ನವದೆಹಲಿ: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಅವರ ಎರಡು ದಿನಗಳ ಭಾರತ ಪ್ರವಾಸ ಅಂತ್ಯವಾಗಿದ್ದು, ಅವರು ತಮ್ಮ ದೇಶಕ್ಕೆ ಹಿಂದಿರುಗಿದ್ದಾರೆ. ರಷ್ಯಾ ಅಧ್ಯಕ್ಷರು ಹೊರಡುವ ಮುನ್ನ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅತ್ಯಮೂಲ್ಯ ಉಡುಗೊರೆಗಳನ್ನು ನೀಡಿ ಕಳುಹಿಸಿದ್ದಾರೆ. ಅಸ್ಸಾಂ ಚಹಾ, ಕಾಶ್ಮೀರಿ ಕೇಸರಿ, ಕೈಯಿಂದ ತಯಾರಿಸಿದ ಬೆಳ್ಳಿ ಕುದುರೆ, ಅಲಂಕೃತ ಚಹಾ ಸೆಟ್ ಮತ್ತು ರಷ್ಯನ್ ಭಾಷೆಯಲ್ಲಿ ಬರೆದಿರುವ ಭಗವದ್ಗೀತೆಯನ್ನು (Bhagavad Gita) ಉಡುಗೊರೆಯಾಗಿ ನೀಡಿದ್ದಾರೆ.
ಮಹಾಭಾರತದ ಯುದ್ಧದ ಸಂದರ್ಭದಲ್ಲಿ ಅರ್ಜುನನಿಗೆ ತನ್ನ ಕರ್ತವ್ಯ, ಶಾಶ್ವತ ಆತ್ಮ ಹಾಗೂ ಆಧ್ಯಾತ್ಮಿಕ ವಿಮೋಚನೆಯ ಬಗ್ಗೆ ಶ್ರೀಕೃಷ್ಣ ನೀಡಿರುವ ಉಪದೇಶಗಳನ್ನು ಒಳಗೊಂಡ ಗ್ರಂಥವೇ ಶ್ರೀಮದ್ ಭಗವದ್ಗೀತೆ. ಇದರ ಶಾಶ್ವತ ಜ್ಞಾನವು ನೈತಿಕ ಜೀವನ, ಮನಸ್ಸಿನ ನಿಯಂತ್ರಣ ಮತ್ತು ಆಂತರಿಕ ಶಾಂತಿಗೆ ಪ್ರೇರಣೆಯಾಗುತ್ತದೆ. ವಿವಿಧ ಅನುವಾದಗಳ ಮೂಲಕ ಇದು ಇಂದಿನ ಜಗತ್ತಿನ ಓದುಗರಿಗೂ ಸುಲಭವಾಗಿ ಲಭ್ಯವಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Modi-Putin: ಮೋದಿ- ಪುಟಿನ್ ಮಧ್ಯೆ ದ್ವಿಪಕ್ಷಿಯ ಒಪ್ಪಂದ; ವಿಷನ್ 2030 ಒಪ್ಪಂದಕ್ಕೆ ಸಹಿ
ರಷ್ಯಾ ಅಧ್ಯಕ್ಷರಿಗೆ ಉಡುಗೊರೆಯಾಗಿ ನೀಡಿದ ಅಸ್ಸಾಂನ ಬ್ಲ್ಯಾಕ್ ಟೀ ಕೂಡ ಬಹಳ ವಿಶೇಷವಾದುದಾಗಿದೆ. ಫಲವತ್ತಾದ ಬ್ರಹ್ಮಪುತ್ರ ಬಯಲು ಪ್ರದೇಶಗಳಲ್ಲಿ ಬೆಳೆಯುವ ಅಸ್ಸಾಂ ಬ್ಲ್ಯಾಕ್ ಟೀಯು ಅದರ ಗಾಢ ಪರಿಮಳ, ಪ್ರಕಾಶಮಾನವಾದ ದ್ರವ ಬಣ್ಣ ಮತ್ತು ಅಸ್ಸಾಮಿಕಾ ವಿಧವನ್ನು ಬಳಸಿಕೊಂಡು ಸಾಂಪ್ರದಾಯಿಕ ಸಂಸ್ಕರಣೆಗೆ ವಿಶಿಷ್ಟ ಮಹತ್ವ ಪಡೆದುಕೊಂಡಿದೆ.
