯಿತು. ಶರದ್ ಪವಾರ್ ಅವರ ಪುತ್ರಿ ಸುಪ್ರಿಯಾ ಸುಳೆ, ಗೃಹ ಸಚಿವ ಅಮಿತ್ ಸಾ ಅವರನ್ನು ವೇದಿಕೆಗೆ ಬರುವಂತೆ ಕರೆದರು.
ಕೈಮುಗಿದು ನಮಸ್ಕಾರ ಮಾಡುತ್ತಾ ಅಮಿತ್ ಶಾ ವೇದಿಕೆಯತ್ತ ತೆರಳಿದರು. ನವದಂಪತಿ ಅವರ ಪಾದ ಮುಟ್ಟಿ ಆಶೀರ್ವಾದ ಪಡೆದರು. ಬಳಿಕ ಅವರು ದಂಪತಿಗೆ ಹೂಗುಚ್ಛ ನೀಡಿದರು. ಅದಾದ ತಕ್ಷಣ, ರಾಹುಲ್ ಗಾಂಧಿ, ಅವರ ತಾಯಿ ಸೋನಿಯಾ ಗಾಂಧಿ ಮತ್ತು ಸಹೋದರಿ ಪ್ರಿಯಾಂಕಾ ಗಾಂಧಿ ಅವರನ್ನು ಸುಪ್ರಿಯಾ ಸುಳೆ ವೇದಿಕೆಯ ಮೇಲೆ ಕರೆದೊಯ್ದರು. ಈ ವೇಳೆ ರಾಜಕೀಯ ವೈರಿಗಳಾದ ನಾಯಕರು ಒಂದೇ ಫ್ರೇಮ್ನಲ್ಲಿ ಸೆರೆಯಾದರು. ಸದ್ಯ ಈ ಫೋಟೊ ವೈರಲ್ ಆಗಿದೆ.
ಇಲ್ಲಿದೆ ಪೋಸ್ಟ್:
ಸೋನಿಯಾ ಗಾಂಧಿ ಅತಿಥಿಗಳನ್ನು ಅಭಿನಂದಿಸುತ್ತಾ ವೇದಿಕೆಯ ಕೊನೆಯವರೆಗೂ ನಡೆದುಕೊಂಡು ಹೋದರು. ಈ ವೇಳೆ ಸುಪ್ರಿಯಾ ಸುಳೆ, ಅವರನ್ನು ದಂಪತಿಯ ಮಧ್ಯದಲ್ಲಿ ನಿಲ್ಲುವಂತೆ ಕರೆತಂದರು. ಬಳಿಕ ರಾಹುಲ್ ಗಾಂಧಿ ಅವರನ್ನೂ ದಂಪತಿಯ ಪಕ್ಕದಲ್ಲಿ ನಿಲ್ಲುವಂತೆ ಒತ್ತಾಯಿಸಿದರು. ಸುಪ್ರಿಯಾ ಸುಳೆ ಸಾಲಿನ ಕೊನೆಯಲ್ಲಿ ನಿಂತರು.
ಮತ್ತೊಂದು ವಿಡಿಯೊ ಹಂಚಿಕೊಂಡು ಯುವ ಜನತೆಗೆ ಮಹತ್ವದ ಸಂದೇಶ ನೀಡಿದ ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ ಕೂಡ ವಿವಾಹ ಕಾರ್ಯಕ್ರಮದಲ್ಲಿ ಭಾಗಿಯಾಗಿ, ನೂತನ ವಧು-ವರರನ್ನು ಆಶೀರ್ವದಿಸಿದರು. ಕಾಂಗ್ರೆಸ್ ಸಂಸದ ದೀಪೇಂದರ್ ಹೂಡಾ ಮತ್ತು ವಿದೇಶಾಂಗ ಸಚಿವ ಎಸ್. ಜೈಶಂಕರ್ ಕೂಡ ಭಾಗವಹಿಸಿದರು. ಆರತಕ್ಷತೆಯಲ್ಲಿ ನವವಿವಾಹಿತರನ್ನು ಅಭಿನಂದಿಸಲು ಕೇಂದ್ರ ಸಚಿವರಾದ ಹರ್ದೀಪ್ ಸಿಂಗ್ ಪುರಿ ಮತ್ತು ಚಿರಾಗ್ ಪಾಸ್ವಾನ್ ಕೂಡ ಆಗಮಿಸಿದರು.
ರಾಹುಲ್ ಗಾಂಧಿ-ಅಮಿತ್ ಶಾ ಮುಖಾಮುಖಿ:
ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್, ಕಾಂಗ್ರೆಸ್ ಸಂಸದೆ ರೇಣುಕಾ ಚೌಧರಿ, ದೆಹಲಿ ಸಚಿವ ಪ್ರವೇಶ ವರ್ಮಾ ಸೇರಿ ಹಲವು ನಾಯಕರು ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಕಾಂಗ್ರೆಸ್ ಸಂಸದ ಅಮರಿಂದರ್ ಸಿಂಗ್ ರಾಜಾ ವಾರಿಂಗ್, ಕೇಂದ್ರ ಸಚಿವ ರಾಮದಾಸ್ ಅಠಾವಳೆ ಕೂಡ ನೂತನ ವಧು-ವರರನ್ನು ಅಭಿನಂದಿಸಿದರು.
ಅಥ್ಲೀಟ್ ಮತ್ತು ಭಾರತೀಯ ಒಲಿಂಪಿಕ್ ಅಸೋಸಿಯೇಷನ್ (ಐಒಎ) ಅಧ್ಯಕ್ಷೆ ಪಿಟಿ ಉಷಾ, ಮಾಜಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಮತ್ತು ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಕೂಡ ಸಾಕ್ಷಿಯಾದರು. ಅಖಿಲೇಶ್ ಯಾದವ್ ಕುಳಿತಿದ್ದ ಟೇಬಲ್ ಬಳಿ ಸೋನಿಯಾ ಗಾಂಧಿ ನಡೆದು ಬಂದು ಶುಭಾಶಯ ವಿನಿಮಯ ಮಾಡಿಕೊಂಡರು.