2007ರಲ್ಲಿ ಜಿಐ (ಭೌಗೋಳಿಕ ಸೂಚಿ) ಮಾನ್ಯತೆ ಪಡೆದ ಇದು, ಭೂಮಿ, ಹವಾಮಾನ ಮತ್ತು ಕೈಗಾರಿಕೆಯ ಸಂಯೋಜನೆಯಿಂದ ರೂಪುಗೊಂಡ ಶ್ರೀಮಂತ ಪರಂಪರೆಯನ್ನು ಪ್ರತಿನಿಧಿಸುತ್ತದೆ. ಅದರ ಸಾಂಸ್ಕೃತಿಕ ಪರಂಪರೆಯನ್ನು ಮೀರಿ, ಇದು ಅನೇಕ ಆರೋಗ್ಯ ಪ್ರಯೋಜನಗಳನ್ನೂ ಹೊಂದಿದೆ. ಪ್ರತಿ ಕಪ್ ಕುಡಿದಾಗಲೂ ಮನಸ್ಸು ಉಲ್ಲಾಸದಾಯಕವಾಗಿರುತ್ತದೆ.
ಇಲ್ಲಿದೆ ಪೋಸ್ಟ್:
ಸಂಕೀರ್ಣವಾದ ಕೆತ್ತನೆಗಳಿಂದ ರಚಿಸಲಾದ ಅಲಂಕಾರಿಕ ಮುರ್ಷಿದಾಬಾದ್ ಬೆಳ್ಳಿ ಚಹಾ ಸೆಟ್, ಪಶ್ಚಿಮ ಬಂಗಾಳದ ಶ್ರೀಮಂತ ಕಲಾತ್ಮಕತೆಯನ್ನು ಹಾಗೂ ಭಾರತ ಮತ್ತು ರಷ್ಯಾ ಎರಡರಲ್ಲೂ ಚಹಾದ ಆಳವಾದ ಸಾಂಸ್ಕೃತಿಕ ಮಹತ್ವವನ್ನು ಪ್ರತಿಬಿಂಬಿಸುತ್ತದೆ. ಭಾರತೀಯರಿಗೆ ಚಹಾ ಅಂದ್ರೆ ಬಹಳ ಅಚ್ಚುಮೆಚ್ಚು. ಹೀಗಾಗಿ ಸ್ನೇಹದ ಸಂಕೇತವಾಗಿ ನೀಡಲ್ಪಟ್ಟ ಈ ಚಹಾ ಸೆಟ್, ಶಾಶ್ವತವಾದ ಭಾರತ–ರಷ್ಯಾ ಸ್ನೇಹವನ್ನು ಮತ್ತು ಚಹಾದ ಅನಾದಿ ಕಾಲದ ಆಚರಣೆಯನ್ನು ಸಂಭ್ರಮಿಸುತ್ತದೆ ಎಂದು ಅಧಿಕಾರಿಗಳು ಹೇಳಿದರು.
ಮಹಾರಾಷ್ಟ್ರದ ಕರಕುಶಲ ಬೆಳ್ಳಿ ಕುದುರೆಯು ಸಂಕೀರ್ಣವಾದ ವಿವರಗಳಿಂದ ಅಲಂಕರಿಸಲ್ಪಟ್ಟಿದೆ, ಇದು ಭಾರತದ ಲೋಹದ ಕರಕುಶಲ ಸಂಪ್ರದಾಯಗಳ ಕೈಚಳಕವನ್ನು ಪ್ರದರ್ಶಿಸುತ್ತದೆ.
ಪುಟಿನ್ ಅವರಿಗೆ ನೀಡಲಾದ ಉಡುಗೊರೆಗಳಲ್ಲಿ ಅಮೂಲ್ಯವಾದ ಬೆಳ್ಳಿ ಕುದುರೆಯೂ ಸೇರಿದೆ. ಮಹಾರಾಷ್ಟ್ರದಲ್ಲಿ ಕೈಯಿಂದ ನಿರ್ಮಿಸಲಾದ, ಸೂಕ್ಷ್ಮ ಅಲಂಕಾರಗಳಿಂದ ಅಲಂಕರಿಸಲ್ಪಟ್ಟ ಈ ಬೆಳ್ಳಿ ಕುದುರೆ, ಭಾರತದ ಲೋಹಶಿಲ್ಪ ಪರಂಪರೆಯ ನಿಖರತೆ ಮತ್ತು ನವೀನತೆಯನ್ನು ಪ್ರದರ್ಶಿಸುತ್ತದೆ. ಭಾರತ ಮತ್ತು ರಷ್ಯಾ ಸಂಸ್ಕೃತಿಗಳಲ್ಲಿ ಗೌರವ ಮತ್ತು ಶೌರ್ಯಕ್ಕೆ ನೀಡುವ ಮೌಲ್ಯವನ್ನು ಸಂಕೇತಿಸುವ ಈ ಶಿಲ್ಪ, ಎರಡೂ ರಾಷ್ಟ್ರಗಳ ಹಂಚಿಕೊಂಡ ಪರಂಪರೆ ಮತ್ತು ಪರಸ್ಪರ ಗೌರವವನ್ನು ಪ್ರತಿಬಿಂಬಿಸುತ್ತದೆ ಎಂದು ಅಧಿಕಾರಿಗಳು ತಿಳಿಸಿದರು.
ಆಗ್ರಾದ ಕರಕುಶಲ ಅಮೃತಶಿಲೆಯ ಚೆಸ್ ಸೆಟ್, ಉತ್ತಮ ಕರಕುಶಲತೆಯನ್ನು ಕ್ರಿಯಾತ್ಮಕ ಸೊಬಗಿನೊಂದಿಗೆ ಸಂಯೋಜಿಸುತ್ತದೆ. ಇದು ಒಂದು ಜಿಲ್ಲೆ ಒಂದು ಉತ್ಪನ್ನ (ODOP) ಉಪಕ್ರಮದ ಅಡಿಯಲ್ಲಿ ಈ ಪ್ರದೇಶದ ಕಲ್ಲಿನ ಕೆತ್ತನೆಯ ಪರಂಪರೆಯನ್ನು ಎತ್ತಿ ತೋರಿಸುತ್ತದೆ.
ಹಾಗೆಯೇ ಕಾಶ್ಮೀರದ ಎತ್ತರದ ಪ್ರದೇಶಗಳಲ್ಲಿ ಬೆಳೆಯುವ, ಸ್ಥಳೀಯವಾಗಿ ಕಾಂಗ್ ಅಥವಾ ಜಾಫ್ರಾನ್ ಎಂದು ಕರೆಯಲ್ಪಡುವ ಕಾಶ್ಮೀರಿ ಕೇಸರಿ, ಅದರ ಶ್ರೀಮಂತ ಬಣ್ಣ, ಪರಿಮಳ ಮತ್ತು ಸುವಾಸನೆಗಾಗಿ ಬಹಳ ಪ್ರಸಿದ್ಧಿ ಪಡೆದಿದೆ. ಇದು ಆಳವಾದ ಸಾಂಸ್ಕೃತಿಕ ಮತ್ತು ಅಡುಗೆ ಸಂಬಂಧಿತ ಮಹತ್ವವನ್ನು ಹೊಂದಿದೆ.